ಯುಪಿ ಬಿಜೆಪಿ ಸರ್ಕಾರ 4.5 ವರ್ಷದಲ್ಲಿ 4.5 ಲಕ್ಷ ಉದ್ಯೋಗ ನೀಡಿದೆ: ಸಿಎಂ
ಲಕ್ನೋ, ಡಿಸೆಂಬರ್ 06: ಉತ್ತರ ಪ್ರದೇಶದಲ್ಲಿ ವಿಧಾನಚಭೆ ಚುನಾವಣಾ ಪ್ರಚಾರ ಕಾರ್ಯವು ಕಾವೇರುತ್ತಿದೆ. ಪಕ್ಷಗಳು ವಾಕ್ಸಮರ ನಡೆಸುವುದು ಮುಂದುವರಿಸಿದೆ. ಸಮಾಜವಾದಿ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, "ಸಮಾಜವಾದಿ ಪಕ್ಷ ಉತ್ತರ ಪ್ರದೇಶದಲ್ಲಿ ಅಧಿಕಾರದಲ್ಲಿ ಇದ್ದಾಗ ಯಾವುದೇ ಉದ್ಯೋಗಗಳು ಇರಲಿಲ್ಲ. ಆದರೆ ಈಗ ಬಿಜೆಪಿ ಸರ್ಕಾರದ 4.5 ವರ್ಷಗಳಲ್ಲಿ 4.5 ಲಕ್ಷ ಉದ್ಯೋಗ ನೀಡಿದೆ. ಈ ವಿಚಾರದಲ್ಲಿ ಬಿಜೆಪಿ ಸರ್ಕಾರವನ್ನು ಯಾರೂ ಕೂಡಾ ಪ್ರಶ್ನೆ ಮಾಡಲು ಸಾಧ್ಯವಿಲ್ಲ," ಎಂದು ಹೇಳಿದ್ದಾರೆ.
ಉತ್ತರ ಪ್ರದೇಶದಲ್ಲಿ ಚಂದೌಲಿಯಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನಾ ಸಮಾರಂಭದಲ್ಲಿ ಸಮಾಜವಾದಿ ಪಕ್ಷದ ವಿರುದ್ಧ ಕಿಡಿಕಾರಿದ ಯೋಗಿ ಆದಿತ್ಯನಾಥ್, "ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷದ ಸರ್ಕಾರ ಇದ್ದ ಸಂದರ್ಭದಲ್ಲಿ ಯುವಕರಿಗೆ ಸರಿಯಾಗಿ ಉದ್ಯೋಗವೇ ಇರಲಿಲ್ಲ. ಆದರೆ ಕಳೆದ ನಾಲ್ಕುವರೆ ವರ್ಷದಲ್ಲಿ ಬಿಜೆಪಿ ಸರ್ಕಾರವು 4.5 ಲಕ್ಷ ಉದ್ಯೋಗವನ್ನು ಯುವಜನರಿಗೆ ನೀಡಿದೆ. ಈ ನೇಮಕಾತಿಯನ್ನು ಯಾರೂ ಕೂಡಾ ಪ್ರಶ್ನೆ ಮಾಡುವಂತಿಲ್ಲ. ಈ ಹಿಂದೆ ಉತ್ತರ ಪ್ರದೇಶದಲ್ಲಿ ಕೇವಲ 12 ವೈದ್ಯಕೀಯ ಕಾಲೇಜುಗಳು ಇದ್ದವು. ಆದರೆ ನಾವು ಈಗ ರಾಜ್ಯದಲ್ಲಿ 33 ಸರ್ಕಾರ ವೈದ್ಯಕೀಯ ಕಾಲೇಜುಗಳನ್ನು ನಿರ್ಮಾಣ ಮಾಡುತ್ತಿದ್ದೇವೆ," ಎಂದು ತಿಳಿಸಿದರು.
ಉತ್ತರ ಪ್ರದೇಶದಲ್ಲಿ ಟಿಎಂಸಿಗೆ ಹಾಯ್ ಹಾಯ್, ಕಾಂಗ್ರೆಸ್ಸಿಗೆ ಬಾಯ್ ಬಾಯ್ ಎಂದ ಅಖಿಲೇಶ್!
