ಮಕ್ಕಳ ಒತ್ತೆ ಪ್ರಕರಣ: ಆರೋಪಿ ಹೆಂಡತಿಯನ್ನು ಕಲ್ಲು ಹೊಡೆದು ಕೊಂದ ಜನ
ಪಾರ್ಟಿಯೊಂದರಲ್ಲಿ 23 ಮಕ್ಕಳನ್ನು ಒತ್ತೆಯಾಳಾಗಿರಿಸಿಕೊಂಡು ಪೊಲೀಸರ ಗುಂಡೇಟಿಗೆ ಬಲಿಯಾಗಿದ್ದ ವ್ಯಕ್ತಿಯ ಪತ್ನಿ, ಜನರಿಂದ ಕಲ್ಲೇಟಿಗೆ ಒಳಗಾಗಿ ಮೃತಪಟ್ಟಿದ್ದಾಳೆ.
ನೆರೆಹೊರೆಯ ಮನೆಗಳ ಜನರು ಆಕೆಯ ಮೇಲೆ ಕಲ್ಲುಗಳನ್ನು ತೂರಿ ಬಳಿಕ ಥಳಿಸಿದ್ದರು. ತೀವ್ರ ಗಾಯಗೊಂಡಿದ್ದ ಆಕೆ ಮೃತಪಟ್ಟಿದ್ದಾಳೆ. ಮಕ್ಕಳನ್ನು ಒತ್ತೆಯಾಳಾಗಿ ಇರಿಸಿಕೊಳ್ಳುವ ಬಾತಮ್ನ ಕೃತ್ಯದಲ್ಲಿ ಆಕೆಯೂ ಭಾಗಿಯಾಗಿದ್ದಳೇ ಎಂಬುದು ದೃಢಪಟ್ಟಿಲ್ಲ. ಆಕೆ ಕೂಡ ಅದರಲ್ಲಿ ಪಾಲುದಾರಳು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.
ಉತ್ತರ ಪ್ರದೇಶ; 20 ಮಕ್ಕಳನ್ನು ಒತ್ತೆಯಾಗಿರಿಸಿಕೊಂಡ ವ್ಯಕ್ತಿ
ಫರ್ರೂಕಾಬಾದ್ ಗ್ರಾಮದಲ್ಲಿ ಗುರುವಾರ ರಾತ್ರಿ ಸುಭಾಷ್ ಬಾತಮ್ ಎಂಬಾತ ಹುಟ್ಟುಹಬ್ಬದ ಪಾರ್ಟಿಯೊಂದರಲ್ಲಿ ಮಕ್ಕಳು ಹಾಗೂ ಮಹಿಳೆಯರನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದ. ಸುಮಾರು ಹತ್ತು ಗಂಟೆ ಕಾರ್ಯಾಚರಣೆ ನಡೆಸಿದ ಬಳಿಕ ಪೊಲೀಸರು ಆತನನ್ನು ರಾತ್ರಿ 1.20ರ ಸುಮಾರಿಗೆ ಗುಂಡಿಕ್ಕಿ ಹತ್ಯೆ ಮಾಡಿ, ಎಲ್ಲ ಒತ್ತೆಯಾಳುಗಳನ್ನು ರಕ್ಷಿಸಿದ್ದರು.
ಕಲ್ಲು, ಇಟ್ಟಿಗೆಗಳಿಂದ ಹಲ್ಲೆ
ಸುಭಾಷ್ ಬಾತಮ್ನನ್ನು ಹತ್ಯೆ ಮಾಡಿ ಎಲ್ಲ ಒತ್ತೆಯಾಳುಗಳನ್ನು ಪೊಲೀಸರು ಮನೆಯಿಂದ ಹೊರಗೆ ಕರೆದುಕೊಂಡು ಬಂದ ಬಳಿಕ ಸ್ಥಳೀಯರು ಆತನ ಹೆಂಡತಿಯನ್ನು ಹಿಡಿದು ಹಲ್ಲೆ ನಡೆಸಿದ್ದಾರೆ. ಆಕೆಯ ಮೇಲೆ ಇಟ್ಟಿಗೆ ಮತ್ತು ಕಲ್ಲುಗಳನ್ನು ಎಸೆದಿದ್ದಾರೆ. ದೇಹದ ಎಲ್ಲ ಕಡೆ ತೀವ್ರ ಗಾಯಗೊಂಡಿದ್ದ ಆಕೆಯ ಸ್ಥಿತಿ ತೀರಾ ಗಂಭೀರವಾಗಿತ್ತು. ಬಳಿಕ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಒತ್ತೆಯಲ್ಲಿ ಇರಿಸಿಕೊಂಡಿದ್ದ ಎಲ್ಲ 23 ಮಕ್ಕಳನ್ನು ಸುರಕ್ಷಿತವಾಗಿ ಹೊರಗೆ ತರಲಾಗಿತ್ತು. ದುಷ್ಕರ್ಮಿ ಪೊಲೀಸರ ಗುಂಡೇಟಿಗೆ ಬಲಿಯಾಗುವ ಮೊದಲು ಒತ್ತೆಯಲ್ಲಿ ಇರಿಸಿಕೊಂಡಿದ್ದವರಲ್ಲಿ ಒಂದು ವರ್ಷದ ಮಗುವನ್ನು ಬಿಡುಗಡೆ ಮಾಡಿದ್ದ.
