ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಎದುರಾಳಿ ಬಿಜೆಪಿಯಲ್ಲ, ಮಾಯಾ!
ಲಕ್ನೋ, ಜನವರಿ 13: ಉತ್ತರ ಪ್ರದೇಶದ ಎಲ್ಲಾ 80 ಕ್ಷೇತ್ರಗಳಲ್ಲೂ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಕಾಂಗ್ರೆಸ್ ನಿರ್ಧರಿಸಿದೆ ಎಂದು ಕಾಂಗ್ರೆಸ್ ಮುಖಂಡ ಗುಲಾಂ ನಬಿ ಆಜಾದ್ ಹೇಳಿದ್ದಾರೆ.
ಎಸ್ಪಿ-ಬಿಎಸ್ಪಿ ಮೈತ್ರಿಯ ನಂತರ ಉತ್ತರ ಪ್ರದೇಶದ ರಾಜಕೀಯದಲ್ಲಿ ಭಾರೀ ಬದಲಾವಣೆಯಾಗಿದೆ. ಅಸಲಿಗೆ ಕಾಂಗ್ರೆಸ್ಸಿಗೆ ಇದೀಗ ತನ್ನ ಎದುರಾಳಿ ಬಿಜೆಪಿಯೋ, ಅಥವಾ ಬಿಎಸ್ಪಿ-ಎಸ್ಪಿಯೋ ಎಂದೇ ತಿಳಿಯದ ಸ್ಥಿತಿ ನಿರ್ಮಾಣವಾಗಿದೆ.
ಉತ್ತರ ಪ್ರದೇಶದಲ್ಲಿ ಗೆಲ್ಲುವುದು ಕಾಂಗ್ರೆಸ್ ಗೆ ಪ್ರತಿಷ್ಠೆಯ ಪ್ರಶ್ನೆ
ಅತೀ ಹೆಚ್ಚು ಲೋಕಸಭಾ ಕ್ಷೇತ್ರಗಳನ್ನು ಹೊಂದಿರುವ ಉತ್ತರ ಪ್ರದೇಶದಲ್ಲಿ 80 ಕ್ಷೇತ್ರಗಳಲ್ಲೂ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಮೂಲಕ ಎಸ್ಪಿ-ಬಿಎಸ್ಪಿಗೆ ಪಾಠ ಕಲಿಸಲು ಕಾಂಗ್ರೆಸ್ ಮುಂದಾಗಿದೆ.
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರೂ ಇಲ್ಲಿ ಎಡಬಿಡದೆ 13 rally ಗಳನ್ನು ನಡೆಸಲು ನಿರ್ಧರಿಸಿದ್ದಾರೆ. ದೇಶದ ರಾಜಕಾರಣದ ದಿಕ್ಕು ಬದಲಿಸಬಲ್ಲ ಉತ್ತರ ಪ್ರದೇಶದ ಈ ಬಾರಿ ಲೋಕಸಭಾ ಚುನಾವಣೆಯ ರಂಗನ್ನು ದುಪ್ಪಟ್ಟಾಗಿಸುವುದು ಖಂಡಿತ.
ಗುಲಾಂ ನಬಿ ಆಜಾದ್ ಹೇಳಿದ್ದೇನು?
ಇದು ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ಯುದ್ಧ ಅನ್ನೋದು ಎಲ್ಲರಿಗೂ ಗೊತ್ತು. ನಾವು ಎಲ್ಲಾ ಸಮಾನ ಮನಸ್ಕ ಜನರನ್ನು ಒಗ್ಗೂಡಿಸಿ ಬಿಜೆಪಿ ವಿರುದ್ಧ ಹೋರಾಡಲು ಮುಂದಾಗಿದ್ದೇವೆ. ಅದಕ್ಕೆ ಬೆಂಬಲ ನೀಡುವವರು ನೀಡಬಹುದು. ಕಾಂಗ್ರೆಸ್ ಉತ್ತರ ಪ್ರದೇಶದಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ಚುನಾವಣೆಯಲ್ಲಿ ಸ್ಪರ್ಧಿಸಲಿದೆ ಎಂದು ಆಜಾದ್ ಹೇಳಿದ್ದಾರೆ.
