ಸಿಎಂ ಯೋಗಿ, ಬಾಬಾ ರಾಮ್ದೇವ್ ಪುಸ್ತಕಗಳು ಯುಪಿ ವಿವಿಗಳ ತತ್ವಶಾಸ್ತ್ರ ವಿದ್ಯಾರ್ಥಿಗಳ ಪಠ್ಯ
ಲಕ್ನೋ, ಜೂ. 02: ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಯೋಗ ಗುರು ಬಾಬಾ ರಾಮದೇವ್ ಬರೆದ ಪುಸ್ತಕಗಳು ಈಗ ಉತ್ತರ ಪ್ರದೇಶದ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳಲ್ಲಿ ತತ್ವಶಾಸ್ತ್ರವನ್ನು (ಫಿಲಾಸಫಿ) ಅಧ್ಯಯನ ಮಾಡುವ ಪದವಿಪೂರ್ವ ವಿದ್ಯಾರ್ಥಿಗಳಿಗೆ ತಮ್ಮ ಕೋರ್ಸ್ನ ಒಂದು ಭಾಗವಾಗಲಿದೆ.
ಉತ್ತರ ಪ್ರದೇಶ ರಾಜ್ಯಾದ್ಯಂತ ವಿಶ್ವವಿದ್ಯಾಲಯಗಳಲ್ಲಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅನುಷ್ಠಾನಗೊಳಿಸುವ ಸಮಿತಿಯ ಶಿಫಾರಸಿನ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗಿದೆ.
ಕೋವಿಡ್ ಕೇರ್ ಸೆಂಟರ್ನಲ್ಲಿ ಸೋಂಕಿತರ ಯೋಗಭ್ಯಾಸ
ಮೀರತ್ನಲ್ಲಿ ರಾಜ್ಯ ಸರ್ಕಾರದ ಅಧೀನದಲ್ಲಿರುವ ವಿಶ್ವವಿದ್ಯಾಲಯವಾದ ಚೌಧರಿ ಚರಣ್ ಸಿಂಗ್ ವಿಶ್ವವಿದ್ಯಾಲಯ (ಸಿಸಿಎಸ್ಯು) ಈಗಾಗಲೇ ಆದಿತ್ಯನಾಥ್ ಮತ್ತು ರಾಮದೇವ್ ಪುಸ್ತಕಗಳನ್ನು ತನ್ನ ಪಠ್ಯಕ್ರಮದಲ್ಲಿ ಅಳವಡಿಸಿಕೊಂಡಿದೆ ಎಂದು ವರದಿಯಾಗಿದೆ.
ಎರಡನೇ ಸೆಮಿಸ್ಟರ್ ಪದವಿಪೂರ್ವ ತತ್ವಶಾಸ್ತ್ರ ಪಠ್ಯಕ್ರಮದ ಭಾಗವಾಗಿ ಸಿಎಂ ಯೋಗಿ ಆದಿತ್ಯನಾಥ್ರ ಪುಸ್ತಕ, 'ಹತ್ಯೋಗ ಕಾ ಸ್ವರೂಪ್ ವಾ ಸಾಧನಾ' ಮತ್ತು ಬಾಬಾ ರಾಮದೇವ್ರ ಪುಸ್ತಕ 'ಯೋಗ ಸಾಧನಾ ವಾ ಯೋಗ ಚಿಕಿತಾ ರಹಸ್ಯ' ಪಠ್ಯಕ್ರಮದಲ್ಲಿ ಒಳಗೊಂಡಿದೆ.
ಎರಡು ಪುಸ್ತಕಗಳನ್ನು ವಿಶ್ವವಿದ್ಯಾನಿಲಯಗಳು ಮತ್ತು ಅದರ ಅಂಗಸಂಸ್ಥೆಯಾದ ಕಾಲೇಜುಗಳಲ್ಲಿನ ತತ್ವಶಾಸ್ತ್ರ ವಿದ್ಯಾರ್ಥಿಗಳಿಗೆ ಓದಲು ಶಿಫಾರಸು ಮಾಡುವಂತೆ ಸೂಚಿಸಲಾಗಿದೆ.
ಮೈಸೂರನ್ನು ಯೋಗ ನಗರಿಯಾಗಿಸಲು ಜಿಎಸ್ಎಸ್ ಪಣ!
''ಈ ಎರಡು ಪುಸ್ತಕಗಳು ಉನ್ನತ ಸಾಹಿತ್ಯಿಕ ಮೌಲ್ಯ ಹೊಂದಿರುವ ಕಾರಣ ಪಠ್ಯಕ್ಕೆ ಆಯ್ಕೆ ಮಾಡಲಾಗಿದೆ. ಎಲ್ಲಾ ಪುಸ್ತಕಗಳು ಉನ್ನತ ಶೈಕ್ಷಣಿಕ ಮತ್ತು ಸಾಹಿತ್ಯಿಕ ಮೌಲ್ಯದ ಆಧಾರದಲ್ಲಿ ಆಯ್ಕೆಮಾಡಲಾಗಿದೆ'' ಎಂದು ಪಠ್ಯಕ್ರಮ ಅಭಿವೃದ್ಧಿ ಸಮಿತಿಯ ಸದಸ್ಯರು ಹೇಳಿದ್ದಾರೆ.
