ಯುಪಿ ಹಿಂಸಾಚಾರ: ಮೃತ ರೈತರ ಅಂತಿಮ ದರ್ಶನಕ್ಕೆ ಪ್ರಿಯಾಂಕಾ ಗಾಂಧಿ
ಲಕ್ನೋ, ಅಕ್ಟೋಬರ್ 12: ಉತ್ತರ ಪ್ರದೇಶದ ಲಖಿಂಪುರ್ ಖೇರಿಯ ಹಿಂಸಾಚಾರದಲ್ಲಿ ಮೃತಪಟ್ಟ ರೈತರ ಅಂತಿಮ ಪ್ರಾರ್ಥನೆಯಲ್ಲಿ ಭಾಗವಹಿಸಲು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ತೆರಳಲಿದ್ದಾರೆ. ಈ ಹಿನ್ನೆಲೆ ಲಕ್ನೋ-ಸೀತಾಪುರ-ಲಖಿಂಪುರ ಹೆದ್ದಾರಿಯಲ್ಲಿ ಪೊಲೀಸರು ಬ್ಯಾರಿಕೇಡ್ ಹಾಕಿದ್ದು, ಬಿಗಿ ಭದ್ರತೆ ಕೈಗೊಂಡಿದ್ದಾರೆ.
ಇನ್ನೊಂದು ದಿಕ್ಕಿನ ರಾಷ್ಟ್ರೀಯ ಹೆದ್ದಾರಿಯಲ್ಲಿ "ಗೋ ಬ್ಯಾಕ್ ರಾಹುಲ್ ಗಾಂಧಿ, ಗೋ ಬ್ಯಾಕ್ ಪ್ರಿಯಾಂಕಾ ಗಾಂಧಿ ವಾದ್ರಾ" ಎಂಬ ಬ್ಯಾನರ್ ಅನ್ನು ಹಾಕಲಾಗಿದೆ. ಈ ಪೈಕಿ ಕೆಲವು ಬ್ಯಾನರ್ ಗಳಲ್ಲಿ ಅದನ್ನು ಹಾಕಿದವರ ಬಗ್ಗೆ ಉಲ್ಲೇಖಿಸಿದರೆ, ಇನ್ನು ಕೆಲವು ಬ್ಯಾನರ್ ಗಳು ಕಾಂಗ್ರೆಸ್ ನಾಯಕರನ್ನು ಅಣುಕಿಸುವಂತಿದ್ದವು. ಆದರೆ ಅದನ್ನು ಹಾಕಿದವರ ಬಗ್ಗೆ ಎಲ್ಲಿಯೂ ಉಲ್ಲೇಖವಿರಲಿಲ್ಲ. ಕಾಂಗ್ರೆಸ್ ಅನ್ನು ಕುಟುಕುವ ರೀತಿಯಲ್ಲಿದ್ದ ಬ್ಯಾನರ್ ಗಳಲ್ಲಿ "ಜನರು ನಿಮ್ಮ ನಕಲಿ ಸಹಾನುಭೂತಿಯನ್ನು ಬಯಸುವುದಿಲ್ಲ" ಎಂದು ಬರೆಯಲಾಗಿತ್ತು.
