ಕೊಲೆಯಾಗಿದ್ದರೂ, ಸಾಮಾಜಿಕ ಮಾಧ್ಯಮದಲ್ಲಿ 'ಜೀವಂತ'ವಾಗಿದ್ದ ವೈದ್ಯನ ಪತ್ನಿ!
ಗೋರಖ್ಪುರ, (ಉತ್ತರ ಪ್ರದೇಶ) ಡಿಸೆಂಬರ್ 24: ಸಂಬಂಧಿಕರು ಸ್ನೇಹಿತರೆಲ್ಲ ಆಕೆ ಬದುಕಿದ್ದಾಳೆ ಎಂದೇ ಭಾವಿಸಿದ್ದರು.
ಏಕೆಂದರೆ ಆಕೆಯ ಸಾಮಾಜಿಕ ಜಾಲತಾಣದ ಖಾತೆ ಸಕ್ರಿಯವಾಗಿತ್ತು. ಅದರಲ್ಲಿ ಪೋಸ್ಟ್ಗಳು ನಿರಂತರವಾಗಿ ಅಪ್ಡೇಟ್ ಆಗುತ್ತಿದ್ದವು. ಆದರೆ, ಕೊನೆಗೂ ಆಘಾತಕಾರಿ ಸತ್ಯ ಬಹಿರಂಗವಾಯಿತು. ಅದು ಆಕೆಯ ಕೊಲೆಯಾಗಿ ಏಳು ತಿಂಗಳ ಬಳಿಕ.
ಗೋರಖ್ ಪುರದ ಪ್ರಸಿದ್ಧ ಸರ್ಜನ್ ಡಾ. ಧರ್ಮೇಂದ್ರ ಪ್ರತಾಪ್ ಸಿಂಗ್ನನ್ನು ತನ್ನ ಮಾಜಿ ಪತ್ನಿ ರಾಖಿ ಶ್ರೀವಾಸ್ತವ್ ಅಲಿಯಾಸ್ ರಾಜೇಶ್ವರಿಯನ್ನು ನೇಪಾಳದ ಪೋಖ್ರಾ ಪ್ರಪಾತದಿಂದ ಕೊಂದ ಆರೋಪದಲ್ಲಿ ಬಂಧಿಸಲಾಗಿದೆ. ಆತನ ಜೊತೆಗೆ ಸಹಚರರಾದ ಪ್ರಮೋದ್ ಕುಮಾರ್ ಸಿಂಗ್ ಮತ್ತು ದೇಶದೀಪಕ್ ನಿಶಾದ್ ಅವರನ್ನ ಕೂಡ ಗೋರಖ್ ಪುರದ ದೌದ್ಪುರದಲ್ಲಿ ಬಂಧಿಸಲಾಗಿದ್ದು, ಶನಿವಾರ ಜೈಲಿಗೆ ಕಳುಹಿಸಲಾಗಿದೆ.
ಬೆಂಗಳೂರು : ಒಂದು ತಿಂಗಳ ಹಸುಗೂಸು ಉಸಿರುಗಟ್ಟಿಸಿ ಕೊಲೆ
ಈ ಘಟನೆಯ ಹಿಂದಿನ ಕಥೆ ಅಷ್ಟೇ ಕುತೂಹಲಕಾರಿಯೂ ಆಗಿದೆ. ಅದರ ವಿವರ ಇಲ್ಲಿದೆ.
ಎರಡನೆಯ ಗಂಡನ ವಿರುದ್ಧ ದೂರು
ರಾಖಿ ಅವರು ಕಣ್ಮರೆಯಾಗಿದ್ದಾರೆ. ಅವರನ್ನು ಅಪಹರಿಸಿರಬಹುದು ಎಂದು ಬಿಹಾರದ ಗಯಾದಲ್ಲಿ ನೆಲೆಸಿರುವ ಆಕೆಯ ಸಹೋದರ ಅಮರ್ ಪ್ರಕಾಶ್ ಶ್ರೀವಾಸ್ತವ 2018ರ ಜೂನ್ 24ರಂದು ಶಹಪುರ ಪೊಲೀಸರಿಗೆ ದೂರು ನೀಡಿದ್ದರು. ಆಕೆಯ ಕುಟುಂಬದವರು ಎರಡನೆಯ ಗಂಡ ಮನೀಶ್ ಸಿನ್ಹಾ ವಿರುದ್ಧ ದೂರು ನೀಡಿದ್ದರಿಂದ ಆರಂಭದಲ್ಲಿ ಪೊಲೀಸರು ಮನೀಶ್ ಅವರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆಗೆ ಒಳಪಡಿಸಿದ್ದರು.