ರಾಷ್ಟ್ರೀಯ ಶಿಕ್ಷಣ ನೀತಿ 2020 ಕ್ಕೆ ಅನುಗುಣವಾಗಿ ಎಲ್ಲಾ ರಾಜ್ಯ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳಿಗೆ ಸಾಮಾನ್ಯ ಕನಿಷ್ಠ ಪಠ್ಯಕ್ರಮ ಅಳವಡಿಸಲು ರಾಜ್ಯ ಸರ್ಕಾರವು ಈ ಸಮಿತಿಯನ್ನು ರಚಿಸಿದೆ. ಈ ಸಮಿತಿಯು ಕಲೆ, ಸಾಹಿತ್ಯ, ಮಾನವಿಕತೆ ಮತ್ತು ವಿಜ್ಞಾನ ಸೇರಿದಂತೆ ಎಲ್ಲಾ ವಿಷಯಗಳಿಗೆ ಪಠ್ಯಕ್ರಮವನ್ನು ಸೂಚಿಸಿದೆ.
ಈ ಸಮಿತಿಯಲ್ಲಿ ಉನ್ನತ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮೋನಿಕಾ ಎಸ್ ಗರ್ಗ್, ಲಕ್ನೋ ವಿಶ್ವವಿದ್ಯಾಲಯದ ಭೌತಶಾಸ್ತ್ರ ವಿಭಾಗದ ಪ್ರೊಫೆಸರ್ ಪೂನಮ್ ಟಂಡನ್, ಮೀರತ್ನ ಸಿಸಿಎಸ್ ವಿಶ್ವವಿದ್ಯಾಲಯದ ಪ್ರೊಫೆಸರ್ ಹರೇ ಕೃಷ್ಣ ಇತರರು ಇದ್ದಾರೆ ಎಂದು ವರದಿ ತಿಳಿಸಿದೆ.
''ಈ ಎರಡು ಪುಸ್ತಕಗಳು ಉನ್ನತ ಶೈಕ್ಷಣಿಕ ಮೌಲ್ಯ ಹೊಂದಿದೆ. ಸಿಎಂ ಯೋಗಿ ಬರೆದ ಪುಸ್ತಕವು ಯೋಗದ ಪ್ರಾಯೋಗಿಕ ಅಂಶವನ್ನು ಕಲಿಸುತ್ತದೆ. ನಮ್ಮ ಪ್ರಾಚೀನ ವಿಜ್ಞಾನವಾದ ಯೋಗದ ಬಗ್ಗೆ ತಿಳಿಯಲು ನಮಗೆ ಈ ರೀತಿಯ ಸಾಹಿತ್ಯ ಬೇಕು. ಅದೇ ರೀತಿ, ರಾಮದೇವ್ ಅವರ ಪುಸ್ತಕವು ಫಿಲಾಸಫಿ ವಿದ್ಯಾರ್ಥಿಗಳಿಗೆ ಉತ್ತಮವಾದ ಪಠ್ಯ. ಏಕೆಂದರೆ ರಾಮದೇವ್ ಯೋಗಗುರು, ಯೋಗವನ್ನು ಜನಸಾಮಾನ್ಯರಿಗೆ ಕೊಂಡೊಯ್ದವರು ರಾಮ್ದೇವ್'' ಎಂದು ಚೌಧರಿ ಚರಣ್ ಸಿಂಗ್ ವಿಶ್ವವಿದ್ಯಾಲಯದ ಅಧ್ಯಯನ ಮಂಡಳಿಯ ಕನ್ವೀನರ್ ಡಿ.ಎನ್. ಸಿಂಗ್ ಹೇಳಿದ್ದಾರೆ.
ಪ್ರಾಚೀನ ಸಾಂಸ್ಕೃತಿಕ ಪರಂಪರೆ ಮತ್ತು ತತ್ವಶಾಸ್ತ್ರವನ್ನು ವಿದ್ಯಾರ್ಥಿಗಳಿಗೆ ಕಲಿಸಲು ಪುಸ್ತಕಗಳನ್ನು ಪಠ್ಯಕ್ರಮದಲ್ಲಿ ಸೇರಿಸಲಾಗಿದೆ ಎಂದು ವಿಶ್ವವಿದ್ಯಾಲಯದ ಕಲಾ ವಿಭಾಗದ ಮುಖ್ಯಸ್ಥರು ತಿಳಿಸಿದ್ದಾರೆ.
(ಒನ್ಇಂಡಿಯಾ ಸುದ್ದಿ)