ಜಯಪ್ರದಾ ಖಾಕಿ ಒಳಉಡುಪು ಧರಿಸುತ್ತಾರೆ ಎಂದ ಆಜಂ ವಿರುದ್ಧ ಎಫ್ಐಆರ್
ರಾಂಪುರ (ಉತ್ತರ ಪ್ರದೇಶ), ಏಪ್ರಿಲ್ 15 : "ನಿಮ್ಮ ಮತ್ತು ನನ್ನ ನಡುವೆ ವ್ಯತ್ಯಾಸವಾದರೂ ಏನು? ರಾಂಪುರ, ಉತ್ತರ ಪ್ರದೇಶ ಮತ್ತು ಈ ದೇಶದ ಜನರೆ, ನಾನು ಆಕೆಯ ನಿಜವಾದ ಮುಖವನ್ನು ಅರಿಯಲು 17 ವರ್ಷ ತೆಗೆದುಕೊಂಡೆ. ಆದರೆ, ಕಳೆದ 17 ದಿನಗಳಲ್ಲಿ ನನಗೆ ಅರ್ಥವಾಗಿದ್ದೇನೆಂದರೆ, ಅವರು ಖಾಕಿ ಒಳಚಡ್ಡಿ ಹಾಕುತ್ತಾರೆ!"
ಇಂಥ ಅಸಹ್ಯಕರ ಮಾತು ಬಂದಿದ್ದು, ಸಮಾಜವಾದಿ ಪಕ್ಷದ ಹಿರಿಯ ನಾಯಕ ಆಜಂ ಖಾನ್ ಅವರ ಬಾಯಿಯಿಂದ. ರಾಂಪುರ ಲೋಕಸಭೆ ಚುನಾವಣೆಗೆ ಪ್ರಚಾರ ಮಾಡುತ್ತಿದ್ದಾಗ ಭಾನುವಾರ ಅವರು ಈ ಮಾತನ್ನು, ಪಕ್ಷದ ನಾಯಕ ಅಖಿಲೇಶ್ ಯಾದವ್ ಅವರು ವೇದಿಕೆಯ ಮೇಲಿದ್ದಾಗಲೇ ಹೇಳಿದ್ದಾರೆ.
ನಗ್ನ ಸಿಡಿ : ಅಜಮ್ ಖಾನ್ ವಿರುದ್ಧ ಜಯಪ್ರದಾ ಕಿಡಿ
ಅವರು ಈ ಮಾತನ್ನು ಆಡಿದ್ದು, ರಾಂಪುರ ಲೋಕಸಭೆ ಕ್ಷೇತ್ರದಲ್ಲಿ ಭಾರತೀಯ ಜನತಾ ಪಕ್ಷದಿಂದ ಸ್ಪರ್ಧಿಸುತ್ತಿರುವ, ಎರಡು ಬಾರಿ ಇದೇ ಕ್ಷೇತ್ರದಿಂದ ಜಯಿಸಿರುವ ಜನಪ್ರಿಯ ಸಿನೆಮಾ ತಾರೆ ಜಯಪ್ರದಾ ವಿರುದ್ಧ. ಜಯಪ್ರದಾ ಅವರು ದಶಕಗಳ ಕಾಲ ಸಮಾಜವಾದಿ ಪಕ್ಷದಲ್ಲೇ ಇದ್ದು, ಇದೀಗ ಪಕ್ಷ ತೊರೆದು ಭಾರತೀಯ ಜನತಾ ಪಕ್ಷ ಸೇರಿಕೊಂಡಿದ್ದಾರೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಒರ್ವ ಮಹಿಳೆಯ ಬಗ್ಗೆ ಈ ರೀತಿಯ ಕೀಳುಮಟ್ಟದ ಮಾತುಗಳನ್ನಾಡಿದ್ದನ್ನು ಗಂಭೀರವಾಗಿ ಪರಿಗಣಿಸಿರುವ ರಾಷ್ಟ್ರೀಯ ಮಹಿಳಾ ಆಯೋಗ ಆಜಂ ಖಾನ್ ವಿರುದ್ಧ ದೂರನ್ನು ದಾಖಲಿಸಿದೆ. ಆಜಂ ಖಾನ್ ಅವರಿಗೆ ನೋಟೀಸನ್ನೂ ಜಾರಿ ಮಾಡಿದೆ. 80 ಸೀಟುಗಳಿರುವ ಉತ್ತರ ಪ್ರದೇಶದಲ್ಲಿ 7 ಹಂತಗಳಲ್ಲಿ ಮತದಾನವಾಗಲಿದೆ.
