ಕೊರೊನಾ ನಿಯಂತ್ರಿಸಲು ಕನ್ನಡಿಗ ಐಎಎಸ್ ಅಧಿಕಾರಿಯೇ ಸರಿ ಎಂದ ಯೋಗಿ ಆದಿತ್ಯನಾಥ್
ವಿಶ್ವದೆಲ್ಲಡೆ ಹರಡಿರುವ ಮಾರಣಾಂತಿಕ ಕೊರೊನಾ ವೈರಸ್ ಇದುವರೆಗೆ 42,340 ಜನರನ್ನು ಬಲಿ ಪಡೆದುಕೊಂಡಿದೆ. ಇನ್ನು, ಭಾರತದಲ್ಲಿ ಇದುವರೆಗೆ ಐವತ್ತು ಜನ ಸಾವನ್ನಪ್ಪಿದರೆ, 150 ಜನ ಗುಣಮುಖರಾಗಿದ್ದಾರೆ ಎನ್ನುವುದು ಗಮನಿಸಬೇಕಾದ ವಿಚಾರ.
ಇದುವರೆಗೆ 1,716 ಪ್ರಕರಣಗಳು ದೇಶದಲ್ಲಿ ದಾಖಲಾಗಿದ್ದು, ಅದರಲ್ಲಿ ಉತ್ತರಪ್ರದೇಶದಲ್ಲಿನ ಸೋಂಕಿತರ ಸಂಖ್ಯೆ 104. ಅದರಲ್ಲಿ ಅತಿಹೆಚ್ಚು ಸೋಂಕಿತರು ಇರುವುದು ರಾಜಧಾನಿ ದೆಹಲಿಗೆ ಹೊಂದಿ ಕೊಂಡಿರುವ ಗೌತಂ ಬುದ್ದ ನಗರ ಜಿಲ್ಲೆಯಲ್ಲಿ.
ಕೊರೊನಾ: ಇದುವರೆಗಿನ ಪ್ರಯತ್ನವೆಲ್ಲಾ ನೀರಿನಲ್ಲಿ ಹೋಮ ಮಾಡಿದಂತಾಯಿತೇ?
ಹಲವು ಬಹುರಾಷ್ಟ್ರೀಯ ಕೆಂಪೆನಿಗಳು, ಫಿಲಂ ಸಿಟಿಯನ್ನು ಹೊಂದಿರುವ ನೋಯ್ಡಾ ಮತ್ತು ಗ್ರೇಟರ್ ನೋಯ್ದಾ ಈ ಜಿಲ್ಲೆಯ ವ್ಯಾಪ್ತಿಗೆ ಬರುತ್ತದೆ. ಈ ಜಿಲ್ಲೆಯ ಮ್ಯಾಜಿಸ್ಟ್ರೇಟ್ ಆಗಿದ್ದ ಬಿ.ಎನ್.ಸಿಂಗ್ ಅವರನ್ನು 'ಸುಧರ್ ಜಾವೋ' ಎನ್ನುವ ಎಚ್ಚರಿಕೆಯನ್ನು ನೀಡಿ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ತಕ್ಷಣದಿಂದಲೇ ಜಾರಿಗೆ ಬರುವಂತೆ ವರ್ಗಾವಣೆ ಮಾಡಿದ್ದರು.
ಎರಡೇ ಶಬ್ದದಲ್ಲಿ ಡಿಸಿಗೆ ಕೊನೆಯ ಎಚ್ಚರಿಕೆ ಕೊಟ್ಟ ಯೋಗಿ ಆದಿತ್ಯನಾಥ್
ನೋಯ್ಡಾದಲ್ಲಿ ಪರಿಸ್ಥಿತಿ ಕೈತಪ್ಪುತ್ತಿರುವುದನ್ನು ಅರಿತ ಯೋಗಿ, ಈಗ ಅವರ ಜಾಗಕ್ಕೆ ರಾಜ್ಯದ ಖಡಕ್ ಐಎಎಸ್ ಅಧಿಕಾರಿ ಎಂದು ಹೆಸರಾಗಿರುವ ಎಲ್.ವೈ.ಸುಹಾಸ್ ಅವರನ್ನು ರಿಪೋರ್ಟ್ ಮಾಡಲು ಸೂಚಿಸಿದ್ದಾರೆ. ಸುಹಾಸ್, ಕರ್ನಾಟಕದ ಮೂಲದವರು ಎನ್ನುವುದು ವಿಶೇಷ.
