ಅಕಸ್ಮಾತ್ ಆಗಿ ಬಿಜೆಪಿಗೆ ಮತ ಹಾಕಿದ್ದಕ್ಕೆ ಬೆರಳು ಕತ್ತರಿಸಿಕೊಂಡ ಬಿಎಸ್ಪಿ ಬೆಂಬಲಿಗ
ಲಖನೌ, ಏಪ್ರಿಲ್ 18 : ಇದೊಂದು ವಿಚಿತ್ರ ಘಟನೆ. ಉತ್ತರಪ್ರದೇಶದ ಬುಲಂದ್ ಶಹರ್ ನ ಶಿಕಾರ್ ಪುರ್ ನ ಮತದಾನ ಕೇಂದ್ರದಲ್ಲಿ ದಲಿತ ವ್ಯಕ್ತಿಯೊಬ್ಬ ಬಹುಜನ ಸಮಾಜ ಪಕ್ಷಕ್ಕೆ ಮತ ಚಲಾಯಿಸುವ ಬದಲು ಅಕಸ್ಮಾತ್ ಆಗಿ ಭಾರತೀಯ ಜನತಾ ಪಕ್ಷಕ್ಕೆ ಮತ ಹಾಕಿದ್ದರಿಂದಾಗಿ ತನ್ನ ಬೆರಳನ್ನೇ ಕತ್ತರಿಸಿಕೊಂಡಿದ್ದಾನೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಬುಲಂದ್ ಶಹರ್ ನಲ್ಲಿ ಹಾಲಿ ಸಂಸದರು ಹಾಗೂ ಬಿಜೆಪಿ ಅಭ್ಯರ್ಥಿಯೂ ಆದ ಭೋಲಾ ಸಿಂಗ್ ಮತ್ತು ಎಸ್ಪಿ-ಬಿಎಸ್ಪಿ-ಆರ್ ಎಲ್ ಡಿ ಮೈತ್ರಿ ಕೂಟದ ಯೋಗೇಶ್ ವರ್ಮಾ ಮಧ್ಯೆ ಸ್ಪರ್ಧೆ ಇತ್ತು. ಬಿಎಸ್ ಪಿ ಬೆಂಬಲಿಗ, ಇಪ್ಪತ್ತೈದು ವರ್ಷದ ಪವನ್ ಕುಮಾರ್ ಅಬ್ದುಲ್ಲಾಪುರ್ ಹುಲ್ಸನ್ ಗ್ರಾಮದವನು. ವರ್ಮಾ ಪರವಾಗಿ ಮತ ಹಾಕಲು ತೆರಳಿದ ಆತ ತಪ್ಪಾಗಿ ಬಿಜೆಪಿಗೆ ಮತ ಚಲಾಯಿಸಿದ್ದಾನೆ.
ತನ್ನ ತಪ್ಪಿನಿಂದ ಸಿಟ್ಟಿಗೆದ್ದ ಆತ ಮನೆಗೆ ಹಿಂತಿರುಗಿದವನೇ ಚಾಕುವಿನಿಂದ ತನ್ನ ಬೆರಳನ್ನೇ ಕತ್ತರಿಸಿಕೊಂಡಿದ್ದಾನೆ. ಆ ನಂತರ ಪವನ್ ಟ್ವಿಟ್ಟರ್ ನಲ್ಲಿ ವಿಡಿಯೋ ಬಿಡುಗಡೆ ಮಾಡಿದ್ದಾನೆ. ಅದರಲ್ಲೇ ಅವನು ಹೇಳಿಕೊಂಡಿದ್ದಾನೆ. ತನ್ನ ತಪ್ಪಿನ ಪ್ರಾಯಶ್ಚಿತ್ತಕ್ಕಾಗಿ ಕೈ ಬೆರಳನ್ನು ಕತ್ತರಿಸಿಕೊಂಡಿದ್ದಾಗಿ ತಿಳಿಸಿದ್ದಾನೆ.