ಚುನಾವಣೆ ಮೇಲೆ ಕಣ್ಣು, ಯುಪಿಗೆ ಭರ್ಜರಿ ಪಾಲು ಕೊಟ್ಟ ಮೋದಿ
ಲಕ್ನೋ, ಜುಲೈ 8: 2022ರ ವಿಧಾನಸಭೆ ಚುನಾವಣೆಗೆ ತಯಾರಿ ನಡೆಸಿರುವ ಭಾರತೀಯ ಜನತಾ ಪಕ್ಷ(ಬಿಜೆಪಿ) ತನ್ನ ರಾಜಕೀಯ ನಡೆಯನ್ನು ಈಗಿಂದಲೇ ಆರಂಭಿಸಿದೆ. ಮೋದಿ 2.0 ಸರ್ಕಾರ್ ಸಂಪುಟ ವಿಸ್ತರಣೆಯಲ್ಲಿ ಇದರ ಸಣ್ಣ ಝಲಕ್ ಕಂಡು ಬಂದಿದೆ. ಉತ್ತರಪ್ರದೇಶದಿಂದ ಮೋದಿ ಹೊಸ ಸಂಪುಟಕ್ಕೆ 7 ಮಂದಿ ಸಂಸದರು ಸಚಿವರಾಗಿ ಸೇರ್ಪಡೆಯಾಗಿದ್ದಾರೆ.
ರಾಷ್ಟ್ರಪತಿ ಭವನದಲ್ಲಿ ಬುಧವಾರ ಸಂಜೆ ನಡೆದ ಸರಳ ಸಮಾರಂಭದಲ್ಲಿ ಯುಪಿಯಿಂದ ಸೇರ್ಪಡೆಗೊಡ ಏಳು ಮಂದಿ ಸಚಿವರ ಪೈಕಿ ಅನುಪ್ರಿಯ ಪಟೇಲ್ ಮಿತ್ರ ಪಕ್ಷ ಅಪ್ನಾ ದಳ(ಸೊನೆಲಾಲ್) ಕ್ಕೆ ಸೇರಿದವರಾಗಿದ್ದರೆ, ಮಿಕ್ಕವರು ಬಿಜೆಪಿ ಸಂಸದರಾಗಿದ್ದಾರೆ.
ಅನುಪ್ರಿಯ ಪಟೇಲ್, ಪಂಕಜ್ ಚೌಧರಿ ಹಾಗೂ ಬಿ.ಎಲ್ ವರ್ಮ ಮೂವರು ಹಿಂದುಳಿದ ವರ್ಗಕ್ಕೆ ಸೇರಿದವರಾಗಿದ್ದು, ಯುಪಿಯಲ್ಲಿ ಶೇ 50ಕ್ಕೂ ಹಿಂದುಳಿದ ವರ್ಗಕ್ಕೆ ಸೇರಿದ ಅಧಿಕ ಮತದಾರರನ್ನು ಹೊಂದಿದೆ.
ಕೌಶಲ್ ಕಿಶೋರ್, ಭಾನು ಪ್ರತಾಪ್ ಸಿಂಗ್ ವರ್ಮ ಹಾಗೂ ಎಸ್ ಪಿ ಸಿಂಗ್ ಬಘೆಲ್ ಮೂವರು ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದಾರೆ. ಅಜಯ್ ಕುಮಾರ್ ಮಾತ್ರ ಬ್ರಾಹ್ಮಣ ಕೋಟಾದಿಂದ ಆಯ್ಕೆಯಾಗಿದ್ದಾರೆ.
ಇತ್ತೀಚೆಗೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಗೊಂಡಿದ್ದ ಜಿತಿನ್ ಪ್ರಸಾದಗೆ ಸಚಿವರಾಗುವ ಅವಕಾಶ ಸಿಗಲಿದೆ ಎಂಬ ಸುದ್ದಿ ಹಬ್ಬಿತ್ತು. ಆದರೆ, ತೆರಾಯಿ ಪ್ರದೇಶದ ಅಜಯ್ ಕುಮಾರ್ ಕೊನೆ ಗಳಿಗೆಯಲ್ಲಿ ಸಂಪುಟ ಸೇರಿದ್ದಾರೆ.
ಅನುಪ್ರಿಯ ಪಟೇಲ್(ಮಿರ್ಜಾಪುರ್) ಹಾಗೂ ಪಂಕಜ್ ಚೌಧರಿ (ಮಹರಾಜ್ ಗಂಜ್) ಪೂರ್ವ ಉತ್ತರಪ್ರದೇಶ ಭಾಗದವರಾಗಿದ್ದಾರೆ. ಬಘೇಲ್ ಆಗ್ರಾದಿಂದ ಹಾಗೂ ರಾಜ್ಯಸಭಾ ಸದಸ್ಯ ಬಿಎಲ್ ವರ್ಮ ಬುದೌನ್ ಕ್ಷೇತ್ರದವರಾಗಿದ್ದು, ಭಾನು ಪ್ರತಾಪ್ ವಮ ಜಲೌನ್ (ಬುಂಡೇಲ್ ಖಂಡ್) ಭಾಗಕ್ಕೆ ಸೇರಿದವರಾಗಿದ್ದು, ಪ್ರಾದೇಶಿಕ ಸಮತೋಲನ ಕಾಯ್ದುಕೊಳ್ಳಲಾಗಿದೆ.
2016 ರಿಂದ 2019ರ ಅವಧಿಯಲ್ಲಿ ರಾಜ್ಯ ಸಚಿವ ಸ್ಥಾನದಲ್ಲಿ ಕಾರ್ಯ ನಿರ್ವಹಿಸಿರುವ ಅನುಭವವುಳ್ಳ ಅನುಪ್ರಿಯ ಪಟೇಲ್ ಅವರಿಗೆ ಒಬಿಸಿಗಳಿಗಾಗಿ ಪ್ರತ್ಯೇಕ ಸಚಿವಾಲಯಕ್ಕಾಗಿ ಬೇಡಿಕೆ ಇಟ್ಟಿದ್ದಾರೆ.