ರೈತರಿಗೆ ಬೇಡದ ಕೃಷಿ ಕಾಯ್ದೆ ರದ್ದುಗೊಳಿಸಬಾರದೇ ಎಂದ ಪ್ರಿಯಾಂಕಾ ಗಾಂಧಿ
ಲಕ್ನೋ, ಫೆಬ್ರವರಿ.15: ರೈತರಿಗೇ ಬೇಡವಾದ ಕೃಷಿ ಸಂಬಂಧಿತ ಕಾಯ್ದೆಗಳನ್ನು ಕೇಂದ್ರ ಸರ್ಕಾರವು ಅದ್ಯಾಕೆ ಒತ್ತಾಯಪೂರ್ವಕವಾಗಿ ಜಾರಿಗೊಳಿಸುವುದಕ್ಕೆ ಮುಂದಾಗಿದೆ ಎಂದು ಕಾಂಗ್ರೆಸ್ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಪ್ರಶ್ನೆ ಮಾಡಿದ್ದಾರೆ.
ಉತ್ತರ ಪ್ರದೇಶದ ಬಿಜ್ನೋರ್ ನ ಚಂದಪುರ್ ನಲ್ಲಿ ನಡೆದ ಕಿಸಾನ್ ಮಹಾ ಪಂಚಾಯತ್ ನಲ್ಲಿ ರೈತರನ್ನು ಉದ್ದೇಶಿಸಿ ಅವರು ಮಾತನಾಡಿದರು. ಕಳೆದ 80 ದಿನಗಳಿಂದಲೂ ಕೃಷಿ ಕಾಯ್ದೆಗಳ ವಿರುದ್ಧ ರೈತರು ದೆಹಲಿಯ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಬಂದೂಕಿನೊಂದಿಗೆ ಓಡಾಡುವ ಜನರಿಗೆ ನಿರಾಯುಧ ಹುಡುಗಿ ಕಂಡರೇಕೆ ಭಯ; ದಿಶಾಗೆ ವಿಪಕ್ಷಗಳ ಬೆಂಬಲ
ರೈತರೆಲ್ಲ ದೆಹಲಿಯಲ್ಲಿ ಮೈಕೊರೆಯುವ ಚಳಿಯಲ್ಲೂ ಪ್ರತಿಭಟನೆ ನಡೆಸುತ್ತಿರುವುದಾದರೂ ಏಕೆ. ರೈತರ ಲಾಭಕ್ಕಾಗಿಯೇ ಕೃಷಿ ಕಾಯ್ದೆಗಳನ್ನು ಜಾರಿಗೊಳಿಸಲಾಗುತ್ತಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಹೇಳುತ್ತಾರೆ. ಆದರೆ ರೈತರಿಗೇ ಆ ಕಾಯ್ದೆಗಳ ಅಗತ್ಯವಿಲ್ಲ ಎಂದ ಮೇಲೆ ನೀವೇಕೆ ಕಾಯ್ದೆಗಳನ್ನು ರದ್ದುಗೊಳಿಸಬಾರದು ಎಂದು ಪ್ರಿಯಾಂಕಾ ಗಾಂಧಿ ವಾದ್ರಾ ಪ್ರಶ್ನಿಸಿದ್ದಾರೆ.
ಕೇಂದ್ರದಲ್ಲಿ ಪ್ರಧಾನಿ ಮೋದಿ ಆಯ್ಕೆ ಏಕೆ?:
"ಜನರು ಏಕೆ ನರೇಂದ್ರ ಮೋದಿಯವರನ್ನು ಎರಡು ಬಾರಿ ಆಯ್ಕೆ ಮಾಡಿದರು ಎಂದು ಕೆಲವು ಬಾರಿ ನನಗೆ ಅನಿಸುತ್ತದೆ. ಜನರಿಗಾಗಿ ಅವರು ಕೆಲಸವನ್ನು ಮಾಡುತ್ತಾರೆ ಎಂದ ವಿಶ್ವಾಸ ಮತ್ತು ನಂಬಿಕೆಯ ಇಟ್ಟುಕೊಂಡಿದ್ದರು. ಮೊದಲ ಬಾರಿ ಚುನಾವಣೆಯಲ್ಲಿ ಪ್ರಧಾನಿ ಮೋದಿ, ನಿರುದ್ಯೋಗ, ರೈತರು ಸೇರಿದಂತೆ ಹಲವು ವಿಷಯಗಳ ಬಗ್ಗೆ ಪ್ರಸ್ತಾಪಿಸಿದ್ದರು, ಆರೋಪಗಳನ್ನು ಮಾಡಿದ್ದರು. ಆದರೆ ಎರಡನೇ ಬಾರಿ ಚುನಾವಣೆಯಲ್ಲಿ ಪ್ರಧಾನಿ ಮೋದಿ ಏನನ್ನೂ ಮಾಡಲಿಲ್ಲ ಎಂದು ಕಾಂಗ್ರೆಸ್ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಆರೋಪಿಸಿದ್ದಾರೆ.
ವಿವಾದಿತ ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಕಾಯ್ದೆ, ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕಾಯ್ದೆ (ಸಬಲೀಕರಣ ಮತ್ತು ಸಂರಕ್ಷಣೆ) ಒಪ್ಪಂದ ಹಾಗೂ ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆಗಳ ವಿರುದ್ಧ ಕಳೆದ ನವಂಬರ್.26 ರಿಂದ ಪ್ರತಿಭಟನೆ ನಡೆಸಲಾಗುತ್ತಿದೆ. ನವದೆಹಲಿಯ ಮೂರು ಗಡಿಗಳಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಈಗಾಗಲೇ 82 ದಿನಗಳಿಂದಲೂ ರೈತರು ಹೋರಾಟ ನಡೆಸುತ್ತಿದ್ದಾರೆ.