'ಚುನಾವಣೆಗೆ ನಿಲ್ಲಲಾಗದವರಿಗೆಲ್ಲ ಮೋದಿಯನ್ನು ಸೋಲಿಸಬೇಕಿದೆ'
ಆಗ್ರಾ (ಉತ್ತರಪ್ರದೇಶ), ಮಾರ್ಚ್ 24: ಚುನಾವಣೆಗೆ ಸ್ಪರ್ಧೆ ಮಾಡುವುದು ಯಾರಿಗೂ ಸಾಧ್ಯವಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಮಾಯಾವತಿ ಸೋಲಿಸಲು ಬಯಸುತ್ತಾರೆ. ಆದರೆ ಆಕೆಗೆ ಚುನಾವಣೆಯಲ್ಲಿ ಹೋರಾಡುವುದು ಸಾಧ್ಯವಿಲ್ಲ. ಶರದ್ ಪವಾರ್, ಮಮತಾ ಬ್ಯಾನರ್ಜಿ ಅಥವಾ ಸ್ಟಾಲಿನ್ ಕೂಡ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಭಾನುವಾರ ಆಗ್ರಾದಲ್ಲಿ ನಡೆದ ಸಭೆಯಲ್ಲಿ ಟಾಂಗ್ ನೀಡಿದ್ದಾರೆ.
ಇಡೀ ದೇಶದ ಅಭಿವೃದ್ಧಿಗಾಗಿ ಮೋದಿ ಸರಕಾರ ಕೆಲಸ ಮಾಡಿದೆ. ಯಾವುದೋ ಒಂದು ಸಮುದಾಯವನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಕೆಲಸ ಮಾಡಿಲ್ಲ. ರೈತರಿಗೆ ನೇರ ಹಣ ವರ್ಗಾವಣೆ, ಬಡವರಿಗೆ ಅರೋಗ್ಯ ವಿಮೆ ಹೀಗೆ ಕೇಂದ್ರ ಸರಕಾರವು ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸಿದೆ ಎಂದಿದ್ದಾರೆ.
ಸ್ಯಾಮ್ ಪಿತ್ರೋಡಾ ಹೇಳಿಕೆಗೆ ರಾಹುಲ್ ಕ್ಷಮೆ ಕೇಳಲಿ : ಅಮಿತ್ ಶಾ
ಈ ಚುನಾವಣೆಯು ಬಿಜೆಪಿಯ ಅಭಿವೃದ್ಧಿ ವರ್ಸಸ್ ಮಹಾಘಟ್ ಬಂಧನ್ ನ ಭ್ರಷ್ಟಾಚಾರದ್ದಾಗಿ ಇರುತ್ತದೆ. ಪ್ರಧಾನಿ ನರೇಂದ್ರ ಮೋದಿ ಸರಕಾರ ಗಡಿ ನಿಯಂತ್ರಣ ರೇಖೆ ಆಚೆಗೆ ಸರ್ಜಿಕಲ್ ಸ್ಟ್ರೈಕ್ ನಡೆಸಿದೆ. ಆದರೆ ವಿಪಕ್ಷಗಳು ದೇಶದ ಸೇನಾ ಪಡೆಯನ್ನು ದೂಷಿಸುವ ಮೂಲಕ ವೋಟ್ ಬ್ಯಾಂಕ್ ರಾಜಕೀಯದಲ್ಲಿ ತೊಡಗಿವೆ ಎಂದು ಆರೋಪಿಸಿದ್ದಾರೆ ಅಮಿತ್ ಶಾ.
ರಾಷ್ಟ್ರೀಯ ಭದ್ರತೆ, ಅಭಿವೃದ್ಧಿಗಾಗಿ ಚುನಾವಣೆಯನ್ನು ಹೋರಾಡಬೇಕಾಗುತ್ತದೆ. ಯಾರೋ ಪ್ರಧಾನಿ ಆಗಬೇಕು ಎಂಬ ಆಸೆ ಪೂರೈಸಲು ಚುನಾವಣೆ ಬಡಿದಾಡುವುದಲ್ಲ ಎಂದು ಹೇಳಿದ್ದಾರೆ.