ಬಿಜೆಪಿ ಮುಖಂಡನ ವಿರುದ್ಧ ಅತ್ಯಾಚಾರ ಆರೋಪ: ಪೊಲೀಸ್ ವಿಚಾರಣೆ
ಲಖನೌ, ಸೆಪ್ಟೆಂಬರ್ 12: ಉತ್ತರ ಪ್ರದೇಶದಲ್ಲಿ ಬಿಜೆಪಿ ಶಾಸಕನ ಅತ್ಯಾಚಾರ ಪ್ರಕರಣದ ದೇಶದ ಗಮನ ಸೆಳೆದು ಆರೋಪಿಗೆ ಶಿಕ್ಷೆ ಆಗುವ ಸಮಯ ಸನಿಹವಾಗುತ್ತಿದ್ದ ಈಗ ಮತ್ತೊಬ್ಬ ಬಿಜೆಪಿ ಮಾಜಿ ಕೇಂದ್ರ ಸಚಿವನ ಕಾಮಕಾಂಡ ಬಯಲಾಗಿದೆ.
ಉತ್ತರ ಪ್ರದೇಶ ಬಿಜೆಪಿಯ ಪ್ರಮುಖ ಮುಖಂಡರಲ್ಲಿ ಒಬ್ಬರಾದ ಸ್ವಾಮಿ ಚಿನ್ಮಯಾನಂದ ವಿರುದ್ಧ ಅತ್ಯಾಚಾರ ಹಾಗೂ ಲೈಂಗಿಕ ಶೋಷಣೆ ಪ್ರಕರಣ ದಾಖಲಾಗಿದ್ದು, ಈ ಸಂಬಂಧ ವಿಡಿಯೋ ಒಂದು ಹರಿದಾಡುತ್ತಿದೆ. 2011 ರಲ್ಲಿಯೂ ಚಿನ್ಮಯಾನಂದ ವಿರುದ್ಧ ಲೈಂಗಿಕ ಶೋಷಣೆಯ ದೂರು ದಾಖಲಾಗಿತ್ತು. 2018 ರಲ್ಲಿ ಆ ಪ್ರಕರಣವನ್ನು ರಾಜ್ಯ ಸರ್ಕಾರವು ಅಂತ್ಯಗೊಳಿಸಿತು.
ಕಾನೂನು ಪದವಿ ವಿದ್ಯಾರ್ಥಿಯೊಬ್ಬರು ಕೆಲವು ದಿನಗಳ ಹಿಂದೆ ಸ್ವಾಮಿ ಚಿನ್ಮಯಾನಂದ ವಿರುದ್ಧ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದು, ಪೊಲೀಸ್ ದೂರು ಸಹ ದಾಖಲಾಗಿದೆ. ತನಿಖೆಗೆ ವಿಶೇಷ ಪೊಲೀಸ್ ತಂಡ ರಚಿಸಲಾಗಿದ್ದು, 'ಸ್ವಾಮಿ ಚಿನ್ಮಯಾನಂದ ಅವರನ್ನು ವಿಚಾರಣೆಗೆ ಒಳಪಡಿಸಲಾಗುವುದು' ಎಂದು ವಿಶೇಷ ತನಿಖಾ ತಂಡ ಮಾಹಿತಿ ನೀಡಿದೆ. ಚಿನ್ಮಯಾನಂದ ಅವರನ್ನು ಬಂಧಿಸಲಾಗಿಲ್ಲ.
ಬಿಡುಗಡೆಯಾಗಿರುವ ವಿಡಿಯೋದಲ್ಲಿ ಚಿನ್ಮಯಾನಂದ ಅವರಂತೆಯೇ ಕಾಣುವ ವ್ಯಕ್ತಿಯೊಬ್ಬ ನಗ್ನನಾಗಿ ಯುವತಿಯಿಂದ ಮಸಾಜ್ ಮಾಡಿಸಿಕೊಳ್ಳುತ್ತಿದ್ದಾನೆ. ವಿಡಿಯೋ ಅಸಲಿ ಎಂದು ಹೇಳಲಾಗುತ್ತಿದ್ದು, ಎಫ್ಎಸ್ಎಲ್ ವರದಿ ಬಳಿಕ ಸತ್ಯಾಂಶ ತಿಳಿಯಲಿದೆ.
ಆರೋಪದ ಬಗ್ಗೆ ಪ್ರತಿಕ್ರಿಯಿಸಿರುವ ಸ್ವಾಮಿ ಚಿನ್ಮಯಾನಂದ, 'ಇದು ನನ್ನ ವಿರುದ್ಧ ಮಾಡುತ್ತಿರುವ ಪಿತೂರಿ, ವಿಶೇಷ ಪೊಲೀಸರ ತಂಡ (ಎಸ್ಐಟಿ) ಮೇಲೆ ತಮಗೆ ನಂಬಿಕೆ ಇದ್ದು, ಸತ್ಯಾಂಶ ಹೊರಬೀಳಲಿದೆ' ಎಂದು ಹೇಳಿದ್ದಾರೆ.
ಈ ನಡುವೆ ವಿಶೇಷ ಪೊಲೀಸ್ ತನಿಖಾ ತಂಡವು ಕಾನೂನು ವಿದ್ಯಾರ್ಥಿ ವಿದ್ಯಾರ್ಥಿಯ ಹಾಸ್ಟೆಲ್ನ ರೂಮನ್ನು ಸುಮಾರು ಎಂಟು ಗಂಟೆ ಸಮಯ ಜಾಲಾಡಿ ಹಲವು ಸಾಕ್ಷ್ಯಗಳನ್ನು ವಶಪಡಿಸಿಕೊಂಡಿದ್ದಾರೆ.
ಉನ್ನಾವೊ ಅತ್ಯಾಚಾರ ಪ್ರಕರಣ ಬಿಸಿ ಆರದ ಸಮಯದಲ್ಲೇ ಉತ್ತರ ಪ್ರದೇಶದಲ್ಲಿಯೇ ಬಿಜೆಪಿ ಮುಖಂಡನ ಈ ಕಾಂಡ ಬಯಲಾಗಿದ್ದು, ಉತ್ತರ ಪ್ರದೇಶ ಬಿಜೆಪಿಗೆ ಮತ್ತಷ್ಟು ಪೆಟ್ಟು ನೀಡಿದೆ.