ಸೈಕಲ್ನಲ್ಲಿ ಬಂತು ಕೊರೊನಾ ಲಸಿಕೆ; ಪೂರ್ವಸಿದ್ಧತೆ ಬಗ್ಗೆಯೇ ಅನುಮಾನ
ಲಕ್ನೋ, ಜನವರಿ 06: ಕೊರೊನಾ ವೈರಸ್ ಲಸಿಕೆ ನೀಡಲು ದೇಶದೆಲ್ಲೆಡೆ ತಯಾರಿ ನಡೆಯುತ್ತಿದೆ. ಉತ್ತರ ಪ್ರದೇಶದಲ್ಲಿಯೂ ಲಸಿಕೆಗೆ ಪೂರ್ವಸಿದ್ಧತೆ ನಡೆದಿದ್ದು, ಲಸಿಕೆಯ ಡ್ರೈ ರನ್ ಕೂಡ ನಡೆದಿದೆ. ಇದೇ ಸಂದರ್ಭ ಉತ್ತರ ಪ್ರದೇಶದ ವಾರಾಣಸಿಯಲ್ಲಿ ನಡೆದ ಈ ಸಂಗತಿ ಗಮನ ಸೆಳೆದಿದೆ.
ಸೈಕಲ್ ನಲ್ಲಿ ಆಸ್ಪತ್ರೆಗೆ ಕೊರೊನಾ ಲಸಿಕೆಗಳನ್ನು ಪೂರೈಸಿರುವುದು ಲಸಿಕೆ ಪೂರೈಕೆಗೆ ಸರ್ಕಾರದ ಪೂರ್ವಸಿದ್ಧತೆ ಕುರಿತು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಕೊರೊನಾ ಲಸಿಕೆಗಳ ಪೂರೈಕೆಯಡೆಗೆ ನಿರ್ಲಕ್ಷ್ಯ ವಹಿಸಲಾಗುತ್ತಿದೆಯೇ ಎಂಬ ಪ್ರಶ್ನೆಗಳು ಎದ್ದಿವೆ. ಮುಂದೆ ಓದಿ...
ಚೌಕಾಘಾಟ್ ನ ಆಸ್ಪತ್ರೆಗೆ ಸೈಕಲ್ ನಲ್ಲಿ ಲಸಿಕೆ ಪೂರೈಕೆ
ವಾರಾಣಸಿಯ ಚೌಕಾಘಾಟ್ ನ ಮಹಿಳಾ ಆಸ್ಪತ್ರೆಗೆ ಹೀಗೆ ಸೈಕಲ್ ಮೇಲೆ ಲಸಿಕೆಗಳನ್ನು ಪೂರೈಸಲಾಗಿದೆ. ನೌಕರ ಈ ಲಸಿಕೆಗಳನ್ನು ಸೈಕಲ್ ಮೇಲೆ ಸಾಗಿಸುತ್ತಿದ್ದ ದೃಶ್ಯ ಕಂಡುಬಂದಿದೆ. ಈ ಕುರಿತು ವಾರಾಣಸಿ ಮುಖ್ಯ ವೈದ್ಯಾಧಿಕಾರಿ ಡಾ.ವಿ.ಬಿ ಸಿಂಗ್ ಅವರನ್ನು ಪ್ರಶ್ನಿಸಿದಾಗ, "ಐದು ಕೇಂದ್ರಗಳಿಗೆ ವ್ಯಾನ್ ಗಳ ಮೂಲಕ ಲಸಿಕೆಗಳನ್ನು ಪೂರೈಸಲಾಗಿದೆ. ಚೌಕಾಘಾಟ್ ನ ಮಹಿಳಾ ಆಸ್ಪತ್ರೆಗೆ ಮಾತ್ರ ಸೈಕಲ್ ಮೂಲಕ ಪೂರೈಸಲಾಗಿದೆ" ಎಂದು ತಿಳಿಸಿದ್ದಾರೆ.