ಇನ್ನು ಈ ಸಂದರ್ಭದಲ್ಲೇ ಚಂದೌಲಿಯ ರೈತರನ್ನು ಸಿಎಂ ಯೋಗಿ ಆದಿತ್ಯನಾಥ್ ಶ್ಲಾಘಿಸಿದ್ದಾರೆ. ಇಲ್ಲಿನ ರೈತರು ಕಪ್ಪು ಅಕ್ಕಿ ಉತ್ಪಾದನೆಯಲ್ಲಿ ದಾಖಲೆ ನಿರ್ಮಿಸಿರುವುದಕ್ಕೆ ಸಿಎಂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. "ಕಳೆದ ಮೂರು ವರ್ಷಗಳಿಂದ ಪ್ರಯತ್ನ ಮತ್ತು ಸಮರ್ಪಣೆಯೊಂದಿಗೆ 2,400 ರೈತರು 2,100 ಹೆಕ್ಟೇರ್ ಭೂಮಿಯಲ್ಲಿ ಕಪ್ಪು ಅಕ್ಕಿಯನ್ನು ಬೆಳೆಯುತ್ತಿದ್ದಾರೆ. ಈ ಸ್ಥಳವನ್ನು ರಫ್ತು ಕೇಂದ್ರವಾಗಿ ಅಭಿವೃದ್ಧಿಪಡಿಸುತ್ತಿದ್ದಾರೆ," ಎಂದಿದ್ದಾರೆ.
ಚಂದೌಲಿಯನ್ನು ಸುಂದರ ಪಟ್ಟಣವನ್ನಾಗಿಸುತ್ತೇವೆ ಎಂದ ಸಿಎಂ
ಇನ್ನು ಈ ಸಂದರ್ಭದಲ್ಲೆ ಚಂದೌಲಿಯನ್ನು ಸುಂದರ ಪಟ್ಟಣವನ್ನಾಗಿಸುವ ಘೋಷನೆಯನ್ನು ಸಿಎಂ ಯೋಗಿ ಆದಿತ್ಯನಾಥ್ ಮಾಡಿದ್ದಾರೆ. "ಭಾರತದ ಸಂಸ್ಕೃತಿ ಮತ್ತು ಆಧ್ಯಾತ್ಮಿಕ ಪ್ರಯಾಣವು ಭಾರತವನ್ನು ಮಾನವೀಯ ನೆಲೆಯಲ್ಲಿ ಮುನ್ನಡೆಸಲು ಸಹಾಯ ಮಾಡಿದೆ. ಬಾಬಾ ಕೀನಾರಾಮ್ರ ಚಂದೌಲಿಯನ್ನು ಇನ್ನಷ್ಟು ಸುಂದರ ಪಟ್ಟಣವನ್ನಾಗಿಸುವ ನಿಟ್ಟಿನಲ್ಲಿ ನಾವು ಕಾರ್ಯ ನಿರ್ವಹಣೆ ಮಾಡಲಿದ್ದೇವೆ," ಎಂದು ತಿಳಿಸಿದರು.
ಬಳಿಕ ವಿರೋಧ ಪಕ್ಷಗಳ ವಿರುದ್ಧ ವಾಗ್ದಾಳಿ ಮುಂದುವರಿಸಿದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, "ಪ್ರತಿಪಕ್ಷಗಳಿಗೆ ಉತ್ತರ ಪ್ರದೇಶದಲ್ಲಿ ಆಡಳಿತ ನಡೆಸಲು ಅವಕಾಶ ಲಭಿಸಿದ ಸಂದರ್ಭದಲ್ಲಿ ಪ್ರತಿಪಕ್ಷಗಳು ಜಾತೀಯತೆಗೆ ಆಳವಾಗಿ ಬೇರೂರಿದ್ದವು. ರಾಜ್ಯದ ಕಲ್ಯಾಣಕ್ಕಾಗಿ ಮೀಸಲಿಟ್ಟ ಹಣವನ್ನು ದೋಚಿದ್ದಾರೆ, ಜಾತಿವಾದ ಮಾಡಿದ್ದಾರೆ, ರಾಜ್ಯದಲ್ಲಿ ಲೂಟಿ ಮತ್ತು ಅವ್ಯವಸ್ಥೆಗೆ ವಿಪಕ್ಷಗಳು ನಾಂದಿ ಹಾಡಿದೆ. ನಾವು ಕಾನೂನು ಮತ್ತು ಸುವ್ಯವಸ್ಥೆಯನ್ನು ತಂದಿದ್ದೇವೆ ಮತ್ತು ಮಾಫಿಯಾವನ್ನು ಕೊನೆಗೊಳಿಸಿದ್ದೇವೆ," ಎಂದು ಹೇಳಿಕೊಂಡಿದ್ದಾರೆ.
