ಅಮೇಥಿ ಆಯ್ತು, ಈಗ ಸೋನಿಯಾ ಗಾಂಧಿ ರಾಯ್ ಬರೇಲಿ ಕ್ಷೇತ್ರದ ಮೇಲೆ ಬಿಜೆಪಿ ಕಣ್ಣು
ಲಕ್ನೋ, ಜೂನ್ 17: ಲೋಕಸಭೆಯಲ್ಲಿ ಕಾಂಗ್ರೆಸ್ಸಿಗರ ಅತಿ ಭದ್ರಕೋಟೆಗಳೆಂದರೆ ಉತ್ತರ ಪ್ರದೇಶದ ಅಮೇಥಿ ಮತ್ತು ರಾಯ್ ಬರೇಲಿ. ಆದರೆ, ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಅಮೇಥಿ ಕ್ಷೇತ್ರವನ್ನು ಕಾಂಗ್ರೆಸ್ ಕಳೆದುಕೊಂಡಿದೆ. ಇನ್ನು ಇರುವುದು ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಪ್ರಾಬಲ್ಯವಿರುವ ರಾಯ್ ಬರೇಲಿ ಮಾತ್ರ.
ಇತ್ತ ಕಾಂಗ್ರೆಸ್ ಮತ್ತು ಇತರೆ ವಿರೋಧಪಕ್ಷದ ನಾಯಕರ ಬಿಗಿ ಹಿಡಿತದಲ್ಲಿರುವ ಕ್ಷೇತ್ರಗಳನ್ನು ಕಿತ್ತುಕೊಳ್ಳಲು ತಯಾರಿ ನಡೆಸುತ್ತಿರುವ ಬಿಜೆಪಿ, ಈಗ ಸೋನಿಯಾ ಗಾಂಧಿ ಅವರ ಕೋಟೆಗೂ ಲಗ್ಗೆ ಹಾಕಲು ನಿರ್ಧರಿಸಿದೆ. ಅದಕ್ಕೆ 'ಅಭಿವೃದ್ಧಿ' ಮಂತ್ರ ಜಪಿಸುತ್ತಿದೆ.
2004ರಿಂದ ರಾಯ್ ಬರೇಲಿ ಕ್ಷೇತ್ರವನ್ನು ಸೋನಿಯಾ ಗಾಂಧಿ ಪ್ರತಿನಿಧಿಸುತ್ತಿದ್ದಾರೆ. ಈ ಚುನಾವಣೆಯಲ್ಲಿ ಉತ್ತರ ಪ್ರದೇಶದ 80 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಾಲಿಗೆ ಉಳಿದುಕೊಂಡಿರುವುದು ಇದೊಂದೇ ಕ್ಷೇತ್ರ. ಈ ಕ್ಷೇತ್ರವನ್ನೂ ತನ್ನ ತೆಕ್ಕೆಗೆ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾದರೆ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ನ ಗಟ್ಟಿಯಾದ ಬೇರನ್ನು ಕಿತ್ತಂತೆ ಆಗುತ್ತದೆ. ಇದರ ಪರಿಣಾಮ ಬೇರೆ ರಾಜ್ಯಗಳ ಮೇಲೆಯೂ ಆಗುತ್ತದೆ ಎನ್ನುವುದು ಬಿಜೆಪಿ ಉದ್ದೇಶ. ಅದಕ್ಕಾಗಿ ಕ್ಷೇತ್ರದಲ್ಲಿ ಪಕ್ಷದ ಸ್ಥಳೀಯ ಪ್ರಭಾವಳಿಯನ್ನು ಹೆಚ್ಚಿಸಲು ಅತ್ಯಧಿಕ ಗುಣಮಟ್ಟದ ಮೂಲಸೌಕರ್ಯ ಸೌಲಭ್ಯಗಳನ್ನು ಒದಗಿಸಲು ಮುಂದಾಗಿದೆ.
ಅಮೇಥಿ ಕ್ಷೇತ್ರದಲ್ಲಿ ಕಾಂಗ್ರೆಸ್ ರಾಹುಲ್ ಗಾಂಧಿ ವಿರುದ್ಧ ಭರ್ಜರಿ ಗೆಲುವು ಸಾಧಿಸುವ ಮೂಲಕ ಬಿಜೆಪಿಯ ಸಚಿವೆ ಸ್ಮೃತಿ ಇರಾನಿ ದೇಶದ ಗಮನ ಸೆಳೆದಿದ್ದರು.
