'ಮಾಫಿಯಾ ವ್ಯಕ್ತಿಗೆ ಟಿಕೆಟ್ ಇಲ್ಲ': ಮುಖ್ತಾರ್ ಅನ್ಸಾರಿಗೆ ಟಿಕೆಟ್ ನಿರಾಕರಿಸಿದ ಬಿಎಸ್ಪಿ
ಲಕ್ನೋ, ಸೆಪ್ಟೆಂಬರ್ 10: ಮೌ ಕ್ಷೇತ್ರದಿಂದ ಮುಂದಿನ ಚುನಾವಣೆಯಲ್ಲಿ ಶಾಸಕ ಮುಖ್ತಾರ್ ಅನ್ಸಾರಿ ಸ್ಪರ್ಧಿಸುವುದಿಲ್ಲ ಎಂದು ಬಹುಜನ ಸಮಾಜ ಪಕ್ಷ ಶುಕ್ರವಾರ ಹೇಳಿದೆ. ಈ ಸಂದರ್ಭದಲ್ಲೇ "ಮಾಫಿಯಾ ವ್ಯಕ್ತಿಗೆ ಪಕ್ಷದ ಟಿಕೆಟ್ ನೀಡಲಾಗದು" ಎಂದು ಬಿಎಸ್ಪಿ ಪಕ್ಷದ ಮುಖ್ಯಸ್ಥೆ, ಮಾಜಿ ಮುಖ್ಯಮಂತ್ರಿ ಮಾಯಾವತಿ ಹೇಳಿದ್ದಾರೆ.
ಗ್ಯಾಂಗ್ ಸ್ಟಾರ್ ಆಗಿದ್ದ ಮುಖ್ತಾರ್ ಅನ್ಸಾರಿ ಆ ಬಳಿಕ ರಾಜಕಾರಣಿ ಆಗಿದ್ದರು. 58 ವರ್ಷದ ಅನ್ಸಾರಿ ಅವರು ಸಮಾಜವಾದಿ ಪಕ್ಷದೊಂದಿಗಿನ ಮಾತುಕತೆ ವಿಫಲವಾದ ನಂತರ ಉತ್ತರ ಪ್ರದೇಶದ ಚುನಾವಣೆಗೆ ಮುನ್ನ 2017 ರಲ್ಲಿ ಬಿಎಸ್ಪಿಗೆ ಸೇರಿದ್ದರು.ಈಗ ಜೈಲಿನಲ್ಲಿ ಇದ್ದಾರೆ. ಈ ಹಿನ್ನೆಲೆ ಮುಖ್ತಾರ್ ಅನ್ಸಾರಿಗೆ ಮುಂದಿನ ಚುನಾವಣೆಯ ಟಿಕೆಟ್ ನಿರಾಕರಿಸಿರುವ ಬಿಎಸ್ಪಿ, ಈ ಮೌ ಕ್ಷೇತ್ರದಿಂದ ಮುಖ್ತಾರ್ ಅನ್ಸಾರಿ ಬದಲಿಗೆ ಭೀಮ್ ರಾಜಭರ್ರನ್ನು ಬಿಎಸ್ಪಿ ಅಭ್ಯರ್ಥಿಯನ್ನಾಗಿಸಲು ಬಿಎಸ್ಪಿ ನಿರ್ಧಾರ ಮಾಡಿದೆ.
ಯುಪಿ ಚುನಾವಣೆಯತ್ತ ಮಾಯಾವತಿ ಚಿತ್ತ: ಬಿಎಸ್ಪಿಯಿಂದ ಬ್ರಾಹ್ಮಣ ಸಮ್ಮೇಳನ
ಈ ಬಗ್ಗೆ ಟ್ವೀಟ್ ಮಾಡಿರುವ ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಮಾಯಾವತಿ, "ಮುಂಬರುವ ಯುಪಿ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಬಿಎಸ್ಪಿಯು ಯಾವುದೇ ಶಕ್ತಿಯುತ ಹಾಗೂ ಮಾಫಿಯಾ ಹೊಂದಿರುವ ವ್ಯಕ್ತಿಗಳನ್ನು ಕಣಕ್ಕೆ ಇಳಿಸುವುದಿಲ್ಲ. ಎಲ್ಲಾ ಅಂಶಗಳನ್ನು ಗಮನದಲ್ಲಿ ಇಟ್ಟುಕೊಂಡು ಮೌ ಕ್ಷೇತ್ರದಲ್ಲಿ ಮುಖ್ತಾರ್ ಅನ್ಸಾರಿ ಸ್ಪರ್ಧಿಸುವುದಿಲ್ಲ. ಬದಲಾಗಿ ಯುಪಿಯ ಬಿಎಸ್ಪಿ ರಾಜ್ಯಾಧ್ಯಕ್ಷರಾದ ಭೀಮ್ ರಾಜಭರ್ ಮೌ ಕ್ಷೇತ್ರದಿಂದ ಸ್ಪರ್ಧೆಗೆ ಇಳಿಯಲಿದ್ದಾರೆ," ಎಂದು ತಿಳಿಸಿದ್ದಾರೆ.
