ಭಾರತದ ಈ ನೆಲದಲ್ಲೇ ಹುಟ್ಟುತ್ತಿದ್ದಾರಾ ಅಂತಾರಾಷ್ಟ್ರೀಯ ಉಗ್ರರು?
ಲಕ್ನೋ, ಫೆಬ್ರವರಿ.12: ಜಾಗತಿಕ ಮಟ್ಟದಲ್ಲಿ ತಲ್ಲಣ ಸೃಷ್ಟಿಸಿದ ಉಗ್ರರು ಭಾರತದ ನೆಲದಲ್ಲೇ ಜನಿಸಿದ್ದರು ಎಂದು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಹೊಸ ಬಾಂಬ್ ಸಿಡಿಸಿದ್ದಾರೆ. ಉತ್ತರ ಪ್ರದೇಶದ ದಿಯೋಬಂದ್ ನಗರವು ಉಗ್ರರ ಪಾಲಿನ ಗಂಗೋತ್ರಿ ಎನ್ನುವ ಮೂಲಕ ವಿವಾದ ಸೃಷ್ಟಿಸಿದ್ದಾರೆ.
ಜಾಗತಿಕ ಉಗ್ರ ಸಂಘಟನೆಯಾಗಿ ಗುರುತಿಸಿಕೊಂಡಿರುವ ಲಷ್ಕರ್ - ಇ ತೋಯ್ಬಾ ಸಂಘಟನೆ ಮುಖ್ಯಸ್ಥ ಹಫೀಜ್ ಸಯ್ಯದ್ ನಂತ ಉಗ್ರರು ಉತ್ತರ ಪ್ರದೇಶದ ದಿಯೋಬಂದ್ ನಲ್ಲಿ ಜನಿಸಿದ್ದರು. ಇಂಥ ಹಲವು ಉಗ್ರರು ಉತ್ತರ ಪ್ರದೇಶದ ನೆಲದಲ್ಲೇ ಹುಟ್ಟಿದ್ದಾರೆ ಎಂದು ತಿಳಿಸಿದ್ದಾರೆ.
ಸಿಎಎ ವಿರೋಧಿ ಕ್ಷೇತ್ರಗಳಲ್ಲಿ ಬಿಜೆಪಿಯನ್ನು ಪೊರಕೆಯಲ್ಲಿ ಗುಡಿಸಿದ ಆಪ್
ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ನಾಗರಿಕ ನೋಂದಣಿ ವಿರುದ್ಧ ಹೋರಾಟಕ್ಕೆ ಹರಿಹಾಯ್ದ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ವಿವಾದದ ಬೆಂಕಿ ಹೊತ್ತಿಸಿದ್ದಾರೆ. ಸಿಎಎ ಕುರಿತು ದಿಯೋಬಂದ್ ನಲ್ಲಿ ಪ್ರತಿಭಟಿಸುತ್ತಿರುವ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುವುದಿಲ್ಲ ಎಂದು ಹೇಳಿದ್ದಾರೆ.
ಉಗ್ರರ ಪಾಲಿನ ಗಂಗೋತ್ರಿ ಆಗಿದೆಯಾ ದಿಯೋಬಂದ್?
ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ನಾಗರಿಕ ನೋಂದಣಿ ವಿರುದ್ಧ ಹೋರಾಟ ನಡೆಸುತ್ತಿರುವವರ ವಿರುದ್ಧ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಕಿಡಿ ಕಾರಿದ್ದಾರೆ. ಮುಂದುವರಿದು ಮಾತನಾಡಿದ ಸಚಿವರು ಉತ್ತರ ಪ್ರದೇಶದ ದಿಯೋಬಂದ್ ನಗರವು ಉಗ್ರರ ಪಾಲಿನ ಗಂಗೋತ್ರಿ ಇದ್ದಂತೆ ಎಂದಿದ್ದಾರೆ. ಅಷ್ಟಲ್ಲದೇ ಲಷ್ಕರ್ ಇ- ತೋಯ್ಬಾ ಸಂಘಟನೆ ಮುಖ್ಯಸ್ಥ ಹಫೀಜ್ ಸಯ್ಯದ್ ಜನಿಸಿದ ಈ ನೆಲದಲ್ಲಿ ಜನರು ಬಾಯಿ ಮಾತಿಗೆ ಬಗ್ಗುವವರಲ್ಲ ಎಂದು ಕಿಡಿ ಕಾರಿದ್ದಾರೆ.
