ಮತ್ತೆ ಬ್ರಾಹ್ಮಣ ಮತಗಳನ್ನು ಸೆಳೆಯಲು ಮುಂದಾದ ಬಿಎಸ್ಪಿ
ನವದೆಹಲಿ, ಅಕ್ಟೋಬರ್ 12 : ಬಹುಜನ ಸಮಾಜ ಪಕ್ಷ ನವರಾತ್ರಿ ಬಳಿಕ ಉತ್ತರ ಪ್ರದೇಶದಲ್ಲಿ ಪಕ್ಷ ಸಂಘಟನೆ ಕಡೆ ಗಂಭೀರವಾಗಿ ಗಮನಹರಿಸಲಿದೆ. ಬ್ರಾಹ್ಮಣ ಸಮುದಾಯದ ಮತಗಳನ್ನು ಮತ್ತೆ ಸೆಳೆಯಲು ಪಕ್ಷ ಕಾರ್ಯತಂತ್ರವನ್ನು ರೂಪಿಸುತ್ತಿದೆ. ಇದಕ್ಕಾಗಿ ಸರಣಿ ಸಭೆಗಳನ್ನು ನಡೆಸಲಿದೆ.
2007ರಲ್ಲಿ ಬಿಎಸ್ಪಿ ಬ್ರಾಹ್ಮಣ ಮತಗಳನ್ನು ಸೆಳೆದಿತ್ತು. ಇದೇ ಮಾದರಿಯನ್ನು ಪುನಃ ಬಳಕೆ ಮಾಡಲು ಮುಂದಾಗಿದೆ. ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸತೀಶ್ ಮಿಶ್ರಾ ಅವರನ್ನು ಈ ಕಾರ್ಯಕ್ಕೆ ನಿಯೋಜನೆ ಮಾಡಲಾಗಿದೆ. ಮತಗಳನ್ನು ಪುನಃ ಪಡೆಯುವುದು ಹೇಗೆ? ಎಂದು ಅವರು ಪರಾಮರ್ಶೆ ನಡೆಸಲಿದ್ದಾರೆ.
8,000 ಬಡ ಬ್ರಾಹ್ಮಣ ಪುರೋಹಿತರಿಗೆ ಉಚಿತ ವಸತಿ, ತಿಂಗಳಿಗೆ 1,000 ರೂ. ಭತ್ಯೆ: ಮಮತಾ ಬ್ಯಾನರ್ಜಿ
ಬಿಎಸ್ಪಿ ನವರಾತ್ರಿ ಬಳಿಕ ಉತ್ತರ ಪ್ರದೇಶದ ಪ್ರತಿ ಜಿಲ್ಲೆಯಲ್ಲಿಯೂ ಪಕ್ಷದ ಬ್ರಾಹ್ಮಣ ಸಮುದಾಯದ ಕಾರ್ಯಕರ್ತರ ಸಭೆಗಳನ್ನು ನಡೆಸಲಿದೆ. ಸತೀಶ್ ಮಿಶ್ರಾ ಪಕ್ಷದ ಪ್ರಮುಖ ಹುದ್ದೆಯಲ್ಲಿರುವ ಬ್ರಾಹ್ಮಣ ಸಮುದಾಯದ ನಾಯಕರ ಸಭೆಗಳನ್ನು ಈಗಾಗಲೇ ನಡೆಸುತ್ತಿದ್ದಾರೆ.
ಪ್ರತಿ ಜಿಲ್ಲೆಯಲ್ಲಿರುವ ಪಕ್ಷದ ಬ್ರಾಹ್ಮಣ ಸಮುದಾಯದ ಕಾರ್ಯಕರ್ತರ ಪಟ್ಟಿಯನ್ನು ತಯಾರು ಮಾಡಲಾಗುತ್ತಿದೆ. ಈ ಕಾರ್ಯಕರ್ತರಿಗೆ ಜಿಲ್ಲಾ ಮಟ್ಟದಲ್ಲಿ ತಮ್ಮ ಸಮಯದಾಯದ ಜನರನ್ನು ಭೇಟಿ ಮಾಡಿ ಮಾತುಕತೆ ನಡೆಸುವ ಜವಾಬ್ದಾರಿಯನ್ನು ನೀಡಲಾಗುತ್ತದೆ.
