'ಪ್ರಧಾನಿ ಹೆಸರಲ್ಲಿ ಪ್ರಚಾರ ಮಾಡುತ್ತೇವೆ': ಬಿಜೆಪಿಯನ್ನು ಅಣಕಿಸಿದ ಟಿಕಾಯತ್
ಮುಜಾಫರ್ನಗರ, ಸೆಪ್ಟೆಂಬರ್ 05: ''ಕೇಂದ್ರ ಸರ್ಕಾರದ ರೈತ ವಿರೋಧಿ ಕಾಯ್ದೆಗಳ ವಿರುದ್ದ ನಡೆಸಲಾಗುತ್ತಿರುವ ಪ್ರತಿಭಟನೆಯನ್ನು ಪ್ರಧಾನ ಮಂತ್ರಿಯ ಹೆಸರಿನಲ್ಲಿ ನಡೆಸಲಾಗುವುದು,'' ಎಂದು ಹೇಳುವ ಮೂಲಕ ಭಾರತೀಯ ಕಿಸಾನ್ ಯೂನಿಯನ್ ನಾಯಕ, ರೈತ ಮುಖಂಡ ರಾಕೇಶ್ ಟಿಕಾಯತ್ ಬಿಜೆಪಿಯನ್ನು ಅಣಕಿಸಿದ್ದಾರೆ.
"ನಾವು ರೈತರ ಪ್ರತಿಭಟನೆಯನ್ನು ಪ್ರಧಾನ ಮಂತ್ರಿಯ ಹೆಸರಿನಲ್ಲಿ ನಡೆಸುತ್ತೇವೆ. ಏಕೆಂದರೆ ಬಿಜೆಪಿಯು ಇದನ್ನೇ ಮಾಡುತ್ತಿದೆ," ಎಂದು ವ್ಯಂಗ್ಯವಾಡಿದ ರಾಕೇಶ್ ಟಿಕಾಯತ್ ಇದೇ ಸಂದರ್ಭದಲ್ಲಿ ನಮ್ಮ ರೈತ ಹೋರಾಟದ ಹಾದಿ ವಿಭಿನ್ನವಾಗಿರುತ್ತದೆ," ಎಂದು ಎನ್ಡಿ ಟಿವಿಗೆ ನೀಡಿದ ಸಂದರ್ಶನದಲ್ಲಿ ಸ್ಪಷ್ಟಪಡಿಸಿದ್ದಾರೆ.
ಬಿಜೆಪಿಯನ್ನು ಸೋಲಿಸಲು 'ಮಿಷನ್ ಉತ್ತರ ಪ್ರದೇಶ-ಉತ್ತರಾಖಂಡ' ಪ್ರಾರಂಭ: ಟಿಕಾಯತ್ ಘೋಷಣೆ
"ನಾವು ಪ್ರಧಾನ ಮಂತ್ರಿಗೆ ಪ್ರಚಾರ ನೀಡುತ್ತಿದ್ದೇವೆ," ಎಂದು ಹೇಳಿದ ಟಿಕಾಯತ್, "ಪ್ರಧಾನ ಮಂತ್ರಿ ನರೇಂದ್ರ ಮೋದಿ ಎಲ್ಲವನ್ನೂ ಮಾರಾಟ ಮಾಡುತ್ತಿದ್ದಾರೆ. ನಾವು ಪ್ರಧಾನ ಮಂತ್ರಿ ನರೇಂದ್ರ ಮೋದಿ ಏನೆಲ್ಲಾ ಮಾರಾಟ ಮಾಡಿದ್ದಾರೆ ಎಂಬುವುದನ್ನು ಹೇಳುತ್ತೇವೆ. ಈ ಮೂಲಕ ಪ್ರಧಾನಿ ಮೋದಿಗೆ ಪ್ರಚಾರ ನೀಡಲಾಗುವುದು," ಎಂದು ಲೇವಡಿ ಮಾಡಿದರು. ಹಾಗೆಯೇ "ವಿದ್ಯುತ್, ನೀರು ಮೊದಲಾದವುಗಳನ್ನು ಮಾರಾಟ ಮಾಡಲಾಗಿದೆ. ಇದನ್ನು ಜನರಿಗೆ ಹೇಳುವುದು ತಪ್ಪೇ?," ಎಂದು ಪ್ರಶ್ನಿಸಿದರು.
