Breaking: ಕೃತಕ ಉಸಿರಾಟದಲ್ಲಿ ಹಾಸ್ಯನಟ ರಾಜು ಶ್ರೀವಾಸ್ತವ
ಲಕ್ನೋ, ಆಗಸ್ಟ್ 11: ಜನಪ್ರಿಯ ಹಾಸ್ಯನಟ ರಾಜು ಶ್ರೀವಾಸ್ತವ ಅವರು ತೀವ್ರ ಹೃದಯಾಘಾತಕ್ಕೆ ಒಳಗಾಗಿದ್ದು, ದೆಹಲಿಯ ಏಮ್ಸ್ನ ತೀವ್ರ ನಿಗಾ ಘಟಕದಲ್ಲಿ (ಐಸಿಯು) ಕೃತಕ ಉಸಿರಾಟದ ವ್ಯವಸ್ಥೆಯಲ್ಲಿ ಇರಿಸಲಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ತೀವ್ರ ಹೃದಯಾಘಾತದಿಂದ ಬಳಲುತ್ತಿರುವ ಹಾಸ್ಯನಟ ರಾಜು ಶ್ರೀವಾಸ್ತವ ಅವರು ಬುಧವಾರ ಆಂಜಿಯೋಪ್ಲ್ಯಾಸ್ಟಿಗೆ ಒಳಗಾಗಿದ್ದರು. ಇದೀಗ ಕೃತಕ ಉಸಿರಾಟದ ವ್ಯವಸ್ಥೆ ಬೆಂಬಲದಲ್ಲಿದ್ದಾರೆ. 58 ವರ್ಷದ ಸ್ಟ್ಯಾಂಡ್-ಅಪ್ ಕಾಮಿಡಿಯನ್ ರಾಜು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ಮೂಲವೊಂದು ಮಾಹಿತಿ ನೀಡಿದೆ.
ರಾಜು ಶ್ರೀವಾಸ್ತವ ಅವರ ಸೋದರ ಸಂಬಂಧಿ ಅಶೋಕ್ ಶ್ರೀವಾಸ್ತವ, "ಬುಧವಾರ ಸಂಜೆ ವ್ಯಾಯಾಮ ಮಾಡುವಾಗ ರಾಜು ಶ್ರೀವಾಸ್ತವ ತೀವ್ರ ಹೃದಯಾಘಾತಕ್ಕೆ ಒಳಗಾಗಿದ್ದರು," ಎಂದು ತಿಳಿಸಿದ್ದಾರೆ.
"ಅವರು ತಮ್ಮ ನಿತ್ಯದ ವ್ಯಾಯಾಮವನ್ನು ಮಾಡುತ್ತಿದ್ದರು. ಟ್ರೆಡ್ಮಿಲ್ನಲ್ಲಿದ್ದಾಗ, ಅವರು ಇದ್ದಕ್ಕಿದ್ದಂತೆ ಕೆಳಗೆ ಬಿದ್ದರು. ಅವರಿಗೆ ಹೃದಯಾಘಾತವಾಗಿತ್ತು, ತಕ್ಷಣ ಅವರನ್ನು ಏಮ್ಸ್ ಆಸ್ಪತ್ರೆಗೆ ಕರೆದೊಯ್ಯಲಾಯಿತು" ಎಂದು ನಟನ ಪತ್ನಿ ಶಿಖಾ ಹೇಳಿದ್ದಾರೆ.
1980 ರ ದಶಕದಿಂದ ಮನರಂಜನಾ ಉದ್ಯಮದಲ್ಲಿ ಸಕ್ರಿಯವಾಗಿರುವ ರಾಜು ಶ್ರೀವಾಸ್ತವ, 2005 ರಲ್ಲಿ ಸ್ಟ್ಯಾಂಡ್-ಅಪ್ ಕಾಮಿಡಿ ಶೋ "ದಿ ಗ್ರೇಟ್ ಇಂಡಿಯನ್ ಲಾಫ್ಟರ್ ಚಾಲೆಂಜ್" ನ ಮೊದಲ ಸೀಸನ್ನಲ್ಲಿ ಭಾಗವಹಿಸಿದ ಬಳಿಕ ಭಾರಿ ಮನ್ನಣೆಯನ್ನು ಪಡೆದ್ದಾರೆ.
ಅವರು "ಮೈನೆ ಪ್ಯಾರ್ ಕಿಯಾ", "ಬಾಜಿಗರ್", "ಬಾಂಬೆ ಟು ಗೋವಾ" (ರೀಮೇಕ್) ಮತ್ತು "ಆಮ್ದಾನಿ ಅಥಾನಿ ಖರ್ಚಾ ರುಪೈಯಾ" ಮುಂತಾದ ಹಿಂದಿ ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ಹಿಂದಿ "ಬಿಗ್ ಬಾಸ್" ಸೀಸನ್ ಮೂರರಲ್ಲಿ ಸ್ಪರ್ಧಿಯಾಗಿದ್ದರು.
Recommended Video
ರಾಜು ಶ್ರೀವಾಸ್ತವ ಅವರು ಉತ್ತರ ಪ್ರದೇಶದ ಚಲನಚಿತ್ರ ಅಭಿವೃದ್ಧಿ ಮಂಡಳಿಯ ಪ್ರಸ್ತುತ ಅಧ್ಯಕ್ಷರಾಗಿದ್ದಾರೆ. ಇನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಇಂದು ರಾಜು ಶ್ರೀವಾಸ್ತವ ಪತ್ನಿಗೆ ಕರೆ ಮಾಡಿ ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡುವ ಭರವಸೆ ನೀಡಿದ್ದಾರೆ.