ಯುಪಿ ಚುನಾವಣೆಗೆ ಕೆಲವೇ ತಿಂಗಳು ಇರುವಾಗ ಯೋಗಿ ಸಚಿವ ಸಂಪುಟ ವಿಸ್ತರಣೆ
ಲಕ್ನೋ, ಸೆಪ್ಟೆಂಬರ್ 26: ತನ್ನ ಸಚಿವ ಸಂಪುಟವನ್ನು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭಾನುವಾರ ವಿಸ್ತರಣೆ ಮಾಡಿದ್ದಾರೆ. ಬಿಜೆಪಿಯ ಉತ್ತರ ಪ್ರದೇಶದ ಸರ್ಕಾರದಲ್ಲಿ ಮಾಜಿ ಕಾಂಗ್ರೆಸ್ ನಾಯಕ ಜಿತಿನ್ ಪ್ರಸಾದ್ ಈ ಸಚಿವ ಸಂಪುಟದಲ್ಲಿ ಹೊಸ ಮುಖವಾಗಿದೆ.
ವಿಧಾನಸಭೆ ಚುನಾವಣೆಗೆ ಇನ್ನೇನು ಕೆಲವೇ ತಿಂಗಳುಗಳು ಇರುವಾಗ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತನ್ನ ಸಚಿವ ಸಂಪುಟದ ವಿಸ್ತರಣೆ ಮಾಡಿದ್ದಾರೆ. ಈ ನೂತನ ಸಚಿವರುಗಳನ್ನು ಮುಂದಿನ ಚುನಾವಣೆಯ ದೃಷ್ಟಿಯಿಂದಲೇ ಸಚಿವರನ್ನಾಗಿಸಲಾಗಿದೆ ಎಂಬ ಮಾತುಗಳು ಕೂಡಾ ಕೇಳಿ ಬಂದಿದೆ. ಈ ಮೂಲಕ ಬಿಜೆಪಿ ತನ್ನ ಕಾರ್ಯ ತಂತ್ರ ರೂಪಿಸಿದೆ ಎನ್ನಲಾಗಿದೆ.
ಯುಪಿಯಲ್ಲಿ ಬ್ರಾಹ್ಮಣರ ಮತಕ್ಕೆ ಬಲೆ: ವಿಪಕ್ಷದ ಓಲೈಕೆ, ಬಿಜೆಪಿಯಿಂದ ಉಳಿಸಿಕೊಳ್ಳುವ ಪ್ರಯತ್ನ
ಮಾಜಿ ಕಾಂಗ್ರೆಸ್ ನಾಯಕ ಜಿತಿನ್ ಪ್ರಸಾದ್, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯ ಆಪ್ತರಾಗಿದ್ದರು. ಹಾಗೆಯೇ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷದ ಉನ್ನತ ಹುದ್ದೆಯಲ್ಲಿ ಇರುವ ಬ್ರಾಹ್ಮಣ ಸಮುದಾಯದ ವ್ಯಕ್ತಿಯಾಗಿದ್ದರು. ಜೂನ್ನಲ್ಲಿ ಕಾಂಗ್ರೆಸ್ ಅನ್ನು ತೊರೆದು ಜಿತಿನ್ ಪ್ರಸಾದ್ ಬಿಜೆಪಿಗೆ ಸೇರ್ಪಡೆ ಆಗಿದ್ದಾರೆ.
ಉತ್ತರ ಪ್ರದೇಶದ ಸುಮಾರು ಶೇಕಡ 13 ರಷ್ಟು ಮತದಾರರು ಬ್ರಾಹ್ಮಣ ಸಮುದಾಯಕ್ಕೆ ಸೇರಿದವರು ಆಗಿದ್ದಾರೆ. ಹಾಗಿರುವಾಗ ಕಾಂಗ್ರೆಸ್ನ ಈ ಬ್ರಾಹ್ಮಣ ಸಮುದಾಯದ ನಾಯಕ ಬಿಜೆಪಿಗೆ ಸೇರ್ಪಡೆಯಾದಾಗ ಕಾಂಗ್ರೆಸ್ಗೆ ಚುನಾವಣೆಯಲ್ಲಿ ಭಾರೀ ಹೊಡೆತ ಬಿದ್ದಿತ್ತು. ಈ ನಡುವೆ ಮುಂದಿನ ಚುನಾವಣೆಯಲ್ಲಿ ಉತ್ತರ ಪ್ರದೇಶ ರಾಜ್ಯದಲ್ಲಿ ಬ್ರಾಹ್ಮಣರ ಮತಕ್ಕಾಗಿ ಹಲವಾರು ಪಕ್ಷಗಳು ಬಲೆ ಬೀಸಿದೆ.
