Breaking: ಯಮುನಾ ನದಿಯಲ್ಲಿ ಮುಳುಗಿದ ದೋಣಿ, 20 ಸಾವು
ಲಕ್ನೋ, ಆಗಸ್ಟ್ 11: ಉತ್ತರ ಪ್ರದೇಶದ ಬಂದಾ ಎಂಬಲ್ಲಿ ಯಮುನಾ ನದಿಯಲ್ಲಿ 40 ಜನರನ್ನು ಹೊತ್ತೊಯ್ಯುತ್ತಿದ್ದ ದೋಣಿಯೊಂದು ಮಗುಚಿ ಬಿದ್ದಿದ್ದು, ಮಹಿಳೆಯರು ಸೇರಿದಂತೆ ಕನಿಷ್ಠ 4 ಪ್ರಯಾಣಿಕರು ಸಾವನ್ನಪ್ಪಿದ್ದಾರೆ ಎಂದು ವರದಿಗಳು ತಿಳಿಸಿವೆ. ಸಾವಿನ ಸಂಖ್ಯೆ 20 ಎಂದೂ ವರದಿಗಳಿವೆ.
ಮಾರ್ಕ ಘಾಟ್ನಿಂದ ಫತೇಪುರಕ್ಕೆ ದೋಣಿ ತೆರಳುತ್ತಿತ್ತು. ದೋಣಿಯಲ್ಲಿ ಮಹಿಳೆಯರು ಮತ್ತು ಮಕ್ಕಳೇ ಹೆಚ್ಚು ಸಂಖ್ಯೆಯಲ್ಲಿದ್ದರು. ವರದಿಗಳ ಪ್ರಕಾರ ಮಹಿಳಾ ಪ್ರಯಾಣಿಕರು ರಕ್ಷಾ ಬಂಧನವನ್ನು ಆಚರಿಸಲು ತಮ್ಮ ಮನೆಗೆ ಹೋಗುತ್ತಿದ್ದರು.
ಸ್ಥಳದಲ್ಲಿ ಭಾರೀ ಜನಸಂಖ್ಯೆ ತುಂಬಿದ್ದು, ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.
"ಜೋರಾದ ಗಾಳಿಯಿಂದಾಗಿ ದೋಣಿ ಮಗುಚಿ ಬಿದ್ದಿದೆ. ಇದುವರೆಗೆ 15 ಮಂದಿಯನ್ನು ಸುರಕ್ಷಿತವಾಗಿ ರಕ್ಷಿಸಲಾಗಿದ್ದು, 17 ಮಂದಿ ನಾಪತ್ತೆಯಾಗಿದ್ದಾರೆ. 3 ಮೃತದೇಹಗಳು ಪತ್ತೆಯಾಗಿವೆ. NDRF ಮತ್ತು SDRF ತಂಡಗಳು ಇಲ್ಲಿಗೆ ತಲುಪುತ್ತಿವೆ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ" ಎಂದು ಬಂದಾ ಎಸ್ಪಿ ಅಭಿನಂದನ್ ತಿಳಿಸಿದರು.
ಯುಪಿ ಸಿಎಂ ಯೋಗಿ ಆದಿತ್ಯನಾಥ್ ಬಂದಾದಲ್ಲಿ ದೋಣಿ ಅಪಘಾತದಲ್ಲಿ ಜೀವಹಾನಿಯಾಗಿರುವುದಕ್ಕೆ ದುಃಖ ವ್ಯಕ್ತಪಡಿಸಿದ್ದು, ಸಂತ್ರಸ್ತ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದಾರೆ.
ಜಿಲ್ಲಾಡಳಿತ ಅಧಿಕಾರಿಗಳು, ಎನ್ಡಿಆರ್ಎಫ್ ಮತ್ತು ಎಸ್ಡಿಆರ್ಎಫ್ ತಂಡಗಳಿಗೆ ತಕ್ಷಣ ಸ್ಥಳಕ್ಕೆ ತಲುಪಿ ರಕ್ಷಣಾ, ಪರಿಹಾರ ಕಾರ್ಯ ಕೈಗೊಳ್ಳುವಂತೆ ಸಿಎಂ ಸೂಚನೆ ನೀಡಿದ್ದಾರೆ.