ಇನ್ನು ಉತ್ತರ ಪ್ರದೇಶದಲ್ಲಿ ಮುಂದಿನ ಚುನಾವಣೆಗೆ ಬಿಜೆಪಿ, ಬಿಎಸ್ಪಿ, ಕಾಂಗ್ರೆಸ್ ಸೇರಿದಂತೆ ಎಲ್ಲಾ ಪಕ್ಷಗಳು ಈಗಾಗಲೇ ಸಿದ್ದತೆ ನಡೆಸುತ್ತಿದೆ. ಇನ್ನು ಬಿಎಸ್ಪಿ ಮೌ ಕ್ಷೇತ್ರದಲ್ಲಿ ತನ್ನ ಅಭ್ಯರ್ಥಿ ಬದಲಾವಣೆ ಮಾಡಿಕೊಂಡಿರುವುದು ಮುಂದಿನ ಚುನಾವಣೆ ಸಂದರ್ಭದಲ್ಲಿ ತಮಗೆ ಯಾವುದೇ ತೊಂದರೆ ಉಂಟಾಗದಿರಲಿ ಎಂಬ ಕಾರಣಕ್ಕೆ ಆಗಿರಬಹುದು ಎಂದು ಹೇಳಲಾಗಿದೆ. ಒಂದು ವೇಳೆ ನಾವು ಮುಖ್ತಾರ್ ಅನ್ಸಾರಿಯನ್ನು ಈ ಕ್ಷೇತ್ರದಲ್ಲಿ ಕಣಕ್ಕೆ ಇಳಿಸಿದರೆ, ಬಿಎಸ್ಪಿ ಕ್ರಿಮಿನಲ್ಗಳನ್ನು ಕಣಕ್ಕೆ ಇಳಿಸಿದೆ ಎಂದು ಬಿಜೆಪಿ ಪ್ರಚಾರ ಮಾಡಬಹುದು. ಇದರಿಂದಾಗಿ ಹಿನ್ನಡೆ ಉಂಟಾಗಬಹುದು ಎಂಬ ಕಾರಣಕ್ಕೆ ಬಿಎಸ್ಪಿಯ ಮುಖ್ತಾರ್ ಅನ್ಸಾರಿಗೆ ಟಿಕೆಟ್ ನಿರಾಕರಿಸಿದೆ ಎಂದು ಹೇಳಬಹುದು.
ಇನ್ನು ಉತ್ತರಪ್ರದೇಶದತ್ತ: ಬಿಎಸ್ಪಿಯಲ್ಲಿ ಜಾತವ ಸಮುದಾಯದ ನಾಯಕತ್ವದ ಇತಿಹಾಸ ಇಲ್ಲಿದೆ
ಮುಖ್ತಾರ್ ಅನ್ಸಾರಿ ವಿರುದ್ದ ಕೊಲೆ ಮತ್ತು ಅಪಹರಣ ಸೇರಿದಂತೆ 50 ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳು ದಾಖಲಾಗಿದೆ. ಒಟ್ಟು ಹದಿನೈದು ಪ್ರಕರಣಗಳ ವಿಚಾರಣೆ ನಡೆದಿದ್ದು, 2005 ರಿಂದ ವಿವಿಧ ಆರೋಪಗಳ ಮೇಲೆ ಜೈಲು ಸೇರಿದ್ದರು. ಸುಲಿಗೆ ಪ್ರಕರಣದಲ್ಲಿ ಪಂಜಾಬ್ ಜೈಲಿನಲ್ಲಿದ್ದ ಮುಖ್ತಾರ್ ಅನ್ಸಾರಿಯನ್ನು ಈ ವರ್ಷದ ಆರಂಭದಲ್ಲಿ ಮತ್ತೆ ಉತ್ತರ ಪ್ರದೇಶದ ಜೈಲಿಗೆ ಕಳುಹಿಸಲಾಗಿದೆ.
