ಕಾಶಿ ವಿಶ್ವನಾಥನ ದರ್ಶನಕ್ಕೆ ತೆರಳುವ ಮುನ್ನ ಈ ಸುದ್ದಿ ಓದಿ
ವಾರಾಣಸಿ, ಜನವರಿ 13: ಉತ್ತರ ಪ್ರದೇಶದ ಶಾಲೆ, ಕಾಲೇಜುಗಳಲ್ಲಿ ಜೀನ್ಸ್, ಟೈಟ್ ಪ್ಯಾಂಟ್, ಟೀ ಶರ್ಟ್ ಧರಿಸುವುದನ್ನು ನಿರ್ಬಂಧಿಸಿರುವ ಸುದ್ದಿ ಗೊತ್ತಿರಬಹುದು. ಇತಿಹಾಸ ಪ್ರಸಿದ್ಧ ಕಾಶಿ ವಿಶ್ವನಾಥನ ದರ್ಶನಕ್ಕೆ ತೆರಳುವ ಭಕ್ತರಿಗೆ ಮತ್ತೊಮ್ಮೆ ವಸ್ತ್ರಸಂಹಿತೆ ಹೇರಲಾಗಿದೆ.
ಮೈ ತೋರಿಸುವ ಬಟ್ಟೆ ಧರಿಸುವ ದೇಶಿ ಅಥವಾ ವಿದೇಶಿ ಮಹಿಳೆಯರಿಗೆ ಇನ್ನು ವಿಶ್ವನಾಥನ ದರ್ಶನಕ್ಕೆ ಪ್ರವೇಶವಿಲ್ಲ ಎಂದಷ್ಟೇ ದೇಗುಲದ ಪ್ರಕಟಣೆಯಲ್ಲಿ ಹೇಳಲಾಗಿದೆ. ಆದರೆ, ಸೀರೆ ಕಡ್ಡಾಯ ಎಂದು ಹೇಳಿಲ್ಲ. ಸಭ್ಯವಾದ ಡ್ರೆಸ್ ಧರಿಸಿ ದೇಗುಲ ಪ್ರವೇಶಿಸಬಹುದು ಎಂದು ಶ್ರೀಕಾಶಿ ವಿಶ್ವನಾಥ್ ಮಂದಿರ ನ್ಯಾಸ್ ಪರಿಷತ್ ನ ಮುಖ್ಯಸ್ಥ ಅಶೋಕ್ ದ್ವಿವೇದಿ ಈ ಹಿಂದೆ ಹೇಳಿದ್ದರು. ಆದರೆ, ಈಗ ಸೀರೆ ಕಡ್ಡಾಯಗೊಳಿಸಲಾಗಿದೆ ಎಂದು ಡಿಎನ್ಎ ವರದಿ ಮಾಡಿದೆ.
ವಸ್ತ್ರ ಸಂಹಿತೆ, ಸಮವಸ್ತ್ರ ನೀತಿ ಜಾರಿ ಮಾಡಲು ಇದೇನು ಶಾಲೆ ಅಥವಾ ಕಾಲೇಜಲ್ಲ. ಇಲ್ಲಿನ ಸಂಸ್ಕೃತಿಗೆ ಅನುಗುಣವಾಗಿ ಮಂದಿರದ ಪಾವಿತ್ರ್ಯಕ್ಕೆ ಧಕ್ಕೆ ಬರದಂಥ ಯಾವುದೇ ವಸ್ತ್ರವನ್ನಾದರೂ ಮಹಿಳೆಯರು ಹಾಗೂ ಪುರುಷರು ಧರಿಸಬಹುದು ಎಂದಿದ್ದಾರೆ.
ತಿರುಪತಿ ದೇವಾಲಯದಲ್ಲಿರುವಂತೆ ಮಹಿಳೆಯರಿಗೆ ಸೀರೆ ಹಾಗೂ ಪುರುಷರಿಗೆ ಧೋತಿ ಕುರ್ತಾದ ವಸ್ತ್ರಸಂಹಿತೆ ಜಾರಿ ಮಾಡುವಂತೆ ಮನವಿ ಮಾಡಿದ್ದರು. ಇದಾದ ಬಳಿಕ ಅನೇಕ ಪ್ರಮುಖ ದೇಗುಲಗಳಲ್ಲಿ ವಸ್ತ್ರ ಸಂಹಿತೆ ಜಾರಿಗೆ ಬಂದಿತು. ದೇಗುಲದ ಬಳಿ ವಸ್ತ್ರ ಬದಲಾವಣೆಗೆ ಸ್ಥಳಗಳನ್ನು ಗುರುತಿಸಿದ್ದು, ಆಸಕ್ತರು ಸೀರೆಯುಟ್ಟು ಬರಬಹುದು.ಇಲ್ಲದಿದ್ದರೆ ಯಾವುದೇ ಸಭ್ಯ ವಸ್ತ್ರ ಧರಿಸಿ ದೇಗುಲ ಪ್ರವೇಶಿಸಬಹುದು ಎಂದು ದೇಗುಲದ ಹೆಚ್ಚುವತಿ ಸಿಇಒ ಪಿಎನ್ ದ್ವಿವೇದಿ ತಿಳಿಸಿದ್ದಾರೆ.
ಸೀರೆಯಿಲ್ಲದೆ ಬಂದ ಭಕ್ತರಿಗೆ ದೇವಸ್ಥಾನದಿಂದಲೇ 100 ರೂ.ಗೆ ಸೀರೆಯನ್ನು ನೀಡಲಾಗುತ್ತದೆ. ದೇವಸ್ಥಾನದ ಬಳಿ ಇರುವ ರೂಂನಲ್ಲಿ ಉಡುಪು ಬದಲಾಯಿಸಿಕೊಂಡು ಭಕ್ತರು ದೇವರ ದರ್ಶನ ಪಡೆಯಬಹುದು. ಮಹಾಬಲೇಶ್ವರ ದೇವಸ್ಥಾನದಲ್ಲಿ ಪುರುಷರು ಜೀನ್ಸ್, ಬರ್ಮುಡಾ ಧರಿಸಿ ದೇವಾಲಯದೊಳಗೆ ಬರುವಂತಿಲ್ಲ, ಹೀಗೆ ಕೇರಳದ ಅನೇಕ ದೇಗುಲಗಳಲ್ಲೂ ವಸ್ತ್ರ ಸಂಹಿತೆ ಜಾರಿಯಲ್ಲಿದೆ.