ಸಿಎಂ ಯೋಗಿ V/S ಕಫೀಲ್ ಖಾನ್: 3 ವರ್ಷಗಳ ನಿರಂತರ ಸಂಘರ್ಷ
ಉತ್ತರ ಪ್ರದೇಶ ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಅಷ್ಟಕ್ಕೂ ಇದಕ್ಕೆ ಕಾರಣವಾಗಿದ್ದು, ಡಾ. ಕಫೀಲ್ ಖಾನ್ ಬರೆದಿರುವ ಒಂದೇ ಒಂದು ಪತ್ರ. 2017ರಲ್ಲಿ ಗೋರಖ್ಪುರ ಆಸ್ಪತ್ರೆಯಲ್ಲಿ ಮಕ್ಕಳ ಸಾವಿನ ಟ್ರ್ಯಾಜಿಡಿ ಬಳಿಕ ದೇಶ-ವಿದೇಶಗಳಲ್ಲಿ ಸುದ್ದಿಯಾಗಿದ್ದ ಡಾ. ಕಫೀಲ್ರನ್ನ ಕಂಡರೆ ಯೋಗಿ ಸರ್ಕಾರ ಉರಿದುಬೀಳುತ್ತಿದೆ ಎಂಬ ಆರೋಪವಿದೆ.
ಇದರ ಭಾಗವಾಗಿ ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ತಂದ ಸಂದರ್ಭದಲ್ಲಿ ನಡೆದ ಪ್ರತಿಭಟನೆ ವೇಳೆ ಡಾ. ಕಫೀಲ್ ಖಾನ್ ಬಂಧನವಾಗಿತ್ತು. ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಡಾ. ಕಫೀಲ್ ಅರೆಸ್ಟ್ ಆಗಿದ್ದರು. ಆದರೆ ಇತ್ತೀಚೆಗೆ ಅಲಹಾಬಾದ್ ಕೋರ್ಟ್ ಡಾ. ಕಫೀಲ್ ಖಾನ್ ಸೇರಿದಂತೆ ಇತರರ ಬಂಧನ ಕಾನೂನು ಬಾಹೀರವೆಂದು ಆದೇಶ ನೀಡಿ ರಿಲೀಸ್ ಮಾಡಿತ್ತು.
ಸಿಎಎ ವಿರೋಧಿ ಭಾಷಣ: ಡಾ. ಕಫೀಲ್ ಖಾನ್ ಬಿಡುಗಡೆಗೆ ಹೈಕೋರ್ಟ್ ಆದೇಶ
ಇದಕ್ಕೂ ಮೊದಲು ಅಂದರೆ ಜೂನ್ 25ರಂದು ವಿಶ್ವಸಂಸ್ಥೆ ಮಾನವ ಹಕ್ಕುಗಳ ವೇದಿಕೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು 11 ಹೋರಾಟಗಾರರ ಮೇಲಿನ ಪ್ರಭುತ್ವ ಹಿಂಸೆ ನಿಲ್ಲಿಸಲು ಒತ್ತಾಯಿಸಿತ್ತು. ಆ ಹೋರಾಟಗಾರರ ಪಟ್ಟಿಯಲ್ಲಿ ಡಾ. ಕಫೀಲ್ ಖಾನ್ ಮತ್ತು ಶಾರ್ಜಲ್ ಇಮಾಮ್ ಹೆಸರು ಕೂಡ ಸೇರಿತ್ತು.
‘ಮಾನವ ಹಕ್ಕುಗಳಿಗೆ ಬೆಲೆ ಇಲ್ಲ’
ಅಂದಹಾಗೆ ತಮ್ಮ ಬಗ್ಗೆ ಕಾಳಜಿ ತೋರಿಸಿ, ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಸಮಿತಿ ಬರೆದಿದ್ದ ಪತ್ರಕ್ಕೆ ಪ್ರತ್ಯುತ್ತರವಾಗಿ ಪತ್ರ ರವಾನಿಸಿರುವ ಡಾ. ಕಫೀಲ್ ಖಾನ್, ಉತ್ತರಪ್ರದೇಶದಲ್ಲಿ ಮಾನವ ಹಕ್ಕುಗಳಿಗೆ ಬೆಲೆಯೇ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಭಾರತದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆಗುತ್ತಿದ್ದು, ಭಿನ್ನಮತೀಯರನ್ನು ಹತ್ತಿಕ್ಕಲು ಕಠಿಣ ಕಾಯ್ದೆಗಳನ್ನ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
3 ವರ್ಷಗಳ ನಿರಂತರ ಸಂಘರ್ಷ
ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಮತ್ತು ಡಾ. ಕಫೀಲ್ ಖಾನ್ ಮಧ್ಯೆ ನಡೆಯುತ್ತಿರುವ ಯುದ್ಧ ಇಂದು, ನಿನ್ನೆಯದಲ್ಲ. ಬರೋಬ್ಬರಿ 3 ವರ್ಷಗಳಿಂದಲೂ ಡಾ. ಕಫೀಲ್ ಖಾನ್ ಯೋಗಿ ಸರ್ಕಾರದ ವಿರುದ್ಧ ತಿರುಗಿಬಿದ್ದಿದ್ದಾರೆ. 2017ರಲ್ಲಿ ಗೋರಖ್ಪುರ ಆಸ್ಪತ್ರೆಯಲ್ಲಿ ಆಕ್ಸಿಜೆನ್ ಕೊರತೆಯಿಂದಾಗಿ ನೂರಾರು ಮಕ್ಕಳು ಸಾವನ್ನಪ್ಪುತ್ತಿದ್ದಾಗ ಇದೇ ಡಾ. ಕಫೀಲ್ ತಮ್ಮ ಕ್ಲಿನಿಕ್ನಿಂದ ಆಕ್ಸಿಜೆನ್ ತಂದು ಮಕ್ಕಳಿಗೆ ಚಿಕಿತ್ಸೆ ನೀಡಿದ್ದರು. ಆದರೆ ಡಾ. ಕಫೀಲ್ ಆಕ್ಸಿಜೆನ್ ಸಿಲಿಂಡರ್ಗಳನ್ನು ಆಸ್ಪತ್ರೆಯಿಂದ ಅಕ್ರಮವಾಗಿ ತಮ್ಮ ಕ್ಲಿನಿಕ್ಗೆ ಸಾಗಿಸಿದ್ದರು. ನಂತರ ಅದನ್ನ ಮರಳಿ ಆಸ್ಪತ್ರೆಗೆ ನೀಡಿದ್ದರು ಎಂಬ ಆರೋಪ ಕೇಳಿಬಂದಿತ್ತು. ಈ ಬಗ್ಗೆ ಡಾ. ಕಫೀಲ್ ವಿರುದ್ಧ ಕೇಸ್ ದಾಖಲಾಗಿ ತನಿಖೆ ಕೂಡ ನಡೆದಿತ್ತು. ಆದರೆ ತನಿಖೆಯಲ್ಲಿ ಡಾ. ಕಫೀಲ್ ತಪ್ಪು ಮಾಡಿಲ್ಲ ಎಂಬುದು ಸಾಬೀತಾಗಿತ್ತು. ಇದಾದ ಬಳಿಕ ಸಿಎಂ ಯೋಗಿ ಮತ್ತು ಕಫೀಲ್ ನಡುವಿನ ತಿಕ್ಕಾಟ ಮತ್ತಷ್ಟು ಹೆಚ್ಚಾಗಿತ್ತು.
2 ಬಾರಿ ಅರೆಸ್ಟ್ ಆಗಿದ್ದ ಡಾ. ಕಫೀಲ್
2 ಎರಡು ಬಾರಿ ಉತ್ತರ ಪ್ರದೇಶ ಪೊಲೀಸರಿಂದ ಬಂಧಿತರಾಗಿ, ಸರಿಯಾದ ಸಾಕ್ಷ್ಯಾಧಾರ ಸಿಗದ ಹಿನ್ನೆಲೆ ರಿಲೀಸ್ ಆಗಿರುವ ಮಕ್ಕಳ ತಜ್ಞ ಡಾ. ಕಫೀಲ್ ಪತ್ರದಲ್ಲಿ ಗಂಭೀರ ಆರೋಪಗಳನ್ನೇ ಮಾಡಿದ್ದಾರೆ. ಡಾ. ಕಫೀಲ್ ವಿಶ್ವಸಂಸ್ಥೆಗೆ ಬರೆದಿರುವ ಪತ್ರದಲ್ಲಿ ಹೇಳಿರುವಂತೆ, ತಮ್ಮ ವಿರುದ್ಧ ಯುಪಿ ಸಿಎಂ ರಾಜಕೀಯ ಹಗೆತನ ಸಾಧಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಅಲ್ಲದೆ ಭಾರತದಲ್ಲಿ ದುರ್ಬಲ ವರ್ಗಗಳ ಪರವಾಗಿ ಹೋರಾಡುವವರನ್ನೇ ಟಾರ್ಗೆಟ್ ಮಾಡಲಾಗುತ್ತಿದೆ ಎಂದಿದ್ದಾರೆ.
Recommended Video
ಈವರೆಗೂ 8 ತನಿಖೆಗಳು ನಡೆದಿವೆ..!
ಡಾ. ಕಫೀಲ್ ಖಾನ್ ವಿರುದ್ಧ ಇದುವರೆಗೂ 8 ಪ್ರತ್ಯೇಕ ತನಿಖೆಗಳು ನಡೆದಿವೆ. ಇದನ್ನೂ ಕೂಡ ಪತ್ರದಲ್ಲಿ ಉಲ್ಲೇಖಿಸಿರುವ ಡಾ. ಕಫೀಲ್ ಖಾನ್. ಈ ಎಲ್ಲಾ ತನಿಖೆಗಳಲ್ಲೂ ನಾನು ತಪ್ಪು ಮಾಡಿಲ್ಲ ಎಂಬುದು ಸಾಬೀತಾಗಿದೆ, ಆದರೆ ಯುಪಿ ಸರ್ಕಾರ ನನ್ನ ವಿರುದ್ಧದ ಅಮಾನತು ಹಿಂಪಡೆದಿಲ್ಲ ಎಂದಿದ್ದಾರೆ. ವೈದ್ಯನಾಗಿ ನಾನು ಸೇವೆಗೆ ಮರಳಲು ಸಿದ್ದನಿದ್ದೇನೆ, ಅಮಾನತ್ತು ಹಿಂಪಡೆಯಬೇಕು ಎಂದು ಡಾ. ಕಫೀಲ್ ತಮ್ಮ ಪತ್ರದಲ್ಲಿ ಮನವಿ ಮಾಡಿದ್ದಾರೆ. ಸದ್ಯ ಯುಪಿ ತೊರಿದಿರುವ ಡಾ. ಕಫೀಲ್ ರಾಜಸ್ಥಾನದಲ್ಲಿ ವಾಸವಿದ್ದಾರೆ.