ರಕ್ತ ಕಳ್ಳಸಾಗಣೆ ದಂಧೆ: ಯುಪಿಯಲ್ಲಿ7 ಮಂದಿ ಬಂಧನ
ಲಕ್ನೋ, ಜು. 1: ಉತ್ತರ ಪ್ರದೇಶ ಪೊಲೀಸರ ವಿಶೇಷ ಕಾರ್ಯಪಡೆ (ಎಸ್ಟಿಎಫ್) ಗುರುವಾರ ರಕ್ತ ಕಳ್ಳಸಾಗಣೆ ದಂಧೆಯನ್ನು ಭೇದಿಸಿದ್ದು, ಔಷಧ ಆಡಳಿತ ಇಲಾಖೆಯೊಂದಿಗೆ ಜಂಟಿ ಕಾರ್ಯಾಚರಣೆಯಲ್ಲಿ ಎರಡು ಖಾಸಗಿ ರಕ್ತನಿಧಿ ಬ್ಯಾಂಕ್ನ ಮಾಲೀಕರು ಸೇರಿದಂತೆ ಏಳು ಜನರನ್ನು ಬಂಧಿಸಿದೆ.
ಲಕ್ನೋದ ಠಾಕೂರ್ಗಂಜ್ ಪ್ರದೇಶದಲ್ಲಿ ಈ ಏಳು ಮಂದಿಯನ್ನು ಬಂಧಿಸಲಾಗಿದೆ. ಕಾರ್ಯಾಚರಣೆಯಲ್ಲಿ ಎಸ್ಟಿಎಫ್ 302 ಪ್ಯಾಕೆಟ್ ರಕ್ತವನ್ನು ವಶಪಡಿಸಿಕೊಂಡಿದೆ. ಇದನ್ನು ವೈದ್ಯಕೀಯ ಭಾಷೆಯಲ್ಲಿ ಪ್ಯಾಕ್ಡ್ ರೆಡ್ ಬ್ಲಡ್ ಸೆಲ್ (ಪಿಆರ್ಬಿಸಿ) ಎಂದು ಕರೆಯಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿಡಿಯೋ: ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಗೆ ಶೂಗಳಿಂದ ಥಳಿಸಿದ ಪ್ರಾಂಶುಪಾಲರು
ಎಸ್ಟಿಎಫ್ ಹೇಳಿಕೆ ಪ್ರಕಾರ, ಆರೋಪಿಗಳು ರಾಜಸ್ಥಾನದಿಂದ ಪಿಆರ್ಬಿಸಿಗಳನ್ನು ಕಳ್ಳಸಾಗಣೆ ಮಾಡಿ ಉತ್ತರ ಪ್ರದೇಶದ ವಿವಿಧ ಆಸ್ಪತ್ರೆಗಳಿಗೆ ಮಾರಾಟ ಮಾಡುತ್ತಿದ್ದರು ಎನದನಲಾಗಿದೆ. ಲಕ್ನೋ ನಿವಾಸಿ ಅಸಾದ್ ರಜಾ ಮತ್ತು ಕುಶಿನಗರ ಜಿಲ್ಲೆಯ ನಿವಾಸಿ ನೌಶಾದ್ ಅಹ್ಮದ್ ರಾಜಸ್ಥಾನದ ವಿವಿಧ ದತ್ತಿ ಸಂಸ್ಥೆಗಳಿಂದ ಅಕ್ರಮವಾಗಿ ರಕ್ತವನ್ನು ಖರೀದಿಸುತ್ತಿದ್ದರು. ಈ ರಕ್ತವನ್ನು ಸಾಮಾನ್ಯವಾಗಿ ಈ ದತ್ತಿ ಸಂಸ್ಥೆಗಳು ಆಯೋಜಿಸುವ ರಕ್ತದಾನ ಶಿಬಿರಗಳ ಮೂಲಕ ಸಂಗ್ರಹಿಸಲಾಗುತ್ತಿತ್ತು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಅವರು ಪ್ರತಿ ಯೂನಿಟ್ಗೆ 700- 800 ರೂಪಾಯಿಗೆ ರಕ್ತವನ್ನು ಖರೀದಿಸುತ್ತಿದ್ದರು ಮತ್ತು ಅವುಗಳನ್ನು ಆಸ್ಪತ್ರೆಗಳು ಅಥವಾ ಅಗತ್ಯವಿರುವ ರೋಗಿಗಳಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದರು ಎಂದು ಎಸ್ಟಿಎಫ್ ತಿಳಿಸಿದೆ. ಎಸ್ಟಿಎಫ್ ಪ್ರಕಾರ, ಇಬ್ಬರೂ ಲಕ್ನೋ ಮತ್ತು ಮಧ್ಯ ಉತ್ತರ ಪ್ರದೇಶದ ಕನಿಷ್ಠ ಏಳು ಜಿಲ್ಲೆಗಳ ವಿವಿಧ ರಕ್ತನಿಧಿ ಬ್ಯಾಂಕ್ಗಳಿಗೆ ಕಳ್ಳಸಾಗಣೆ ಮಾಡಿದ ರಕ್ತವನ್ನು ಮೋಸದಿಂದ ಮಾರಾಟ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
ಆರೋಪಿಗಳು ಲಾಭಾಂಶವನ್ನು ಹೆಚ್ಚಿಸಲು ರಕ್ತಕ್ಕೆ ಲವಣಯುಕ್ತ ನೀರನ್ನು ಸೇರಿಸುತ್ತಿದ್ದರು ಎಂದು ಎಸ್ಟಿಎಫ್ ಅಧಿಕಾರಿಗಳು ತಿಳಿಸಿದ್ದಾರೆ. ಮಿಡ್ಲೈಫ್ ಬ್ಲಡ್ ಬ್ಯಾಂಕ್ ಮತ್ತು ಆಸ್ಪತ್ರೆಯ ಮಾಲೀಕ ಮೊಹಮ್ಮದ್ ಅಮ್ಮಾರ್, ಅಲ್ಲಿ ತಂತ್ರಜ್ಞರಾಗಿ ಕೆಲಸ ಮಾಡುವ ರೋಹಿತ್ ಕುಮಾರ್ ಮತ್ತು ಕರಣ್ ಮಿಶ್ರಾ ಮತ್ತು ನಾರಾಯಣಿ ಬ್ಲಡ್ ಬ್ಯಾಂಕ್ ಮಾಲೀಕ ಅಜಿತ್ ದುಬೆ ಮತ್ತು ತಂತ್ರಜ್ಞರಾಗಿರುವ ಸಂದೀಪ್ ಕುಮಾರ ಎಂಬುವವರನ್ನು ಕಾರ್ಯಾಚರಣೆಯಲ್ಲಿಬಂಧಿಸಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.