ಕಲ್ಯಾಣ್ ಸಿಂಗ್ ರನ್ನು ಕೋರ್ಟ್ ಮುಂದೆ ಹಾಜರು ಪಡಿಸಲು ಸಿಬಿಐ ಅರ್ಜಿ
ಲಖನೌ, ಸೆಪ್ಟೆಂಬರ್ 9: ಬಾಬ್ರಿ ಮಸೀದಿ ಧ್ವಂಸ ಪ್ರಕರಣದಲ್ಲಿ ರಾಜಸ್ಥಾನದ ಮಾಜಿ ರಾಜ್ಯಪಾಲ ಕಲ್ಯಾಣ್ ಸಿಂಗ್ ರನ್ನು ಕೋರ್ಟ್ ಮುಂದೆ ಹಾಜರು ಪಡಿಸಲು ಆದೇಶ ನೀಡಬೇಕು ಎಂದು ಸೋಮವಾರ ಕೇಂದ್ರೀಯ ತನಿಖಾ ದಳದಿಂದ (ಸಿಬಿಐ) ಸಿಬಿಐ ವಿಶೇಷ ಕೋರ್ಟ್ ಗೆ(ಅಯೋಧ್ಯಾ ಪ್ರಕರಣ) ಅರ್ಜಿ ಸಲ್ಲಿಸಲಾಗಿದೆ.
ಆದರೆ, ಜಿಲ್ಲಾ ನ್ಯಾಯಾಧೀಶ ಹಾಗೂ ಸಿಬಿಐ ವಿಶೇಷ ನ್ಯಾಯಾಧೀಶ (ಅಯೋಧ್ಯಾ ಪ್ರಕರಣ) ಎಸ್. ಕೆ. ಯಾದವ್ ಅವರು, ಕಲ್ಯಾಣ್ ಸಿಂಗ್ ರಾಜಸ್ಥಾನದ ರಾಜ್ಯಪಾಲರಲ್ಲ ಹಾಗೂ ಅವರು ಯಾವುದೇ ಸಾಂವಿಧಾನಿಕ ಹುದ್ದೆ ಹೊಂದಿಲ್ಲ ಎಂಬುದಕ್ಕೆ ಲಿಖಿತ ದಾಖಲೆ ಒದಗಿಸುವಂತೆ ಸಿಬಿಐಗೆ ನಿರ್ದೇಶಿಸಿದರು. ಸೆಪ್ಟೆಂಬರ್ ಹನ್ನೊಂದನೇ ತಾರೀಕಿಗೆ ವಿಚಾರಣೆಯನ್ನು ಮುಂದೂಡಿದರು.
ಸೆಪ್ಟೆಂಬರ್ ಮೂರನೇ ತಾರೀಕಿನ ತನಕ ಕಲ್ಯಾಣ್ ಸಿಂಗ್ ರಾಜಸ್ಥಾನದ ರಾಜ್ಯಪಾಲರಾಗಿದ್ದರು. ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ಕ್ರಿಮಿನಲ್ ವಿಚಾರಣೆಯಿಂದ ಅವರಿಗೆ ವಿನಾಯಿತಿ ಇತ್ತು. ತಮ್ಮ ಅವಧಿ ಪೂರೈಸಿದ ಕಲ್ಯಾಣ್ ಸಿಂಗ್ ತಮ್ಮ ಹುದ್ದೆಯಿಂದ ನಿರ್ಗಮಿಸಿ, ಕಲ್ ರಾಜ್ ಮಿಶ್ರಾ ಅವರಿಗೆ ಅಧಿಕಾರ ಹಸ್ತಾಂತರಿಸಿದ್ದಾರೆ. ಸೋಮವಾರದಂದು ಲಖನೌ ತಲುಪಿದ್ದಾರೆ.
ಬಾಬ್ರಿ ಮಸೀದಿ ಪ್ರಕರಣದಲ್ಲಿ ಎರಡು ವರ್ಷದೊಳಗೆ ತೀರ್ಪು ನೀಡುವಂತೆ ಸುಪ್ರೀಂ ಕೋರ್ಟ್ ಅವಕಾಶ ನೀಡಿತ್ತು. ಈ ಪ್ರಕರಣದಲ್ಲಿ ಬಿಜೆಪಿ ನಾಯಕರಾದ ಎಲ್. ಕೆ. ಅಡ್ವಾಣಿ, ಮುರಳಿ ಮನೋಹರ್ ಜೋಶಿ, ಉಮಾ ಭಾರತಿ ಮತ್ತಿತರರು ಇದ್ದಾರೆ. ಕಳೆ ಜುಲೈನಲ್ಲಿ ಮತ್ತೆ ಒಂಬತ್ತು ತಿಂಗಳ ಗಡುವು ವಿಸ್ತರಿಸಿ, ಸಿಬಿಐ ಕೋರ್ಟ್ ಗೆ ಕಾಲಾವಕಾಶ ನೀಡಿತ್ತು.