ಮಾಯಾವತಿ ಕೆಂಡಾಮಂಡಲ, ಅಖಿಲೇಶ್ ಯಾದವ್ ವಿರುದ್ಧ ವಾಗ್ದಾಳಿ
ಲಕ್ನೋ, ಜೂನ್ 24: ಲೋಕಸಭೆ ಚುನಾವಣೆಯ ನಂತರ ಸಮಾಯವಾದಿ ಪಕ್ಷ ಮತ್ತು ಬಹುಜನ ಸಮಾಜ ಪಕ್ಷದ ನಡುವಿನ ಭಿನ್ನಾಭಿಪ್ರಾಯ ತಾರಕಕ್ಕೇರಿದೆ.
ಇತ್ತೀಚೆಗಷ್ಟೆ ಎಸ್ಪಿ ಜೊತೆ ಮೈತ್ರಿ ಕಡಿದುಕೊಳ್ಳುವ ಸೂಚನೆ ನೀಡಿದ್ದ ಬಿಎಸ್ಪಿ ನಾಯಕಿ ಮಾಯಾವತಿ, ಇದೀಗ ಮತ್ತೊಮ್ಮೆ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
ಸಮಾಜವಾದಿ ಪಕ್ಷದ 'ಸೈಕಲ್' ಪಂಕ್ಚರ್ ಮಾಡಿ 'ಬೈ ಬೈ' ಎಂದ ಮಾಯಾವತಿ
"ಚುನಾವಣೆಯ ಫಲಿತಾಂಶ ಬಂದ ಬಳಿಕವೂ ಅಖಿಲೇಶ್ ಯಾದವ್ ನನಗೊಂದು ಫೋನ್ ಸಹ ಮಾಡಲಿಲ್ಲ. ನಾನು ಅವರಿಗಿಂತ ಹಿರಿಯಳಾದರೂ ಅವರಿಗೆ ಫೋನ್ ಮಾಡಿ ಸೋಲಿನ ಬಗ್ಗೆ ಬೇಸರ ವ್ಯಕ್ತಪಡಿಸಿದ್ದೆ. ಅಖಿಲೇಶ್ ಕುಟುಂಬಸ್ಥರೇ ಸೋತ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದೇನೆ. ಆದರೆ ಫಲಿತಾಂಶದ ನಂತರ ನನ್ನೊಂದಿಗೆ ಮಾತನಾಡುವಂತೆ ನನ್ನ ಪಕ್ಷದ ಸದಸ್ಯರೇ ಅಖಿಲೇಶ್ ಅವರಲ್ಲಿ ಮನವಿ ಮಾಡಿಕೊಂಡರೂ, ಅವರು ಅದಕ್ಕೆ ಒಪ್ಪಲಿಲ್ಲ" ಎಂದು ಮಾಯಾವತಿ ಆಕ್ರೋಶ ವ್ಯಕ್ತಪಡಿಸಿದರು.
ಉತ್ತರ ಪ್ರದೇಶದಲ್ಲಿ ನಡೆಯಲಿರುವ 11 ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳದೆ ಏಕಾಂಗಿಯಾಗಿ ಸ್ಪರ್ಧಿಸುವುದಾಗಿ ಈಗಾಗಲೇ ಮಾಯಾವತಿ ಸ್ಪಷ್ಟಪಡಿಸಿದ್ದಾರೆ.
ಮೈತ್ರಿಗೆ ಗುಡ್ ಬೈ ಎಂದ ಮಾಯಾವತಿ: ಮೌನ ಮುರಿದ ಅಖಿಲೇಶ್
17 ಕೋಟಿ ರೂ. ತಾಜ್ ಕಾರಿಡಾರ್ ಪ್ರಕರಣದಲ್ಲಿ ಮುಲಾಯಂ ಸಿಂಗ್ ಯಾದವ್ ಅವರು ನನ್ನನ್ನು ಸಿಲುಕಿಸಲು ಪ್ರಯತ್ನಿಸಿದ್ದರು ಎಂದು ಇದೇ ಸಂದರ್ಭದಲ್ಲಿ ಮಾಯಾವತಿ ಎಸ್ಪಿ ಮುಖಂಡ ಮುಲಾಯಂ ಸಿಂಗ್ ಯಾದವ್ ಅವರ ಮೇಲೂ ಆರೋಪ ಮಾಡಿದರು.
ಲೋಕಸಭೆ ಚುನಾವಣೆ, ಮತ್ತು ಅದಕ್ಕೂ ಮುನ್ನ ನಡೆದಿದ್ದ ವಿಧಾನಸಭೆ ಚುನಾವಣೆಗಳಲ್ಲಿ ಮೈತ್ರಿ ಮಾಡಿಕೊಂಡಿದ್ದ ಎಸ್ಪಿ, ಬಿಎಸ್ಪಿ ಲೋಕಸಭೆ ಚುನಾವಣೆಯ ಹೀನಾಯ ಸೋಲಿನ ನಂತರ ದೋಸ್ತಿ ಕಡಿದುಕೊಳ್ಳುತ್ತಿವೆ. ಲೋಕಸಭೆ ಚುನಾವಣೆಯಲ್ಲಿ ಉತ್ತರ ಪ್ರದೇಶದ 80 ಸ್ಥಾನಗಳ ಪೈಕಿ ಬಿಎಸ್ಪಿ 10 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರೆ, ಎಸ್ಪಿ 5 ಸ್ಥಾನಗಳಲ್ಲಿ ಜಯಗಳಿಸಿದೆ.