ಅತ್ಯಾಚಾರ ಸಂತ್ರಸ್ತೆ ಕೊಲೆ ಪ್ರಯತ್ನ: ಬಿಜೆಪಿ ಶಾಸಕನ ವಿರುದ್ಧ ಎಫ್ಐಆರ್
ಲಕ್ನೋ, ಜುಲೈ 29: ಉತ್ತರ ಪ್ರದೇಶದ ಉನ್ನಾವೋ ಅತ್ಯಾಚಾರ ಸಂತ್ರಸ್ತೆಯನ್ನು ರಾಯ್ಬರೇಲಿಯಲ್ಲಿ ಅಪಘಾತದ ಮೂಲಕ ಹತ್ಯೆ ಮಾಡಲು ಪ್ರಯತ್ನಿಸಿದ ಆರೋಪದಲ್ಲಿ ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೆಂಗರ್ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೆಂಗರ್ ಅವರ ವಿರುದ್ಧ ಅತ್ಯಾಚಾರ ಆರೋಪ ಮಾಡಿದ್ದ 19 ವರ್ಷದ ಮಹಿಳೆ, ಆಕೆಯ ಕುಟುಂಬದವರು ಮತ್ತು ವಕೀಲರೊಬ್ಬರು ತೆರಳುತ್ತಿದ್ದ ಕಾರ್ಗೆ ವೇಗವಾಗಿ ಬಂದಿದ್ದ ಟ್ರಕ್ ಅಪ್ಪಳಿಸಿತ್ತು. ಘಟನೆಯಲ್ಲಿ ಮಹಿಳೆಯ ಕುಟುಂಬದ ಇಬ್ಬರು ಮೃತಪಟ್ಟಿದ್ದರೆ, ಮಹಿಳೆ ಮತ್ತು ವಕೀಲರು ತೀವ್ರ ಗಾಯಗೊಂಡಿದ್ದಾರೆ.
ಉನ್ನಾವೋ ಸಂತ್ರಸ್ತೆ ಕಾರಿಗೆ ಗುದ್ದಿದ ಟ್ರಕ್; ಆಕೆ ಸ್ಥಿತಿ ಗಂಭೀರ, ಇಬ್ಬರು ಸಾವು
ಜೈಲಿನಲ್ಲಿರುವ ಕುಲದೀಪ್ ಸಿಂಗ್ ಮತ್ತು ಆತನ ಸಹೋದರ ಅತುಲ್ ಸಿಂಗ್ ಹಾಗೂ ಇತರೆ ಎಂಟು ಮಂದಿಯ ವಿರುದ್ಧ ಅಪಘಾತ ಪ್ರಕರಣದಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
ಅತ್ಯಾಚಾರ ಆರೋಪದಲ್ಲಿ ಜೈಲಿನಲ್ಲಿರುವ ಕುಲದೀಪ್ ಸಿಂಗ್, ತನ್ನ ಮಗಳ ಹತ್ಯೆಗೆ ಸಂಚು ರೂಪಿಸಿದ್ದಾರೆ ಎಂದು ಮಹಿಳೆಯ ತಾಯಿ ಹಾಗೂ ಆಕೆಯ ಕುಟುಂಬದವರು ಆರೋಪಿಸಿದ್ದಾರೆ.
ಪೊಲೀಸರು ಟ್ರಕ್ ಟ್ರೈವರ್ ಮತ್ತು ಅದರ ಮಾಲೀಕನನ್ನು ಬಂಧಿಸಿದ್ದಾರೆ. ವಾಹನ ಸಾಲದ ಬಾಕಿ ಮೊತ್ತವನ್ನು ಪಾವತಿ ಮಾಡದೆ ತಪ್ಪಿಸಿಕೊಂಡು ತಿರುಗಲು ಟ್ರಕ್ನ ನಂಬರ್ ಪ್ಲೇಟ್ಅನ್ನು ಅಳಿಸಿ ಹಾಕಿ ಗುರುತು ಹಚ್ಚಲು ಸಾಧ್ಯವಾಗದಂತೆ ಮಾಡಿದ್ದಾಗಿ ಟ್ರಕ್ ಮಾಲೀಕ ಹೇಳಿಕೆ ನೀಡಿದ್ದಾನೆ.
'ಇದು ಸಹಜ ಅಪಘಾತವಲ್ಲ ನಮ್ಮನ್ನು ಮುಗಿಸಲು ವ್ಯವಸ್ಥಿತ ಪಿತೂರಿ'
ಈ ಪ್ರಕರಣವನ್ನು ಸ್ವಯಂ ಪ್ರೇರಣೆಯಿಂದ ಪರಿಗಣನೆಗೆ ತೆಗೆದುಕೊಂಡು ಮಧ್ಯಪ್ರವೇಶ ಮಾಡುವಂತೆ ಕಾಂಗ್ರೆಸ್ ಸುಪ್ರೀಂಕೋರ್ಟ್ಅನ್ನು ಒತ್ತಾಯಿಸಿದೆ. ಈ ಪ್ರಕರಣದಲ್ಲಿ ಉತ್ತರ ಪ್ರದೇಶ ಸರ್ಕಾರ ಕಣ್ಮುಚ್ಚಿಕೊಂಡು ಕುಳಿತಿದೆ ಎಂದು ಆರೋಪಿಸಿದೆ.
ರಾಯ್ ಬರೇಲಿಯಲ್ಲಿ ನಡೆದ ರಸ್ತೆ ಅಪಘಾತ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಲು ಸಿದ್ಧ ಇರುವುದಾಗಿ ಉತ್ತರ ಪ್ರದೇಶ ಸರ್ಕಾರ ತಿಳಿಸಿದೆ.
ಮಹಿಳೆಯ ಕುಟುಂಬಕ್ಕೆ ಜೀವ ಬೆದರಿಕೆ ಇರುವ ಕಾರಣಕ್ಕೆ ಬಂದೂಕಧಾರಿ ಸೇರಿದಂತೆ 9 ಮಂದಿ ಭದ್ರತಾ ಸಿಬ್ಬಂದಿಯನ್ನು ಒದಗಿಸಲಾಗಿದೆ. ಆದರೆ, ಕಾರ್ನಲ್ಲಿ ಜಾಗ ಇಲ್ಲದ ಕಾರಣ ಅವರು ಬರುವ ಅಗತ್ಯವಿಲ್ಲ. ಐದು ಮಂದಿ ಜೊತೆಯಲ್ಲಿ ಇರುವುದರಿಂದ ಯೋಚಿಸಬೇಕಿಲ್ಲ. ಸಂಜೆ ವೇಳೆಗೆ ವಾಪಸ್ ಬರಲಿದ್ದಾರೆ ಎಂದು ಮನೆಯವರು ಹೇಳಿದ್ದರಿಂದ ಅವರೊಂದಿಗೆ ಭದ್ರತಾ ಸಿಬ್ಬಂದಿ ತೆರಳಿರಲಿಲ್ಲ.