1 ಕೋಟಿಗಾಗಿ 6ನೇ ತರಗತಿ ಬಾಲಕನನ್ನು ಅಪಹರಿಸಿ ಹತ್ಯೆಗೈದ ದುಷ್ಕರ್ಮಿಗಳು
ಗೋರಖ್ಪುರ, ಜುಲೈ 27: ಮೋಸ್ಟ್ ವಾಂಟೆಡ್ ರೌಡಿ ಶೀಟರ್ಗಳ ಎನ್ಕೌಂಟರ್, ನಡುರಸ್ತೆಯಲ್ಲಿ ಪತ್ರಕರ್ತನ ಹತ್ಯೆ ಅಂತಹ ಪ್ರಕರಣಗಳ ಮೂಲಕ ರಾಷ್ಟ್ರೀಯ ಮಟ್ಟದಲ್ಲಿ ಸಂಚಲನ ಸೃಷ್ಟಿಸಿರುವ ಉತ್ತರ ಪ್ರದೇಶದಲ್ಲಿ ಮತ್ತೊಂದು ದುರ್ಘಟನೆ ನಡೆದಿದೆ.
ಆರನೇ ತರಗತಿ ಓದುತ್ತಿದ್ದ 14 ವರ್ಷದ ವಿದ್ಯಾರ್ಥಿಯನ್ನು ದುಷ್ಕರ್ಮಿಗಳು ಅಪಹರಣ ಮಾಡಿ ಕೊಲೆ ಮಾಡಿರುವ ಘಟನೆ ಗೋರಖ್ಪುರದಲ್ಲಿ ವರದಿಯಾಗಿದೆ.
ಸಂಜೀತ್ ಯಾದವ್ ಅಪಹರಣ,ಕೊಲೆ ಕೇಸ್: ನಾಲ್ವರು ಪೊಲೀಸರ ಅಮಾನತು
ಮಗುವನ್ನು ಅಪಹರಿಸಿದ್ದ ದುಷ್ಕರ್ಮಿಗಳು ಒಂದು ಕೋಟಿ ಹಣ ನೀಡುವಂತೆ ಬೇಡಿಕೆಯಿಟ್ಟಿದ್ದರು. ಬಳಿಕ, ಪೋಷಕರಿಗೆ ಪ್ರತಿಕ್ರಿಯೆ ಬಾರದ ಕಾರಣ ಮಗುವನ್ನು ಕೊಂದು ಗೋರಖ್ಪುರದ ಕಾಲುವೆ ಬಳಿ ಎಸೆದಿದ್ದಾರೆ ಎಂದು ತಿಳಿದು ಬಂದಿದೆ.
ಕಿರಾಣಿ ಮತ್ತು 'ಪಾನ್' ಅಂಗಡಿ ಮಾಲೀಕರ 14 ವರ್ಷದ ಮಗನನ್ನು ಪಿಪ್ರೈಚ್ ಪ್ರದೇಶದಿಂದ ಭಾನುವಾರ ಅಪಹರಿಸಲಾಗಿದೆ. ಭಾನುವಾರ ಮಧ್ಯಾಹ್ನ ಹದಿಹರೆಯದವರನ್ನು ಅಪಹರಿಸಲಾಗಿದ್ದು, ಕುಟುಂಬಕ್ಕೆ ಒಂದು ಕೋಟಿ ನೀಡುವಂತೆ ಕರೆ ಕೂಡ ಬಂದಿತ್ತು.
'ಭಾನುವಾರ ಮಧ್ಯಾಹ್ನ ಊಟ ಮಾಡಿದ ನಂತರ, ನನ್ನ ಮಗ ಆಟವಾಡಲು ಹೊರಗೆ ಹೋಗಿದ್ದ. ಸಂಜೆ ನನಗೆ ಅಪರಿಚಿತ ಸಂಖ್ಯೆಯಿಂದ ದೂರವಾಣಿ ಕರೆ ಬಂತು. ನನ್ನ ಮಗನನ್ನು ಬಿಡಲು 1 ಕೋಟಿ ನೀಡುವಂತೆ ಕೇಳಿದರು. ಈ ವಿಷಯವನ್ನು ತಕ್ಷಣವೇ ಪೊಲೀಸರಿಗೆ ತಿಳಿಸಿದೆ.' ಎಂದು ತಂದೆ ಪಿಟಿಐಗೆ ತಿಳಿಸಿದ್ದಾರೆ.
ಗೋರಖ್ಪುರದ ಎಸ್ಎಸ್ಪಿ ಸುನೀಲ್ ಕುಮಾರ್ ಗುಪ್ತಾ ಮಾಹಿತಿ ಪಡೆದ ಕೂಡಲೇ ಪೊಲೀಸರು ಕ್ರಮ ಕೈಗೊಂಡು ಅಪಹರಣಕಾರರನ್ನು ಭಾನುವಾರ ರಾತ್ರಿಯಲ್ಲಿಯೇ ಬಂಧಿಸಿದ್ದಾರೆ. ಬಳಿಕ, ಅಪಹರಣಕಾರರನ್ನು ವಿಚಾರಣೆಗೆ ಒಳಪಡಿಸಿದ ವೇಳೆ ಕಿಡ್ನಾಪ್ ಮಾಡಿದ ಕೂಡಲೇ ಬಾಲಕನನ್ನು ಕೊಂದಿರುವುದು ಬೆಳಕಿಗೆ ಬಂದಿದೆ. ನಂತರ ಅಪಹರಣಕಾರರು ನೀಡಿದ ಮಾಹಿತಿಯ ಮೇರೆಗೆ ಬಾಲಕನ ಶವವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎಸ್ಎಸ್ಪಿ ತಿಳಿಸಿದೆ.