'ಮನೆಗೆ ಹೋಗಿ ಡೇಟಾ ನೋಡಿಕೊಳ್ಳಿ': ಅಖಿಲೇಶ್ಗೆ ಅಮಿತ್ ಟಾಂಗ್
ಬಿಜೆಪಿ ಸರ್ಕಾರದ ವಿರುದ್ಧ ಅಖಿಲೇಶ್ ಯಾದವ್ ವಾಗ್ದಾಳಿ
ಈ ನಡುವೆ ಭಾನುವಾರ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಉತ್ತರ ಪ್ರದೇಶದ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಲಕ್ನೋದಲ್ಲಿ ಶಾಂತಿಯುತವಾಗಿ ಮೊಂಬತ್ತಿ ಮೆರವಣಿಗೆ ಮಾಡುತ್ತಿದ್ದ ಶಿಕ್ಷಕರ ಮೇಲೆ ಉತ್ತರ ಪ್ರದೇಶ ಸರ್ಕಾರವು ಲಾಠಿ ಚಾರ್ಜ್ ಮಾಡಿಸಿದೆ ಎಂದು ಅಖಿಲೇಶ್ ಯಾದವ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. "ಈ ಹಿಂದೆ ಇದ್ದ ಸಮಾಜವಾದಿ ಪಕ್ಷದ ಸರ್ಕಾರವು ವಿದ್ಯಾರ್ಥಿಗಳಿಗೆ ಲಾಪ್ಟಾಪ್ ಅನ್ನು ವಿತರಣೆ ಮಾಡುತ್ತಿದ್ದವು, ಆದರೆ ಈಗಿನ ಸರ್ಕಾರವು ಲಾಠಿ ಚಾರ್ಜ್ ಮಾಡುತ್ತಿದೆ," ಎಂದು ಅಖಿಲೇಶ್ ಯಾದವ್ ಟೀಕೆ ಮಾಡಿದ್ದರು.
ಉತ್ತರ ಪ್ರದೇಶ, ಪಂಜಾಬ್, ಗೋವಾ, ಮಣಿಪುರ, ಉತ್ತರಾಖಂಡ ಸೇರಿದಂತೆ ಹಲವಾರು ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆಯು ಬರುವ ಫೆಬ್ರವರಿ-ಮಾರ್ಚ್ನಲ್ಲಿ ನಡೆಯಲಿದೆ. ಈ ನಿಟ್ಟಿನಲ್ಲಿ ಎಲ್ಲಾ ಪಕ್ಷಗಳು ಈ ರಾಜ್ಯಗಳಲ್ಲಿ ಪ್ರಚಾರ ಕಾರ್ಯವನ್ನು ಆರಂಭ ಮಾಡಿದೆ. ಉತ್ತರ ಪ್ರದೇಶದಲ್ಲಿ ಆಡಳಿತರೂಢ ಬಿಜೆಪಿಯು ಗದ್ದುಗೆಯನ್ನು ತನ್ನ ಬಳಿಯೇ ಉಳಿಸಿಕೊಳ್ಳುವ ಪ್ರಯತ್ನದಲ್ಲಿದೆ. ಈ ನಡುವೆ ಬಿಜೆಪಿ ಸರ್ಕಾರದ ವೈಫಲ್ಯವನ್ನು ಮುಂದಿಟ್ಟುಕೊಂಡು ವಿಪಕ್ಷಗಳು ಚುನಾವಣಾ ಪ್ರಚಾರಕ್ಕೆ ಇಳಿದಿದೆ.
Recommended Video