ಮೋದಿ ಬೃಹತ್ 'ವಾರಣಾಸಿ ರೋಡ್ ಶೋ': ಕಾಂಗ್ರೆಸ್ ತೀವ್ರ ಅಪಸ್ವರ!
ವಾರಣಾಸಿ, ಏ 26: ನಾಮಪತ್ರ ಸಲ್ಲಿಸುವ ಮುನ್ನ, ಗುರುವಾರ (ಏ 25) ಪ್ರಧಾನಮಂತ್ರಿ ನರೇಂದ್ರ ಮೋದಿ ನಡೆಸಿದ ಬೃಹತ್ ರೋಡ್ ಶೋ ಬಗ್ಗೆ ಕಾಂಗ್ರೆಸ್ ಅಪಸ್ವರ ಎತ್ತಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, 'ದೇಶದ ಅನೇಕ ಭಾಗಗಳಲ್ಲಿ ಭೀಕರ ಬರಗಾಲ ಎದುರಾಗಿದೆ. ಅನ್ನದಾತ ರೈತ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾನೆ. ಆದರೆ, ಸ್ವಯಂಘೋಷಿತ ಕಾವಲುಗಾರ ತಂಪಾಗಿರಬೇಕೆಂದು ಸಾವಿರಾರು ಲೀಟರ್ ನೀರನ್ನು ವ್ಯರ್ಥ ಮಾಡಲಾಗಿದೆ'.
ವಿಷಕಂಠನ ನಾಡಿನಲ್ಲಿ ಮೋದಿ ಬೃಹತ್ ರೋಡ್ ಶೋ ಹಿಂದಿನ ಕಾರಣವೇನು?
'ದೇಶದ ರೈತರು ಇವರ ವಿರುದ್ದ ಮತಗಳನ್ನು ಹಾಕಿ, ಮೋದಿ ಅಹಂಕಾರವನ್ನು ತಣ್ಣಗಾಗಿಸುತ್ತಾರೆ ಎಂದು, ಕಾಂಗ್ರೆಸ್ @IncIndia ಅಕೌಂಟಿನಿಂದ ಟ್ವೀಟ್ ಮಾಡಿದೆ. ಮೋದಿ ರೋಡ್ ಶೋ ನಡೆದ ಸುಮಾರು ಏಳು ಕಿಲೋಮೀಟರ್ ಉದ್ದಕ್ಕೂ,ಸಾವಿರಾರು ಲೀಟರ್ ನೀರನ್ನು ರಸ್ತೆ ಶುದ್ದಿಗೊಳಿಸಲು ಬಳಸಲಾಗಿದೆ ಎನ್ನುವುದು ಕಾಂಗ್ರೆಸ್ ಆರೋಪ.
ಸ್ಥಳೀಯ ಅಧಿಕಾರಿಗಳು, ಮೋದಿ ರೋಡ್ ಶೋ ಸಾಗುವ ರಸ್ತೆಗಳು ಸ್ವಚ್ಚವಾಗಿರಬೇಕು ಎನ್ನುವ ಆದೇಶ ನೀಡಿದ್ದರಿಂದ, ಪೌರಕಾರ್ಮಿಕರು ರಸ್ತೆಯನ್ನು ತೊಳೆದಿದ್ದರು. ವಾರಣಾಸಿ ನಗರ ನಿಗಮ ನಲವತ್ತು ಟ್ಯಾಂಕರ್ ನೀರನ್ನು ಇದಕ್ಕೆ ಬಳಸಿತ್ತು ಮತ್ತು 400 ಕಾರ್ಮಿಕರನ್ನು ಇದಕ್ಕಾಗಿ ನಿಗಮ ಬಳಸಿಕೊಂಡಿತ್ತು ಎಂದು ವರದಿಯಾಗಿದೆ.
देश के कई हिस्सों में किसान सूखे से जूझ रहा है, आत्महत्या करने को मजबूर है। वहीं अपने स्वागत में ठंडक बनाए रखने के लिए स्व-घोषित चौकीदार हजारों लीटर पानी बर्बाद करवा रहा है। देश का किसान वोट की चोट से इनके अहंकार को ठंडा कर देगा।#JaayegaTohModiHi https://t.co/eXDwbBg7Ax
— Congress (@INCIndia) April 26, 2019
ರೋಡ್ ಶೋ ಮಾಡುವವರು ರೋಡ್ ಶೋ ಮಾಡುತ್ತಿರುತ್ತಾರೆ, ಇದರಿಂದ ಉರಿದುಕೊಳ್ಳುವವರು ಉರಿದುಕೊಳ್ಳುತ್ತಲೇ ಇರುತ್ತಾರೆ. ಅರವತ್ತು ವರ್ಷದಿಂದ ಬಡವರ, ರೈತರ ಬಗ್ಗೆ ನಿಮಗಿದ್ದ ಕಾಳಜಿ ಏನು ಎನ್ನುವುದು ಜನತೆಗೆ ಗೊತ್ತಿದೆ ಎನ್ನುವ ಕಾಂಗ್ರೆಸ್ ಕಾಲೆಳೆಯುವ ಟ್ವೀಟುಗಳು ಇದಕ್ಕೆ ಪ್ರತಿಕ್ರಿಯೆ ರೂಪದಲ್ಲಿ ಬಂದಿದೆ.
ನಭೂತೋ ನ ಭವಿಷ್ಯತಿ ಎನ್ನುವ ರೀತಿಯಲ್ಲಿ ದೇಶದ ಅತ್ಯಂತ ಪುರಾತನ ನಗರದಲ್ಲೊಂದ ವಾರಣಾಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಬೃಹತ್ ರೋಡ್ ಶೋ ಗುರುವಾರ ಸಂಜೆಯ ನಂತರ ಆರಂಭವಾಗಿ, ರಾತ್ರಿ ಮುಕ್ತಾಯಗೊಂಡಿತ್ತು. ಏಳು ಲಕ್ಷಕ್ಕೂ ಹೆಚ್ಚು ಜನರು ಈ ರೋಡ್ ಶೋಗೆ ಸಾಕ್ಷಿಯಾಗಿದ್ದರು.