ಅಗ್ನಿಪಥ್: ಪ್ರತಿಭಟನೆಗೆ ಉತ್ತೇಜಿಸುತ್ತಿದ್ದ ಐವರ ಬಂಧನ
ಲಕ್ನೋ, ಜೂ.19: ಕೇಂದ್ರ ರಕ್ಷಣಾ ಇಲಾಖೆ ಅಗ್ನಿಪಥ್ ನೇಮಕಾತಿ ಯೋಜನೆ ಘೋಷಿದಾಗಿನಿಂದಲೂ ದೇಶದ ಹಲವು ಕಡೆಗಳಲ್ಲಿ ಯೋಜನೆ ವಿರುದ್ಧ ಪ್ರತಿಭಟನೆ ನಡೆಯುತ್ತಿವೆ. ಅದೇ ರೀತಿ ಉತ್ತರ ಪ್ರದೇಶದಲ್ಲಿ ಪ್ರತಿಭಟನೆಗೆ ಯುವಕರನ್ನು ಉತ್ತೇಜಿಸುತ್ತಿದ್ದ ಐವರು ನಕಲಿ ಸೇನಾ ಆಕಾಂಕ್ಷಿಗಳನ್ನು ಬಂಧಿಸಿದ ಘಟನೆ ನಡೆದಿದೆ.
ಸಂದೀಪ್, ಪರಾಗ್ ಪನ್ವಾರ್, ಮೋಹಿತ್, ಮೋಹಿತ್ ಚೌಧರಿ, ಉದಯ್ ಮತ್ತು ಸೌರಭ್ ಕುಮಾರ್ ಎಂಬುವವರು ಹಿಂಚಾಸಾರ ಪ್ರತಿಭಟನೆಗೆ ಪ್ರಚೋದಿಸುತ್ತಿದ್ದ ಎಂಬ ಕಾರಣಕ್ಕೆ ಇಲ್ಲಿನ ಸಹರಾನ್ ಪುರ ಪೊಲೀಸರು ಶನಿವಾರ ಬಂಧಿಸಿದ್ದಾರೆ. ಈ ಬಂಧಿತ ಐವರು ವಿವಿಧ ಪಕ್ಷಗಳ ಪರವಾಗಿ ಅಥವಾ ಇತರ ಸಂಘಟನೆಗಳ ಪರ ಕಾರ್ಯ ನಿರ್ವಹಿಸುವ ಸದಸ್ಯರಾಗಿದ್ದಾರೆ ಎಂಬ ಶಂಕೆ ಪೊಲೀಸರು ವ್ಯಕ್ತಪಡಿಸಿದ್ದಾರೆ.
ಆರೋಪಿಗಳು ಸಹರಾನ್ ಪುರ ನಿವಾಸಿಗಳಾಗಿದ್ದು, ಈ ಪೈಕಿ ಒಬ್ಬನಾದ ಪರಾಗ್ ಪನ್ವಾರ್ ಭಾರತೀಯ ವಿದ್ಯಾರ್ಥಿ ಸಂಘಟನೆಗಳ ಒಕ್ಕೂಟ (ಎನ್ಎಸ್ಯುಐ) ಜತೆ ಸಂಪರ್ಕ ಹೊಂದಿದ್ದಾರೆ ಎಂಬುದು ಪೊಲೀಸರ ತನಿಖೆಯಿಂದ ತಿಳಿದು ಬಂದಿದೆ.
ಸೇನೆಗೆ ಅರ್ಹರಲ್ಲ: ಪೊಲೀಸರ ಪ್ರಕಾರ ತಾವು ಸೇನಾ ಆಕಾಂಕ್ಷಿಗಳು ಎಂದು ಹೇಳಿಕೊಂಡು ಹಿಂಸಾಚಾರದಲ್ಲಿ ತೊಡಗುವಂತೆ ಜನರನ್ನು ಒತ್ತಾಯಿಸಿದ್ದಾರೆ. ಈ ಐವರು ಬಂಧಿತರು 25 ವಯಸ್ಸು ಮೀರಿದವರೆ ಆಗಿದ್ದು, ಅವರೆಲ್ಲ ಸೇನೆ ಅರ್ಹತೆ ಹೊಂದಿಲ್ಲ. ಹೀಗಿದ್ದರೂ ಸೇನಾ ಆಕಾಂಕ್ಷಿಗಳು ಎಂದು ಯೋಜನೆ ವಿರುದ್ಧ ಯುವಕರನ್ನು ಪ್ರಚೋದಿಸಿರುವುದು ಬೆಳಕಿಗೆ ಬಂದಿದೆ.
ಆರೋಪಿಗಳ ಹಿಂದೆ ಯಾವ ಸಂಘಟನೆಗಳ ಕೈವಾಡ ವಿದೆ ಎಂಬುದರ ಹೆಚ್ಚಿನ ಮಾಹಿತಿಗಾಗಿ ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ದೇಶದ ಉತ್ತರ ಭಾರತದ ಭಾಗದಲ್ಲಿ ಅಗ್ನಿಪಥ್ ನೇಮಕಾತಿ ಯೋಜನೆ ವಿರುದ್ಧ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ.
ಯುವಕರ ಹಿತ ದೃಷ್ಟಿಯಿಂದ ಯೋಜನೆ ಹಿಂಪಡೆಯಬೇಕು ಎಂಬ ಆಗ್ರಹವು ಕೇಳಿ ಬಂದಿದೆ. ಈ ನಡುವೆ ಕೆಲವೆಡೆ ಪ್ರತಿಭಟನೆ ಹಿಂಸಾಚಾರ ಸ್ವರೂಪ ಪಡೆದುಕೊಳ್ಳುವುದು ಗಮನಕ್ಕೆ ಬಂದಿದೆ. ಅದಕ್ಕೆ ಇಂತಹ ಆರೋಪಿಗಳ ಪ್ರಚೋದನೆಯೆ ಕಾರಣವಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ದೇಶ ಸೇರಿದಂತೆ ಕರ್ನಾಟಕದ ಕೆಲವು ಭಾಗಗಳಲ್ಲಿ ಕಳೆದ ಕೆಲವು ದಿನಗಳಲ್ಲಿ ಅಗ್ನಿಪಥ್ ಯೋಜನೆ ವಿರುದ್ಧ ಜನರು, ಯುವಕರು ಬೀದಿಗಿಳಿದು ಪ್ರತಿಭಟಿಸುತ್ತಿರುವುದು ಕಂಡು ಬಂದಿದೆ.