ಗಲಾಟೆ ವೇಳೆ ಗುಂಪಿನತ್ತ ಗುಂಡು ಹಾರಿಸಿದ ಬಿಜೆಪಿ ಮುಖಂಡ: ಯುವಕ ಸಾವು
ಲಕ್ನೋ, ಅಕ್ಟೋಬರ್ 15: ಬಿಜೆಪಿ ಮುಖಂಡರೊಬ್ಬರು ಜನರ ಗುಂಪಿನತ್ತ ಹಾರಿಸಿದ ಗುಂಡಿಗೆ ಯುವಕನೊಬ್ಬ ಬಲಿಯಾಗಿದ್ದಾನೆ. ಪಡಿತರ ಅಂಗಡಿಗಳ ಆಯ್ಕೆಯ ಕುರಿತು ನಡೆದ ಸಭೆಯಲ್ಲಿ ಉಂಟಾದ ವಿವಾದದ ವೇಳೆ ಸ್ಥಳೀಯ ಅಧಿಕಾರಿಗಳ ಸಮ್ಮುಖದಲ್ಲಿಯೇ ಬಿಜೆಪಿ ಮುಖಂಡ ಗುಂಪಿನತ್ತ ಗುಂಡು ಹಾರಿಸಿದ ಘಟನೆ ಉತ್ತರ ಪ್ರದೇಶದ ಬಲ್ಲಿಯಾ ಜಿಲ್ಲೆಯಲ್ಲಿ ಗುರುವಾರ ನಡೆದಿದೆ.
ಗುಂಡು ಹಾರಿಸಿದ ಬಳಿಕ ಗಾಬರಿಗೊಳಗಾದ ಜನರು ದಿಕ್ಕಾಪಾಲಾಗಿ ಓಡತೊಡಗಿದರು. ಇದರಿಂದ ಸ್ಥಳದಲ್ಲಿ ಕಾಲ್ತುಳಿತ ಸಂಭವಿಸಿತು. ಈ ವೇಳೆ ಬಿಜೆಪಿ ಮುಖಂಡ ಧೀರೇಂದ್ರ ಸಿಂಗ್ ಅಲ್ಲಿಂದ ಪರಾರಿಯಾಗಿದ್ದಾರೆ. ಹತ್ಯೆಯಾದ ಯುವಕನನ್ನು ಜೈಪ್ರಕಾಶ್ ಪಾಲ್ ಎಂದು ಗುರುತಿಸಲಾಗಿದೆ.
ಉತ್ತರ ಪ್ರದೇಶ: ಅತ್ಯಾಚಾರ ಸಂತ್ರಸ್ತೆ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣು
ಬಲ್ಲಿಯಾ ಜಿಲ್ಲೆಯ ರಿಯೊಟಿ ಪ್ರದೇಶದ ದುರ್ಜಾಂಪುರ ಎಂಬ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಸ್ಥಳದಲ್ಲಿ ನೆರೆದಿದ್ದ ಸ್ವ ಸಹಾಯ ಗುಂಪುಗಳ ಸದಸ್ಯರ ನಡುವೆ ವಿವಾದ ಉಂಟಾಗಿದ್ದರಿಂದ ಸಭೆಯನ್ನು ಮುಂದುವರಿಸದೆ ಇರಲು ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ನಿರ್ಧರಿಸಿದರು. ಆಗ ಈ ಗುಂಡಿನ ದಾಳಿ ನಡೆದಿದೆ.
'ಸಭೆಯ ವೇಳೆ ಎರಡು ಗುಂಪುಗಳ ಮಧ್ಯೆ ಘರ್ಷಣೆ ಸಂಭವಿಸಿದಾಗ ಈ ಘಟನೆ ನಡೆದಿದೆ. ತನಿಖೆ ಮುಂದುವರಿದಿದೆ. ಮೃತಪಟ್ಟ ಯುವಕನ ಸಹೋದರ ಚಂದ್ರಮ ನೀಡಿದ ದೂರಿನ ಅನ್ವಯ 15-20 ಜನರ ಮೇಲೆ ಎಫ್ಐಆರ್ ದಾಖಲಿಸಲಾಗಿದೆ' ಎಂದು ಬಲ್ಲಿಯಾ ಎಸ್ಪಿ ದೇವೇಂದ್ರ ನಾಥ್ ತಿಳಿಸಿದ್ದಾರೆ.
A BJP leader shot and killed a person in front of SDM and CO in Ballia district of Uttar Pradesh.
— Aditya Ojha (@adityaojha075) October 15, 2020
Uttar has missed the track and the government is responsible for this.
pic.twitter.com/SGtayTCGGv
ಬಿಜೆಪಿಯ ಮಾಜಿ ಸಚಿವ ಚಿನ್ಮಯಾನಂದ ವಿರುದ್ಧದ ಅತ್ಯಾಚಾರ ಆರೋಪ ಹಿಂಪಡೆದ ಯುವತಿ
ಸ್ಥಳೀಯ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ಸುರೇಶ್ ಪಾಲ್, ವೃತ್ತ ಅಧಿಕಾರಿ ಚಂದ್ರಕೇಶ್ ಸಿಂಗ್ ಮತ್ತು ಸ್ಥಳದಲ್ಲಿ ಹಾಜರಿದ್ದ ಇತರೆ ಪೊಲೀಸ್ ಸಿಬ್ಬಂದಿಯನ್ನು ಕೂಡಲೇ ಅಮಾನತು ಮಾಡುವಂತೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆದೇಶಿಸಿದ್ದಾರೆ. ಆರೋಪಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದ್ದಾರೆ.