ಬಿ.ಎನ್.ಸಿಂಗ್ ತಲೆದಂಡ
ನೋಯ್ಡಾದ ಖಾಸಗಿ ಭದ್ರತಾ ಸಂಸ್ಥೆಯಲ್ಲಿನ 25 ಉದ್ಯೋಗಿಗಳಿಗೆ ಕೋವಿಡ್ 19 ಸೋಂಕು ಕಾಣಿಸಿತ್ತು. ಆದರೆ, ಸಂಸ್ಥೆಯ ವಿರುದ್ದ ಯಾವುದೇ ವಿಚಾರಣೆ ಅಥವಾ ಮಾಹಿತಿಯನ್ನು ಬಿ.ಎನ್.ಸಿಂಗ್ ನೇತೃತ್ವದ ಜಿಲ್ಲಾಡಳಿತ ಪಡೆದುಕೊಂಡಿರಲಿಲ್ಲ. ಜೊತೆಗೆ, ಈ ಸಂಸ್ಥೆಯನ್ನು ಮುಚ್ಚಿಸುವಲ್ಲೂ ಕ್ರಮವನ್ನು ತೆಗೆದುಕೊಂಡಿರಲಿಲ್ಲ.
ಪರಿಸ್ಥಿತಿಯ ಸೂಕ್ಷ್ಮತೆಯನ್ನು ಅರಿತ ಯೋಗಿ
ಉತ್ತರ ಪ್ರದೇಶದ 104 ಸೋಂಕಿತರ ಪೈಕಿ ಗೌತಂ ಬುದ್ದ ನಗರ (ನೋಯ್ಡಾ) ಜಿಲ್ಲೆಯಲ್ಲಿ ಅತಿಹೆಚ್ಚು ಎಂದರೆ 38 ಪ್ರಕರಣಗಳು ದಾಖಲಾಗಿವೆ. ಅತಿಹೆಚ್ಚು ಜನಸಂಖ್ಯೆಯನ್ನು ನೋಯ್ಡಾ ಹೊಂದಿರುವುದು ಮತ್ತು ದೆಹಲಿಗೆ ಹತ್ತಿರದಲ್ಲಿರುವುದರಿಂದ, ಪರಿಸ್ಥಿತಿಯ ಸೂಕ್ಷ್ಮತೆಯನ್ನು ಅರಿತ ಯೋಗಿ, ಸುಹಾಸ್ ಅವರನ್ನು ನೋಯ್ಡಾ ಮ್ಯಾಜಿಸ್ಟ್ರೇಟ್ ಆಗಿ ನೇಮಕ ಮಾಡಿ, ಆದೇಶ ಹೊರಡಿಸಿದರು. ಸುಹಾಸ್, ಹಾಸನ ಮೂಲದವರು.
ಸುಹಾಸ್ ನಳಿನಕೆರೆ ಯತಿರಾಜ್
ಹಾಸನ ಜಿಲ್ಲೆಯ ಮೂಲದವರಾದ ಸುಹಾಸ್ ನಳಿನಕೆರೆ ಯತಿರಾಜ್, ಉತ್ತರ ಪ್ರದೇಶದ 2007ರ ಐಎಎಸ್ ಕ್ಯಾಡರ್ ಆಗಿದ್ದು, ಪಾರಾ ಬ್ಯಾಡ್ಮಿಂಟನ್ ಆಟಗಾರರೂ ಆಗಿದ್ದಾರೆ. ಕ್ಲಿಷ್ಟ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಹೆಸರುವಾಸಿಯಾಗಿರುವ ಸುಹಾಸ್, ಉತ್ತರ ಪ್ರದೇಶದ ಅತ್ಯುನ್ನತ ನಾಗರೀಕ ಪ್ರಶಸ್ತಿ 'ಯಶ್ ಭಾರತಿ' ಪ್ರಶಸ್ತಿಯನ್ನು ಪಡೆದವರು.
ಮೋದಿ, ಯೋಗಿ, ಸುಹಾಸ್ ಕಾರ್ಯವೈಖರಿಯನ್ನು ಮುಕ್ತಕಂಠದಿಂದ ಹೊಗಳಿದ್ದರು
ಕಳೆದ ವರ್ಷ ಪ್ರಯಾಗರಾಜ್ ನಲ್ಲಿ ನಡೆದ ಕುಂಭಮೇಳವನ್ನು ಅತ್ಯಂತ ಸಮರ್ಥವಾಗಿ ಸುಹಾಸ್ ನಿಭಾಯಿಸಿದ್ದರು. ಸುಮಾರು ಒಂದು ಕೋಟಿಗೂ ಅಧಿಕ ಭಕ್ತಾದಿಗಳು ಈ ಧಾರ್ಮಿಕ ಮೇಳದಲ್ಲಿ ಭಾಗವಹಿಸಿದ್ದರು. ಜನರನ್ನು ಅಚ್ಚುಕಟ್ಟಾಗಿ ನಿಯಂತ್ರಿಸಿದ್ದು, ಶುಚಿತ್ವಕ್ಕೆ ಮಹತ್ವವನ್ನು ನೀಡಿದ್ದು ವ್ಯಾಪಕ ಪ್ರಶಂಸೆಗೆ ಒಳಗಾಗಿತ್ತು. ಪ್ರಧಾನಿ ಮೋದಿ ಮತ್ತು ಸಿಎಂ ಯೋಗಿ ಆದಿತ್ಯನಾಥ್, ಸುಹಾಸ್ ಕಾರ್ಯವೈಖರಿಯನ್ನು ಮುಕ್ತಕಂಠದಿಂದ ಹೊಗಳಿದ್ದರು.