|
ಕೇಂದ್ರ ಮಹಿಳಾ ಆಯೋಗದಿಂದ ನೋಟೀಸ್
ಮಹಿಳಾ ರಾಜಕಾರಣಿ ಬಗ್ಗೆ ಸೆಕ್ಸಿಸ್ಟ್ ಮಾತುಗಳನ್ನು ನೀವು ಆಡಿದ್ದು, ಹಿಂದೆ ಕೂಡ ನೀವು ಮಹಿಳೆಯರ ಬಗ್ಗೆ ಹೀಗೆಯೇ ಕೀಳುಮಟ್ಟದ ಮಾತುಗಳನ್ನಾಡಿದ್ದೀರಿ. ನಿಮ್ಮ ಮಾತುಗಳು ತೀರ ಮನನೋಯಿಸುವಂಥದ್ದು, ನೈತಿಕತೆಗೆ ವಿರುದ್ಧವಾದದ್ದು, ಮತ್ತು ಹೀಗೆ ಹೇಳಿ ಮಹಿಳೆಯ ಗೌರವಕ್ಕೆ ಧಕ್ಕೆ ತಂದಿದ್ದೀರಿ. ಜವಾಬ್ದಾರಿ ಸ್ಥಾನದಲ್ಲಿದ್ದು, ಇಂಥ ಬೇಜವಾಬ್ದಾರಿ ಮಾತುಗಳನ್ನು ಆಡಿದ್ದನ್ನು ಆಯೋಗ ತೀವ್ರವಾಗಿ ಆಕ್ಷೇಪಿಸುತ್ತದೆ. ಈ ಪತ್ರ ತಲುಪುತ್ತಿದ್ದಂತೆ ನೀವು ಮಹಿಳಾ ಆಯೋಗಕ್ಕೆ ಸೂಕ್ತವಾದ ಉತ್ತರ ನೀಡಬೇಕಾದ್ದದ್ದು. ಸಂಬಂಧಿದ ಅಧಿಕಾರಿಯಿಂದ ಅನುಮತಿ ಪಡೆದೇ ಈ ಪತ್ರವನ್ನು ರವಾನಿಸಲಾಗಿದೆ ಎಂದು ಆಯೋಗ ತನ್ನ ಪತ್ರದಲ್ಲಿ ತಿಳಿಸಿದೆ.
ನನ್ನ ಎದೆಗೆ 150 ಗುಂಡು ನುಗ್ಗಿಸಿ
"ಬಿಜೆಪಿ ಅಭ್ಯರ್ಥಿ (ಜಯಪ್ರದಾ ಹೆಸರು ಹೇಳದೆ) ಅವರೆ, ನೀವು ಹಿಂದೂ ದೇವರನ್ನು ಪೂಜಿಸಲು ದೆಹಲಿಗೆ ಹೋಗಿದ್ದಿರಿ. ಅಲ್ಲಿ ಮಾಧ್ಯಮದೆದಿರು, ನಾನು ರಾಂಪುರಕ್ಕೆ ಹೋಗಿ ಅಲ್ಲಿಯ ದಾನವನನ್ನು ಸಂಹರಿಸಬೇಕಾಗಿದೆ ಎಂದು ಹೇಳಿದ್ದಿರಿ. ದಾನವ ಅಂದರೇನು ಗೊತ್ತಿರಲಿಲ್ಲ. ಸ್ನೇಹಿತನನ್ನು ಕೇಳಿದಾಗ, ಆತ ರಾಕ್ಷಸ ಎಂದು ಹೇಳಿದ. ಅಂದರೆ ನಾನು ರಾಕ್ಷಸ? ನನ್ನನ್ನು ಸಂಹರಿಸಬೇಕೆ? ಆಯಿತು 150 ಗುಂಡುಗಳನ್ನು ನನ್ನ ಎದೆಗೆ ನುಗ್ಗಿಸಿ, ನನ್ನನ್ನು ಕೊಂದು ಹಾಕಿ. ನಾನು ಅನುಮತಿ ನೀಡುತ್ತೇನೆ. ಆದರೆ, ಅದನ್ನು ಮಾಡಬೇಕಾದವರು ನೀವು, ಹೊರಗಿನವರನ್ನು ನನ್ನನ್ನು ಕೊಲ್ಲಲು ಕಳಿಸಬೇಡಿ" ಎಂದು ಆಜಂ ಖಾನ್ ವೇದಿಕೆಯಲ್ಲಿಯೇ ಅಸಂಬದ್ಧವಾಗಿ ಮಾತನಾಡಿದ್ದಾರೆ.