ಉತ್ತರ ಪ್ರದೇಶದ ಲಖಿಂಪುರ್ ಜಿಲ್ಲೆ ಕೆಹ್ರಿಯ ಟಿಕೊನಿಯಾ ಗ್ರಾಮದ ಹಿಂಸಾಚಾರ ನಡೆದ ಸ್ಥಳದಿಂದ ದೂರದಲ್ಲಿರುವ ಮೈದಾನದಲ್ಲಿ ಅಂತಿಮ ಪ್ರಾರ್ಥನೆಗೆ ಎಲ್ಲ ರೀತಿಯ ಸಿದ್ಧತೆಗಳು ಮಾಡಿಕೊಳ್ಳಲಾಗುತ್ತಿದೆ. ವಿವಿಧ ರಾಜ್ಯಗಳು ಮತ್ತು ಜಿಲ್ಲೆಗಳಿಂದ ರೈತರು ಮತ್ತು ವಿವಿಧ ರೈತ ಸಂಘಟನೆ ನಾಯಕರು ಈ ಪ್ರಾರ್ಥನೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಅಂತಿಮ ಪ್ರಾರ್ಥನೆಗೆ ರಾಕೇಶ್ ಟಿಕಾಯತ್:
ಉತ್ತರ ಪ್ರದೇಶದ ಲಖೀಂಪುರ್ ಜಿಲ್ಲೆಯ ಖೇರಿ ಗ್ರಾಮದಲ್ಲಿ ನಡೆದ ಹಿಂಸಾಚಾರದಲ್ಲಿ ಪ್ರಾಣಬಿಟ್ಟ ರೈತರ ಅಂತಿಮ ಪ್ರಾರ್ಥನೆಯಲ್ಲಿ ಭಾಗವಹಿಸುವುದಕ್ಕಾಗಿ ಭಾರತೀಯ ಕಿಸಾನ್ ಯೂನಿಯನ್ ಮುಖ್ಯಸ್ಥ ರಾಕೇಶ್ ಟಿಕಾಯತ್ ಅವರು ಟಿಕೊನಿಯಾ ಗ್ರಾಮಕ್ಕೆ ತಲುಪಿದ್ದಾರೆ.
ರಾಜಕಾರಣಿಗಳು ಪ್ರಾರ್ಥನೆಯ ಭಾಗವಾಗುತ್ತಾರೆಯೇ ಎಂಬ ಬಗ್ಗೆ ಭಾರತೀಯ ಕಿಸಾನ್ ಯೂನಿಯನ್ ಜಿಲ್ಲಾ ಉಪಾಧ್ಯಕ್ಷ ಬಾಲ್ಕರ್ ಸಿಂಗ್ ಪ್ರತಿಕ್ರಿಯೆ ನೀಡಿದ್ದಾರೆ. "ಯಾವುದೇ ರಾಜಕೀಯ ನಾಯಕರಿಗೆ ಅವಕಾಶವಿಲ್ಲ, ಸಂಯುಕ್ತ ಕಿಸಾನ್ ಮೋರ್ಚಾ (ಎಸ್ಕೆಎಂ) ನಾಯಕರು ಮಾತ್ರ ಭಾಗವಹಿಸುವ ವೇದಿಕೆಯನ್ನು ಹಂಚಿಕೊಳ್ಳಲಿದ್ದಾರೆ," ಎಂದು ಹೇಳಿದ್ದಾರೆ.
ವಾರದ ಬಳಿಕ ಮತ್ತೆ ಯುಪಿಗೆ ಪ್ರಿಯಾಂಕಾ ಗಾಂಧಿ:
ಕಳೆದ ವಾರ ಮೃತ ರೈತರ ಕುಟುಂಬ ಸದಸ್ಯರನ್ನು ಭೇಟಿ ಮಾಡಲು ತೆರಳಿದ್ದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾರನ್ನು ಪೊಲೀಸರು ಬಂಧಿಸಿದ್ದರು. ನಾಟಕೀಯ ವಿಡಿಯೋಗಳಲ್ಲಿ ಪೊಲೀಸರೊಂದಿಗೆ ವಾಗ್ವಾದಕ್ಕೆ ಇಳಿದಿರುವುದು, ವಾರೆಂಟ್ ಅಥವಾ ಬಂಧನದ ಆದೇಶವಿಲ್ಲದೇ ತಮ್ಮನ್ನು ಹಿಡಿದಿಟ್ಟಿದ್ದರು ಎಂದು ಪೊಲೀಸರ ವಿರುದ್ಧ ಆರೋಪಿಸಿದ್ದರು. ಈ ಘಟನೆ ನಡೆದು ಒಂದು ವಾರದ ಬಳಿಕ ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತೊಮ್ಮೆ ಉತ್ತರ ಪ್ರದೇಶಕ್ಕೆ ಭೇಟಿ ನೀಡಲಿದ್ದಾರೆ.