ಆದರೆ, ತನಿಖೆ ನಡೆಸುತ್ತಾ ಹೋದಂತೆ ವಿಶೇಷ ಪೊಲೀಸ್ ದಳದ ಪೊಲೀಸರ ಅನುಮಾನ ಗೋರಖ್ ಪುರದಲ್ಲಿ ನರ್ಸಿಂಗ್ ಹೋಮ್ ನಡೆಸುತ್ತಿರುವ ರಾಖಿ ಅವರ ಮೊದಲ ಗಂಡ ಡಾ. ಧರ್ಮೇಂದ್ರ ಪ್ರತಾಪ್ ಸಿಂಗ್ ನತ್ತ ತಿರುಗಿತು.
ತಾಯಿ, ತಮ್ಮನನ್ನು ಕೊಲ್ಲುವುದಾಗಿ ಹೇಳಿ ಬೆದರಿಸಿ ಬಾಲಕಿ ಮೇಲೆ ಅತ್ಯಾಚಾರ
ನೇಪಾಳಕ್ಕೆ ತೆರಳಿದ್ದ ಧರ್ಮೇಂದ್ರ ಸಿಂಗ್
ಎಸ್ ಟಿಎಫ್ ನಡೆಸಿದ ತನಿಖೆ ವೇಳೆ ರಾಖಿ ಜೂನ್ 1ರಂದು ಎರಡನೆಯ ಪತಿ ಮನೀಶ್ ಅವರೊಂದಿಗೆ ನೇಪಾಳಕ್ಕೆ ತೆರಳಿದ್ದರು. ಆದರೆ, ಮನೀಶ್ ವಾಪಸಾಗಿದ್ದರು. ರಾಖಿ ಅಲ್ಲಿಯೇ ಇದ್ದರು ಎಂಬುದು ಗೊತ್ತಾಗಿತ್ತು.
ಡಾ. ಸಿಂಗ್ ಮೇಲೆಯೂ ಗುಮಾನಿ ಹೊಂದಿದ್ದ ಪೊಲೀಸರು ಆತನ ಫೋನ್ ಕರೆ ದಾಖಲೆಗಳನ್ನು ಪರಿಶೀಲಿಸಿದ್ದರು. ರಾಖಿ ಕಣ್ಮರೆಯಾದ ದಿನದಂದು ಸಿಂಗ್ ಕೂಡ ನೇಪಾಳದಲ್ಲಿ ಇದ್ದ ಎಂಬ ಮಾಹಿತಿ ತಿಳಿದುಬಂದಿತ್ತು. ಜೂನ್ 1-4ರವರೆಗೂ ನೇಪಾಳದ ಪೋಖ್ರಾದಲ್ಲಿ ರಾಖಿಯ ಫೋನ್ ಚಾಲನೆಯಲ್ಲಿತ್ತು.
