"ಯುಪಿ ಪೊಲೀಸ್, ಬಿಜೆಪಿ ಸರ್ಕಾರವನ್ನು ನಂಬಬೇಡಿ"; ಎಂದಿದ್ದೇ ಕೇಸರಿ ಪಡೆಗೆ ಅಸ್ತ್ರ!
ಲಕ್ನೋ, ಜುಲೈ 13: ಉತ್ತರ ಪ್ರದೇಶದ ಲಕ್ನೋದಲ್ಲಿ ಅಲ್ ಖೈದಾ ಉಗ್ರ ಸಂಘಟನೆ ಜೊತೆ ನಂಟು ಹೊಂದಿರುವ ಇಬ್ಬರು ಶಂಕಿತರ ಬಂಧನ ಬಗ್ಗೆ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅನುಮಾನ ವ್ಯಕ್ತಪಡಿಸಿದ್ದಾರೆ.
ಇತ್ತೀಚಿಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, "ನನಗೆ ಉತ್ತರ ಪ್ರದೇಶ ಪೊಲೀಸರು ಹಾಗೂ ವಿಶೇಷವಾಗಿ ಬಿಜೆಪಿ ಸರ್ಕಾರದ ಮೇಲೆ ವಿಶ್ವಾಸವಿಲ್ಲ," ಎಂದಿದ್ದಾರೆ. ಈ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಸಮಾಜವಾದಿ ಪಕ್ಷದಿಂದ ಸ್ಪಷ್ಟನೆ ನೀಡಲಾಗಿದೆ.
'ಯುಪಿ ಸ್ಥಳೀಯ ಚುನಾವಣೆಯಲ್ಲಿ ಮತದಾರರನ್ನು ಅಪಹರಿಸಿದ ಬಿಜೆಪಿ': ಅಖಿಲೇಶ್ ಆರೋಪ
ಸಮಾಜವಾದಿ ಪಕ್ಷದ ಬಗ್ಗೆ ತಪ್ಪಾದ ಅನಿಸಿಕೆ ಸೃಷ್ಟಿಸಲು ಈ ಹೇಳಿಕೆಯ ಕ್ಲಿಪ್ ಅನ್ನು ಬಳಸಿಕೊಳ್ಳಲಾಗುತ್ತಿದೆ. ಇಬ್ಬರು ಶಂಕಿತರ ಬಂಧನದ ಬಗ್ಗೆ ಇನ್ನೂ ಸರಿಯಾದ ಮಾಹಿತಿಯಿಲ್ಲದ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಆ ಹೇಳಿಕೆ ನೀಡಿದ್ದರು. ಕನಿಷ್ಠ ಬಂಧಿತರು ಜಾಗತಿಕ ಉಗ್ರ ಸಂಘಟನೆ ಅಲ್ ಖೈದಾ ಜೊತೆ ನಂಟು ಇರುವ ಕುರಿತು ಮಾಹಿತಿ ಇರಲಿಲ್ಲ ಎಂದು ಸ್ಪಷ್ಟನೆಯಲ್ಲಿ ಉಲ್ಲೇಖಿಸಲಾಗಿದೆ.
ಇಬ್ಬರು ಶಂಕಿತ ಉಗ್ರರನ್ನು ಬಂಧಿಸಿರುವ ಎಟಿಸ್
ಭಾನುವಾರವಷ್ಟೇ ಉತ್ತರ ಪ್ರದೇಶದಲ್ಲಿ ಆತ್ಮಾಹುತಿ ಬಾಂದ್ ದಾಳಿಗೆ ಸಂಚು ರೂಪಿಸಿದ್ದರು ಎನ್ನಲಾದ ಇಬ್ಬರು ಅಲ್ ಖೈದಾ ಸಂಘಟನೆ ಶಂಕಿತರನ್ನು ಭಯೋತ್ಪಾದನಾ ನಿಗ್ರಹ ಪಡೆ ಬಂಧಿಸುವಲ್ಲಿ ಯಶಸ್ವಿಯಾಗಿತ್ತು. "ಮಿನಾಜ್ ಅಹ್ಮದ್ ಮತ್ತು ನಾಸಿರುದ್ದೀನ್ ಎಂದು ಬಂಧಿತರನ್ನು ಗುರುತಿಸಲಾಗಿದೆ. ಇಬ್ಬರೂ ಲಕ್ನೋದ ಕಕೋರಿ ಪ್ರದೇಶದ ನಿವಾಸಿಗಳಾಗಿದ್ದು, ಅಲ್ ಖೈದಾ ಅನ್ಸಾರ್ ಖಜ್ವಾತ್ ಉಲ್ ಹಿಂದ್ ಸಂಘಟನೆಯ ಆತ್ಮಾಹುತಿ ದಾಳಿಯ ಸದಸ್ಯರಾಗಿದ್ದಾರೆ, ಉಳಿದ ಉಗ್ರರ ಸೆರೆಗೆ ಬಲೆ ಬೀಸಲಾಗಿದೆ,'' ಎಂದು ಎಡಿಜಿಪಿ (ಕಾನೂನು ಮತ್ತು ಸುವ್ಯವಸ್ಥೆ) ಪ್ರಶಾಂತ್ ಕುಮಾರ್ ತಿಳಿಸಿದ್ದಾರೆ.
