'ಡಬಲ್ ಇಂಜಿನ್ ಸರ್ಕಾರ': ಯೋಗಿ ಸರ್ಕಾರವನ್ನು ಶ್ಲಾಘಿಸಿದ ಮೋದಿ
ಆಲಿಗಢ, ಸೆಪ್ಟೆಂಬರ್ 14: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ರನ್ನು ಹೊಗಳಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ, "ಡಬಲ್ ಇಂಜಿನ್ ಸರ್ಕಾರದ ಡಬಲ್ ಪ್ರಯೋಜನಕ್ಕೆ ಉತ್ತರ ಪ್ರದೇಶ ಸರ್ಕಾರ ಎಂದಿಗೂ ಮಿಂಚುವ ಉದಾಹರಣೆಯಾಗಿದೆ," ಎಂದು ಮಂಗಳವಾರ ಹೇಳಿದ್ದಾರೆ.
ದೆಹಲಿಯಿಂದ ಸುಮಾರು 150 ಕಿಲೋ ಮೀಟರ್ ದೂರದಲ್ಲಿ ಇರುವ ಆಲಿಗಢದ ರಾಜ ಮಹೇಂದ್ರ ಪ್ರತಾಪ ಸಿಂಗ್ ರಾಜ್ಯ ವಿಶ್ವವಿದ್ಯಾನಿಲಯದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ, "ಈ ಹಿಂದೆ ಉತ್ತರ ಪ್ರದೇಶ ದೇಶದ ಅಭಿವೃದ್ದಿಗೆ ತೊಡಕು ಆಗಿತ್ತು, ಆದರೆ ಈಗ ದೇಶದ ಅಭಿವೃದ್ದಿಯಲ್ಲಿ ಉತ್ತರ ಪ್ರದೇಶ ರಾಜ್ಯ ಪ್ರಮುಖ ಪಾತ್ರವನ್ನು ವಹಿಸುತ್ತಿದೆ ಎಂದು ಹೇಳಿಕೊಳ್ಳಲು ನನಗೆ ಬಹಳ ತೃಪ್ತಿಯಾಗುತ್ತದೆ," ಎಂದು ಅಭಿಪ್ರಾಯಿಸಿದ್ದಾರೆ.
ನಾಯಕತ್ವ ಬದಲಾವಣೆಯ ವದಂತಿಗಳ ಮಧ್ಯೆ ಕೊರೊನಾ ನಿರ್ವಹಣೆ ವಿಚಾರದಲ್ಲಿ ಆದಿತ್ಯನಾಥ್ಗೆ ಬೇಷ್ ಎಂದ ಬಿಜೆಪಿ
ಆಲಿಗಢದ ರಾಜ ಮಹೇಂದ್ರ ಪ್ರತಾಪ ಸಿಂಗ್ ರಾಜ್ಯ ವಿಶ್ವವಿದ್ಯಾನಿಲಯದಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ಜಾಟ್ ಐಕಾನ್ ಎಂದು ಹೆಸರಿಡಲಾಗಿದೆ. ಇದನ್ನು ಚುನಾವಣೆ ಸಮೀಸುತ್ತಿರುವ ನಡುವೆ ಪ್ರತಿಭಟನೆ ನಡೆಸುತ್ತಿರುವ ರೈತರನ್ನು ತಲುಪುವ ಒಂದು ಪ್ರಯತ್ನ ಎಂದು ಕೂಡಾ ಹೇಳಲಾಗಿದೆ.
ಇನ್ನು ಈ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಬಿಜೆಪಿಯ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಸಾಧನೆಗಳನ್ನು ವಿವರಿಸುತ್ತಾ, "ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಹೂಡಿಕೆದಾರರಿಗೆ ಉತ್ತರ ಪ್ರದೇಶ ರಾಜ್ಯವು ಹೆಚ್ಚು ಅನುಕೂಲಕರ ರಾಜ್ಯವಾಗಿ ಹೊರಹೊಮ್ಮುತ್ತಿದೆ. ಅನುಕೂಲಕರ ವಾತಾವರಣವನ್ನು ಸೃಷ್ಟಿ ಮಾಡಿ, ಪೋಷಿಸಿದಾಗ ಹಾಗೂ ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸಿದಾಗ ಮಾತ್ರ ಯಾವುದೇ ರಾಜ್ಯವು ಹೂಡಿಕೆದಾರರಿಗೆ ಹೆಚ್ಚು ಅನುಕೂಲಕರವಾದ ರಾಜ್ಯವಾಗುತ್ತದೆ. ಡಬಲ್ ಇಂಜಿನ್ ಸರ್ಕಾರದ ಡಬಲ್ ಪ್ರಯೋಜನಕ್ಕೆ ಉತ್ತರ ಪ್ರದೇಶ ಸರ್ಕಾರ ಎಂದಿಗೂ ಮಿಂಚುವ ಉದಾಹರಣೆಯಾಗಿದೆ," ಎಂದು ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಬಿಜೆಪಿ ಸರ್ಕಾರವನ್ನು ಹಾಡಿ ಹೊಗಳಿದ್ದಾರೆ.