ಉತ್ತರ ಪ್ರದೇಶದಲ್ಲಿ ಮುಂದಿನ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿಯನ್ನು ಸೋಲಿಸಲು ಬಿಜೆಪಿಯ ವಿರುದ್ದವಾಗಿ ರೈತರು ಪ್ರಚಾರ ಮಾಡುವುದಾಗಿ ಈ ಹಿಂದೆಯೇ ರಾಕೇಶ್ ಟಿಕಾಯತ್ ಹೇಳಿದ್ದಾರೆ. ಈ ಹಿಂದೆ "2022 ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ಮಿಷನ್ ಉತ್ತರ ಪ್ರದೇಶ-ಉತ್ತರಾಖಂಡ" ಅನ್ನು ಪ್ರಾರಂಭಿಸುವುದಾಗಿ ಘೋಷಣೆ ಮಾಡಿದ್ದರು.
ಈ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಟಿಕಾಯತ್, "ಮೂರು ಕೃಷಿ ಕಾನೂನುಗಳಲ್ಲಿ ರೈತ ವಿರೋಧಿ ಏನೂ ಇಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಇದು ಪ್ರಧಾನ ಮಂತ್ರಿಯ ದೊಡ್ಡ ಸುಳ್ಳು," ಎಂದು ನರೇಂದ್ರ ಮೋದಿಯ ವಿರುದ್ದ ವಾಗ್ದಾಳಿ ನಡೆಸಿದರು.
ಕೃಷಿ ಕಾಯ್ದೆ ವಿರೋಧಿಸಿ ಸೆ.8ರಂದು ರಾಷ್ಟ್ರವ್ಯಾಪಿ ಭಾರತೀಯ ಕಿಸಾನ್ ಸಂಘ ಧರಣಿ
"ನಾವು ಬಂಗಾಳದಲ್ಲಿ ಬಿಜೆಪಿಯನ್ನು ಸೋಲಿಸಿದ್ದೇವೆ ಮತ್ತು ಈಗ ನಾವು ಬಿಜೆಪಿಯನ್ನು ಉತ್ತರ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ಸೋಲಿಸಲಿದ್ದೇವೆ. ಏಕೆಂದರೆ ಈ ಬಿಜೆಪಿ ಸರ್ಕಾರ ರೈತ ವಿರೋಧಿ ಕಪ್ಪು ಕಾನೂನುಗಳನ್ನು ರದ್ದುಗೊಳಿಸಲು ಸಿದ್ಧವಾಗಿಲ್ಲ," ಬಿಕೆಯು ವಕ್ತಾರರಾದ ರಾಕೇಶ್ ಟಿಕಾಯತ್ ಮಾಹಿತಿ ನೀಡಿದರು. ಮಾರ್ಚ್-ಏಪ್ರಿಲ್ ಬಂಗಾಳ ಚುನಾವಣೆಯ ಸಂದರ್ಭದಲ್ಲಿ ರೈತರು ಬಿಜೆಪಿ ವಿರುದ್ಧ ಪ್ರಚಾರ ನಡೆಸಿದ್ದರು.