ಸಿಂಗ್ ಮತ್ತು ಆತನ ಇಬ್ಬರು ಸಹಚರರು ಮನೀಶ್ ಭಾರತಕ್ಕೆ ಮರಳಿದ ಬಳಿಕ ಪೋಖ್ರಾಗೆ ತೆರಳಿದ್ದರು. ರಾಖಿಯನ್ನು ಹೊರಗೆ ಕರೆದುತಂದು ಮತ್ತು ಬರಿಸುವ ಪಾನೀಯ ಕುಡಿಸಿ ಪೋಖ್ರಾದಲ್ಲಿನ ಪ್ರಪಾತದಿಂದ ಕೆಳಕ್ಕೆ ತಳ್ಳಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಊಟ, ನೀರು ಕೊಡದೇ ಚಿತ್ರಹಿಂಸೆ ಕೊಟ್ಟು ಲಾರಿ ಚಾಲಕನ ಹತ್ಯೆ
ಮೊಬೈಲ್ ಫೋನ್ನಲ್ಲಿ ಅಪ್ಡೇಟ್
ರಾಖಿಯನ್ನು ಕೊಲೆ ಮಾಡಿದ ಬಳಿಕ ಆಕೆಯ ಮೊಬೈಲ್ ಫೋನ್ ಬಳಸಿ ಸಾಮಾಜಿಕ ಜಾಲತಾಣದಲ್ಲಿ ಆಕೆ ಜೀವಂತವಾಗಿ ಇದ್ದಾರೆ ಎಂದು ಬಿಂಬಿಸಲು ನಿರಂತರವಾಗಿ ಅಪ್ ಡೇಟ್ ಮಾಡುತ್ತಿದ್ದರು.
ಅಕ್ಟೋಬರ್ 4ರಂದು ಅಸ್ಸಾಂನ ಗುವಾಹಟಿಯಲ್ಲಿ ಮೊಬೈಲ್ ಫೋನ್ ಸ್ಥಳವನ್ನು ಟ್ರೇಸ್ ಮಾಡಲಾಗಿತ್ತು. ಎಸ್ ಟಿಎಫ್ ಮತ್ತು ಆಕೆಯ ಕುಟುಂಬದವರು ರಾಖಿ ಗುವಾಹಟಿಯಲ್ಲಿ ಇದ್ದಾರೆ ಎಂದೇ ಭಾವಿಸಿದ್ದರು. ಆದರೆ, ವಿಚಾರಣೆ ವೇಳೆ ಡಾ. ಸಿಂಗ್ ತನ್ನ ಸಹಾಯಕನೊಬ್ಬನ ಮೂಲಕ ಗುವಾಹಟಿಗೆ ಮೊಬೈಲ್ ಕಳುಹಿಸಿದ್ದಾಗಿ ಮತ್ತು ಆತ ಅದನ್ನು ಅಲ್ಲಿ ಎಸೆದಿದ್ದಾಗಿ ಬಾಯ್ಬಿಟ್ಟಿದ್ದಾನೆ.
ರಾಖಿಯ ದೇಹ ಪತ್ತೆ
ಎಸ್ ಟಿಎಫ್ ತಂಡ ಪೋಖ್ರಾಕ್ಕೆ ಭೇಟಿ ನೀಡಿದಾಗ ಸ್ಥಳೀಯ ಪೊಲೀಸರು ಜೂನ್ ಮೊದಲ ವಾರದಂದು ಮಹಿಳೆಯ ಮೃತದೇಹ ಸಿಕ್ಕಿದ್ದಾಗಿ ತಿಳಿಸಿದ್ದರು. ಅದು ರಾಖಿ ಅವರದೇ ದೇಹ ಎಂದು ಖಚಿತವಾಯಿತು.
ಡಾ. ಸಿಂಗ್ ಅವರನ್ನು ವಿಚಾರಣೆಗೆ ಒಳಪಡಿಸಿದಾಗ ಆತ ತಪ್ಪೊಪ್ಪಿಕೊಂಡಿದ್ದಾನೆ. ಹಣ ಮತ್ತು ಆಸ್ತಿಗಾಗಿ ಆಕೆ ತನ್ನನ್ನು ನಿರಂತರವಾಗಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಳು ಆತ ವಿವರಿಸಿದ್ದಾನೆ.
'ಎರಡನೆಯ ಮದುವೆ'!
