ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ಸಿಗೆ ಮತ್ತೆ ಮಾಯಾವತಿ ಮಂಗಳಾರತಿ
ಲಕ್ನೋ, ಮಾರ್ಚ್ 18 : ಎತ್ತು ಏರಿಗೆ, ಕೋಣ ನೀರಿಗೆ ಎನ್ನುವ ಹಾಗೆ, ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಜೊತೆಗಿನ 'ಮೈತ್ರಿ'ಯ ಪಕ್ಕೆ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಮತ್ತು ಅವರೊಂದಿಗೆ ಲೋಕ ಮೈತ್ರಿ ಮಾಡಿಕೊಂಡಿರುವ ಬಹುಜನ ಸಮಾಜ ಪಕ್ಷದ ನಾಯಕಿ ಮಾಯಾವತಿ ವಿಭಿನ್ನ ಹೇಳಿಕೆ ನೀಡುತ್ತಲೇ ಇದ್ದಾರೆ.
ಅಖಿಲೇಶ್, ಮಾಯಾವತಿ ಲೋಕ ಚುನಾವಣೆಗೆ ಸ್ಪರ್ಧಿಸಲ್ಲ, ಏಕೆ ಗೊತ್ತೆ?
ಕಾಂಗ್ರೆಸ್ಸನ್ನು ತಮ್ಮ ಸ್ನೇಹಕೂಟದಿಂದ ಹೊರಗೇ ಇಟ್ಟು ಸಾಕಷ್ಟು ಬಾರಿ ರಾಹುಲ್ ಗಾಂಧಿ ಅವರಿಗೆ ಮುಜುಗರ ಉಂಟು ಮಾಡಿರುವ ಮಾಯಾವತಿ ಅವರು, ಕಾಂಗ್ರೆಸ್ ವಿರುದ್ಧ ಬಹಿರಂಗ ಹೇಳಿಕೆ ನೀಡುತ್ತಲೇ ಬಂದಿದ್ದರೆ, ಅಖಿಲೇಶ್ ಅವರು, ಈಗಲಾ ಕಾಂಗ್ರೆಸ್ ಮಹಾಘಟಬಂಧನ್ ದ ಭಾಗವಾಗಿದೆ ಎಂದು ವ್ಯತಿರಿಕ್ತ ಹೇಳಿಕೆ ನೀಡಿದ್ದಾರೆ.
ಬರೋಬ್ಬರಿ 24 ವರ್ಷದ ನಂತರ... ಮುಲಾಯಂ ಪರ ಮಾಯಾವತಿ ಪ್ರಚಾರ
ಈ ಎಲ್ಲ ಊಹಾಪೋಹಗಳ ಬಗ್ಗೆ, ಕಾಂಗ್ರೆಸ್ಸಿನ ಸ್ಟ್ರಾಟಜಿ ಬಗ್ಗೆ, ಮೈತ್ರಿಯ ಸ್ಪಷ್ಟತೆಯ ಬಗ್ಗೆ ಮಾಯಾವತಿ ಅವರು ಮತ್ತೆ ಕೆಂಡ ಕಾರಿದ್ದು, ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಜೊತೆ ಯಾವುದೇ ಮೈತ್ರಿ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
"ಉತ್ತರ ಪ್ರದೇಶದಲ್ಲಿ ಎಲ್ಲ 80 ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಕಾಂಗ್ರೆಸ್ಸಿಗೆ ಸ್ವಾತಂತ್ರ್ಯವಿದೆ. ನಾವು ಸಮಾಜವಾದಿ ಪಕ್ಷದ ಜೊತೆ ಮಾಡಿಕೊಂಡಿರುವ ಮೈತ್ರಿ ಬಿಜೆಪಿಯನ್ನು ಸೋಲಿಸುವಷ್ಟು ಬಲಿಷ್ಠವಾಗಿದೆ. ಆದರೆ, 7 ಕ್ಷೇತ್ರಗಳನ್ನು ಎಸ್ಪಿ, ಬಿಎಸ್ಪಿ ಮತ್ತು ಆರ್ ಎಲ್ ಡಿಗೆ ಬಿಟ್ಟುಕೊಟ್ಟಿರುವಂತೆ ತಪ್ಪು ಕಲ್ಪನೆಯನ್ನು ಕಾಂಗ್ರೆಸ್ ನೀಡುವುದು ಬೇಡ" ಎಂದು ಮಂಗಳಾರತಿ ಮಾಡಿದ್ದಾರೆ.
ಪ್ರಿಯಾಂಕಾ ದಲಿತ ರಾಜಕೀಯಕ್ಕೆ ಕಂಗಾಲಾದ ಮಾಯಾವತಿ, ಅಖಿಲೇಶ್
2014ರ ಲೋಕಸಭೆ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಕೇವಲ 2 ಸೀಟು (ಅಮೇಥಿ ಮತ್ತು ರಾಯ್ ಬರೇಲಿ) ಮಾತ್ರ ಗೆದ್ದಿತ್ತು. ಒಂದೂ ಸೀಟು ಗೆಲ್ಲದ ಮಾಯಾವತಿ ಪಕ್ಷ ಈ ಬಾರಿ ಜಯಭೇರಿ ಬಾರಿಸುವ ನಿರೀಕ್ಷೆಯಲ್ಲಿದೆ. ಕಳೆದ ಚುನಾವಣೆಯಲ್ಲಿ ಕೇವಲ 5 ಸೀಟು ಗೆದ್ದಿದ್ದ ಸಮಾಜವಾದಿ ಪಕ್ಷ ಶೂನ್ಯ ಸಂಪಾದಿಸಿದ್ದ ಮಾಯಾವತಿ ಜೊತೆ ಅರವತ್ತಕ್ಕೂ ಹೆಚ್ಚು ಸೀಟು ಗೆಲ್ಲುವ ವಿಶ್ವಾಸದಲ್ಲಿದೆ.
ಪ್ರಸ್ತುತ, ಉತ್ತರ ಪ್ರದೇಶದಲ್ಲಿ ಏಪ್ರಿಲ್ 11ರಂದು ಒಂದೇ ಹಂತದಲ್ಲಿ 80 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಮತ ಎಣಿಕೆ ಮತ್ತು ಫಲಿತಾಂಶ ಮೇ 23ರಂದು ಪ್ರಕಟವಾಗಲಿದೆ. ಈ ಬಾರಿ ಎಸ್ಪಿ, ಬಿಎಸ್ಪಿ ಮತ್ತು ಆರ್ ಎಲ್ ಡಿ ಮೈತ್ರಿಕೂಟ ಎಷ್ಟು ಸೀಟು ಗೆಲ್ಲಲಿದೆ? ಕಾಂಗ್ರೆಸ್ ಗುರಿ ಎಷ್ಟು? ಬಿಜೆಪಿ ತನ್ನ 71 ಸೀಟುಗಳನ್ನು ಉಳಿಸಿಕೊಳ್ಳುವುದಾ?