ಬಿಜೆಪಿ ವಿರುದ್ಧ ಬ್ರಾಹ್ಮಣ ಸಮುದಾಯ ಗರಂ, ಏನು ಮುಂದಿನ ನಡೆ?
ಕೇಂದ್ರ ಗೃಹ ಇಲಾಖೆ ಅಕ್ಟೋಬರ್ 15ರ ಬಳಿಕ ಚಿಕ್ಕ-ಚಿಕ್ಕ ಸಭೆ, ಸಮಾರಂಭಗಳನ್ನು ನಡೆಸಲು ಈಗಾಗಲೇ ಅನುಮತಿ ನೀಡಿದೆ. ಇದನ್ನು ಬಳಕೆ ಮಾಡಿಕೊಂಡು ಪ್ರತಿ ಜಿಲ್ಲೆಯಲ್ಲಿಯೂ ಸಭೆಗಳನ್ನು ನಡೆಸಲಾಗುತ್ತದೆ. ಈ ಎಲ್ಲಾ ಸಭೆಗಳನ್ನು ನಡೆಸಲು ಸತೀಶ್ ಮಿಶ್ರಾ ನೇತೃತ್ವದಲ್ಲಿ ತಂಡವೊಂದನ್ನು ರಚನೆ ಮಾಡಲಾಗಿದೆ.
ನಕುಲ್ ದುಬೆ, ಪರೇಶ್ ಮಿಶ್ರಾ, ಅನಂತ್ ಮಿಶ್ರಾ, ರಂಗನಾಥ್ ಮಿಶ್ರಾ ಮುಂತಾದ ನಾಯಕರು ಈ ತಂಡದಲ್ಲಿದ್ದಾರೆ. ಈ ತಂಡ ಜಿಲ್ಲೆಗಳಲ್ಲಿ ಸಭೆ ಸಂಘಟನೆ ಮಾಡುವ ಕಾರ್ಯವನ್ನು ಮಾಡಲಿದೆ. ಪಕ್ಷದಲ್ಲಿ ಈಗಾಗಲೇ ಹಲವು ಬ್ರಾಹ್ಮಣ ಸಮುದಾಯದ ನಾಯಕರು ಕೇಂದ್ರ ಮತ್ತು ಆಗ್ನೇಯ ಉತ್ತರ ಪ್ರದೇಶ ಭಾಗದಲ್ಲಿ ಸಕ್ರಿಯರಾಗಿ ಕೆಲಸ ಮಾಡುತ್ತಿದ್ದಾರೆ.
'ಸ್ಪೀಕರ್ ಓಂ ಬಿರ್ಲಾ, ಬ್ರಾಹ್ಮಣ ಅನ್ನೋ ಕಾರಣಕ್ಕೆ ನಿಮಗೆ ಗೌರವ ನೀಡುತ್ತಿಲ್ಲ'
ಉತ್ತರ ಪ್ರದೇಶದ ಪಶ್ಚಿಮ ಭಾಗದಲ್ಲಿ ಬ್ರಾಹ್ಮಣ ಸಮುದಾಯದ ಪ್ರಬಲ ನಾಯಕರು ಇಲ್ಲ. ಪಕ್ಷ ಅಲ್ಲಿ ಪಕ್ಷ ಸಂಘಟನೆಗೆ ಸೂಕ್ತ ವ್ಯಕ್ತಿಗಾಗಿ ಹುಡುಕಾಟವನ್ನು ನಡೆಸುತ್ತಿದೆ. 2007ರಲ್ಲಿ ಬ್ರಾಹ್ಮಣ ಸಮುದಾಯದ ಮತಗಳಿಂದ ಪಕ್ಷಕ್ಕೆ ಸಾಕಷ್ಟು ಬೆಂಬಲ ಸಿಕ್ಕಿತ್ತು, ಅದನ್ನು ಮರಳಿ ಪಡೆಯಲು ತಂತ್ರ ರೂಪಿಸಲಾಗುತ್ತಿದೆ.