ಉ.ಪ್ರದೇಶ: ಮಕ್ಕಳನ್ನು ಒತ್ತೆಯಿರಿಸಿಕೊಂಡಿದ್ದ ವ್ಯಕ್ತಿ ಪೊಲೀಸ್ ಗುಂಡೇಟಿಗೆ ಬಲಿ
ಮಗಳ ಹುಟ್ಟು ಹಬ್ಬಕ್ಕೆ ಆಹ್ವಾನ
2001ರಲ್ಲಿ ಕೊಲೆ ಪ್ರಕರಣದಲ್ಲಿ ಭಾಗಿಯಾಗಿ ಶಿಕ್ಷೆ ಅನುಭವಿಸಿದ್ದ ಬಾತಮ್, ಪುಂಡಾಟಿಕೆ ಮುಂದುವರಿಸಿದ್ದ ಎನ್ನಲಾಗಿದೆ. ತನ್ನ ಒಂದು ವರ್ಷದ ಮಗಳ ಜನ್ಮದಿನದ ಸಂಭ್ರಮಾಚರಣೆ ಮಾಡಲು ಆತ ಗುರುವಾರ ತನ್ನ ಮನೆಗೆ ಗ್ರಾಮದ ಕೆಲವು ಮಕ್ಕಳನ್ನು ಆಹ್ವಾನಿಸಿದ್ದ.
ಎಲ್ಲ ಮಕ್ಕಳೂ ಒಳಗೆ ಸೇರಿದ ಬಳಿಕ ಬಾತಮ್, ಒಳಗಿನಿಂದ ಬಾಗಿಲುಗಳನ್ನು ಭದ್ರಪಡಿಸಿ ಎಲ್ಲರನ್ನೂ ಬಂದೂಕಿನ ನಳಿಕೆಯಡಿ ಇರಿಸಿದ್ದ. ಎಷ್ಟು ಹೊತ್ತಾದರೂ ಮಕ್ಕಳು ವಾಪಸ್ ಬಾರದಿದ್ದನ್ನು ಕಂಡ ನೆರೆ ಹೊರೆಯವರು ಆತನ ಮನೆ ಬಾಗಿಲು ತಟ್ಟಿದ್ದರು. ಏನೋ ಯಡವಟ್ಟಾಗಿದೆ ಎಂಬುದನ್ನು ಗ್ರಹಿಸಿದ್ದರು.
ಪೊಲೀಸರ ಮೇಲೆಯೂ ಗುಂಡು ಹಾರಿಸಿದ
ಮಕ್ಕಳನ್ನು ಕರೆದೊಯ್ಯಲು ಬಂದ ಗ್ರಾಮಸ್ಥರ ಮೇಲೆ ಬಾತಮ್ ಗುಂಡು ಹಾರಿಸಲು ಆರಂಭಿಸಿದ. ಭಯಗೊಂಡ ಅವರು ಪೊಲೀಸರಿಗೆ ಕರೆ ಮಾಡಿದರು. ಅಲ್ಲಿಗೆ ಬಂದ ಪೊಲೀಸರ ಮೇಲೆಯೂ ಆತ ಗುಂಡು ಹಾರಿಸಿ ಕಚ್ಚಾ ಬಾಂಬ್ ಎಸೆದಿದ್ದ. ಬಳಿಕ ಅಲ್ಲಿಗೆ ಪೊಲೀಸರ ತಂಡ ಹಾಗೂ ಭಯೋತ್ಪಾದನಾ ನಿಗ್ರಹ ದಳದ ಕಮಾಂಡೋಗಳು ಆಗಮಿಸಿದರು.