ಇನ್ನು ಇದೇ ಸಂದರ್ಭದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಡಬಲ್ ಇಂಜಿನ್ ಹೇಳಿಕೆಯನ್ನು ಬಿಜೆಪಿಯ ವಿರುದ್ದ ವಾಗ್ದಾಳಿ ನಡೆಸಲು ಬಳಸಿದ ವಿರೋಧ ಪಕ್ಷಗಳ ವಿರುದ್ದ ಗರಂ ಆದರು. ಮಾಜಿ ಉತ್ತರ ಪ್ರದೇಶ ಮುಖ್ಯಮಂತ್ರಿಗಳಾದ ಅಖಿಲೇಶ್ ಯಾದವ್ ಹಾಗೂ ಮಾಯಾವತಿ ವಿರುದ್ದ ಕಿಡಿಕಾರಿದ ಪ್ರಧಾನಿ ನರೇಂದ್ರ ಮೋದಿ, "ಉತ್ತರ ಪ್ರದೇಶದಲ್ಲಿ ಒಂದು ಕಾಲವಿತ್ತು, ಆ ಕಾಲದಲ್ಲಿ ಗೂಂಡಾಗಳೇ ಉತ್ತರ ಪ್ರದೇಶ ಸರ್ಕಾರವನ್ನು ಆಳುತ್ತಿದ್ದರು. ಆದರೆ ಈಗ ಎಲ್ಲಾ ಸುಳಿಗೆಗಾರರು, ಮಾಫಿಯಾ ನಾಯಕರು ಜೈಲಿನ ಕಂಬಿಯ ಒಳಗೆ ಇದ್ದಾರೆ," ಎಂದಿದ್ದಾರೆ.
ಕೋವಿಡ್ ನಿರ್ವಹಣೆ: ಯೋಗಿ ಸರ್ಕಾರದ ವಿರುದ್ದ ಬಿಜೆಪಿ ನಾಯಕ ಆಕ್ರೋಶ
"ಹಾಗೆಯೇ ರಾಜ್ಯದ ಜನರು ಈ ಹಿಂದೆ ಇದ್ದ ಸರ್ಕಾರದ ಸಂದರ್ಭದಲ್ಲಿ ಕಂಡ ಹಗರಣಗಳನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ತಾವು ಎಂತಹ ಭ್ರಷ್ಟ ರಾಜಕಾರಣಿಗಳಿಗೆ ಈ ಹಿಂದೆ ಅಧಿಕಾರದ ಅವಕಾಶ ನೀಡಿದ್ದೆವು ಎಂಬುವುದನ್ನು ಕೂಡಾ ಈಗ ಉತ್ತರ ಪ್ರದೇಶದ ಜನರು ಮರೆಯುವುದಿಲ್ಲ," ಎಂದು ಹೇಳಿದ್ದಾರೆ. "ಇಂದು ಯೋಗಿ ಆದಿತ್ಯನಾಥ್ ಜೀ ಸರ್ಕಾರವು ರಾಜ್ಯದ ಅಭಿವೃದ್ದಿಗಾಗಿ ಹೂಡಿಕೆ ಮಾಡಿದೆ," ಎಂದು ಕೂಡಾ ಪ್ರಧಾನಿ ಮೋದಿ ಉಲ್ಲೇಖ ಮಾಡಿದ್ದಾರೆ.
ಈ ಹಿಂದೆ ಯೋಗಿ ಆದಿತ್ಯಾನಾಥ್ ವಿರುದ್ದ ಹಲವಾರು ಹಿರಿಯ, ರಾಜ್ಯ ಬಿಜೆಪಿ ನಾಯಕರುಗಳು ಅಸಮಾಧಾನ ವ್ಯಕ್ತಪಡಿಸಿದ್ದರು. ಕೊರೊನಾ ವೈರಸ್ ಸೋಂಕು ನಿರ್ವಹಣೆ ವಿಚಾರದಲ್ಲಿ ಯೋಗಿ ಸರ್ಕಾರವನ್ನು ಬಿಜೆಪಿ ನಾಯಕರೇ ಬಹಿರಂಗವಾಗಿ ಟೀಕೆ ಮಾಡಿದ್ದರು. ಈ ಬೆನ್ನಲ್ಲೇ ಪ್ರಧಾನ ಮಂತ್ರಿ ನರೇಂದ್ರ ಮೋದಿ ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಬಿಜಪಿ ಸರ್ಕಾರವನ್ನು ಹಾಡಿ ಹೊಗಳಿದ್ದಾರೆ.
ಭಾರತವು ತನ್ನ ಇಮೇಜ್ ಅನ್ನು "ರಕ್ಷಣಾ ಆಮದುದಾರರಿಂದ" ವಿಶ್ವದ ಅತಿದೊಡ್ಡ ರಕ್ಷಣಾ ರಫ್ತುದಾರರಾಗಿ ಬದಲಾಯಿಸಿಕೊಳ್ಳುತ್ತಿದೆ," ಎಂದು ಪ್ರಧಾನಿ ಮೋದಿ ಹೇಳಿದರು. ಆಲಿಗಢ ರಕ್ಷಣಾ ಸಾಮಾಗ್ರಿಗಳ ಉತ್ಪಾದನೆಯ ಕೇಂದ್ರವಾಗಿ ಹೊರಹೊಮ್ಮುತ್ತಿದೆ. ಈಗಾಗಲೇ 12 ರಕ್ಷಣಾ ಸಂಸ್ಥೆಗಳು ತಮ್ಮ ಉತ್ಪಾದನಾ ಘಟಕಗಳನ್ನು ಇಲ್ಲಿ ಆಲಿಗಢದಲ್ಲಿ ಸ್ಥಾಪನೆ ಮಾಡಲಾಗುತ್ತಿದೆ," ಎಂದು ಪ್ರಧಾನಿ ವಿವರಿಸಿದ್ದಾರೆ.
(ಒನ್ ಇಂಡಿಯಾ ಸುದ್ದಿ)