ಅಸಮಾಧಾನದ ಲಾಭ? : ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಸರ್ಕಾರವಿದೆ. ಬಿಜೆಪಿ ಸರ್ಕಾರದ ವಿರುದ್ಧ ಬ್ರಾಹ್ಮಣ ಸಮುದಾಯ ಅಸಮಾಧಾನಗೊಂಡಿದೆ. ಈ ಅಸಮಾಧಾನವನ್ನು ಉಪಯೋಗಿಸಿಕೊಂಡು ಪಕ್ಷವನ್ನು ಕಟ್ಟುವ ಚಿಂತನೆಯಲ್ಲಿ ಬಿಎಸ್ಪಿ ಇದೆ.
"ಕಾಂಗ್ರೆಸ್ ಅಥವ ಸಮಾಜವಾದಿ ಪಕ್ಷ ಬ್ರಾಹ್ಮಣ ಸಮುದಾಯದ ಧ್ವನಿಯಾಗಲು ಸಾಧ್ಯವಿಲ್ಲ. ಸಮುದಾಯಕ್ಕೆ ಈಗಲೂ ಮಾಯಾವತಿ ಅವರ ಮೇಲೆ ಅಪಾರವಾದ ಭರವಸೆ ಇದೆ. 2007ರ ಚುನಾವಣೆಯಲ್ಲಿಯೇ ಬ್ರಾಹ್ಮಣ ಸಮಯದಾಯದ ಬೆಂಬಲದಿಂದ ನಾವು ಸರ್ಕಾರ ರಚನೆ ಮಾಡಿದ್ದೆವು" ಎಂದು ಪಕ್ಷದ ನಾಯಕರೊಬ್ಬರು ಹೇಳಿದ್ದಾರೆ.
2007ರಲ್ಲಿ ಬಿಎಸ್ಪಿ ಬ್ರಾಹ್ಮಣ ಪ್ಲಸ್ ದಲಿತ ಪ್ಲಸ್ ಮುಸ್ಲಿಂ ತಂತ್ರಗಾರಿಕೆಯನ್ನು ಚುನಾವಣೆಯಲ್ಲಿ ಬಳಸಿತ್ತು. ಪಕ್ಷ ಚುನಾವಣೆಯಲ್ಲಿ ಸ್ಪಷ್ಟ ಬಹುಮತವನ್ನು ಪಡೆದಿತ್ತು. ಸ್ವತಂತ್ರವಾಗಿ ಸರ್ಕಾರವನ್ನು ರಚನೆ ಮಾಡಿತ್ತು. ಚುನಾವಣೆಯಲ್ಲಿ 86 ಬ್ರಾಹ್ಮಣ ಸಮುದಾಯದ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗಿತ್ತು. ಬಳಿಕ ಸಮುದಾಯ ಬಿಜೆಪಿ ಕಡೆಗೆ ವಾಲಿದೆ.
ಈ ವರ್ಷದ ಜುಲೈನಲ್ಲಿ ನಡೆದ ವಿಕಾಸ್ ದುಬೆ ಎನ್ಕೌಂಟರ್ ರಾಜ್ಯದ ರಾಜಕೀಯ ಚಿತ್ರಣವನ್ನು ಬದಲಾವಣೆ ಮಾಡಿದೆ. ಬ್ರಾಹ್ಮಣ ಸಮುದಾಯ ಯೋಗಿ ಆದಿತ್ಯನಾಥ್ ಸರ್ಕಾರವನ್ನು ಪ್ರಶ್ನೆ ಮಾಡಿದೆ. ಬ್ರಾಹ್ಮಣ ಮತ್ತು ಠಾಕೂರ್ ಸಮುದಾಯಗಳ ಅಸ್ತಿತ್ವದ ಪ್ರಶ್ನೆಗಳು ಹುಟ್ಟಿಕೊಂಡಿವೆ.
