'2004ರ ಫಲಿತಾಂಶ ಮರೆಯಬೇಡಿ' ಎಚ್ಚರಿಕೆ ಕೊಟ್ಟ ಸೋನಿಯಾ
ರಾಯ್ ಬರೇಲಿ, ಏಪ್ರಿಲ್ 11: ಉತ್ತರಪ್ರದೇಶದ ರಾಯ್ ಬರೇಲಿ ಕ್ಷೇತ್ರದಲ್ಲಿಂದು ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಸಿದ ಬಳಿಕ, 'Don't forget 2004' ಎಂದು ಬಿಜೆಪಿ ಎಚ್ಚರಿಕೆ ನೀಡಿದ್ದಾರೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಚುನಾವಣಾ ಕಚೇರಿಯ ಹೊರಗಡೆ ಪುತ್ರ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಜತೆ ನಿಂತಿದ್ದ ಸೋನಿಯಾ ಅವರಿಗೆ ಮೋದಿ ಬಗ್ಗೆ ಪ್ರಶ್ನೆ ಎದುರಾಯಿತು. ಇದಕ್ಕೆ ಉತ್ತರಿಸಿ, 2004ರಲ್ಲಿ ವಾಜಪೇಯಿಜೀ ಅವರು ಅಜೇಯ ಎಂದು ಭಾವಿಸಲಾಗಿತ್ತು. ಆದರೆ, ನಾವು ಗೆಲುವು ಸಾಧಿಸಿದೆವು, ಈಗ ಮೋದಿ ಅವರನ್ನು ಕೂಡಾ ಅಜೇಯ ಎನ್ನಲಾಗುತ್ತಿದೆ. ಆದರೆ, ಇದಕ್ಕೆ ಜನತೆ ಉತ್ತರ ನೀಡಲಿದ್ದಾರೆ ಎಂದರು.
ರಾಯ್ ಬರೇಲಿ ಲೋಕಸಭೆ ಕ್ಷೇತ್ರದಲ್ಲಿ ಯಾರ ಬಾಯಿಗೆ 'ಬರ್ಫಿ'?
'ಜನತೆ ಮುಂದೆ ಯಾರು ದೊಡ್ಡವರಲ್ಲ, ಭಾರತದ ಇತಿಹಾಸದಲ್ಲಿ ಗರ್ವದಿಂದ ಅಧಿಕಾರ, ಆಡಳಿತ ನಡೆಸಿದ ಎಷ್ಟೋ ಮಂದಿ ತಮ್ಮನ್ನು ತಾವು ಅಜೇಯ, ಯಾರೂ ಸೋಲಿಸಲು ಸಾಧ್ಯವಿಲ್ಲ ಎಂದು ಕೊಂಡಿದ್ದರು, ಆದರೆ, ಅವರಿಗೆ ಜನರು ತಕ್ಕ ಪಾಠ ಕಲಿಸಿದ್ದಾರೆ. ಈ ಚುನಾವಣೆಯಲ್ಲಿ ಮೋದಿ ಅವರಿಗೂ ಇದೇ ಕಾದಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದರು.
1996, 1998 ಹಾಗೂ 1999ರಲ್ಲಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಬಿಜೆಪಿ ಜಯ ದಾಖಲಿಸಿತ್ತು. ಆದರೆ, 2004ರಲ್ಲಿ ಗೆಲ್ಲುವ ನಿರೀಕ್ಷೆ ಹುಟ್ಟಿಹಾಕಿದರೂ, ಭಾರತ ಪ್ರಕಾಶಿಸುತ್ತಿದೆ ಎಂಬ ಘೋಷ ವಾಕ್ಯ ಕೂಗಿದರೂ, ಮತದಾರ ಮಾತ್ರ ವ್ಯತಿರಿಕ್ತ ಫಲಿತಾಂಶ ನೀಡಿದ್ದನ್ನು ಸ್ಮರಿಸಬಹುದು.
ಸಮರಾಂಗಣ: ಯುಪಿಎ ಅಧ್ಯಕ್ಷೆ ವಿರುದ್ಧ ಮಾಜಿ ಕಾಂಗ್ರೆಸ್ಸಿಗ ಕಣಕ್ಕೆ
ಈ ಸಂದರ್ಭದಲ್ಲಿ ಕಾಂಗ್ರೆಸ್ ಮೈತ್ರಿಕೂಟವನ್ನು ಒಟ್ಟುಗೂಡಿಸಿದ್ದ ಅಂದಿನ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಸಹಜವಾಗಿ ಪ್ರಧಾನಿ ಪಟ್ಟ್ ಒಲಿದು ಬಂದಿತ್ತು. ಆದರೆ, ಆರ್ಥಿಕ ತಜ್ಞ ಮನಮೋಹನ್ ಸಿಂಗ್ ಅವರನ್ನು ಪ್ರಧಾನಿ ಮಾಡಿದ್ದು ಈಗ ಇತಿಹಾಸ.