ಮಕ್ಕಳನ್ನು ಬಿಡುಗಡೆ ಮಾಡುವಂತೆ ಆತನಿಗೆ ಫೋನ್ ಕರೆಯ ಮೂಲಕ ಮನವೊಲಿಸಲು ಗಂಟೆಗಳ ಕಾಲ ನಡೆಸಿದ ಪ್ರಯತ್ನ ಸಫಲವಾಗಲಿಲ್ಲ. ಮಕ್ಕಳನ್ನು ಬಿಡುಗಡೆ ಮಾಡಲು ಆತ ಒಪ್ಪಲಿಲ್ಲ. ಎನ್ಕೌಂಟರ್ ವೇಳೆಯಲ್ಲಿ ಆತ ಕುಡಿದಿದ್ದ ಎಂದು ಪೊಲೀಸರು ಹೇಳಿದ್ದಾರೆ.
ನಾನು ನಿರಪರಾಧಿ ಎಂದು ಕೂಗಿದ
ಆತನ ಮನವೊಲಿಸುವ ಎಲ್ಲ ಪ್ರಯತ್ನಗಳು ವಿಫಲವಾದ ಬಳಿಕ ಮಧ್ಯರಾತ್ರಿ ವೇಳೆ ಪೊಲೀಸರು ಆತನ ಮೇಲೆ ದಾಳಿ ನಡೆಸಲು ನಿರ್ಧರಿಸಿದರು. ಮನೆಯ ಒಳಗೆ ನುಗ್ಗಿದರು. ತನ್ನ ಮೇಲಿನ ಅಪರಾಧದ ಆರೋಪ ಪ್ರಕರಣದಲ್ಲಿ ತಾನು ನಿರಪರಾಧಿ ಎಂದು ಆತ ಕೂಗುತ್ತಿದ್ದ. ಬಹುಶಃ ಆತ ಮಾನಸಿಕವಾಗಿ ಅಸ್ವಸ್ಥನಾಗಿದ್ದ ಎಂದು ಪೊಲೀಸರು ಶಂಕಿಸಿದ್ದಾರೆ. ಆತ ಕೂಗುತ್ತಿರುವಾಗಲೇ ಪೊಲೀಸರು ಗುಂಡು ಹಾರಿಸಿ ಹತ್ಯೆ ಮಾಡಿದರು.
ಓಡಲು ಪ್ರಯತ್ನಿಸಿದಾಗ ಹಲ್ಲೆ
ಮನೆ ಒಳಗಿದ್ದ ಬಾತಮ್ನ ಹೆಂಡತಿ ಅಲ್ಲಿಂದ ಓಡಲು ಪ್ರಯತ್ನಿಸಿದ್ದಳು. ಅದನ್ನು ಕಂಡ ಮಕ್ಕಳ ಪೋಷಕರು ಆಕೆಯ ಮೇಲೆ ಕಲ್ಲು ಮತ್ತು ಇಟ್ಟಿಗೆಗಳನ್ನು ಎಸೆದು ಹಲ್ಲೆ ನಡೆಸಿದರು. ಆಕೆಯನ್ನು ಗ್ರಾಮಸ್ಥರಿಂದ ರಕ್ಷಿಸಿದ ಪೊಲೀಸರು, ಆಸ್ಪತ್ರೆಗೆ ದಾಖಲಿಸಿದರು. ಆಕೆ ಶುಕ್ರವಾರ ಬೆಳಿಗ್ಗೆ ಮೃತಪಟ್ಟಳು.
ಆಕೆಯ ತಲೆಗೆ ತೀವ್ರ ಗಾಯಗಳಾಗಿತ್ತು. ಆಸ್ಪತ್ರೆಗೆ ದಾಖಲಿಸುವಾಗ ವಿಪರೀತ ರಕ್ತಸ್ರಾವವಾಗುತ್ತಿತ್ತು. ಆಕೆ ಓಡಲು ಪ್ರಯತ್ನಿಸಿದ್ದಳು ಎಂದು ಪೊಲೀಸರು ವಿವರಿಸಿದ್ದಾರೆ.