"ಕಳೆದ 2 ವರ್ಷಗಳಲ್ಲಿ ಉತ್ತರ ಪ್ರದೇಶದಲ್ಲಿ 500 ಬ್ರಾಹ್ಮಣರ ಹತ್ಯೆ ನಡೆದಿದೆ" ಎಂದು ಅಖಿಲ ಭಾರತ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ರಾಜೇಂದ್ರ ನಾಥ್ ತ್ರಿಪಾಠಿ ಹೇಳಿದ್ದಾರೆ. ಇದರಿಂದಾಗಿಯೇ ಬಿಜೆಪಿ ಸರ್ಕಾರದ ವಿರುದ್ಧ ಸಮುದಾಯ ಅಸಮಾಧಾನಗೊಂಡಿದ್ದು, ಅದನ್ನು ಬಳಕೆ ಮಾಡಿಕೊಳ್ಳಲು ಪ್ರತಿಪಕ್ಷಗಳು ತಂತ್ರ ರೂಪಿಸುತ್ತಿವೆ.
ಮುಂಚೂಣಿಗೆ ಬಂದ ಮಾಯಾವತಿ; ಕಾಂಗ್ರೆಸ್ನ ಜಿತಿನ್ ಪ್ರಸಾದ, ಅಭಿಷೇಕ್ ಮಿಶ್ರಾ ಮತ್ತು ಸಮಾಜವಾದಿ ಪಕ್ಷದ ಮನೋಜ್ ಪಾಂಡೆ ಬ್ರಾಹ್ಮಣ ಸಮುದಾಯದ ಪರ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಆದರೆ, ಪಕ್ಷದ ಉನ್ನತ ಸ್ಥಾನದಲ್ಲಿರುವ ನಾಯಕರು ಮೌನವಾಗಿದ್ದಾರೆ.
ಆದರೆ, ಬಿಸ್ಪಿಯಲ್ಲಿ ಈ ರೀತಿಯ ವಾತಾವರಣವಿಲ್ಲ. ಪಕ್ಷದ ಮುಖ್ಯಸ್ಥೆ ಮಾಯಾವತಿ ಅವರೇ ಸಮುದಾಯದ ಹಲವು ವಿಚಾರಗಳ ಬಗ್ಗೆ ಧ್ವನಿ ಎತ್ತಿದ್ದಾರೆ. ಸಮಾಜವಾದಿ ಪಕ್ಷ 2022ರಲ್ಲಿ ಅಧಿಕಾರಕ್ಕೆ ಬಂದರೆ ಲಕ್ನೋದಲ್ಲಿ 108 ಅಡಿ ಪರುಶರಾಮನ ವಿಗ್ರಹ ಸ್ಥಾಪನೆ ಮಾಡುವುದಾಗಿ ಘೋಷಣೆ ಮಾಡಿತ್ತು. ಮಯಾವತಿ ಅವರು ಇದಕ್ಕೂ ದೊಡ್ಡದಾವ ವಿಗ್ರಹ ಸ್ಥಾಪನೆ, ಉದ್ಯಾನವನ, ಆಸ್ಪತ್ರೆಗಳಿಗೆ ಹೆಸರಿಡುವ ಭರವಸೆ ನೀಡಿದ್ದಾರೆ.
ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ : ಸಮಾಜವಾದಿ ಪಕ್ಷ ಬಿಎಸ್ಪಿಯ ನೂತನ ಕಾರ್ಯತಂತ್ರವನ್ನು ಟೀಕೆ ಮಾಡಿದೆ. "ಈಗ ಪಕ್ಷಕ್ಕೆ ಬ್ರಾಹ್ಮಣ ಸಮುದಾಯದ ನೆನಪಾಗಿದೆ. ಪಕ್ಷ ಅಧಿಕಾರದಲ್ಲಿದ್ದಾಗ ಅವರನ್ನು ಕಡೆಗಣಿಸಲಾಗಿತ್ತು. ಬ್ರಾಹ್ಮಣರ ವಿರುದ್ಧ ಎಸ್ಸಿ& ಎಸ್ಟಿ ಕಾಯ್ದೆ ಅಡಿ ಸುಳ್ಳು ಪ್ರಕರಣ ದಾಖಲು ಮಾಡಲಾಗಿತ್ತು. ಸಮುದಾಯ ಎಂದೂ ಪಕ್ಷದ ಪರವಾಗಿ ನಿಲ್ಲುವುದಿಲ್ಲ" ಎಂದು ಆರೋಪಿಸಿದ್ದಾರೆ.