"ಮೋರ್ಚಾದ ಏಕೈಕ ಉದ್ದೇಶವೆಂದರೆ ಬಿಜೆಪಿಯನ್ನು ಅಧಿಕಾರದಿಂದ ತೆಗೆದುಹಾಕುವುದು. ಅದರಿಂದಾಗಿ ಹೊಸ ಸರ್ಕಾರವು ಮೋದಿ ಸರ್ಕಾರ ಜಾರಿಗೆ ತಂದ ಮೂರು ವಿವಾದಾತ್ಮಕ ಕೃಷಿ ಕಾನೂನುಗಳನ್ನು ರದ್ದುಪಡಿಸುತ್ತದೆ. ನಾನು ಚುನಾವಣೆಯಲ್ಲಿ ಸ್ಪರ್ಧಿಸಲು ಯೋಜಿಸುತ್ತಿಲ್ಲ," ಎಂದು ಟಿಕಾಯತ್ ಸ್ಪಷ್ಟಪಡಿಸಿದ್ದರು.
"ನಾವು ಆಡಳಿತಾರೂಢ ಬಿಜೆಪಿಯೊಂದಿಗೆ ಯುದ್ಧದಲ್ಲಿದ್ದೇವೆ. ದೇಶದ ಒಬ್ಬ ರೈತ ಕೂಡ ಭವಿಷ್ಯದಲ್ಲಿ ಬಿಜೆಪಿ ಪಕ್ಷಕ್ಕೆ ಮತ ಚಲಾಯಿಸುವುದಿಲ್ಲ. ಬಿಜೆಪಿಯನ್ನು ಸೋಲಿಸಲು ಸಮರ್ಥರಾದವರನ್ನು ಬೆಂಬಲಿಸುವುದು ನಮ್ಮ ಸರಳ ತಂತ್ರ. ನಾವು ಇದನ್ನು ಬಂಗಾಳದಲ್ಲಿ ಪರಿಣಾಮಕಾರಿಯಾಗಿ ಮಾಡಿದ್ದೇವೆ ಮತ್ತು ಅದನ್ನು 2022 ರಲ್ಲಿ ಉತ್ತರ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ಪುನರಾವರ್ತಿಸುತ್ತೇವೆ," ಎಂದು ರೈತ ಮುಖಂಡರು ಹೇಳಿದ್ದರು.
ಇನ್ನು ಎನ್ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ರಾಕೇಶ್ ಟಿಕಾಯತ್, "ಎರಡನೇ ಪ್ರಧಾನ ಮಂತ್ರಿ ಕಚೇರಿಯು ವಾರಾಣಾಸಿಯಲ್ಲಿದೆ. ಪಂಚಾಯತ್ ಅನ್ನು ಅಲ್ಲಿ ಹಾಗೂ ಲಕ್ನೋದಲ್ಲಿ ನಡೆಸಲಾಗುತ್ತದೆ," ಎಂದು ತಿಳಿಸಿದ್ದಾರೆ.
"ಭಾರತ ಸರ್ಕಾರವು ನಮ್ಮನ್ನು ಮಾತುಕತೆಗೆ ಯಾವಾಗ ಆಹ್ವಾನ ಮಾಡುತ್ತದೆಯೋ, ಆಗ ನಾವು ಮಾತುಕತೆಗೆ ಹೋಗುತ್ತೇವೆ. ಸರ್ಕಾರ ನಮ್ಮ ಬೇಡಿಕೆಗಳನ್ನು ಈಡೇರಿಸುವವರೆಗೂ ರೈತರ ಆಂದೋಲನ ಮುಂದುವರಿಯುತ್ತದೆ. ಸ್ವಾತಂತ್ರ್ಯಕ್ಕಾಗಿ ಹೋರಾಟವು 90 ವರ್ಷಗಳ ಕಾಲ ನಡೆಸಲಾಗಿದೆ. ಆದ್ದರಿಂದ ಈ ಆಂದೋಲನವು ಎಷ್ಟು ಕಾಲ ನಡೆಯುತ್ತದೆ ಎಂದು ನನಗೆ ತಿಳಿದಿಲ್ಲ," ಎಂದು ಹೇಳಿದ್ದಾರೆ.
(ಒನ್ ಇಂಡಿಯಾ ಸುದ್ದಿ)