ಬಿಜೆಪಿ ತೊರೆದ ದಾರಾ ಸಿಂಗ್ ಚೌಹಾಣ್ ಸಮಾಜವಾದಿ ಪಕ್ಷಕ್ಕೆ ಸೇರ್ಪಡೆ
ಲಕ್ನೋ ಜನವರಿ 16: 2006ರಲ್ಲಿ ಎಸ್ಪಿ ತೊರೆದು ಮಾಯಾವತಿಯವರ ಬಿಎಸ್ಪಿ ಸೇರಿದ ದಾರಾ ಸಿಂಗ್ ಚೌಹಾಣ್ 2017ರಲ್ಲಿ ಬಿಜೆಪಿಗೆ ಸೇರ್ಪಡೆಯಾದರು. ಆದರೀಗ 15 ವರ್ಷಗಳ ನಂತರ ಮತ್ತೆ ಎಸ್ಪಿ ಸೇರಿದ್ದಾರೆ. ಸ್ವಾಮಿ ಪ್ರಸಾದ್ ಮೌರ್ಯ ನಂತರ ಬಿಜೆಪಿ ತೊರೆಯುವ ಮೂಲಕ ಕಮಲಕ್ಕೆ ದೊಡ್ಡ ಪೆಟ್ಟು ನೀಡಿದ್ದ ಮಾಜಿ ಸಚಿವ ದಾರಾ ಸಿಂಗ್ ಚೌಹಾಣ್ ಭಾನುವಾರ ತವರು ಮನೆಗೆ ಮರಳಿದ್ದಾರೆ. ಮಾಜಿ ಮುಖ್ಯಮಂತ್ರಿ ಮತ್ತು ಎಸ್ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಅವರ ಸಮ್ಮುಖದಲ್ಲಿ ಇಂದು ಅವರು ಮತ್ತೆ ಸಮಾಜವಾದಿ ಪಕ್ಷಕ್ಕೆ ಸೇರಿದರು.
ಮುಂದಿನ ತಿಂಗಳು ನಡೆಯಲಿರುವ ಉತ್ತರಪ್ರದೇಶ ವಿಧಾನಸಭೆ ಚುನಾವಣೆಗೂ ಮುನ್ನ ಕಳೆದ ಒಂದು ವಾರದಲ್ಲಿ ಬಿಜೆಪಿ ಪಕ್ಷವನ್ನು ತ್ಯಜಿಸಿರುವ ಮೂವರು ಸಚಿವರು ಸೇರಿದಂತೆ ಸುಮಾರು ಹನ್ನೆರಡು ಮಾಜಿ ಶಾಸಕರಲ್ಲಿ ದಾರಾ ಸಿಂಗ್ ಚೌಹಾಣ್ ಅವರು ಒಬ್ಬರು. ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿರುವ ಅಪ್ನಾ ದಳದ ಶಾಸಕ ಆರ್ಕೆ ವರ್ಮಾ ಕೂಡ ಇಂದು ಸಮಾಜವಾದಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.
ಈ ವೇಳೆ ಮಾತನಾಡಿದ ಅಖಿಲೇಶ್ ಯಾದವ್, "ನಾನು ದಾರಾ ಸಿಂಗ್ ಚೌಹಾಣ್, ಆರ್ಕೆ ವರ್ಮಾ ಅವರನ್ನು ಸ್ವಾಗತಿಸುತ್ತೇನೆ. ಇದು (2022 ರ ವಿಧಾನಸಭೆ ಚುನಾವಣೆ) ದೆಹಲಿ ಮತ್ತು ಲಕ್ನೋದಲ್ಲಿ ಡಬಲ್ ಇಂಜಿನ್ ಸರ್ಕಾರದೊಂದಿಗಿನ ಹೋರಾಟವಾಗಿದೆ (ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಉಲ್ಲೇಖಿಸಿ). ಅವರು ಕೇವಲ 'ಬ್ರೇಕಿಂಗ್ ರಾಜಕೀಯ' ಮಾಡಿದ್ದಾರೆ. ನಾವು 'ಅಭಿವೃದ್ಧಿಯ ರಾಜಕೀಯ'ದ ಮೇಲೆ ಕೇಂದ್ರೀಕರಿಸುತ್ತೇವೆ," ಎಂದು ಯಾದವ್ ಹೇಳಿದರು.
