ಆಮ್ಲಜನಕವಿಲ್ಲದೇ ರೋಗಿಗಳು ಸಾವನ್ನಪ್ಪುತ್ತಿರುವುದು ಯಾವ ನರಮೇಧಕ್ಕೂ ಕಡಿಮೆಯಲ್ಲ; ಹೈಕೋರ್ಟ್
ಅಲಹಾಬಾದ್, ಮೇ 5: ದೇಶದಲ್ಲಿ ಆಮ್ಲಜನಕ ಕೊರತೆಯಿಂದಾಗಿ ಕೊರೊನಾ ರೋಗಿಗಳು ಸಾವನ್ನಪ್ಪುತ್ತಿರುವುದು ಅಪರಾಧ ಕೃತ್ಯ ಎಂದಿರುವ ಅಲಹಾಬಾದ್ ಹೈಕೋರ್ಟ್, ಈ ಸಾವುಗಳು ನರಮೇಧ ಎಂದು ಕೇಂದ್ರಕ್ಕೆ ತರಾಟೆ ತೆಗೆದುಕೊಂಡಿದೆ.
ಉತ್ತರ ಪ್ರದೇಶದ ಮೀರತ್ ಹಾಗೂ ಲಖ್ನೋ ಜಿಲ್ಲೆಗಳಲ್ಲಿ ಆಮ್ಲಜನಕ ಕೊರತೆಯಿಂದ ಕೊರೊನಾ ರೋಗಿಗಳು ಮೃತಪಟ್ಟಿರುವುದಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಗಳು ಹರಿದಾಡುತ್ತಿದ್ದು, ಇವುಗಳ ಕುರಿತು ಹೈಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಈ ಬಿಕ್ಕಟ್ಟನ್ನು ನೋಡಿಕೊಂಡು ಮೂಕ ಪ್ರೇಕ್ಷಕರಾಗಿ ಉಳಿಯಲು ಸಾಧ್ಯವಿಲ್ಲ; ಸುಪ್ರೀಂ
ರಾಜ್ಯದಲ್ಲಿ ಕೊರೊನಾ ಸ್ಥಿತಿಗತಿ ಹಾಗೂ ಕ್ವಾರಂಟೈನ್ ಕೇಂದ್ರಗಳ ಪರಿಸ್ಥಿತಿ ಕುರಿತು ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಕೈಗೆತ್ತಿಕೊಂಡ ನ್ಯಾಯಮೂರ್ತಿಗಳಾದ ಸಿದ್ಧಾರ್ಥ್ ವರ್ಮಾ ಹಾಗೂ ಅಜಿತ್ ಕುಮಾರ್ ಅವರು ಈ ಕುರಿತು ತನಿಖೆಗೆ ಆದೇಶಿಸಿದ್ದಾರೆ.
ಆಮ್ಲಜನಕವಿಲ್ಲದೇ ಕೊರೊನಾ ರೋಗಿಗಳು ಸಾವನ್ನಪ್ಪುತ್ತಿರುವುದು ತುಂಬಾ ದುಃಖದ ಸಂಗತಿ. ಇದು ಅಪರಾಧ ಕೃತ್ಯ. ಆಸ್ಪತ್ರೆಗಳಲ್ಲಿ ಆಮ್ಲಜನಕ ಪೂರೈಕೆ ಕುರಿತು ಅಧಿಕಾರಿಗಳು ನಿಗಾವಹಿಸಬೇಕು. ಆದರೆ ಈ ವಿಷಯದಲ್ಲಿ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಇದು ಅಧಿಕಾರಿಗಳು ನಡೆಸಿದ ನರಮೇಧ ಎಂದು ನ್ಯಾಯಾಲಯ ಕಟುವಾಗಿ ಟೀಕಿಸಿದೆ.
"ನಮ್ಮ ಜನರನ್ನು ಈ ರೀತಿ ಸಾಯಲು ಹೇಗೆ ಬಿಡಲು ಸಾಧ್ಯ? ವಿಜ್ಞಾನ ಇಷ್ಟು ಮುಂದುವರೆದಿರುವ ಇಂಥ ದಿನಗಳಲ್ಲಿಯೂ ಇಂಥ ಸಮಸ್ಯೆಗಳನ್ನು ನಿವಾರಿಸಿಲ್ಲವೆಂದರೆ ಹೇಗೆ?" ಎಂದು ಪ್ರಶ್ನಿಸಿದೆ.