ಎಸ್ಪಿ - ಆರ್ಜೆಡಿ ಮೈತ್ರಿ ಘೋಷಣೆ ವೇದಿಕೆಯಲ್ಲಿ ಬಿಜೆಪಿಯ "ಹುಸಿ ಕಮಲ"ದ ಸದ್ದು!
ಲಕ್ನೋ, ಡಿಸೆಂಬರ್ 7: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಹೊಸ್ತಿಲಿನಲ್ಲಿ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಮತ್ತು ಆರ್ಎಲ್ಡಿ ಜಯಂತ್ ಚೌಧರಿ ಮೀರತ್ ನಗರದಲ್ಲಿ ಜಂಟಿ ಪ್ರಚಾರ ಸಭೆಯನ್ನು ನಡೆಸಿದರು. ಈ ವೇಳೆ ಉಭಯ ನಾಯಕರು ಬಿಜೆಪಿ ವಿರುದ್ಧ ಮಾತಿನ ಬಾಣ ಬಿಟ್ಟರು.
ಸಮಾಜವಾದಿ ಪಕ್ಷದ ಮುಖ್ಯಮಂತ್ರಿ ಯಾದವ್ ಮತ್ತು ರಾಷ್ಟ್ರೀಯ ಲೋಕದಳದ (ಆರ್ಜೆಡಿ) ಜಯಂತ್ ಚೌಧರಿ ಜೊತೆಗಿನ ಔಪಚಾರಿಕ ಮೈತ್ರಿಯನ್ನು ಘೋಷಿಸಿದರು. ಈ ವೇಳೆ ಉಭಯ ನಾಯಕರು ಜಂಟಿ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದರು.
ಕೆಂಪು ಟೋಪಿ, ರೆಡ್ ಅಲರ್ಟ್: ಯುುಪಿ ಕಣದಲ್ಲಿ ಅಖಿಲೇಶ್ ವಿರುದ್ಧ ಮೋದಿ ಸಮರ
"ಭಾರತೀಯ ಜನತಾ ಪಕ್ಷದ (ಬಿಜೆಪಿ) ಬಗ್ಗೆ ಎಲ್ಲವೂ ಹುಸಿಯಾಗಿದೆ. ಅವರ ಭರವಸೆಗಳೆಲ್ಲವೂ ಸುಳ್ಳಾಗಿದೆ. ಬಿಜೆಪಿಯ ನಕಲಿ ಹೂವು ಆಗಿದ್ದು ಎಂದಿಗೂ ಪರಿಮಳವನ್ನು ಬೀರುವುದಕ್ಕೆ ಸಾಧ್ಯವಿಲ್ಲ," ಎನ್ನುವ ಮೂಲಕ ಬಿಜೆಪಿಯ ಚುನಾವಣಾ ಚಿಹ್ನೆಯ ವಿರುದ್ಧ ಅಖಿಲೇಶ್ ಯಾದವ್ ವಾಗ್ದಾಳಿ ನಡೆಸಿದರು. "ನಾವು ಬಹು ಬಣ್ಣವನ್ನು ಹೊಂದಿರುವ ಜನರು, ನಮ್ಮ ವಿರೋಧಿಗಳು ಒಂದೇ ಬಣ್ಣದವರು ಮತ್ತು ಒಂದೇ ಬಣ್ಣ ಹೊಂದಿರುವವರು ಸಮೃದ್ಧಿಯನ್ನು ತರಲು ಸಾಧ್ಯವಿಲ್ಲ" ಎಂದು ಯಾದವ್ ಕಿಡಿ ಕಾರಿದರು.
ಸಣ್ಣ ಪಾರ್ಟಿಗಳೊಂದಿಗೆ ಎಸ್ ಪಿ ಮೈತ್ರಿ ರಚನೆ
ಸಮಾಜವಾದಿ ಮತ್ತು ಸಣ್ಣ ಪಕ್ಷಗಳ ಮೈತ್ರಿಯನ್ನು ಬಹು ಬಣ್ಣದ ಮೈತ್ರಿ ಎಂದು ಅಖಿಲೇಶ್ ಯಾದವ್ ಉಲ್ಲೇಖಿಸಿದ್ದಾರೆ. ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ಓಪಿ ರಾಜ್ಭರ್ ಮತ್ತು ಜಯಂತ್ ಸಿಂಗ್ ಅವರ ರಾಷ್ಟ್ರೀಯ ಲೋಕದಳ (ಆರ್ಎಲ್ಡಿ) ಯಂತಹ ಪಕ್ಷಗಳೊಂದಿಗೆ ಎಸ್ಪಿ ಮೈತ್ರಿ ಮಾಡಿಕೊಂಡಿದೆ ಎಂದರು. ಕೇಸರಿ ಬಣ್ಣವನ್ನು ಉಲ್ಲೇಖಿಸಿದ ಅಖಿಲೇಶ್ ಯಾದವ್ ಇದು ಕೇವಲ ಒಂದೇ ಬಣ್ಣದ ಪಕ್ಷ ಎಂದು ಬಿಜೆಪಿ ವಿರುದ್ಧ ವಾಗ್ಬಾಣ ಬಿಟ್ಟರು. ಗೋರಖ್ಪುರದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಸಮಾಜವಾದಿ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ ಕೆಲವೇ ಗಂಟೆಗಳ ನಂತರ ಅಖಿಲೇಶ್ ಯಾದವ್ ಈ ರೀತಿ ವ್ಯಂಗ್ಯ ಮಾಡಿದ್ದಾರೆ.