ಗೌರವದ ಗಡಿಯನ್ನು ಮೀರಿದ ಬಿಜೆಪಿ ಬಗ್ಗೆ ಸೋನಿಯಾ ಗಾಂಧಿ ಆಕ್ರೋಶ
2014ರ ಲೋಕಸಭೆ ಚುನಾವಣೆಯಲ್ಲಿ ರಾಹುಲ್ ಗಾಂಧಿ ಎದುರು ಸ್ಮೃತಿ ಇರಾನಿ ಸೋಲು ಅನುಭವಿಸಿದ್ದರು. ಬಳಿಕ ಅಮೇಥಿ ಕ್ಷೇತ್ರದಲ್ಲಿ ಓಡಾಡಿ ಪ್ರಚಾರ ನಡೆಸಲು, ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಸ್ಮೃತಿ ಇರಾನಿ ಅವರಿಗೆ ಪಕ್ಷ ಮುಕ್ತ ಅವಕಾಶ ನೀಡಿತ್ತು. ಈಗ ಬಿಜೆಪಿ ರಾಯ್ ಬರೇಲಿಯಲ್ಲಿಯೂ ಅದೇ ರೀತಿಯ ಕಾರ್ಯತಂತ್ರ ರೂಪಿಸಲು ನಿರ್ಧರಿಸಿದೆ. ಸೋನಿಯಾ ಗಾಂಧಿ ಅವರ ಎದುರು ಲೋಕಸಭೆ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದ ದಿನೇಶ್ ಪ್ರತಾಪ್ ಸಿಂಗ್ ಅವರು, ಸ್ಮೃತಿ ಇರಾನಿ ಅವರಂತೆಯೇ ಪಕ್ಷ ಬಲಪಡಿಸಲು ಸ್ವಾತಂತ್ರ್ಯ ನೀಡಲು ಬಿಜೆಪಿ ತೀರ್ಮಾನಿಸಿದೆ.
ದಿನೇಶ್ ಪ್ರತಾಪ್ಗೆ ಅಧಿಕಾರ
'2014ರಲ್ಲಿ ಸ್ಮೃತಿ ಇರಾನಿ ಅವರು ರಾಹುಲ್ ಗಾಂಧಿ ಎದುರು ಸೋಲು ಅನುಭವಿಸಿದ್ದರು. ಆದರೆ, ಅದರ ಬಳಿಕ ಕ್ಷೇತ್ರದಲ್ಲಿ ಸಾಕಷ್ಟು ಕಠಿಣಶ್ರಮ ವಹಿಸಿ ಕೆಲಸ ಮಾಡಿದರು. ಪಕ್ಷವು ಅವರಿಗೆ ಬಡ್ತಿ ನೀಡಿ, ಕ್ಷೇತ್ರದಲ್ಲಿ ಅಧಿಕಾರ ನೀಡಿತು. ದಿನೇಶ್ ಪ್ರತಾಪ್ ಅವರ ವಿಚಾರದಲ್ಲಿಯೂ ಇದೇ ರೀತಿಯ ಯೋಜನೆ ರೂಪಿಸಲಾಗಿದೆ' ಎಂದು ಉತ್ತರ ಪ್ರದೇಶದ ಬಿಜೆಪಿ ನಾಯಕರೊಬ್ಬರು ತಿಳಿಸಿರುವುದಾಗಿ 'ದಿ ಪ್ರಿಂಟ್' ವರದಿ ಮಾಡಿದೆ.
ರಾಯ್ ಬರೇಲಿಯಲ್ಲಿ ಏಮ್ಸ್ ಸ್ಥಾಪನೆ
ರಾಯ್ ಬರೇಲಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ನಡೆಸಲು ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಹಾಗೂ ಕೇಂದ್ರದ ಮೋದಿ ಸರ್ಕಾರ ಸಿದ್ಧತೆ ನಡೆಸಿವೆ. ರಾಯ್ ಬರೇಲಿಯಲ್ಲಿ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಏಮ್ಸ್) ಸ್ಥಾಪಿಸಲು ನಿರ್ಧರಿಸಲಾಗಿದೆ. ರಾಯ್ ಬರೇಲಿ ಮೂಲಕ ಗಂಗಾ ಎಕ್ಸ್ಪ್ರೆಸ್ ವೇ ಹೆದ್ದಾರಿ ಹಾದುಹೋಗುವಂತೆ ಹಾಗೂ ಡಿಸೆಂಬರ್ ಒಳಗೆ ರೈಲ್ವೆ ಯೋಜನೆ ಪೂರ್ಣಗೊಳಿಸಲು ಚಿಂತನೆ ನಡೆಸಲಾಗಿದೆ.
ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷರಾಗಿ ಸೋನಿಯಾ ಗಾಂಧಿ ಆಯ್ಕೆ
ವಿವಿಧ ಅಭಿವೃದ್ಧಿ ಕಾರ್ಯಗಳು
ರಾಯ್ ಬರೇಲಿಯಲ್ಲಿ ಯಾವುದೇ ಸ್ಮಾರ್ಟ್ ಸಿಟಿ ಯೋಜನೆ ನಡೆಯುತ್ತಿಲ್ಲ. ಆದರೆ, ನಗರಗಳ ಅಭಿವೃದ್ಧಿಯ ಅನೇಕ ಯೋಜನೆಗಳು ಸ್ಥಳೀಯ ಮಟ್ಟದಲ್ಲಿ ಚಾಲ್ತಿಯಲ್ಲಿವೆ. ಅಮೃತ್ ಮಿಷನ್, ನಮಾಮಿ ಗಂಗೆ, ಏಮ್ಸ್ ಮುಂತಾದ ಬೃಹತ್ ಯೋಜನೆಗಳು ಈಗಾಗಲೇ ಚಾಲನೆಯಲ್ಲಿವೆ. ಅನೇಕ ರಸ್ತೆ ವಿಸ್ತರಣೆ ಯೋಜನೆಗಳು, ಅದರಲ್ಲಿಯೂ ರಾಷ್ಟ್ರೀಯ ಹೆದ್ದಾರಿಗಳ ಕಾರ್ಯ ಸಾಗುತ್ತಿವೆ. ಇದಲ್ಲದೆ ಕೈಗಾರಿಕೆಗಳು, ಸಂಶೋಧನಾ ಸಂಸ್ಥೆಗಳು ಸಹ ರಾಯ್ ಬರೇಲಿಯಲ್ಲಿ ಆರಂಭವಾಗಲಿವೆ. ಏಪ್ರಿಲ್ 2020ರ ವೇಳೆಗೆ ಏಮ್ಸ್ ಸ್ಥಾಪನೆ ಯೋಜನೆ ಪೂರ್ಣಗೊಳಿಸಲು ಯೋಗಿ ಸರ್ಕಾರ ಲಕ್ಷ್ಯ ನಿಗದಿಪಡಿಸಿದೆ. ಏಮ್ಸ್ ಸ್ಥಾಪನೆ ಯೋಜನೆಯನ್ನು 2009ರ ಫೆಬ್ರವರಿಯಲ್ಲಿ ಆಗಿನ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ 823 ಕೋಟಿ ರೂ. ವೆಚ್ಚದಲ್ಲಿ ರೂಪಿಸಿತ್ತು.
ಉದ್ಯೋಗ ಸೃಷ್ಟಿಯ ಗುರಿ
ಕಳೆದ ವರ್ಷದ ಡಿಸೆಂಬರ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರಾಯ್ ಬರೇಲಿಯನ್ನು ರೈಲ್ವೆ ಕೋಚ್ಗಳ ತಯಾರಿಕೆಯ ಹಬ್ ಆಗಿ ಅಭಿವೃದ್ಧಿಪಡಿಸುವ ಬಯಕೆ ವ್ಯಕ್ತಪಡಿಸಿದ್ದರು. ಆ ಸಂದರ್ಭದಲ್ಲಿ ಅವರು ಮಾಡರ್ನ್ ಕೋಚ್ ಫ್ಯಾಕ್ಟರಿಯಲ್ಲಿ 900ನೇ ಕೋಚ್ ನಿರ್ಮಾಣಕ್ಕೆ ಚಾಲನೆ ನೀಡಿದ್ದರು. ಈ ಫ್ಯಾಕ್ಟರಿಗಳ ಮೂಲಕ ಕ್ಷೇತ್ರದಲ್ಲಿ ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಲು ಬಿಜೆಪಿ ಮುಂದಾಗಿದೆ. ಜತೆಗೆ ರಾಯ್ ಬರೇಲಿಯಲ್ಲಿ ಸೌಭಾಗ್ಯ, ಉಜ್ವಲಾ, ಸ್ವಚ್ಛ ಭಾರತದಂತಹ ಯೋಜನೆಗಳನ್ನು ಅಳವಡಿಸಲು ಹೆಚ್ಚಿನ ಶ್ರಮ ವಹಿಸಲಾಗುತ್ತಿದೆ ಎಂದು ಬಿಜೆಪಿ ಮುಖಂಡರೊಬ್ಬರು ವಿವರಿಸಿದ್ದಾರೆ.