ಅಚ್ಚರಿಯ ಬೆಳವಣಿಗೆ: ಬಿಜೆಪಿ ಸೇರಲಿರುವ ನಟಿ ಜಯಪ್ರದ
ಆಜಂ ಖಾನ್ ಗೆ ಜಯಪ್ರದಾ ತಿರುಗೇಟು
"ಇಂಥ ಮನುಷ್ಯ ಈ ಕ್ಷೇತ್ರದಿಂದ ಗೆದ್ದರೆ ಪ್ರಜಾಪ್ರಭುತ್ವದ ಗತಿಯೇನು? ಸಮಾಜದಲ್ಲಿ ಮಹಿಳೆಯರು ತಲೆಯೆತ್ತಿ ನಡೆದಾಡುವುದಾದರೂ ಹೇಗೆ? ನಾನು ಸತ್ತರೆ ನಿಮಗೆ ಸಮಾಧಾನವೆ? ನಾನು ನಿಮ್ಮ ಇಂಥ ಮಾತುಗಳಿಂದ ಹೆದರಿ ರಾಂಪುರ ಬಿಟ್ಟು ಹೋಗುತ್ತೇನೆಯೆ? ನಾನು ಇಲ್ಲಿಂದ ಏನೇ ಆಗಲಿ ಕದಲುವುದಿಲ್ಲ" ಜಯಪ್ರದಾ ಅವರು ಕಿಡಿಕಾರಿದ್ದಾರೆ. ಹೊಲಸು ಬಾಯಿಯ ಆಜಂ ಖಾನ್ ವಿರುದ್ಧ ಈಗಾಗಲೆ ಎಫ್ಐಆರ್ ಕೂಡ ದಾಖಲಾಗಿದ್ದು, ಅವರನ್ನು ಚುನಾವಣೆಯಲ್ಲಿ ಸ್ಪರ್ಧಿಸುವುದರಿಂದ ನಿಷೇಧಿಸಬೇಕು ಎಂದು ಪಕ್ಷಭೇದ ಮರೆತು ಜನರು ಆಗ್ರಹಿಸುತ್ತಿದ್ದಾರೆ. ಮಹಿಳಾ ಹೋರಾಟಗಾರರೆಲ್ಲ ಎಲ್ಲಿ ಹೋಗಿದ್ದಾರೆ ಎಂದು ಕೆಲವರು ಕಿಡಿಕಾರುತ್ತಿದ್ದಾರೆ.
ಇಂಥವನನ್ನು ಯಾದವ್, ಮಾಯಾ ಬೆಂಬಲಿಸಬಾರದು
ಇಂಥ ಕೀಳುಮಟ್ಟದ ಮಾತುಗಳನ್ನು ಆಡುವಲ್ಲಿ ನಿಸ್ಸೀಮರಾಗಿರುವ ಹಿರಿಯ ನಾಯಕ ಆಜಂ ಖಾನ್ ಅವರಾಡಿರುವ ಈ ಮಾತುಗಳಿಗೆ ಭಾರೀ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ರಾಂಪುರ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿ ವಕ್ತಾರ ಮತ್ತು ಉಸ್ತುವಾರಿಯಾಗಿರುವ ಚಂದ್ರಮೋಹನ್ ಅವರು, ಆಜಂ ಖಾನ್ ಅವರು ತೀರ ಕೀಳಮಟ್ಟಕ್ಕೆ ಇಳಿದಿದ್ದಾರೆ. ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಮತ್ತು ಬಹುಜನ ಸಮಾಜ ಪಕ್ಷದ ನಾಯಕಿ ಮಾಯಾವತಿ ಅವರು ಎಂಥ ವ್ಯಕ್ತಿಯನ್ನು ಬೆಂಬಲಿಸುತ್ತಿದ್ದಾರೆ ಎಂಬುದನ್ನು ಅವರಿಗೆ ತಿಳಿ ಹೇಳಬೇಕಿದೆ ಎಂದು ಖಾರವಾಗಿ ನುಡಿದಿದ್ದಾರೆ.
ಮಹಿಳೆಯರಿಗೆ ಗೌರವ ನೀಡದ ಆಜಂ
ಚುನಾವಣಾ ಆಯೋಗ ಇಂಥ ಹೇಯ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಈ ಮಾತುಗಳನ್ನು ಆಜಂ ಖಾನ್ ಅವರು ಅಖಿಲೇಶ್ ಯಾದವ್ ಅವರ ಸಮ್ಮುಖದಲ್ಲೇ ಹೇಳಿದ್ದಾರೆ. ಅವರು ಎಂಥ ರಾಜಕೀಯ ಮಾಡುತ್ತಿದ್ದಾರೆ? ಅವರಿಗೆ ಮಹಿಳೆಯರ ಗೌರವದ ಬಗ್ಗೆ ಕಿಂಚಿತ್ತಾದರೂ ಆದರ ಇದೆಯೋ ಇಲ್ಲವೋ ಎಂಬುದನ್ನು ತಿಳಿಯಬೇಕಿದೆ. ಇದನ್ನು ಹಗುರವಾಗಿ ಪರಿಗಣಿಸುವಂತಿಲ್ಲ, ಗಂಭೀರವಾಗಿ ತೆಗೆದುಕೊಳ್ಳಬೇಕಿದೆ ಎಂದು ಅವರು ಕೆಂಡ ಕಾರಿದ್ದಾರೆ. ಈ ಕ್ಷೇತ್ರದಲ್ಲಿ ಜಯಪ್ರದಾ ಅವರು ಎರಡು ಬಾರಿ ಸಂಸದೆಯಾಗಿ ಆಯ್ಕೆಯಾಗಿದ್ದಾರೆ.