ಬಿಜೆಪಿ ನಾಯಕನಿಂದ ಒಂದು ವರ್ಷ ಅತ್ಯಾಚಾರ: ವಿದ್ಯಾರ್ಥಿನಿ ಆರೋಪ
ಶಹಜಾನ್ಪುರ, ಸೆಪ್ಟೆಂಬರ್ 10: ಕೇಂದ್ರದ ಮಾಜಿ ಸಚಿವ ಮತ್ತು ಬಿಜೆಪಿ ನಾಯಕ ಸ್ವಾಮಿ ಚಿನ್ಮಯಾನಂದ ಅವರು ತಮ್ಮ ಮೇಲೆ ಒಂದು ವರ್ಷಕ್ಕೂ ಹೆಚ್ಚು ಕಾಲ ಅತ್ಯಾಚಾರ ನಡೆಸಿದ್ದರು ಎಂದು ಉತ್ತರ ಪ್ರದೇಶದ ಕಾನೂನು ವಿದ್ಯಾರ್ಥಿನಿಯೊಬ್ಬರು ಆರೋಪಿಸಿದ್ದಾರೆ.
ಚಿನ್ಮಯಾನಂದ ಅವರು ಅತ್ಯಾಚಾರ ಎಸಗಿರುವುದಕ್ಕೆ ತಮ್ಮ ಬಳಿ ಸಾಕ್ಷ್ಯಗಳಿವೆ. ತಾವು ದೂರು ನೀಡಿದ್ದರೂ ಸೂಕ್ತ ಸೆಕ್ಷನ್ಗಳ ಅಡಿ ಪ್ರಕರಣ ದಾಖಲಿಸಲು ಪೊಲೀಸರು ಮುಂದಾಗುತ್ತಿಲ್ಲ ಎಂದು ಅವರು ಹೇಳಿದ್ದಾರೆ.
ವಿದ್ಯಾರ್ಥಿನಿ ನಾಪತ್ತೆ: ವಾಜಪೇಯಿ ಸರ್ಕಾರದಲ್ಲಿ ಸಚಿವರಾಗಿದ್ದ ಬಿಜೆಪಿ ನಾಯಕನ ವಿರುದ್ಧ ಎಫ್ಐಆರ್
ಶಹಜಾನ್ಪುರದ 23 ವರ್ಷದ ಕಾನೂನು ವಿದ್ಯಾರ್ಥಿನಿ, ಮುಸುಕು ಧರಿಸಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಚಿನ್ಮಯಾನಂದ ವಿರುದ್ಧ ಆರೋಪ ಮಾಡಿದ್ದಾರೆ.
'ಸ್ವಾಮಿ ಚಿನ್ಮಯಾನಂದ ಅವರು ನನ್ನ ಮೇಲೆ ಅತ್ಯಾಚಾರ ನಡೆಸಿ ಒಂದು ವರ್ಷ ಕಾಲ ದೈಹಿಕವಾಗಿ ಶೋಷಿಸಿದ್ದಾರೆ. ಚಿನ್ಮಯಾನಂದ ಅವರು ತಪ್ಪಿತಸ್ಥ ಎಂದು ಸಾಬೀತುಪಡಿಸಲು ನನ್ನ ಬಳಿ ಸಾಕ್ಷ್ಯಗಳಿವೆ. ಸೂಕ್ತ ಸಮಯದಲ್ಲಿ ಇವೆಲ್ಲವನ್ನೂ ಎಸ್ಐಟಿಗೆ ಹಸ್ತಾಂತರಿಸುತ್ತೇನೆ. ಈ ಬಗ್ಗೆ ನಾನು ವಿಡಿಯೋ ಹಂಚಿಕೊಳ್ಳಬೇಕಿತ್ತು. ಆದರೆ ನನ್ನ ಮತ್ತು ಕುಟುಂಬದ ಸುರಕ್ಷತೆಯ ದೃಷ್ಟಿಯಿಂದ ಸುಮ್ಮನಾಗಿದ್ದೇನೆ. ಇಲ್ಲದಿದ್ದರೆ ಚಿನ್ಮಯಾನಂದ ಅವರು ನಮ್ಮನ್ನು ಕೊಲ್ಲುತ್ತಿದ್ದರು' ಎಂದು ಆಕೆ ಹೇಳಿದ್ದಾರೆ.
ಜೀವ ಉಳಿಸಿಕೊಳ್ಳಲು ಹೋರಾಟ
'ನಾನು ಜೀವ ಉಳಿಸಿಕೊಳ್ಳಲು ಕದ್ದುಮುಚ್ಚಿ ಓಡಾಡುತ್ತಿದ್ದೇನೆ. ನಮಗೆ ಶಹಜಾನ್ಪುರ ಜಿಲ್ಲಾಡಳಿತದಿಂದ ಯಾವುದೇ ರಕ್ಷಣೆ ಸಿಕ್ಕಿಲ್ಲ. ನನಗೆ ಉತ್ತರ ಪ್ರದೇಶದ ಪೊಲೀಸರ ಮೇಲೆ ನಂಬಿಕೆ ಇಲ್ಲದ ಕಾರಣ ದೆಹಲಿಯ ಲೋಧಿ ರಸ್ತೆ ಪೊಲೀಸರಿಗೆ ದೂರು ನೀಡಿದ್ದೇನೆ' ಎಂದು ಆಕೆ ವಿವರಿಸಿದ್ದಾರೆ.