ಜಾಗೃತಿ ಮೂಡಿಸುವ ಕೆಲಸ ಮಾಡಲ್ಲ ಎಂದ ಸಚಿವ
ಕಳೆದ ಜನವರಿ.27ರಿಂದ ಉತ್ತರ ಪ್ರದೇಶದ ದಿಯೋಬಂದ್ ನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಸಾವಿರಾರು ಮಹಿಳೆಯರೂ ಸೇರಿದಂತೆ ಕೇಂದ್ರ ಸರ್ಕಾರದ ವಿರುದ್ಧ ಹಲವು ಸಂಘಟನೆಗಳು ಪ್ರತಿಭಟನೆ ನಡೆಸುದೆ. ಈ ಜನರ ಎದುರಿಗೆ ನಾನು ಸಿಎಎ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ಮಾಡುವುದಿಲ್ಲ. ಬದಲಿಗೆ ಅವರನ್ನು ನಿಯಂತ್ರಿಸುವ ಕೆಲಸವನ್ನು ಮಾಡುತ್ತೇನೆ ಎಂದಿದ್ದಾರೆ.
"ಶಾಹಿನ್ ಬಾಗ್ ಸೂಸೈಡ್ ಬಾಂಬರ್ ಗಳ ಜನ್ಮಭೂಮಿ"
ಇನ್ನು, ಕೇಂದ್ರ ಸಚಿವ ಗಿರಿರಾಜ್ ಸಿಂಗ್ ವಿವಾದಾತ್ಮಕ ಹೇಳಿಕೆ ನೀಡುತ್ತಿರುವುದು ಇದೇ ಮೊದಲೇನೂ ಅಲ್ಲ. ಈ ಹಿಂದೆ ದೆಹಲಿಯ ಶಾಹಿನ್ ಬಾಗ್ ನಲ್ಲಿ ನಡೆಯುತ್ತಿರುವ ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ನಾಗರಿಕ ನೋಂದಣಿ ವಿರುದ್ಧ ಹೋರಾಟಕ್ಕೂ ಸಚಿವರು ಕಿಡಿ ಕಾರಿದ್ದರು. ಶಾಹಿನ್ ಬಾಗ್ ಪ್ರದೇಶವು ಆತ್ಮಾಹುತಿ ಬಾಂಬರ್ ಗಳ ಜನ್ಮಭೂಮಿ ಎಂದು ಹೇಳಿಕೆ ನೀಡಿದ್ದರು.
ಇಂಥ ಸಚಿವರು ಪ್ರಧಾನಿ ಮೋದಿ ಸಂಪುಟಕ್ಕೆ ಬೇಕೇ?
ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಭಾರತದ ಪವಿತ್ರ ನದಿ ಗಂಗೆಯ ಬಗ್ಗೆ ಅವಹೇಳನಕಾರಿ ಹೇಳಿಕೆಯನ್ನು ನೀಡುತ್ತಿದ್ದಾರೆ. ದೇಶದ ಪ್ರತಿಯೊಬ್ಬ ಪ್ರಜೆಯೂ ಗಂಗಾ ನದಿಯನ್ನು ಪುಣ್ಯನದಿ ಎಂದು ನಂಬಿದ್ದಾರೆ. ಆದರೆ, ಈ ಪುಣ್ಯನದಿಯನ್ನು ಉಗ್ರವಾದಕ್ಕೆ ಹೋಲಿಕೆ ಮಾಡಿದ್ದು ಸರಿಯೇ ಎಂದು ಕಾಂಗ್ರೆಸ್ ಮುಖಂಡ ಮೀಮ್ ಅಫ್ಜಲ್ ಪ್ರಶ್ನಿಸಿದ್ದಾರೆ. ದಿಯೋಬಂದ್ ಪ್ರದೇಶ ಇತಿಹಾಸವು ಕೇಂದ್ರ ಸಚಿವರಿಗೆ ಗೊತ್ತಿಲ್ಲದೇ ಹೀಗೆಲ್ಲ ಮಾತನಾಡುತ್ತಿದ್ದಾರೆ. ಇಂಥ ಸಚಿವರನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ತಮ್ಮ ಸಂಪುಟದಿಂದ ಹೊರಗಟ್ಟಬೇಕು ಎಂದು ಮೀಮ್ ಅಫ್ಜಲ್ ಆಗ್ರಹಿಸಿದ್ದಾರೆ.