ಅಕ್ಟೋಬರ್ 12ರಂದು "ಆಂಥಿಮ್ ಅರ್ದಾಸ್":
ಉತ್ತರ ಪ್ರದೇಶದ ಲಖೀಂಪುರ್ ಖೇರ್ ಪ್ರದೇಶದಲ್ಲಿ ನಡೆದ ಹಿಂಸಾಚಾರದಲ್ಲಿ ಪ್ರಾಣ ಬಿಟ್ಟ ನಾಲ್ವರು ರೈತರು ಹಾಗೂ ಒಬ್ಬ ಪತ್ರಕರ್ತ ಸೇರಿದಂತೆ ಎಂಟು ಜನರ ಸ್ಮರಣಾರ್ಥ ಅಕ್ಟೋಬರ್ 12ರಂದು ಆಂಥಿಮ್ ಅರ್ದಾಸ್ ನಡೆಸುವುದಕ್ಕೆ ರೈತ ಮುಖಂಡರಾದ ಬಲ್ಬೀರ್ ಸಿಂಗ್, ಯೋಗೇಂದ್ರ ಯಾದವ್ ಹಾಗೂ ರಾಕೇಶ್ ಟಿಕಾಯತ್ ಕರೆ ನೀಡಿದ್ದರು. ಅಕ್ಟೋಬರ್ 12ರಂದು ಲಖೀಂಪುರ್ ಖೇರಿ ಪ್ರದೇಶಕ್ಕೆ ಆಗಮಿಸುವಂತೆ ತಮ್ಮ ಬೆಂಬಲಿಗರಿಗೆ ಆಹ್ವಾನ ನೀಡಿದ್ದರು. ಒಂದು ವೇಳೆ ಅದು ಸಾಧ್ಯವಾಗದಿದ್ದರೆ ನೀವಿರುವ ಸ್ಥಳಗಳಲ್ಲೇ ಮಂದಿರ, ಮಸೀದಿ ಹಾಗೂ ಚರ್ಚ್ ಗಳಲ್ಲಿ ಮೃತರಿಗಾಗಿ ಪ್ರಾರ್ಥಿಸೋಣ. ಅದೂ ಸಾಧ್ಯವಾಗದಿದ್ದರೆ ಮೃತರ ಸ್ಮರಣೆಯಲ್ಲಿ ಕನಿಷ್ಠ 5 ಮೇಣದಬತ್ತಿಗಳನ್ನು ಹಚ್ಚೋಣ ಎಂದು ಯೋಗೇಂದ್ರ ಯಾದವ್ ಕರೆ ನೀಡಿದ್ದಾರೆ.
ಕೇಂದ್ರ ಸಚಿವರ ಪುತ್ರ ಆಶಿಶ್ ಮಿಶ್ರಾ ಬಂಧನ:
ಕಳೆದ ಅಕ್ಟೋಬರ್ 3ರಂದು ಲಖೀಂಪುರ್ ಜಿಲ್ಲೆಯ ಖೇರಿಯಲ್ಲಿ ಘೋಷಣೆ ಕೂಗಿದ ರೈತರ ಮೇಲೆ ತನ್ನ ಎಸ್ಯುವಿಯನ್ನು ಚಾಲನೆ ಮಾಡಿದ ಆರೋಪದಡಿ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಪುತ್ರ ಆಶಿಶ್ ಮಿಶ್ರಾರನ್ನು ಈಗಾಗಲೇ ಬಂಧಿಸಲಾಗಿದೆ. ಅಂದು ನಡೆದ ಘಟನೆಯಲ್ಲಿ ನಾಲ್ಕು ರೈತರು ಸೇರಿದಂತೆ ಎಂಟು ಜನರು ಸಾವನ್ನಪ್ಪಿದ್ದರು.