Fact Check: ಕೊರೊನಾ ಲಸಿಕೆ ಪಡೆಯಲು ಹಿರಿಯ ನಾಗರಿಕರು ಯಾವುದೇ ವಿವರ ನೀಡುವ ಅಗತ್ಯವಿಲ್ಲ
ಭದ್ರತೆಗೆ ಪೊಲೀಸ್ ಸಿಬ್ಬಂದಿ ನಿಯೋಜನೆ
ಸೈಕಲ್ ಮೂಲಕ ಕೊರೊನಾ ಲಸಿಕೆ ಸಾಗಿಸುವ ಸಂದರ್ಭ ಪೊಲೀಸ್ ಸಿಬ್ಬಂದಿಯನ್ನೂ ಭದ್ರತೆಗೆ ನಿಯೋಜಿಸಲಾಗಿತ್ತು. ಆದರೆ ಲಸಿಕೆಯನ್ನು ಹೀಗೆ ಸೈಕಲ್ ನಲ್ಲಿ ಏಕೆ ಸಾಗಿಸಲಾಗಿದೆ? ಬೇರೆ ವಾಹನ ವ್ಯವಸ್ಥೆಯನ್ನು ಏಕೆ ಮಾಡಿಲ್ಲ ಎಂಬ ಪ್ರಶ್ನೆಗಳು ಹಾಗೇ ಉಳಿದುಕೊಂಡಿವೆ.
ಸಿದ್ಧತೆ ಬಗ್ಗೆ ಸಿಎಂ ಯೋಗಿ ಆದಿತ್ಯಾನಾಥ್ ಹೇಳಿಕೆ
ಕಳೆದ ಸೋಮವಾರ, ಲಸಿಕೆ ಕಾರ್ಯಕ್ರಮಕ್ಕೆ ರಾಜ್ಯಾದ್ಯಂತ ಎಲ್ಲಾ ಅಗತ್ಯ ಕ್ರಮ ಹಾಗೂ ಸಿದ್ಧತೆಗಳನ್ನು ನಡೆಸಲಾಗಿದೆ ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯಾನಾಥ್ ತಿಳಿಸಿದ್ದರು. ಪ್ರತಿ ಜಿಲ್ಲೆಯಲ್ಲಿಯೂ ಲಸಿಕೆಯ ಡ್ರೈರನ್ ಕೂಡ ಮಾಡಲಾಗಿತ್ತು. ಆದರೆ ಸೈಕಲ್ ಮೇಲೆ ಕೊರೊನಾ ಲಸಿಕೆಗಳನ್ನು ಪೂರೈಸಿರುವುದಕ್ಕೆ ಸೂಕ್ತ ಕಾರಣಗಳು ಇಲ್ಲದ ಕಾರಣ ಹಲವು ಆಕ್ಷೇಪಗಳು ವ್ಯಕ್ತಗೊಂಡಿವೆ.
ಕೊರೊನಾ ಲಸಿಕೆ ಪಡೆಯಲು ಶೇ.69ರಷ್ಟು ಭಾರತೀಯರು ಹಿಂದೇಟು, ಕಾರಣವೇನು?
ರಾಜ್ಯದ ಹಲವೆಡೆ ಲಸಿಕೆಯ ಡ್ರೈ ರನ್
ರಾಜ್ಯದ ಕೆಜಿಎಂಯು, ಪಿಜಿಐ, ಲೋಹಿಯಾ ಇನ್ ಸ್ಟಿಟ್ಯೂಟ್, ರಾಮ್ ಸಾಗರ್ ಮಿಶ್ರಾ ಆಸ್ಪತ್ರೆ, ಲೋಕ ಬಂಧು ಆಸ್ಪತ್ರೆ, ಅಲಹಾಬಾದ್, ಇಂದಿರಾ ನಗರ ಮುಂತಾದೆಡೆಗಳಲ್ಲಿ ಲಸಿಕೆಯ ಡ್ರೈರನ್ ಮಾಡಲಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಕೊರೊನಾ ಲಸಿಕೆ ಕಾರ್ಯಕ್ರಮ ಆರಂಭಗೊಳ್ಳಲಿದ್ದು, ರಾಜ್ಯ ಲಸಿಕೆ ಕಾರ್ಯಕ್ರಮಕ್ಕೆ ಸಿದ್ಧವಾಗಿದೆ ಎಂದು ಸಿಎಂ ಯೋಗಿ ಆದಿತ್ಯಾನಾಥ್ ತಿಳಿಸಿದ್ದಾರೆ.