ರಾಮ್ಪುರ್: ಗುಂಡು ಹಾರಿಸಿ ಬಿಜೆಪಿ ಮುಖಂಡನ ಹತ್ಯೆ
ಲಕ್ನೋ, ಮೇ 21: ಉತ್ತರ ಪ್ರದೇಶದ ರಾಮ್ಪುರ್ ದ ಬಿಜೆಪಿ ಮುಖಂಡರೊಬ್ಬರನ್ನು ಬುಧವಾರದಂದು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ಮೃತಪಟ್ಟವರನ್ನು ರಾಮ್ಪುರ್ ಕೌನ್ಸಿಲರ್ ಶಾಲಿನಿ ವರ್ಮಾರ ಪತಿ ಅನುರಾಗ್ ಶರ್ಮಾ ಎಂದು ಗುರುತಿಸಲಾಗಿದೆ.
Recommended Video
ಬುಧವಾರ ರಾತ್ರಿ ವೇಳೆ ಅನುರಾಗ್ ಶರ್ಮ ಅವರು ಜ್ವಾಲಾ ನಗರದಲ್ಲಿರುವ ತಮ್ಮ ಮನೆಗೆ ಸ್ಕೂಟಿಯಲ್ಲಿ ಹಿಂದಿರುಗುತ್ತಿದ್ದರು. ಈ ವೇಳೆ ದುಷ್ಕರ್ಮಿಗಳ ಗುಂಪೊಂದು ಬೈಕಿನಲ್ಲಿ ಬಂದು ಏಕಾಏಕಿ ಗುಂಡು ಹಾರಿಸಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಅನುರಾಗ್ ಅವರನ್ನು ತಕ್ಷಣವೇ ಸಮೀಪದ ಆಸ್ಪತ್ರೆಗೆ ದಾಖಲಿಸಲು ಯತ್ನಿಸಲಾಗಿದೆ. ಆದರೆ, ಮಾರ್ಗಮಧ್ಯೆಯಲ್ಲೇ ಶರ್ಮ ಅಸುನೀಗಿದ್ದಾರೆ.
ಅನುರಾಗ್ ಶರ್ಮ ಅವರಿಗೆ ಕ್ರಿಮಿನಲ್ ಹಿನ್ನೆಲೆಯಿದ್ದು, ಅವರ ನಿಧನದ ವಾರ್ತೆ ಹಬ್ಬುತ್ತಿದ್ದಂತೆ ಅವರ ಹಿಂಬಾಲಕರು ಆಸ್ಪತ್ರೆಯನ್ನು ಧ್ವಂಸಗೊಳಿಸಿದ್ದಾರೆ ಘಟನಾ ಸ್ಥಳಕ್ಕೆ ಆಗಮಿಸಿದ ಇನ್ಸ್ ಪೆಕ್ಟರ್ ಜನರಲ್ ರಮಿತ್ ಶರ್ಮ ಅವರು ಪರಿಸ್ಥಿತಿಯನ್ನು ತಿಳಿಗೊಳಿಸಿ, ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸಲಾಗುವುದು ಎಂಬ ಭರವಸೆ ನೀಡಿದ್ದಾರೆ.
''ಹತ್ಯೆ ಮಾಡಿದ ಇಬ್ಬರು ಬೈಕ್ ಸವಾರರ ಪತ್ತೆಯಾಗಿದ್ದು, ಹುಡುಕಾಟ ಜಾರಿಯಲ್ಲಿದೆ,. ಅನುರಾಗ್ ಶರ್ಮ ಅವರಿಗೆ 40 ವರ್ಷ ವಯಸ್ಸಾಗಿದ್ದು, ಅವರ ದೇಹದೊಳಗೆ ಎರಡು ಗುಂಡು ಹೊಕ್ಕಿವೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲು ಸರಿಯಾದ ವೈದ್ಯಕೀಯ ಸಿಬ್ಬಂದಿ ಇರಲಿಲ್ಲ ಎಂದು ಮೃತರ ಕಡೆಯವರು ಆರೋಪಿಸಿದ್ದಾರೆ. ಈ ಬಗ್ಗೆ ಕೂಡಾ ದೂರು ಸ್ವೀಕರಿಸಲಾಗಿದೆ. ತನಿಖೆ ಮುಂದುವರೆದಿದೆ'' ಎಂದು ರಾಮ್ ಪುರ್ ಎಸ್ಪಿ ಶಗುನ್ ಗೌತಮ್ ಪ್ರತಿಕ್ರಿಯಿಸಿದ್ದಾರೆ.