Former UP minister Dara Singh Chauhan joins Samajwadi Party in the presence of SP chief Akhilesh Yadav, in Lucknow pic.twitter.com/MMtZxdJacF
— ANI UP/Uttarakhand (@ANINewsUP) January 16, 2022
ಉತ್ತರಪ್ರದೇಶ ವಿಧಾನಸಭೆ ಚುನಾವಣೆ ಹೊಸ್ತಿಲಲ್ಲೇ ಬಿಜೆಪಿಗೆ ಭಾರೀ ಹಿನ್ನಡೆಯಾಗಿದೆ. ಒಬ್ಬರಾದ ಮೇಲೆ ಒಬ್ಬರಂತೆ ಸಚಿವರು ಶಾಸಕರು ಬಿಜೆಪಿ ಪಕ್ಷ ತೊರೆಯುತ್ತಿದ್ದಾರೆ. ಉತ್ತರ ಪ್ರದೇಶದ ಸಚಿವ ಧರಂ ಸಿಂಗ್ ಸೈನಿ ಗುರುವಾರ ಬಿಜೆಪಿಗೆ ರಾಜೀನಾಮೆ ನೀಡಿದ್ದಾರೆ. ಇನ್ನೂ ಮಂಗಳವಾರ (ಜನವರಿ 11) ಸಂಪುಟ ಸಚಿವ ಸ್ವಾಮಿ ಪ್ರಸಾದ್ ಮೌರ್ಯ ಅವರು ನೀಡಿದ ರಾಜೀನಾಮೆಯಿಂದ ಆಡಳಿತಾರೂಢ ಬಿಜೆಪಿಗೆ ಭಾರಿ ಮುಖಭಂಗವಾಗಿತ್ತು. ಕೆಲ ಗಂಟೆಗಳಲ್ಲಿ ಅವರ ನಿಕಟವರ್ತಿಗಳಾದ ರೋಷನ್ ಲಾಲ್ ವರ್ಮಾ, ಬ್ರಿಜೇಶ್ ಪ್ರಜಾಪತಿ, ಭಗವತಿ ಸಾಗರ್ ಮತ್ತು ವಿನಯ್ ಶಾಕ್ಯ ಅವರು ತಮ್ಮ ರಾಜೀನಾಮೆಯನ್ನು ಘೋಷಿಸಿದರು. ಇದಾದ ಬಳಿಕ ಸಚಿವರಾಗಿದ್ದ ದಾರಾ ಸಿಂಗ್ ಚೌಹಾಣ್ ಬುಧವಾರ ಸಂಪುಟಕ್ಕೆ ರಾಜೀನಾಮೆ ನೀಡಿದರು.
ಫೆಬ್ರವರಿ 10 ರಿಂದ ಪ್ರಾರಂಭವಾಗುವ ಏಳು ಹಂತದ ಚುನಾವಣೆಯಲ್ಲಿ ಯುಪಿ ಹೊಸ ಸರ್ಕಾರಕ್ಕಾಗಿ ಮತ ಚಲಾವಣೆ ನಡೆಯಲಿದೆ. ಮುಖ್ಯಮಂತ್ರಿ ಆದಿತ್ಯನಾಥ್ ಗೋರಖ್ಪುರದಿಂದ ಸ್ಪರ್ಧಿಸಲಿದ್ದಾರೆ ಎಂದು ಬಿಜೆಪಿ ನಿನ್ನೆ ಹೇಳಿತ್ತು. ಅಖಿಲೇಶ್ ಯಾದವ್ ಅವರು ಚುನಾವಣೆಗೆ ನಿಲ್ಲುತ್ತಾರೆಯೇ ಎಂದು ಈವರೆಗೂ ಖಚಿತಪಡಿಸಿಲ್ಲ. ನವೆಂಬರ್ನಲ್ಲಿ ಅಖಿಲೇಶ್ ಅವರು ಪಕ್ಷ ಬಯಸಿದರೆ ತಾವು ಸ್ಪರ್ಧಿಸುವುದಾಗಿ ಹೇಳಿಕೊಂಡಿದ್ದಾರೆ.