ಟೂ ಬಿಟ್ಟ ಮಾಯಾವತಿ... ಇನ್ನು ಏಕಾಂಗಿ ಹೋರಾಟವೇ ಕಾಂಗ್ರೆಸ್ಸಿಗೆ ಗತಿ!
ಕೊನೇ ಕ್ಷಣದಲ್ಲಿ ಮಾಯಾವತಿ ಮನಸ್ಸು ಕರಗಿ ಮೈತ್ರಿಗೆ 'ಹ್ಞುಂ' ಅನ್ನಬಹುದೇನೋ ಎಂಬ ಕಾಂಗ್ರೆಸ್ಸಿನ ಎಲ್ಲಾ ನಿರೀಕ್ಷೆಗಳೂ ಸುಳ್ಳಾಗಿವೆ. ಇನ್ನೇನಿದ್ದರೂ ಕಾಂಗ್ರೆಸ್ ಜೊತೆಗೆ ಕಾಂಗ್ರೆಸ್ ಮತ್ತು ಕಾಂಗ್ರೆಸ್!!
ಉತ್ತರ ಪ್ರದೇಶದಲ್ಲಿ ಬಹುಜನ ಸಮಾಜ ಪಕ್ಷದ ಮಾಯಾವತಿ ಮತ್ತು ಸಮಾಜವಾದಿ ಪಕ್ಷದ ಮುಖಂಡ ಅಖಿಲೇಶ್ ಯಾದವ್ ಜಂಟಿ ಸುದ್ದಿಗೋಷ್ಠಿ ಕರೆಯುತ್ತಿದ್ದಂತೆಯೇ ಕಾಂಗ್ರೆಸ್ ಉತ್ತರ ಪ್ರದೇಶದಲ್ಲಿ ಏಕಾಂಗಿಯಾಗಿ ಹೋರಾಟ ಮಾಡುವುದಾಗಿ ಘೋಷಿಸಿದೆ.
ಕಾಂಗ್ರೆಸ್ಸಿಗೆ ಅಮೇಥಿ, ರಾಯ್ ಬರೇಲಿಯನ್ನು ಭಿಕ್ಷೆ ಕೊಟ್ಟರೆ ಮಾಯಾವತಿ?
ಮಾಯಾವತಿ ಮತ್ತು ಅಖಿಲೇಶ್ ಅವರ ಬಳಿ ಇನ್ನು ಯಾವುದೇ 'ನೆಗೋಶಿಯೇಶನ್' ಮಾಡುವ ಪ್ರಯತ್ನವನ್ನು ಮಾಡದೆ ಉಳಿಯಲು ಕಾಂಗ್ರೆಸ್ ನಿರ್ಧರಿಸಿದೆ. ಅದಕ್ಕೆ ಪ್ರತಿಯಾಗಿ ಅತ್ತೆಡೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾಯಾವತಿ ಮತ್ತು ಅಖಿಲೇಶ್ ಅವರು ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳುವುದನ್ನು ಅಧಿಕೃತವಾಗಿ ಘೋಷಿದ್ದಾರೆ. ಮಾತ್ರವಲ್ಲ, ಸೀಟು ಹಂಚಿಕೆಯ ಪ್ರಮಾಣವನ್ನೂ ಈಗಾಗಲೇ ಘೋಷಿಸಿವೆ. ಇದು ಕಾಂಗ್ರೆಸ್ಸಿಗೆ ನುಂಗಲಾರದ ತುತ್ತು ಎನ್ನಿಸಿದರೆ, ಬಹುಶಃ ಬಿಜೆಪಿ ಮರೆಯಲ್ಲೇ ನಗುತ್ತಿದ್ದರೆ ಅಚ್ಚರಿಯಲ್ಲಿ!
ಏಕಾಂಗಿ ಹೋರಾಟ ಖಚಿತ
ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಯಾವುದೇ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳದೆ ಏಕಾಂಗಿಯಾಗಿ ಹೋರಾಡುವುದು ಖಚಿತವಾಗಿದ್ದು, ದುಬೈ ಪ್ರವಾಸದಲ್ಲಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಾಪಸ್ಸಾದ ಮೇಲೆ ಈ ಕುರಿತು ಅಧಿಕೃತ ಘೋಷಣೆ ಮಾಡಲಾಗುವುದು ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ. ಭಾನುವಾರದಂದು ಲಕ್ನೋಗೆ ತೆರಳಿರುವ ಉತ್ತರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ರಾಜ್ ಬಬ್ಬರ್ ಮತ್ತಿತರರು ಒಟ್ತು 11 ಸಭೆಗಳನ್ನು ನಡೆಸುವ ಸಾಧ್ಯತೆ ಇದೆ.
ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಏಕಾಂಗಿಯಾದರೆ ಫಲಿತಾಂಶ ಏನಾಗಲಿದೆ?