ಎಲ್ಲಾ ಪಕ್ಷಗಳು ಶೇಕಡ 13 ರಷ್ಟು ಮತದಾರರು ಇರುವ ಬ್ರಾಹ್ಮಣ ಸಮುದಾಯದತ್ತ ಮುಖ ಮಾಡಿದ್ದು, ಬಿಎಸ್ಪಿ, ಎಸ್ಪಿ ಬ್ರಾಹ್ಮಣ ಸಮುದಾಯದ ಜನರನ್ನು ಸೇರಿಸಿ ಕಾರ್ಯಕ್ರಮಗಳನ್ನು ನಡೆಸಿದೆ. ಈ ನಡುವೆ ಬಿಜೆಪಿಯು ಉತ್ತರ ಪ್ರದೇಶದ ಪ್ರಭಾವಿ ಬ್ರಾಹ್ಮಣ ನಾಯಕ ಜಿತಿನ್ ಪ್ರಸಾದ್ಗೆ ಸಚಿವ ಸ್ಥಾನ ನೀಡುವ ಮೂಲಕ ಬ್ರಾಹ್ಮಣರ ಮತವನ್ನು ತನ್ನತ್ತ ಸೆಳೆಯುವ ಕಾರ್ಯತಂತ್ರ ರೂಪಿಸಿದೆ. ಕಳೆದ ವರ್ಷದ ಜುಲೈ ತಿಂಗಳಿನಲ್ಲಿ ಜಿತಿನ್ ಪ್ರಸಾದ್, ಬ್ರಾಹ್ಮಣ ಜೇತನ ಪರಿಷದ್ ಸ್ಥಾಪನೆ ಮಾಡಿದ್ದಾರೆ. ಆದರೆ ಇದು ಅಷ್ಟೊಂದು ಪ್ರಭಾವವನ್ನು ಬೀರಿರಲಿಲ್ಲ. ಈಗ ಬಿಜೆಪಿ ಹೊಸ ಕಾರ್ಯತಂತ್ರವನ್ನು ಮಾಡಿದೆ.
ಇನ್ನು ಜಿತಿನ್ ಪ್ರಸಾದ್ ಮಾತ್ರವಲ್ಲದೇ, ಬರೇಲಿಯ ಬಹೇದಿ ಕ್ಷೇತ್ರದ ಚತ್ರಪಾಲ್ ಗಂಗಾವರ್, ಆಗ್ರಾದ ಎಮ್ಎಲ್ಸಿ ಧರ್ಮವೀರ ಪ್ರಜಾಪತಿ, ಗಾಜಿಯಪುರ ಸಾದಾರ್ನ ಡಾ. ಸಂಗೀತ ಬಲವಂತ್ ಬಿಂದ್ಗೆ ಸಚಿವ ಸ್ಥಾನವನ್ನು ಉತ್ತರ ಪ್ರದೇಶ ಸರ್ಕಾರದಲ್ಲಿ ನೀಡಲಾಗಿದೆ. ಈ ಮೂವರು ಕೂಡಾ ಹಿಂದುಳಿದ ವರ್ಗಕ್ಕೆ ಸೇರಿದವರು ಆಗಿದ್ದಾರೆ.
ಯುಪಿ ಚುನಾವಣೆ: ನಿಷಾದ್, ಅಪ್ನಾದಳ ಪಕ್ಷದೊಂದಿಗೆ ಬಿಜೆಪಿ ಮೈತ್ರಿ, ಯೋಗಿ-ಮೋದಿ ನೇತೃತ್ವದಲ್ಲಿ ಸ್ಪರ್ಧೆ
ಹಾಗೆಯೇ ಹಸ್ತಿನಾಪುರ ಶಾಸಕ ದಿನೇಶ್ ಖತೀಕ್, ಪೂರ್ವ ಯುಪಿಯ ಸೋನಭದ್ರಾದಲ್ಲಿ ಓಬ್ರಾದಿಂದ ಮೊದಲ ಬಾರಿಗೆ ಶಾಸಕರಾದ ಸಂಜೀವ್ ಕುಮಾರ್, ಬಲರಾಂಪುರ ಸದರ್ನಿಂದ ಮೊದಲ ಬಾರಿಗೆ ಶಾಸಕರಾದ ಪಾಲ್ತು ರಾಮ್ಗೆ ಕೂಡಾ ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಲಾಗಿದೆ. ಈ ಪೈಕಿ ಬಲರಾಂಪುರ ಸದರ್ನಿಂದ ಮೊದಲ ಬಾರಿಗೆ ಶಾಸಕರಾದ ಪಾಲ್ತು ರಾಮ್ ಈ ಹಿಂದೆ ಬಿಎಸ್ಪಿಯಲ್ಲಿ ಇದ್ದು, ಸುಮಾರು ಎರಡು ದಶಕಗಳ ರಾಜಕೀಯ ಜೀವನದ ಅನುಭವ ಹೊಂದಿದ್ದಾರೆ. ಇನ್ನು ಈ ಪೈಕಿ ಹಸ್ತಿನಾಪುರ ಶಾಸಕ ದಿನೇಶ್ ಖತೀಕ್ ಹಾಗೂ ಪಾಲ್ತು ರಾಮ್ ಪರಿಶಿಷ್ಟ ಜಾತಿಯವರು ಆಗಿದ್ದಾರೆ, ಸಂಜೀವ್ ಕುಮಾರ್ ಪರಿಶಿಷ್ಟ ಪಂಗಡದವರು ಆಗಿದ್ದಾರೆ.
ಇನ್ನು ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಸರ್ಕಾರ ಮಾಡಿರುವ ಸಚಿವ ಸಂಪುಟ ವಿಸ್ತರಣೆಯನ್ನು ಸಮಾಜವಾದಿ ಪಕ್ಷದ ನಾಯಕ ಹಾಗೂ ಮಾಜಿ ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಟೀಕಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅಖಿಲೇಶ್ ಯಾದವ್, "ಇದು ವಂಚನೆ" ಎಂದು ಹೇಳಿದ್ದಾರೆ. "ಬಿಜೆಪಿ ಚುನಾವಣೆಗೆ ಕೆಲವೇ ತಿಂಗಳುಗಳು ಇರುವಾಗ ಹಿಂದುಳಿದ ವರ್ಗದವರನ್ನು ಸಂಪುಟಕ್ಕೆ ಸೇರಿಸಿಕೊಂಡು ಆ ಸಮುದಾಯವನ್ನು ಸೆಳೆಯುವ ಯತ್ನ ಮಾಡಿದೆ," ಎಂದು ಆರೋಪಿಸಿದ್ದಾರೆ.
"ಉತ್ತರ ಪ್ರದೇಶದಲ್ಲಿ ಬಿಜೆಪಿ ಸರ್ಕಾರ ಮಾಡಿರುವ ಸಂಪುಟ ವಿಸ್ತರಣೆಯು ವಂಚನೆಯಾಗಿದೆ. ನಾಲ್ಕುವರೆ ವರ್ಷ ಸಂಪುಟದಲ್ಲಿ ಯಾರು ಇರಲಿಲ್ಲವೋ ಅವರನ್ನು ಈಗ ಸಚಿವ ಸಂಪುಟದಲ್ಲಿ ಸೇರಿಸಿಕೊಂಡು ಬಿಜೆಪಿ ನಾಟಕ ಮಾಡುತ್ತಿದೆ. ಈ ಸಚಿವ ಸಂಪುಟಕ್ಕೆ ಸೇರ್ಪಡೆಯಾದವರು ತಮ್ಮ ನಾಮಫಲಕವನ್ನು ತಮ್ಮ ಕಚೇರಿಯಲ್ಲಿ ಇರಿಸುವುದರೊಳಗೆ ಮುಂದಿನ ಚುನಾವಣೆಯ ನೀತಿ ಸಂಹಿತೆ ಜಾರಿಗೆ ಬರಲಿದೆ," ಎಂದು ಹೇಳಿದ್ದಾರೆ.
(ಒನ್ಇಂಡಿಯಾ ಸುದ್ದಿ)