7 ರಿಂದ 8 ಕೆಜಿ ಸ್ಫೋಟಕಗಳ ವಶಕ್ಕೆ ಪಡೆದ ಎಟಿಎಸ್
ಉತ್ತರ ಪ್ರದೇಶದಲ್ಲಿ ಉಗ್ರ ದಾಳಿ ಸುಳಿವು ಸಿಕ್ಕ ಹಿನ್ನೆಲೆ ಭಯೋತ್ಪಾದನಾ ನಿಗ್ರಹ ದಳದ ಸಿಬ್ಬಂದಿ ಲಕ್ನೋದ ಹಲವು ಪ್ರದೇಶಗಳಲ್ಲಿ ಒಂದು ವಾರದಿಂದ ತೀವ್ರ ತಪಾಸಣೆ ನಡೆಸಿದ್ದರು. ಎಟಿಎಸ್ ಐಜಿ ಜಿ ಕೆ ಗೋಸ್ವಾಮಿ ನೇತೃತ್ವದ ತಂಡವು ಕಕೋರಿ ಪ್ರದೇಶದ ನಿವಾಸದಲ್ಲಿ ಅಡಗಿ ಕುಳಿತಿದ್ದ ಇಬ್ಬರು ಶಂಕಿತರನ್ನು ಬಂಧಿಸಿದ್ದು, ಸಜೀವ ಬಾಂಬ್ ಅನ್ನು ನಿಷ್ಕ್ರಿಯಗೊಳಿಸಿದ್ದರು. 6 ರಿಂದ 7 ಕೆಜಿ ಸ್ಫೋಟಕಗಳನ್ನು ವಶಕ್ಕೆ ಪಡೆದುಕೊಂಡಿದ್ದರು. ಉತ್ತರ ಪ್ರದೇಶದ ಲಕ್ನೋ ಸೇರಿದಂತೆ ಪ್ರಮುಖ ನಗರಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಹರ್ದೋಯಿ, ಸೀತಾಪುರ್, ಬಾರಾಬಂಕಿ, ಉನ್ನಾವೋ ಹಾಗೂ ರಾಯ್ ಬರೇಲಿ ಜಿಲ್ಲೆಗಳಲ್ಲಿ ತೀವ್ರ ನಿಗಾವಹಿಸಲಾಗಿದ್ದು, ಭದ್ರತೆಯನ್ನು ಹೆಚ್ಚಿಸಲಾಗಿದೆ.
ಬಿಜೆಪಿಗೆ ಅಖಿಲೇಶ್ ಯಾದವ್ ಹೇಳಿಕೆಯೇ ಅಸ್ತ್ರ
ಉತ್ತರ ಪ್ರದೇಶದಲ್ಲಿ ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಭಾರತೀಯ ಜನತಾ ಪಕ್ಷವು ಈಗಿನಿಂದಲೇ ರಣತಂತ್ರ ಹೆಣೆಯುತ್ತಿದೆ. ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ನೀಡಿರುವ ಹೇಳಿಕೆಯನ್ನು ಚುನಾವಣಾ ಅಸ್ತ್ರವಾಗಿ ಬಳಸಿಕೊಳ್ಳಲು ಮುಂದಾಗಿದೆ. ಅಖಿಲೇಶ್ ಯಾದವ್ ಹೇಳಿಕೆಗಳನ್ನು ಕೂಡಿ ಹಾಕುತ್ತಿರುವ ಬಿಜೆಪಿ ನಾಯಕರು ಒಬ್ಬರ ಮೇಲೊಬ್ಬರಂತೆ ಟಾಂಗ್ ಕೊಡುವುದಕ್ಕೆ ಶುರುವಿಟ್ಟುಕೊಂಡಿದ್ದಾರೆ.
ಅಖಿಲೇಶ್ ಪಾಕ್ ಸರ್ಕಾರ ಹಾಗೂ ಉಗ್ರರನ್ನು ನಂಬುತ್ತಾರಾ?
"ಯುಪಿ ಪೊಲೀಸರು ಹಾಗೂ ಬಿಜೆಪಿ ಸರ್ಕಾರದ ಮೇಲೆ ನಂಬಿಕೆಯಿಲ್ಲ ಎಂದು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ನೀಡಿರುವ ಹೇಳಿಕೆಯೇ ಆಘಾತ ಉಂಟು ಮಾಡುವಂತಿದೆ. ಅದೇ ಪಕ್ಷದವರು ಈ ಮೊದಲು ಬಿಜೆಪಿ ಲಸಿಕೆಯ ಮೇಲೆ ವಿಶ್ವಾಸವಿಲ್ಲ ಎಂದು ಹೇಳಿಕೆ ನೀಡಿದ್ದರು. ಹಾಗಿದ್ದರೆ ಇವರು ನಂಬುವುದಾದರೂ ಯಾರನ್ನು. ಪಾಕಿಸ್ತಾನ ಸರ್ಕಾರ ಮತ್ತು ಉಗ್ರರನ್ನು ನಂಬುತ್ತಾರೆಯೇ," ಎಂದು ಬಿಜೆಪಿ ಮುಖಂಡ ಸಿ ಟಿ ರವಿ ಟ್ವೀಟ್ ಮಾಡಿದ್ದಾರೆ.