ದೇಶದ ರಾಜಕೀಯ ಬದಲಿಸಬಲ್ಲ ಉತ್ತರ ಪ್ರದೇಶ
ಉತ್ತರ ಪ್ರದೇಶದಲ್ಲಿ ಒಟ್ಟು 80 ಲೋಕಸಭಾ ಕ್ಷೇತ್ರಗಳಿರುವುದರಿಂದ ಅದು ದೇಶದ ರಾಜಕೀಯ ಚಿತ್ರಣವನ್ನೇ ಬದಲಿಸಬಲ್ಲದು. ಉತ್ತರ ಪ್ರದೇಶ ರಾಜಕೀಯದಲ್ಲಾಗುವ ತಲ್ಲಣಗಳು ಇಡೀ ದೇಶವನ್ನೂ ಅಲ್ಲಾಡಿಸಬಹುದು. ಬಿಜೆಪಿಯನ್ನು ಬಗ್ಗಿಬಡಿಯುವ ತುಡಿತದಲ್ಲಿದ್ದ ಕಾಂಗ್ರೆಸ್ಸಿಗೆ ಬಿಎಸ್ಪಿ ಮತ್ತು ಎಸ್ಪಿಯ ನಡೆಯಿಂದ ಆಘಾತವಾಗಿರುವುದು ದಿಟ. ಏಕೆಂದರೆ ಬಿಎಸ್ಪಿ ಮತ್ತು ಎಸ್ಪಿಯ ಮತದಾರರು ಕಾಂಗ್ರೆಸ್ ಮತದಾರರೂ ಹೌದು. ಈ ಮತಗಳು ಒಡೆದರೆ ಲಾಭವಾಗುವುದು ಬಿಜೆಪಿಗೆ ಎಂಬುದು ಕಾಂಗ್ರೆಸ್ಸಿಗೆ ಗೊತ್ತು. ಅದು ಬಿಎಸ್ಪಿಗೂ ಗೊತ್ತಿಲ್ಲದಲ್ಲ. ಆದರೆ ಮಹಾಘಟಬಂಧನದ ಭಾಗವಾದರೂ ತನ್ನ ಬೇಳೆ ಬೇಯಿಸಿಕೊಳ್ಳಲು ಸಾಧ್ಯವಿಲ್ಲ ಎಂಬುದನ್ನು ಅರಿತ ಬಿಎಸ್ಪಿ ಇದೀಗ ಚುನಾವಣೆಯಲ್ಲಿ ಗೆಲ್ಲುವುದಕ್ಕಿಂತ ಕಾಂಗ್ರೆಸ್ಸಿಗೆ ಬುದ್ಧಿ ಕಲಿಸುವುದಕ್ಕೇ ಹೆಚ್ಚು ಉತ್ಸುಕತೆ ತೋರಿದಂತಿದೆ!
ಕಾಂಗ್ರೆಸ್ ಸಹವಾಸ ಬಿಡಲು ಕಾರಣ ನೀಡಿದ ಎಸ್ಪಿ, ಬಿಎಸ್ಪಿ ಮೈತ್ರಿ
ಎಸ್ಪಿ-ಬಿಎಸ್ಪಿ:50-50
ಇಂದು ಪತ್ರಿಕಾಗೋಷ್ಠಿ ಕರೆದಿದ್ದ ಅಖಿಲೇಶ್ ಯಾದವ್ ಮತ್ತು ಮಾಯಾವತಿ ತಾವು ಉತ್ತರ ಪ್ರದೇಶದ 76(80) ಕ್ಷೇತ್ರಗಳಲ್ಲಿ ತಲಾ 38 ಕ್ಶೇತ್ರಗಳಲ್ಲಿ ಸ್ಪರ್ಧಿಸುವುದಾಗಿ ಒಮ್ಮತದ ನಿರ್ಧಾರಕ್ಕೆ ಬಂದಿವೆ. ಈ 50:50 ಸೀಟು ಹಂಚಿಕೆ ಪ್ರಮಾಣದಿಂದಾಗಿ ಎಸ್ಪಿ-ಬೆಸ್ಪಿ ನಡುವೆ ಸೀಟು ಹಂಚಿಕೆಗೆ ಸಂಬಂಧಿಸಿದಂತೆ ಭಿನ್ನಾಭಿಪ್ರಾಯ ವೇಳಬಹುದಾದ ಒಂದೇ ಒಂದು ಸಾಧ್ಯತೆಯೂ ಮುಚ್ಚಿಹೋಗಿದೆ. ಕಾಂಗ್ರೆಸ್ಸಿಗೆ ಕೊನೆಯ ಕ್ಷಣದಲ್ಲಿ ಸಿಕ್ಕಬಹುದಾದ ಏಕೈಕ ಅಸ್ತ್ರವೂ ಇಲ್ಲವಾದಂತಾಗಿದೆ.
ಮಹಾಘಟಬಂಧನದ ಭವಿಷ್ಯವೇನು?
ಮಹಾಘಟಬಂಧನ ಎಂಬ ಶಿಶು ಹುಟ್ಟುವ ಮೊದಲೇ ಕಣ್ಣುಮುಚ್ಚುತ್ತಿದೆಯಾ? ಮಾಯಾವತಿ, ಅಖಿಲೇಶ್ ಇಲ್ಲವೆಂದಾದರೆ ಮಹಾಘಟಬಂಧನಕ್ಕೆ ಇನ್ಯಾರು ಬೆಂಬಲ ನೀಡಿಯಾರು? ಬಿಜೆಪಿಯನ್ನು ಸೋಲಿಸಲು ಕಾಂಗ್ರೆಸ್ ಬತ್ತಳಿಕೆಯಲ್ಲಿದ್ದ ಮಹಾಘಟಬಂಧನದ ಅಸ್ತ್ರ ಈ ಮೂಲಕ ತನ್ನ ಶಕ್ತಿ ಕಳೆದುಕೊಂಡರೆ ಅಚ್ಚರಿಯಿಲ್ಲ. ಒಟ್ಟಿನಲ್ಲಿ ಉತ್ತರ ಪ್ರದೇಶದಲ್ಲಿ ನಡೆದ ಈ ಎಲ್ಲಾ ಬೆಳವಣಿಗೆಗಳೂ ಬಿಜೆಪಿಗೆ ಒಂದರ್ಥದಲ್ಲಿ ಲಾಭವೇ ಆಗಬಹುದು.