2006ರಲ್ಲಿ ತಂದೆ ಹರೇರಾಮ್ ಶ್ರೀವಾಸ್ತವ ರಾವ್ ಜೊತೆ ಚಿಕಿತ್ಸೆಗಾಗಿ ಡಾ. ಸಿಂಗ್ ನರ್ಸಿಂಗ್ ಹೋಮ್ಗೆ ಬಂದಿದ್ದ ರಾಖಿಗೆ ಆತನೊಂದಿಗೆ ಸ್ನೇಹ ಬೆಳೆದಿತ್ತು. ಮೊದಲೇ ವಿವಾಹಿತನಾಗಿದ್ದರೂ ಸಿಂಗ್, ಆಕೆಯನ್ನು 2011ರಲ್ಲಿ ಗುಟ್ಟಾಗಿ ಮದುವೆಯಾಗಿದ್ದ. ಅಲ್ಲದೆ, ಶಹಪುರದಲ್ಲಿ ಆಕೆಗಾಗಿ ಮನೆಯೊಂದನ್ನು ಖರೀದಿಸಿದ್ದ.
ಆದರೆ, ಸಿಂಗ್ ಪತ್ನಿ ಉಷಾ ಅವರಿಗೆ ಗಂಡ ಈ ಗುಟ್ಟಿನ ಮದುವೆ ಗೊತ್ತಾಗಿ, ಆಕೆಯೊಂದಿಗಿನ ಸಂಬಂಧ ಕಡಿದುಕೊಳ್ಳುವಂತೆ ಒತ್ತಾಯಿಸಿದ್ದರು.
ಈ ನಡುವೆ ಮನೀಶ್ ಅವರ ಪರಿಚಯವಾಗಿದ್ದರಿಂದ ರಾಖಿ ಅವರೊಂದಿಗೆ ಸ್ನೇಹ ಬೆಳೆಸಿಕೊಂಡು 2016ರ ಫೆಬ್ರಯವರಿಯಲ್ಲಿ ಮದುವೆಯಾಗಿದ್ದರು. ಆದರೂ ಸಿಂಗ್ ಜೊತೆ ಸಂಪರ್ಕದಲ್ಲಿದ್ದರು. ಹಣಕ್ಕಾಗಿ ಪೀಡಿಸುತ್ತಿದ್ದ ರಾಖಿ, ಶಹಪುರದಲ್ಲಿನ ಮನೆಯನ್ನು ತನ್ನ ಹೆಸರಿಗೆ ವರ್ಗಾಯಿಸುವಂತೆ ಒತ್ತಾಯಿಸುತ್ತಿದ್ದರು.
ಪೋಖ್ರಾ ಪ್ರವಾಸದ ವೇಳೆ ಡಾ. ಸಿಂಗ್ ಕೂಡ ಅಲ್ಲಿಗೆ ಬರುವುದು ಆಕೆಗೆ ಗೊತ್ತಾಗಿತ್ತು. ಹೀಗಾಗಿ ಪ್ಲ್ಯಾನ್ ಮಾಡಿ ಗಂಡನನ್ನು ಊರಿಗೆ ವಾಪಸ್ ಕಳುಹಿಸಿದ್ದರು.
ಅನೇಕ ಬಾರಿ ಯೋಜನೆ ಮಾಡಿದ್ದ
ಈ ಹಿಂದೆಯೂ ಆಕೆಯನ್ನು ಕೊಲ್ಲಲು ಅನೇಕ ಬಾರಿ ಯೋಜನೆ ರೂಪಿಸಿದ್ದ ಡಾ. ಸಿಂಗ್ಗೆ ಅದು ಸಾಧ್ಯವಾಗಿರಲಿಲ್ಲ. ಈ ಬಾರಿ ನೇಪಾಳಕ್ಕೆ ಹೋಗುವಾಗ ಆಕೆಯನ್ನು ಕೊಲೆ ಮಾಡಲೇಬೇಕು ಎಂಬ ಗುರಿಯೊಂದಿಗೆ ಅಲ್ಲಿಗೆ ತೆರಳಿದ್ದ. ಆಕೆಯನ್ನು ನಂಬಿಸಿ ಹೊರಕ್ಕೆ ಕರೆದೊಯ್ದು ಹತ್ಯೆ ಮಾಡಿದ್ದಾಗಿ ಆತ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.