ಪ್ರಿಯಾಂಕಾ ಗಾಂಧಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಅಭ್ಯರ್ಥಿ?
Recommended Video
ಲಕ್ನೋ, ಜೂನ್ 13: ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಉತ್ತರ ಪ್ರದೇಶದ ಪೂರ್ವ ಭಾಗದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡು ಅಖಾಡಕ್ಕಿಳಿದು ತೀವ್ರ ಸಂಚಲನ ಮೂಡಿಸಿದ್ದ ಪ್ರಿಯಾಂಕಾ ಗಾಂಧಿ, ಕಾಂಗ್ರೆಸ್ಗೆ ಆಮ್ಲಜನಕ ನೀಡಲಿದ್ದಾರೆ ಎಂಬ ಕೈ ಪಾಳಯದ ನಂಬಿಕೆ ಹುಸಿಯಾಗಿತ್ತು.
ಪ್ರಿಯಾಂಕಾ ಗಾಂಧಿ ಸತತ ಪ್ರಚಾರ ನಡೆಸಿದ್ದರೂ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ತಳವೂರಲು ಸಾಧ್ಯವಾಗಲಿಲ್ಲ. ಮಿಗಿಲಾಗಿ ಅವರ ಸಹೋದರ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರೇ ಅಮೇಥಿ ಕ್ಷೇತ್ರದಲ್ಲಿ ಸೋಲಿನ ಆಘಾತ ಅನುಭವಿಸಿದರು. ಈ ಕಹಿಯ ನಡುವೆಯೂ ಉತ್ತರ ಪ್ರದೇಶದಲ್ಲಿ ಬಿಜೆಪಿಯ ಪ್ರಾಬಲ್ಯವನ್ನು ಅಳಿಸಿ ಮತ್ತೆ ಕಾಂಗ್ರೆಸ್ ಬಾವುಟ ಹಾರಿಸಲು ಪಕ್ಷ ಭರದ ಸಿದ್ಧತೆ ನಡೆಸಿದೆ.
ಮುಂಬರುವ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯ ವೇಳೆ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರವನ್ನು ಉರುಳಿಸಿ ಕಾಂಗ್ರೆಸ್ ಸರ್ಕಾರವನ್ನು ಅಸ್ತಿತ್ವಕ್ಕೆ ತರಲು ಪಕ್ಷ ಬೃಹತ್ ಯೋಜನೆ ರೂಪಿಸಿದೆ. ಈ ಕಾರ್ಯದ ಹೊಣೆಯನ್ನು ಸ್ವತಃ ಪ್ರಿಯಾಂಕಾ ಗಾಂಧಿ ವಹಿಸಿಕೊಳ್ಳಲಿದ್ದಾರೆ. ಕಾಂಗ್ರೆಸ್ಗೆ ಜೀವ ನೀಡಲು ಅವರು ಕೇವಲ ಪ್ರಚಾರ ಮಾತ್ರವಲ್ಲದೆ, ಮುಖ್ಯಮಂತ್ರಿ ಸ್ಥಾನದ ಅಭ್ಯರ್ಥಿಯಾಗಿಯೂ ಬಿಂಬಿಸಿಕೊಳ್ಳಲಿದ್ದಾರೆ ಎಂದು ಮೂಲಗಳು ಹೇಳಿವೆ.
ರಾಹುಲ್ ರಾಜೀನಾಮೆ ನೀಡಿದರೆ ಬಿಜೆಪಿ ಬಲೆಗೆ ಬಿದ್ದಂತಾಗುತ್ತದೆ : ಪ್ರಿಯಾಂಕಾ ವಾದ್ರಾ
ಇತ್ತೀಚಿನ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮುಗ್ಗರಿಸಲು ಕಾರಣಗಳೇನೆಂದು ಅರಿಯಲು ಪ್ರಿಯಾಂಕಾ ಗಾಂಧಿ ಅವರು 'ಕುಟುಂಬದ ಕ್ಷೇತ್ರ' ರಾಯ್ ಬರೇಲಿಯಲ್ಲಿ ಪರಾಮರ್ಶನಾ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ಕಾಂಗ್ರೆಸ್ ಮುಖಂಡರು, 2022ರ ಉತ್ತರ ಪ್ರದೇಶ ಚುನಾವಣೆಯಲ್ಲಿ ಪ್ರಿಯಾಂಕಾ ಗಾಂಧಿ ಅವರೇ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ನಿಲ್ಲಬೇಕೆಂದು ಸಲಹೆ ನೀಡಿದ್ದಾರೆ ಎಂದು ಮಾಧ್ಯಮ ವರದಿ ತಿಳಿಸಿವೆ.
ದುರ್ಬಲ ಸಂಘಟನೆ ಕಾರಣ
ಲೋಕಸಭೆ ಚುನಾವಣೆಯಲ್ಲಿ ದುರ್ಬಲ ಸಂಘಟನೆಯೇ ಕಾಂಗ್ರೆಸ್ನ ಹೀನಾಯ ಸೋಲಿಗೆ ಕಾರಣ ಎಂದು ಪಕ್ಷದ ಮುಖಂಡರು ದೂಷಿಸಿದರು. ಮುಂಬರುವ ಚುನಾವಣೆಯಲ್ಲಿ ಪಕ್ಷ ಏಕಾಂಗಿಯಾಗಿ ಕಣಕ್ಕಿಳಿಯುವುದು ಸೂಕ್ತ ಎಂದು ಅಭಿಪ್ರಾಯಪಟ್ಟರು.