ಇನ್ನು ಸಮಾಜವಾದಿ ಪಕ್ಷದೊಂದಿಗಿನ ಮಾತುಕತೆ ವಿಫಲವಾದ ನಂತರ ಬಿಎಸ್ಪಿ ಪಕ್ಷಕ್ಕೆ ಮುಖ್ತಾರ್ ಅನ್ಸಾರಿ ಸೇರ್ಪಡೆಯಾದ ಬಳಿಕ, "ಮುಖ್ತಾರ್ ಅನ್ಸಾರಿ ವಿರುದ್ದ ಅಖಿಲೇಶ್ ಯಾದವ್ರ ಸಮಾಜವಾದಿ ಪಕ್ಷದ ಸರ್ಕಾರ ಸುಳ್ಳು ಆರೋಪಗಳನ್ನು ಮಾಡಿದೆ," ಎಂದು ಮಾಯಾವತಿ ಆರೋಪ ಮಾಡಿದ್ದರು. "ನನ್ನ ಸರ್ಕಾರ ಅಪರಾಧಿಗಳ ಮೇಲೆ ಎಂದಿಗೂ ಕಠಿಣವಾಗಿದೆ. ಆದರೆ ಯಾರನ್ನೂ ಕೂಡಾ ಸುಳ್ಳು ಪ್ರಕರಣದಲ್ಲಿ ಸಿಲುಕಿಸದಂತೆ ನಾನು ನೋಡಿಕೊಳ್ಳುತ್ತೇನೆ. ಸುಳ್ಳು ಪ್ರಕರಣದಲ್ಲಿ ಸಿಲುಕಿಕೊಂಡಿರುವುದಕ್ಕೆ ಮುಖ್ತಾರ್ ಅನ್ಸಾರಿ ಕುಟುಂಬವು ಒಂದು ಉದಾಹರಣೆಯಾಗಿದೆ. ಮುಖ್ತಾರ್ ಅನ್ಸಾರಿ ಕುಟುಂಬವನ್ನು ಸುಳ್ಳು ಆರೋಪದಲ್ಲಿ ಬಂಧನ ಮಾಡಲಾಗಿದೆ," ಎಂದು ದೂರಿದ್ದರು. ಹಾಗೆಯೇ ಮುಖ್ತಾರ್ ಅನ್ಸಾರಿ ಪರವಾಗಿ ಮೌ ಕ್ಷೇತ್ರದಲ್ಲಿ ಪ್ರಚಾರ ಕೂಡಾ ಮಾಯಾವತಿ ಮಾಡಿದ್ದರು.
ಮುಖ್ತಾರ್ ಅನ್ಸಾರಿ 1996 ರ ಚುನಾವಣೆಯಲ್ಲಿ ಮೌವಿನಿಂದ ಬಿಎಸ್ಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿದು ತನ್ನ ಮೊದಲ ಚುನಾವಣೆಯಲ್ಲೇ ಗೆಲುವು ಸಾಧಿಸಿದ್ದರು. ಹಾಗೆಯೇ ಜೈಲಿನಲ್ಲಿದ್ದೇ ಹಲವಾರು ಚುನಾವಣೆಗಳಲ್ಲಿ ಜಯ ಸಾಧಿಸಿದ್ದಾರೆ. 2017 ರಲ್ಲಿ ಯೋಗಿ ಆದಿತ್ಯನಾಥ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಅನ್ಸಾರಿ ಜಾಲದ ಬಗ್ಗೆ ಹೆಚ್ಚು ನಿಗಾ ವಹಿಸಿದ್ದು, ಸುಮಾರು ನೂರಕ್ಕೂ ಅಧಿಕ ಮುಖ್ತಾರ್ ಸಹವರ್ತಿಗಳನ್ನು ಬಂಧಿಸಿ ಜೈಲಿಗಟ್ಟಲಾಗಿತ್ತು. ಇನ್ನು ಕೆಲವರನ್ನು ಎನ್ಕೌಂಟರ್ ನಡೆಸಿ ಹತ್ಯೆಗೈಯಲಾಗಿದೆ. ಇನ್ನು 2019 ರಲ್ಲಿ ಅನ್ಸಾರಿ ಮೇಲಿರುವ ಪ್ರಕರಣಗಳು ಬಾಕಿ ಇರುವ ಹಿನ್ನೆಲೆ ಪಂಜಾಬ್ ಜೈಲಿಗೆ ಸ್ಥಳಾಂತರ ಮಾಡಲಾಗಿತ್ತು. ಏಪ್ರಿಲ್ನಲ್ಲಿ ಮತ್ತೆ ಅನ್ಸಾರಿಯನ್ನು ಉತ್ತರ ಪ್ರದೇಶ ಜೈಲಿಗೆ ಕರೆತರಲಾಗಿದೆ.
(ಒನ್ ಇಂಡಿಯಾ ಸುದ್ದಿ)