ದೇವಸ್ಥಾನದೊಳಗೆ ಖಡ್ಗದಿಂದ ಕೊಚ್ಚಿ ಇಬ್ಬರು ಅರ್ಚಕರ ಕೊಲೆ
ಬುಲಂದ್ಶಾಹರ್, ಏಪ್ರಿಲ್ 28: ಉತ್ತರ ಪ್ರದೇಶ ಬುಲಂದ್ಶಾಹರ್ ನಲ್ಲಿರುವ ದೇವಸ್ಥಾನದ ಒಳಗೆ ಇಬ್ಬರು ಅರ್ಚಕರ ಕೊಲೆಯಾಗಿದೆ.
55 ಹಾಗೂ 35 ವರ್ಷದ ಇಬ್ಬರು ಅರ್ಚಕರನ್ನು ರಾಜು ಎಂಬುವವನು ಹತ್ಯೆ ಮಾಡಿದ್ದು, ಅವನನ್ನು ಬಂಧಿಸಲಾಗಿದೆ.ಸೋಮವಾರ ರಾತ್ರಿ ರಾಜು ಭಾಂಗ್ ಕುಡಿದು ದೇವಸ್ಥಾನಕ್ಕೆ ತೆರಳಿ ಅವರನ್ನು ಕೊಲೆ ಮಾಡಿದ್ದಾನೆ. ಆತ ದೇವಸ್ಥಾನದಿಂದ ಎರಡು ಕಿ.ಮೀ ದೂರದಲ್ಲಿ ಸಿಕ್ಕಿಬಿದ್ದಿದ್ದು ಆಗಲೂ ಆತ ನಶೆಯಲ್ಲಿಯೇ ಇದ್ದ ಎನ್ನಲಾಗಿದೆ.
'ಇದು ದೈವ ಇಚ್ಛೆ' ಎಂದು ಆರೋಪಿ ಹೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ. 'ಭಾಂಗ್ ಕುಡಿದು ದೇವಸ್ಥಾನದೊಳಗೆ ಹೋಗಿದ್ದೆ, ಅವರು ನನ್ನನ್ನು ತಡೆಯಲು ಯತ್ನಿಸಿದರು ಅದಕ್ಕೆ ಕೊಲೆ ಮಾಡಿದೆ' ಎಂದು ತಪ್ಪೊಪ್ಪಿಕೊಂಡಿದ್ದಾನೆ.
ಆತನ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೂಚನೆ ನೀಡಿದ್ದಾರೆ.ಕೆಲವು ದಿನಗಳ ಹಿಂದಷ್ಟೇ ಕಾರಿನಲ್ಲಿ ಹೋಗುತ್ತಿದ್ದ ಸಾಧುವನ್ನು ಜನರು ಮಕ್ಕಳ ಕಳ್ಳ ಎಂದು ಭಾವಿಸಿ ಹಲ್ಲೆ ಮಾಡಿ ಹತ್ಯೆ ಮಾಡಿದ್ದರು. ಇದಾದ ಕೆಲವೇ ದಿನಗಳಲ್ಲಿ ಮತ್ತೊಂದು ಘಟನೆ ನಡೆದಿದೆ.
ಖಡ್ಗದಿಂದ ಅವರನ್ನು ಕೊಚ್ಚಿ ಕೊಲೆ ಮಾಡಿದ್ದು, ಬಳಿಕ ಇಲ್ಲ ನಾನು ಲಾಠಿಯನ್ನು ಮಾತ್ರ ಬಳಕೆ ಮಾಡಿದ್ದೆ ಎಂದು ಹೇಳಿದ್ದಾನೆ.