ಮುಂಗಾರು ಅಧಿವೇಶನದಲ್ಲಿ ಕಾಂಗ್ರೆಸ್ಸಿನ ಲೋಕಸಭಾ ನಾಯಕ ಯಾರು?
ಮುಂದಿನ ಸಲ ಬಿಜೆಪಿ ಗೆಲುವು ಖಚಿತ
'ರಾಯ್ ಬರೇಲಿ ಅಥವಾ ಉತ್ತರ ಪ್ರದೇಶದಲ್ಲಿ ಬಿಜೆಪಿ ಗೆಲುವು ಕಾಣದ ಯಾವುದೇ ಕ್ಷೇತ್ರವಾಗಿರಬಹುದು, ಅಲ್ಲಿ ಪಕ್ಷ ವಿಶೇಷ ಕಾರ್ಯತಂತ್ರಗಳನ್ನು ರೂಪಿಸಿತ್ತು. ಆದರೂ ಅಮೇಥಿಯಲ್ಲಿ ಗೆದ್ದಿದ್ದರೂ, ರಾಯ್ ಬರೇಲಿಯಲ್ಲಿ ಸೋತಿದ್ದು ದುರದೃಷ್ಟಕರ. ಸೋನಿಯಾ ಗಾಂಧಿ ಅವರ ಹಿರಿತನ ಮತ್ತು ಇದು ಅವರ ಕೊನೆಯ ಚುನಾವಣೆ ಇರಬಹುದು ಎಂಬ ಕಾರಣಕ್ಕೆ ರಾಯ್ ಬರೇಲಿಯ ಜನರು ಅವರಿಗೆ ಮತ ಹಾಕಿ ಗೆಲ್ಲಿಸಿದ್ದಾರೆ. ಆದರೆ, ಮುಂದಿನ ಚುನಾವಣೆಯಲ್ಲಿ ಇಲ್ಲಿ ಬಿಜೆಪಿ ಗೆಲ್ಲುವುದು ಖಚಿತ' ಎಂದು ಉತ್ತರ ಪ್ರದೇಶ ಬಿಜೆಪಿಯ ವಕ್ತಾರ ರಾಕೇಶ್ ತ್ರಿಪಾಠಿ ಹೇಳಿದ್ದಾರೆ.
ಕಾಂಗ್ರೆಸ್ನಿಂದ ಬಿಜೆಪಿಗೆ ಬಂದ ನಾಯಕ
2018ರವರೆಗೂ ದಿನೇಶ್ ಪ್ರತಾಪ್ ಸಿಂಗ್ ಕಾಂಗ್ರೆಸ್ನಲ್ಲಿದ್ದರು. ಉತ್ತರ ಪ್ರದೇಶದ ವಿಧಾನ ಪರಿಷತ್ಗೆ ಎಂಎಲ್ಸಿಯಾಗಿ ಅವರು ಕಾಂಗ್ರೆಸ್ಅನ್ನು ಪ್ರತಿನಿಧಿಸುತ್ತಿದ್ದರು. 2007ರ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ರಾಯ್ ಬರೇಲಿ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಏಳು ವಿಧಾನಸಭೆ ಕ್ಷೇತ್ರಗಳಲ್ಲಿ ಐದರಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದರೆ, ಕಾಂಗ್ರೆಸ್ ಕೇವಲ ಎರಡು ಕಡೆ ಗೆಲುವು ಕಂಡಿತ್ತು.