"ಹೊಗಳಿಕೊಳ್ಳುವುದನ್ನು ಬಿಟ್ಟು ಕೆಲಸ ಮಾಡಿದ್ದರೆ ಎಷ್ಟೋ ಜೀವ ಉಳಿಸಬಹುದಿತ್ತು"
ಲಖ್ನೋ, ಮೇ 21: ಪರಸ್ಪರ ಸುಳ್ಳು ಹೊಗಳಿಕೆ ಮಾಡಿಕೊಳ್ಳುವುದನ್ನು ಬಿಟ್ಟು ಕೊರೊನಾ ಸೋಂಕಿತರಿಗೆ ಅವಶ್ಯಕ ವ್ಯವಸ್ಥೆಗಳನ್ನು ಮಾಡುವುದರತ್ತ ಗಮನ ನೀಡಿದ್ದರೆ ಎಷ್ಟೋ ಜನರ ಜೀವವನ್ನು ಉಳಿಸಬಹುದಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯಾನಾಥ್ ಕುರಿತು ಸಮಾಜವಾದಿ ಪಕ್ಷದ ಮುಖಂಡ ಅಖಿಲೇಶ್ ಯಾದವ್ ಟೀಕೆ ಮಾಡಿದ್ದಾರೆ.
ಶುಕ್ರವಾರ ವೈದ್ಯರೊಂದಿಗೆ ಪ್ರಧಾನಿ ಮೋದಿ ವಿಡಿಯೋ ಸಭೆ ನಡೆಸಿದ್ದಾರೆ. ಅಲ್ಲೂ ತಮಗೆ ತಾವೇ ಮೆಚ್ಚುಗೆಯ ಪದಕ ನೀಡಿಕೊಂಡಿದ್ದಾರೆ ಎಂದು ವ್ಯಂಗ್ಯ ಮಾಡಿದ್ದಾರೆ.
"ಬರೀ ಎನ್ಕೌಂಟರ್ ಭಾಷೆ ತಿಳಿದವರಿಂದ ಏನನ್ನು ನಿರೀಕ್ಷಿಸಲು ಸಾಧ್ಯ?"
ದೇಶದಲ್ಲಿ ಈ ಇಬ್ಬರೂ ನಾಯಕರು ತಮ್ಮನ್ನು ತಾವು ಹೊಗಳಿಕೊಳ್ಳುವುದರಲ್ಲೇ ತೊಡಗಿಕೊಂಡಿದ್ದು, ಜನರ ಸಂಕಷ್ಟ ನೋಡುತ್ತಿಲ್ಲ. ಕೊರೊನಾ ಲಸಿಕೆ, ಹಾಸಿಗೆ, ಆಮ್ಲಜನಕದ ಕುರಿತು ಒಬ್ಬರಿಗೊಬ್ಬರು ಸುಳ್ಳು ಹೊಗಳಿಕೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಇದನ್ನು ಬಿಟ್ಟು ನಿಜವಾಗಿಯೂ ಕೆಲಸ ಮಾಡಿದ್ದರೆ ಎಷ್ಟೋ ಜನರ ಜೀವ ಉಳಿಸಬಹುದಿತ್ತು ಎಂದಿದ್ದಾರೆ.
ಪ್ರಧಾನಿ ಹೇಳಿದ್ದಕ್ಕೆಲ್ಲ ಸಿಎಂ ತಲೆಯಾಡಿಸುತ್ತಾರೆ. ಆರೋಗ್ಯ ವ್ಯವಸ್ಥೆ ಇಷ್ಟು ಹದಗೆಟ್ಟಿದ್ದರೂ ಹೊಗಳಿಕೊಳ್ಳುವುದನ್ನು ಇವರು ಬಿಟ್ಟಿಲ್ಲ. ಜನರಿಗೆ ಗೊಂದಲ ಮೂಡಿಸುವುದು ಬಿಜೆಪಿ ತಂತ್ರಗಾರಿಕೆ. ಚಿಕಿತ್ಸೆ ಇಲ್ಲದೇ ಜನರು ಸಾಯುತ್ತಿದ್ದಾರೆ. ಈ ವಿಷಯವನ್ನು ಬಿಜೆಪಿ ಮರೆ ಮಾಚುತ್ತಿದೆ ಎಂದು ಆರೋಪಿಸಿದ್ದಾರೆ.