ಹಾಸ್ಟೆಲ್ನಲ್ಲಿ ಉಳಿದುಕೊಳ್ಳಲು ಒತ್ತಡ
'ಸ್ವಾಮಿ ಶುಕದೇವಾನಂದ ಕಾನೂನು ಕಾಲೇಜಿಗೆ ಎಲ್ಎಲ್ಎಂ ವಿದ್ಯಾರ್ಥಿನಿಯಾಗಿ ಸೇರಿಕೊಂಡಾಗ ಚಿನ್ಮಯಾನಂದ ಅವರು ನನಗೆ ಉದ್ಯೋಗದ ಆಫರ್ ನೀಡಿದ್ದರು. ಚಿನ್ಮಯಾನಂದ ಅವರು ಕಾಲೇಜಿನ ಅಧ್ಯಕ್ಷರು. ಕಾಲೇಜು ಮುಗಿದ ಬಳಿಕವೂ ನಾನು ಕಾಲೇಜಿನಲ್ಲಿಯೇ ಇರುವಂತೆ ಹಲವು ಬಾರಿ ಒತ್ತಾಯ ಮಾಡಲಾಗುತ್ತಿತ್ತು. ಕೊನೆಗೆ ನಾನು ಹಾಸ್ಟೆಲ್ನ ರೂಮ್ನಲ್ಲಿ ಇರುವಂತೆ ಕಾಲೇಜು ಸಿಬ್ಬಂದಿ ಒತ್ತಡ ಹೇರಿದ್ದರು' ಎಂದು ತಿಳಿಸಿದ್ದಾರೆ.
ಶಿಷ್ಯೆ ಮೇಲೆ ರೇಪ್, ಸ್ವಾಮಿ ಚಿನ್ಮಯಾನಂದ ಮೇಲೆ FIR
ಅನೇಕ ಯುವತಿಯರ ಮೇಲೆ ಅತ್ಯಾಚಾರ
'ಹಾಸ್ಟೆಲ್ನಲ್ಲಿ ಉಳಿದುಕೊಳ್ಳಲು ಆರಂಭಿಸಿದ ಬಳಿಕ ನನ್ನ ಮೇಲೆ ಅನೇಕ ಬಾರಿ ಲೈಂಗಿಕವಾಗಿ ಹಲ್ಲೆ ನಡೆಸಲಾಗಿದೆ. ನನ್ನಂತೆ ಅನೇಕ ಹೆಣ್ಣುಮಕ್ಕಳ ಬದುಕನ್ನು ಚಿನ್ಮಯಾನಂದ ಸ್ವಾಮಿ ಹಾಳು ಮಾಡಿದ್ದಾರೆ. ಆದರೆ, ಅವರ ವಿರುದ್ಧ ನಿಲ್ಲುವ ಧೈರ್ಯವನ್ನು ನಾನು ಮಾತ್ರ ಮಾಡಿದ್ದೇನೆ' ಎಂದು ಆಕೆ ಅಳಲು ತಡಿಕೊಂಡಿದ್ದಾರೆ.
ಎಸ್ಐಟಿಗೆ ಮಾಹಿತಿ ನೀಡಿದ್ದರೂ ಪ್ರಯೋಜನವಿಲ್ಲ
'ಭಾನುವಾರ ಎಸ್ಐಟಿ ನನ್ನನ್ನು 11 ಗಂಟೆ ವಿಚಾರಣೆಗೆ ಒಳಪಡಿಸಿತು. ಅವರಿಗೆ ಅತ್ಯಾಚಾರದ ಬಗ್ಗೆ ವಿವರಿಸಿದ್ದೇನೆ. ಒಂದು ವರ್ಷ ಕಾಲ ಚಿನ್ಮಯಾನಂದ ಅವರು ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಎಸ್ಐಟಿ ಅಧಿಕಾರಿಗಳಿಗೆ ತಿಳಿಸಿದ್ದೇನೆ. ಇಷ್ಟಾದರೂ ಚಿನ್ಮಯಾನಂದ ಅವರನ್ನು ಬಂಧಿಸಿಲ್ಲ. ಜೀವದ ಬಗ್ಗೆ ಭಯ ಹೊಂದಿರುವ ಕಾರಣ ಮೊದಲು ಶಹಜಾನ್ಪುರ ಪೊಲೀಸರಿಗೆ ದೂರು ನೀಡಿದ್ದೆ. ಆದರೆ, ಪರಿಣಾಮಗಳ ಬಗ್ಗೆ ಯೋಚಿಸಿ ಎಂದು ನನ್ನ ತಂದೆಗೆ ಬೆದರಿಸುವ ಮೂಲಕ ಜಿಲ್ಲಾಡಳಿತವು ದೂರು ಹಿಂದಕ್ಕೆ ಪಡೆದುಕೊಳ್ಳುವಂತೆ ಸೂಚಿಸಿತ್ತು' ಎಂದು ಆರೋಪಿಸಿದ್ದಾರೆ.