ಉಪ ಚುನಾವಣೆಯಲ್ಲಿ ಪೈಪೋಟಿ
ಲೋಕಸಭೆ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ 80 ಸೀಟುಗಳ ಪೈಕಿ ಕಾಂಗ್ರೆಸ್ ಗೆದ್ದಿರುವುದು ಒಂದೇ ಒಂದು ಕ್ಷೇತ್ರದಲ್ಲಿ. ಅದೂ ಸೋನಿಯಾ ಗಾಂಧಿ ಅವರು ಸ್ಪರ್ಧಿಸಿದ್ದ ರಾಯ್ ಬರೇಲಿಯಲ್ಲಿ. ಉಳಿದಂತೆ ಯಾವ ಕ್ಷೇತ್ರದಲ್ಲಿಯೂ ಕಾಂಗ್ರೆಸ್ ಗೆಲುವು ಕಾಣಲು ಸಾಧ್ಯವಾಗಿಲ್ಲ. 2022ರ ಲೋಕಸಭೆ ಚುನಾವಣೆಯಲ್ಲಿ ಯಾವ ಪಕ್ಷದೊಂದಿಗೂ ಮೈತ್ರಿ ಮಾಡಿಕೊಳ್ಳದೆ ಇದ್ದರೆ ಒಳಿತು. ಅಲ್ಲದೆ, ಶೀಘ್ರದಲ್ಲಿಯೇ ನಡೆಯಲಿರುವ 12 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಪ್ರಬಲ ಪೈಪೋಟಿ ನೀಡಬೇಕು ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು.
ನೀರಿನಿಂದ ಹೊರಬಿದ್ದ ಮೀನಿನಂತಾದ್ರಾ ಪ್ರಿಯಾಂಕಾ 'ಗಾಂಧಿ' ವಾದ್ರಾ?
ಪ್ರಿಯಾಂಕಾಗೆ ಮನವಿ
'ಮುಂಬರುವ ಉಪ ಚುನಾವಣೆ ಮತ್ತು ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಪಕ್ಷವನ್ನು ಬಲಪಡಿಸುವಂತೆ ಪ್ರಿಯಾಂಕಾ ಗಾಂಧಿ ಅವರಿಗೆ ಮನವಿ ಮಾಡಿದ್ದೇವೆ. ಬಿಜೆಪಿಯ ಸವಾಲನ್ನು ಎದುರಿಸಲು ನೀವೇ ಮುಖ್ಯಮಂತ್ರಿ ಅಭ್ಯರ್ಥಿಯಾಗಬೇಕು ಎಂದು ಕೋರಿದ್ದೇವೆ. ಯಾವುದೇ ರಾಜಕೀಯ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳದೆ ಏಕಾಂಗಿಯಾಗಿ ಚುನಾವಣೆ ಎದುರಿಸುವುದು ಸೂಕ್ತ ಎಂಬ ಸಲಹೆ ನೀಡಿದ್ದೇವೆ' ಎಂದು ಕಾಂಗ್ರೆಸ್ ಮುಖಂಡ ರಾಜೇಶ್ ಮಿಶ್ರಾ ತಿಳಿಸಿದರು.
ಮತ್ತೊಂದು ಗುಪ್ತ ಸಭೆ ನಡೆಸಿದ ಪ್ರಿಯಾಂಕಾ
ಪಕ್ಷದ ಎಂಪಿ ಅಭ್ಯರ್ಥಿಗಳು, ಜಿಲ್ಲಾ ಮತ್ತು ನಗರ ಘಟಕಗಳ ಅಧ್ಯಕ್ಷರು ಮತ್ತು ಸಂಚಾಲಕರೊಂದಿಗೆ ಪ್ರಿಯಾಂಕಾ ಗಾಂಧಿ ಪ್ರತ್ಯೇಕವಾಗಿ ಗುಪ್ತ ಸಮಾಲೋಚನೆ ನಡೆಸಿದ್ದಾರೆ. ಮುಖ್ಯಮಂತ್ರಿ ಸ್ಥಾನದ ಅಭ್ಯರ್ಥಿಯಾಗಿ ಚುನಾವಣೆಯ ಎದುರಿಸಬೇಕೆಂಬ ಬೇಡಿಕೆಯ ಕುರಿತು ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ಅವರು ತಮ್ಮ ಬೇಡಿಕೆ ಒಪ್ಪಿಕೊಳ್ಳುತ್ತಾರೆ ಎಂದು ಪಕ್ಷದ ಮುಖಂಡರು ಭರವಸೆ ವ್ಯಕ್ತಪಡಿಸಿದ್ದಾರೆ.
ಚುನಾವಣೆಗಾಗಿಯೇ ಹುಟ್ಟಿದ್ದ ಪ್ರನಾಳ ಶಿಶುವಿನ ಕಥೆ, ಫಲಿತಾಂಶದ ನಂತರ ದುರಂತ ಅಂತ್ಯ!