ಎಸ್ಪಿ-ಬಿಎಸ್ಪಿ ಸೀಟು ಹಂಚಿಕೆ
ಉತ್ತರ ಪ್ರದೇಶದಲ್ಲಿ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿರುವ ಎಸ್ಪಿ ಮತ್ತು ಬಿಎಸ್ಪಿಗಳು ಕಾಂಗ್ರೆಸ್ಸಿಗೆ ದೊಡ್ಡ ತಲೆನೋವಾಗಿರುವುದು ಸತ್ಯ. 2019 ರ ಏಪ್ರಿಲ್ ಮೇ ತಿಂಗಳಿನಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಎಸ್ಪಿ ಮತ್ತು ಬಿಎಸ್ಪಿ ಪಕ್ಷಗಳು ಮೈತ್ರಿ ಮಾಡಿಕೊಳ್ಳುವುದಾಗಿ ಶನಿವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಘೋಷಿಸಿದ್ದವು. ಉತ್ತರ ಪ್ರದೇಶದ 80 ಕ್ಷೇತ್ರಗಳ ಪೈಕಿ 76 ಕ್ಷೇತ್ರಗಳಲ್ಲಿ ಎಸ್ಪಿ-ಬಿಎಸ್ಪಿ ಸ್ಪರ್ಧಿಸಲಿದ್ದು, ತಲಾ 38 ಕ್ಷೇತ್ರಗಳನ್ನು ಸಮಾನವಾಗಿ ಹಂಚಿಕೊಂಡಿವೆ.
ಟೂ ಬಿಟ್ಟ ಮಾಯಾವತಿ... ಇನ್ನು ಏಕಾಂಗಿ ಹೋರಾಟವೇ ಕಾಂಗ್ರೆಸ್ಸಿಗೆ ಗತಿ!
ದೇಶಕ್ಕಾಗಿಯಲ್ಲ ಈ ಮೈತ್ರಿ ಎಂದ ಬಿಜೆಪಿ
ಎಸ್ಪಿ-ಬಿಎಸ್ಪಿ ಮೈತ್ರಿಯನ್ನು ಕಟುವಾಗಿ ಟೀಕಿಸಿದ ಬಿಜೆಪಿ, "ಬಿಎಸ್ಪಿಯಾಗಲೀ, ಎಸ್ಪಿಯಾಗಲೀ ಮೈತ್ರಿ ಮಾಡಿಕೊಂಡಿರುವುದು ದೇಶಕ್ಕಾಗಲೀ, ಉತ್ತರ ಪ್ರದೇಶಕ್ಕಾಗಲೀ ಅಲ್ಲ, ಕೇವಲ ತಮ್ಮ ಉಳಿವಿಗಾಗಿ. ಅವರಿಗೆ ಗೊತ್ತು, ಪ್ರಧಾನಿ ಮೋದಿ ಅವರನ್ನು ಸ್ವತಂತ್ರವಾಗಿ ಎದುರಿಸಲು ತಮಗೆ ಸಾಧ್ಯವಿಲ್ಲ ಎಂಬುದು. ಆದ್ದರಿಂದಲೇ ಅವರು ಮೈತ್ರಿ ಮೊರೆಹೋಗಿದ್ದಾರೆ" ಎಂದಿದೆ.
ಚುನಾವಣೋತ್ತರ ಮೈತ್ರಿ?
ಜಂಟಿ ಸುದ್ದಿಗೋಷ್ಠಿ ನಡೆಸಿ, ಚುನಾವಣಾಪೂರ್ವ ಮೈತ್ರಿ ಘೋಷಿಸುವ ಮೂಲಕ ಮಾಯಾವತಿ ಮತ್ತು ಅಖಿಲೇಶ್ ಕಾಂಗ್ರೆಸ್ ನ ಮಹಾಘಟಬಂಧನದ ಕನಸನ್ನು ನುಚ್ಚುನೂರು ಮಾಡಿದ್ದಾರೆ. ಆದರೆ ಕಾಂಗ್ರೆಸ್ ಜೊತೆ ಇನ್ನುಳಿದ ಮಿತ್ರ ಪಕ್ಷಗಳು ಸೇರಿ ಮಹಾಘಟಬಂಧನ ರಚಿಸಿ, ಉತ್ತಮ ಪ್ರದರ್ಶನ ತೋರಿಸಿದ್ದೇ ಅದಲ್ಲಿ ಚುನಾವಣೋತ್ತರ ಮೈತ್ರಿಗೆ ಮಾಯಾವತಿ ಒಪ್ಪಿದರೆ ಅಚ್ಚರಿಯೇನಿಲ್ಲ. ಆದರೆ ಚುನಾವಣೆಯ ಸಮಯದಲ್ಲಿ ಆಗುವ ನಷ್ಟವನ್ನು ಮುಂದೆ ಸರಿದೂಗಿಸುವುದ ಕಷ್ಟವೇ! ಆದ್ದರಿಂದ ಕಾಂಗ್ರೆಸ್ಸಿಗೆ ಈಗ ತನ್ನ ಎದುರಾಳಿ ಬಿಜೆಪಿಯೋ, ಮಾಯಾವತಿಯೋ ಎಂಬ ಅನುಮಾನ ಎದ್ದರೆ ಅಚ್ಚರಿಯೇನಿಲ್ಲ!
ಕಾಂಗ್ರೆಸ್ಸಿಗೆ ಅಮೇಥಿ, ರಾಯ್ ಬರೇಲಿಯನ್ನು ಭಿಕ್ಷೆ ಕೊಟ್ಟರೆ ಮಾಯಾವತಿ?