Just in: ಮಕ್ಕಳ ಬಿಸಿಯೂಟ ಯೋಜನೆ, 11 ಕೋಟಿ ವಂಚಿಸಿದ ಶಿಕ್ಷಕ!
ಆಗ್ರಾ, ಆ.03: ಮಧ್ಯಾಹ್ನದ ಬಿಸಿಯೂಟ (Mid-Day Meal) ಯೋಜನೆಯ 11.46 ಕೋಟಿ ರೂಪಾಯಿ ವಂಚಿಸಿದ ಆರೋಪದ ಮೇಲೆ ಪ್ರಾಂಶುಪಾಲರೊಬ್ಬರ ವಿರುದ್ಧ ಭ್ರಷ್ಟಾಚಾರದ ಪ್ರಕರಣ ದಾಖಲಿಸಲಾಗಿದೆ.
ಫಿರೋಜಾಬಾದ್ನ ಬೇಸಿಕ್ ಎಜುಕೇಶನ್ ಇಲಾಖೆಯಡಿಯಲ್ಲಿ ಬರುವ ಶಾಲೆಯ ಪ್ರಾಂಶುಪಾಲರೊಬ್ಬರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಾಂಶುಪಾಲ ನಕಲಿ ದಾಖಲೆಗಳನ್ನು ಬಳಸಿ ಸರ್ಕಾರೇತರ ಸಂಸ್ಥೆ (ಎನ್ಜಿಒ) ಎಂದು ನೋಂದಾಯಿಸಿದ್ದಾರೆ.
ಬ್ಯಾಂಕ್ಗಳ ಅಧಿಕಾರಿಗಳು ಮತ್ತು ಅವರ ಸಿಬ್ಬಂದಿಯ ಸಹಾಯದಿಂದ 11.46 ಕೋಟಿ ಮಧ್ಯಾಹ್ನದ ಬಿಸಿಯೂಟ ಯೋಜನೆಯ ಹಣವನ್ನು ತೆಗೆದುಕೊಂಡು ಬಳಸಿದ್ದಾರೆ ಎಂದು ಆಗ್ರಾದ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.
"ಫಿರೋಜಾಬಾದ್ ಜಿಲ್ಲೆಯ ಮೂಲ ಶಿಕ್ಷಣ ಇಲಾಖೆಯ ಶಿಕ್ಷಕ ಚಂದ್ರಕಾಂತ್ ಶರ್ಮಾ ವಿರುದ್ಧ ಭ್ರಷ್ಟಾಚಾರದ ಪ್ರಕರಣ ದಾಖಲಾಗಿದೆ. ಅವರು ಫಿರೋಜಾಬಾದ್ ಜಿಲ್ಲೆಯ ಶಿಕೋಹಾಬಾದ್ ನಿವಾಸಿಯಾಗಿದ್ದಾರೆ. ಫಿರೋಜಾಬಾದ್ ಜಿಲ್ಲೆಯ ತುಂಡ್ಲಾದ ಜಾಜುಪುರದ ಪ್ರಾಥಮಿಕ ಶಾಲೆಯಲ್ಲಿ ಪ್ರಾಂಶುಪಾಲರಾಗಿ ಕೆಲಸ ಮಾಡುತ್ತಿದ್ದಾರೆ" ಎಂದು ಪೊಲೀಸ್ ವರಿಷ್ಠಾಧಿಕಾರಿ (ವಿಜಿಲೆನ್ಸ್) ಅಲೋಕ್ ಶರ್ಮಾ ಹೇಳಿದ್ದಾರೆ.
ಜುಲೈ 27 ರಂದು ಆಗ್ರಾದ ವಿಜಿಲೆನ್ಸ್ ಪೊಲೀಸ್ ಠಾಣೆಯಲ್ಲಿ ಮೂಲ ಶಿಕ್ಷಣ ಇಲಾಖೆ ಮತ್ತು ಬ್ಯಾಂಕ್ಗಳ ಇತರ ಕೆಲವು ಉದ್ಯೋಗಿಗಳು ಶಿಕ್ಷಕನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂದು ತಿಳಿಸಿದ್ದಾರೆ.
"ಫಿರೋಜಾಬಾದ್ನ ಶಿಕೋಹಾಬಾದ್ನಲ್ಲಿ ನೋಂದಣಿಯಾಗಿರುವ ಎನ್ಜಿಒ 'ಸರಸ್ವತ್ ಅವಾಸಿಯ ಶಿಕ್ಷಾ ಸೇವಾ ಸಮಿತಿ' ಮೂಲಕ ಚಂದ್ರಕಾಂತ್ ಶರ್ಮಾ ಮಧ್ಯಾಹ್ನದ ಬಿಸಿಯೂಟ ಯೋಜನೆಯ ಹಣವನ್ನು ವಂಚಿಸಿದ್ದಾರೆ. 2007 ರಲ್ಲಿ ಈ ಸಂಸ್ಥೆ ನೋಂದಾಯಿಸಲ್ಪಟ್ಟಿದೆ. ಎನ್ಜಿಒ ಎಂದು ನೋಂದಾಯಿಸಲು ನಕಲಿ ಪಡಿತರ ಚೀಟಿ ಮತ್ತು ಐಡಿ ಕಾರ್ಡ್ಗಳನ್ನು ಬಳಸಿದ್ದಾರೆ" ಎಂದು ಅಲೋಕ್ ಶರ್ಮಾ ಹೇಳಿದ್ದಾರೆ.
ಪ್ರಥಮ ಮಾಹಿತಿ ವರದಿ (ಎಫ್ಐಆರ್) ಪ್ರಕಾರ, ಶಿಕ್ಷಕ ತನ್ನ ತಂದೆಯನ್ನು ಎನ್ಜಿಒ ಅಧ್ಯಕ್ಷರನ್ನಾಗಿ, ಅವರ ತಾಯಿಯನ್ನು ಮ್ಯಾನೇಜರ್ ಮತ್ತು ಕಾರ್ಯದರ್ಶಿಯನ್ನಾಗಿ ಮತ್ತು ಆತನ ಪತ್ನಿಯನ್ನು ಖಜಾಂಚಿಯನ್ನಾಗಿ ಮಾಡಿದ್ದಾರೆ. NGO ನಲ್ಲಿ ಇತರ ಸ್ಥಾನಗಳನ್ನು ಕುಟುಂಬ ಸದಸ್ಯರು ಮತ್ತು ಸಂಬಂಧಿಕರ ಹೆಸರಿನಲ್ಲಿವೆ.
ಇಷ್ಟೇ ಅಲ್ಲದೆ ಆರೋಪಿಯು ತಮ್ಮ ತಾಯಿ ಸೇರಿದಂತೆ ಕೆಲವು ಎನ್ಜಿಒ ಸದಸ್ಯರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ.