ಹತ್ರಾಸ್ ಅತ್ಯಾಚಾರ ಕೇಸ್: ಆರೋಪಿ ಮನೆಯಲ್ಲಿ ಸಿಬಿಐಗೆ ಸಿಕ್ಕ ರಕ್ತಸಿಕ್ತ ಅಂಗಿ!
ಲಕ್ನೋ, ಅಕ್ಟೋಬರ್.17: ಉತ್ತರ ಪ್ರದೇಶ ಹತ್ರಾಸ್ ನಲ್ಲಿ 19 ವರ್ಷದ ಯುವತಿ ಸಾಮೂಹಿಕ ಅತ್ಯಾಚಾರ ಆರೋಪ ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿರುವ ಕೇಂದ್ರ ತನಿಖಾ ತಂಡದ ಅಧಿಕಾರಿಗಳಿಗೆ ಆರೋಪಿ ಮನೆಯಲ್ಲಿ ಸಿಕ್ಕ ಅಂಗಿ(ಶರ್ಟ್)ಯೊಂದು ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ.
ನಾಲ್ವರು ಆರೋಪಿಗಳ ಪೈಕಿ ಲವಕುಶ್ ಸಿಕರ್ವಾರ್ ಮನೆಯಲ್ಲಿ ಪರಿಶೀಲನೆ ನಡೆಸಿದ ಸಿಬಿಐ ಅಧಿಕಾರಿಗಳಿಗೆ ಕೆಂಪು ಕಲೆಗಳಿರುವ ಶರ್ಟ್ ವೊಂದು ಸಿಕ್ಕಿದೆ. ಅಂಗಿಯಲ್ಲಿ ಮೂಡಿದ್ದ ಕಲೆಗಳು ರಕ್ತವೇ ಎಂದು ಹೇಳಲಾಗುತ್ತಿದ್ದು, ಆರೋಪಿಯ ಕುಟುಂಬ ಸದಸ್ಯರು ಇದನ್ನು ನಿರಾಕರಿಸಿದ್ದಾರೆ.
ಆ ಫೋಟೊ ಹತ್ರಾಸ್ ಸಂತ್ರಸ್ತೆಯದ್ದಲ್ಲ ನನ್ನ ಪತ್ನಿಯದ್ದು: ಹೈಕೋರ್ಟ್ ಮೆಟ್ಟಿಲೇರಿದ ವ್ಯಕ್ತಿ
ಶರ್ಟ್ ನಲ್ಲಿದ್ದ ಕೆಂಪು ಕಲೆಗಳು ಬಣ್ಣದ ಕಲೆ ಎಂದು ಆರೋಪಿ ಕುಟುಂಬದ ಸದಸ್ಯರು ವಾದಿಸುತ್ತಿದ್ದಾರೆ. ಆರೋಪಿ ಲವಕುಶ್ ಸಿಕರ್ವಾರ್ ಅವರ ಸಹೋದರ ಪೇಂಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದು, ಶರ್ಟ್ ಮೇಲೆ ಬಿದ್ದಿರುವುದು ಕೆಂಪು ಬಣ್ಣದ ಕಲೆಗಳು ಎಂದು ಹೇಳುತ್ತಿದ್ದಾರೆ.
ಅನುಮಾನ ಹುಟ್ಟಿಸಿದೆ ಕೆಂಪು ಬಣ್ಣದ ಶರ್ಟ್
ಹತ್ರಾಸ್ ಅತ್ಯಾಚಾರ ಪ್ರಕರಣದಲ್ಲಿ ಆರೋಪಿ ಎಂದು ಗುರುತಿಸಿಕೊಂಡಿರುವ ಲವಕುಶ್ ಸಿಕರ್ವಾರ್ ಮನೆಯಲ್ಲಿ ಸಿಕ್ಕ ಶರ್ಟ್ ನಲ್ಲಿನ ಕಲೆಗಳು ರಕ್ತವೇ ಆಗಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ಈ ಹಿನ್ನೆಲೆ ಕೆಂಪು ಕಲೆಗಳನ್ನು ಹೊಂದಿರುವ ಶರ್ಟ್ ನ್ನು ಪರೀಕ್ಷೆಗೊಳಪಡಿಸಲು, ಕೇಂದ್ರ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿ ಕೊಡಲಾಗಿದೆ.
ಆರೋಪಿ ಮನೆಯಲ್ಲಿ ಎರಡು ಗಂಟೆ ಶೋಧ
ಕಳೆದ ಗುರುವಾರದಿಂದ ನಾಲ್ವರು ಆರೋಪಿಗಳ ಮನೆಗಳಿಗೆ ಸಿಬಿಐ ಅಧಿಕಾರಿಗಳು ಭೇಟಿ ನೀಡುತ್ತಿದ್ದಾರೆ. ಆರೋಪಿ ಲವಕುಶ್ ಸಿಕರ್ವಾರ್ ಮನೆಯಲ್ಲಿ ಶೋಧ ಕಾರ್ಯಾಚರಣೆ ನಡೆಸಿದ ಸಿಬಿಐ ಅಧಿಕಾರಿಗಳಿಗೆ ಕೆಂಪು ಕಲೆಗಳಿರುವ ಶರ್ಟ್ ವೊಂದು ಹೊರತಾಗಿ ಯಾವುದೇ ರೀತಿ ಸಾಕ್ಷ್ಯಗಳು ಲಭ್ಯವಾಗಿಲ್ಲ. ಇನ್ನು, ಆರೋಪಿ ಮನೆಗೆ ತೆರಳಿದ ಸಂದರ್ಭದಲ್ಲಿ ಆರೋಪಿ ಸಂಬಂಧಿಕರನ್ನು ಸಿಬಿಐ ಅಧಿಕಾರಿಗಳು ವಿಚಾರಣೆಗೊಳಪಡಿಸಿದ್ದರು.
ಎಲ್ಲ ದಾಖಲೆಗಳನ್ನು ಸಂಗ್ರಹಿಸಿದ ಸಿಬಿಐ ಅಧಿಕಾರಿಗಳು
ಹತ್ರಾಸ್ ಅತ್ಯಾಚಾರ ಪ್ರಕರಣವನ್ನು ಕೈಗೆತ್ತಿಕೊಂಡ ನಾಲ್ಕು ದಿನಗಳಲ್ಲೇ ಸಿಬಿಐ ಅಧಿಕಾರಿಗಳು ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ಮಹತ್ವದ ದಾಖಲೆಗಳನ್ನು ಸಂಗ್ರಹಿಸಿದೆ. ಮಂಗಳವಾರ ಬೂಲಘರ್ಹಿ ಗ್ರಾಮಕ್ಕೆ ಭೇಟಿ ನೀಡಿದ್ದ ಸಿಬಿಐ ಪೊಲೀಸರು ಮತ್ತು ಉತ್ತರ ಪ್ರದೇಶ ಸರ್ಕಾರವು ರಚಿಸಿದ್ದ ವಿಶೇಷ ತನಿಖಾ ತಂಡದ ಅಧಿಕಾರಿಗಳಿಂದ ಹತ್ರಾಸ್ ಪ್ರಕರಣದ ತನಿಖಾ ವರದಿ ಮತ್ತು ಸಂಬಂಧಪಟ್ಟ ದಾಖಲೆಗಳನ್ನು ಸಂಗ್ರಹಿಸಿತ್ತು. ಸಂತ್ರಸ್ತೆ ಗ್ರಾಮದಲ್ಲಿ ಆರು ಗಂಟೆಗಳ ಕಾಲ ಶೋಧ ಕಾರ್ಯ ನಡೆಸಿದ ಸಿಬಿಐ ತಂಡವು, ಘಟನಾ ಸ್ಥಳ, ಮತ್ತು ಪೊಲೀಸರು ಸಂತ್ರಸ್ತೆಯ ಅಂತ್ಯಸಂಸ್ಕಾರ ನೆರವೇರಿಸಿದ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿತ್ತು.
ಸಿಬಿಐ ತನಿಖೆ ಶುರುವಾಗುವುದಕ್ಕೂ ಮೊದಲು ಆಗಿದ್ದೇನು?
ಕಳೆದ ಸಪ್ಟೆಂಬರ್.14ರಂದು ಉತ್ತರ ಪ್ರದೇಶದ ಹತ್ರಾಸ್ ನಲ್ಲಿ ಹುಲ್ಲು ಕತ್ತರಿಸುತ್ತಿದ್ದ ಯುವತಿಯನ್ನು ಠಾಕೂರ್ ಸಮುದಾಯದ ನಾಲ್ವರು ದುಷ್ಕರ್ಮಿಗಳು ಅಪಹರಿಸಿ ಅತ್ಯಾಚಾರ ನಡೆಸಿದ್ದರು ಎಂದು ಆರೋಪಿಸಲಾಗಿದೆ. ಅಲ್ಲದೇ, ಯುವತಿ ಕತ್ತು ಹಿಸುಕಿ, ನಾಲಗೆ ಕತ್ತರಿಸುವ ಮೂಲಕ ಕ್ರೌರ್ಯ ಮೆರೆದಿದ್ದರು. ಎರಡು ವಾರ ಸಾವು ಬದುಕಿನ ನಡುವೆ ಹೋರಾಟ ನಡೆಸಿದ ಯುವತಿ ಸಪ್ಟೆಂಬರ್.29ರಂದು ದೆಹಲಿಯ ಸಫ್ದರ್ ಜಂಗ್ ಆಸ್ಪತ್ರೆದಲ್ಲಿ ಕೊನೆಯುಸಿರೆಳೆದಿದ್ದಳು. ಸಪ್ಟೆಂಬರ್.30ರ ಮಧ್ಯರಾತ್ರಿ 2.30ರ ಸಂದರ್ಭದಲ್ಲಿ ಪೊಲೀಸರೇ ಯುವತಿಯ ಅಂತ್ಯ ಸಂಸ್ಕಾರವನ್ನು ನೆರವೇರಿಸಿದ್ದರು.
ಹತ್ರಾಸ್ ಅತ್ಯಾಚಾರ ಪ್ರಕರಣದ ಬಗ್ಗೆ ಸುಪ್ರೀಂಕೋರ್ಟ್ ನ್ಯಾಯಾಂಗ ತನಿಖೆ ನಡೆಸುವ ಒತ್ತಾಯ ಕೇಳಿ ಬಂದಿತ್ತು. ಈ ಹಿನ್ನೆಲೆ ಸಿಎಂ ಯೋಗಿ ಆದಿತ್ಯನಾಥ್ ಪ್ರಕರಣವನ್ನು ಸಿಬಿಐಗೆ ವಹಿಸಿದ್ದರು. ಉತ್ತರ ಪ್ರದೇಶ ಸರ್ಕಾರದ ಮನವಿ ಬಗ್ಗೆ ಅಧಿಸೂಚನೆ ನೀಡುತ್ತಿದ್ದಂತೆ ಸಿಬಿಐ ಅಧಿಕಾರಿಗಳು ಐಪಿಸಿ ಸೆಕ್ಷನ್ 307 ಅಡಿ ಅತ್ಯಾಚಾರ, 307 ಅಡಿ ಕೊಲೆ ಯತ್ನ, 302 ಅಡಿ ಕೊಲೆ ಆರೋಪದಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಶುರು ಮಾಡಿದ್ದರು.