'ಮೋದಿ ಸರ್ಕಾರ ನಂಬಲ್ಲ' ಎಂದ ಹುತಾತ್ಮ ಯೋಧನ ದುಃಖತಪ್ತ ಪತ್ನಿ
ಲಕ್ನೋ, ಫೆಬ್ರವರಿ 17 : ಪುಲ್ವಾಮಾದ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್ ಪಿಎಫ್) ಯೋಧ ಪ್ರದೀಪ್ ಸಿಂಗ್ ಅವರ ಪತ್ನಿ ನೀರಜ್ ಅವರು 'ನರೇಂದ್ರ ಮೋದಿ ಸರ್ಕಾರದ ಮೇಲೆ ನಂಬಿಕೆ ಇಲ್ಲ' ಎಂದು ದುಃಖತಪ್ತರಾಗಿ ಹೇಳಿದ್ದಾರೆ.
ಪುಲ್ವಾಮಾ ದಾಳಿ ನಡೆಯುವುದಕ್ಕೂ ಮುನ್ನ ಉತ್ತರ ಪ್ರದೇಶದ ಕಾನ್ಪುರದ ಕನೌಜ್ ಜಿಲ್ಲೆಯ ಅಜಾನ್ ಗ್ರಾಮದ ಹುತಾತ್ಮ ಯೋಧ ಪ್ರದೀಪ್ ಸಿಂಗ್ ಯಾದವ್ ಜತೆ ಅವರ ತಮ್ಮ ಪತ್ನಿ ನೀರಜಾ ಅವರು ಫೋನ್ ಮಾಡಿ ಮಾತನಾಡುತ್ತಿದ್ದರು.
ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದ ಆ ಯೋಧ ಮನೆಗೆ ಬಂದಿದ್ದು ಶವವಾಗಿ...
ಪತ್ನಿಯೊಂದಿಗೆ ನಗು ನಗುತ್ತಾ ಮಾತನಾಡುತ್ತಿದ್ದಂತೆಯೇ ಎಸ್ ಯುವಿಯೊಂದು ಅನಾಮತ್ತಾಗಿ ಬಂದು ಅವರಿದ್ದ ಬಸ್ಸಿಗೆ ಡಿಕ್ಕಿ ಹೊಡೆದಿತ್ತು. ಅಷ್ಟರಲ್ಲೇ ಪತ್ನಿಗೂ ಭಾರಿ ಸದ್ದು ಕಿವಿಗಪ್ಪಳಿಸಿದೆ. ನಂತರ ಫೋನ್ ಕಾಲ್ ಕಟ್ ಆಗಿದೆ. ಮೌನ, ಆತಂಕ, ಚಡಪಡಿಕೆಯ ನಂತರ ಗೊತ್ತಾಗಿದ್ದು, ತಮ್ಮ ಪತಿ ಹುತಾತ್ಮರಾದ ಘೋರ ಸುದ್ದಿ ಸಿಕ್ಕಿದೆ.
ಸ್ಫೋಟ ನಡೆವಾಗಲೂ ಪತಿಯೊಂದಿಗೆ ಫೋನಿನಲ್ಲಿದ್ದ ಯೋಧನ ಪತ್ನಿ
ಸಿಆರ್ ಪಿಎಫ್ ಕಂಟ್ರೋಲ್ ರೂಮಿನಿಂದ ಪ್ರದೀಪ್ ಸಿಂಗ್ ಹುತಾತ್ಮರಾಗಿರುವ ಸುದ್ದಿ ಸಿಕ್ಕಿದೆ. ನಂತರ ಇಂಡಿಯಾ ಟುಡೇ ಟಿವಿ ಜತೆ ಮಾತನಾಡಿದ ನೀರಜಾ ಅವರು, ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಯೋಧರ ತ್ಯಾಗ, ಬಲಿದಾನ ವ್ಯರ್ಥವಾಗಲು ಬಿಡುವುದಿಲ್ಲ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಆದರೆ, ನಾವು ಮೋದಿ ಹಾಗೂ ಅವರ ಸರ್ಕಾರವನ್ನು ಇನ್ಮುಂದೆ ನಂಬುವುದಿಲ್ಲ. ಈ ಹಿಂದೆ ಕೂಡಾ ಉಗ್ರರು ಕಾಶ್ಮೀರದಲ್ಲಿ ವಿಧ್ವಂಸಕ ಕೃತ್ಯ ಎಸಗಿದ್ದಾರೆ. ಆದರೆ, ಇನ್ನೂ ಭದ್ರತಾ ಪಡೆಗಳಿಗೆ ಯಾಕೆ ಮುಕ್ತ ಅಧಿಕಾರ ನೀಡಿಲ್ಲ. ನಮ್ಮ ಯೋಧರಲ್ಲಿ ಬಲವಿದ್ದರೂ, ಆದೇಶವಿಲ್ಲದೆ ಏನೂ ಮಾಡಲು ಸಾಧ್ಯವಾಗುತ್ತಿಲ್ಲ. ಕನಿಷ್ಟ ಕಲ್ಲು ಎಸೆಯುವ ದುರುಳರನ್ನು ಹತ್ತಿಕ್ಕಲು ಮುಕ್ತ ಅವಕಾಶವಿಲ್ಲ ಎಂದು ದುಃಖ ತೋಡಿಕೊಂಡಿದ್ದಾರೆ.
ಕಾಶ್ಮೀರ ಪ್ರತ್ಯೇಕತಾವಾದಿಗಳಿಗೆ ಭರ್ಜರಿ ಶಾಕ್ ನೀಡಿದ ಕೇಂದ್ರ ಸರಕಾರ
40 ದಿನಗಳ ರಜೆ ಮೇಲೆ ಊರಿಗೆ ಬಂದಿದ್ದ ನನ್ನ ಪತಿ ಫೆ.11ರಂದು ಸೇನೆಗೆ ಮರಳಿದ್ದರು. ಭದ್ರತಾ ಪಡೆಗಳು ಉಗ್ರರ ಮೇಲೆ ದಾಳಿ ನಡೆಸಿ ಅವರನ್ನು ಕೊಂದರೂ ನನ್ನ ಪತಿ ವಾಪಸ್ ಬರಲು ಸಾಧ್ಯವಿಲ್ಲ ಎಂದು ಗೋಳಾಡಿದ್ದಾರೆ.
ಹುತಾತ್ಮ ಯೋಧರ ಕುಟುಂಬದ ಹೃದಯ ಹಿಂಡುವ ಚಿತ್ರಗಳು
ಫೆ.14 ರಂದು ಸಂಜೆ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದ ಆವಂತಿಪೊರ ಎಂಬಲ್ಲಿ ಪಾಕ್ ಮೂಲದ ಜೈಷ್ ಇ ಮೊಹಮ್ಮದ್ ಉಗ್ರ ಸಂಘಟನೆಯ ಭಯೋತ್ಪಾದಕ ಆದಿಲ್ ಅಹ್ಮದ್ ದಾರ್ ಆತ್ಮಾಹುತಿ ಕಾರ್ ಬಾಂಬ್ ದಾಳಿ ನಡೆಸಿದ ಪರಿಣಾಮ ಸಿಆರ್ ಪಿಎಫ್ ನ 44 ಯೋಧರು ಹುತಾತ್ಮರಾಗಿದ್ದರು.