ಅಖಿಲೇಶ್ ಯಾದವ್ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು?
ಉತ್ತರ ಪ್ರದೇಶದಲ್ಲಿ ಕೆಂಪು ಟೋಪಿಯು ಭವಿಷ್ಯದಲ್ಲಿ ರಾಜ್ಯದ ಪಾಲಿಗೆ ಅಪಾಯದ ಸಂಕೇತ(ರೆಡ್ ಅಲರ್ಟ್)ವಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅಖಿಲೇಶ್ ಯಾದವ್ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ. "ಲಾಲ್ ಟೋಪಿ ವಾಲೋನ್" (ಕೆಂಪು ಟೋಪಿಗಳು) ಕೆಂಪು ದೀಪಗಳ ಮೇಲೆ ಮಾತ್ರ ಆಸಕ್ತಿ ಹೊಂದಿದ್ದಾರೆ ಎಂದು ಇಡೀ ಉತ್ತರ ಪ್ರದೇಶಕ್ಕೆ ತಿಳಿದಿದೆ. ಇದು ಸರ್ಕಾರಿ ವಾಹನಗಳ ಮೇಲಿನ ಕೆಂಪು ಬೀಕನ್ಗಳು, ಅಧಿಕಾರ ಮತ್ತು ವಿಐಪಿ ಸ್ಥಾನಮಾನದ ಸಂಕೇತವಾಗಿದೆ," ಎಂದು ಮೋದಿ ಹೇಳಿದ್ದರು.
ಈ ಜನರಿಗೆ ಹಗರಣಗಳನ್ನು ಮಾಡುವುದಕ್ಕೆ, ಅತಿಕ್ರಮಣ ಮತ್ತು ಮಾಫಿಯಾಗಳಿಗೆ ಮುಕ್ತ ಚಾಲನೆ ನೀಡುವುದಕ್ಕಾಗಿ ಮಾತ್ರ ಅಧಿಕಾರವನ್ನು ಬಯಸುತ್ತಿದ್ದಾರೆ. ಕೆಂಪು ಟೋಪಿ ಮಂದಿಗೆ ಉಗ್ರರನ್ನು ಜೈಲಿನಿಂದ ಬಿಡುಗಡೆಗೊಳಿಸುವುದಕ್ಕಾಗಿ ಅಧಿಕಾರ ಬೇಕಾಗಿದೆ. ಕೆಂಪು ಟೋಪಿಯು ಉತ್ತರ ಪ್ರದೇಶಕ್ಕೆ ರೆಡ್ ಅಲರ್ಟ್ ಅನ್ನು ಸೂಚಿಸುತ್ತದೆ, ಇದು ಅಪಾಯದ ಸಂಕೇತವಾಗಿದೆ," ಎಂದರು.
ಪಶ್ಚಿಮ ಭಾಗದಲ್ಲಿ ರೈತರು ಬಿಜೆಪಿಗೆ ಬಾಗಿಲು ಮುಚ್ಚಿದ್ದಾರೆ
ಪ್ರಧಾನಿ ನರೇಂದ್ರ ಮೋದಿ ಅಪಹಾಸ್ಯಕ್ಕೆ ಅಖಿಲೇಶ್ ಯಾದವ್ ಪ್ರತಿಕ್ರಿಯೆ ನೀಡಿದರು. ಮುಂಬರುವ 2022ರ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ "ಸೂರ್ಯ ಮುಳುಗಲಿದೆ" ಎಂದು ಹೇಳಿದ್ದಾರೆ. ರಾಜ್ಯದ ಪಶ್ಚಿಮ ರೈತರು ಬಿಜೆಪಿಗೆ ಬಾಗಿಲು ಮುಚ್ಚಲು ನಿರ್ಧರಿಸಿದ್ದಾರೆ ಎಂದು ಅಖಿಲೇಶ್ ಯಾದವ್ ಹೇಳಿದ್ದಾರೆ. "ಜನರು ರಸಗೊಬ್ಬರಕ್ಕಾಗಿ ಸಾಲಿನಲ್ಲಿ ನಿಲ್ಲಬೇಕಾಯಿತು. ನಂತರ ಕೊವಿಡ್-19 ಅನಾರೋಗ್ಯ ಬಂದಾಗ ಮತ್ತೆ ಸಾಲಿನಲ್ಲಿ ನಿಲ್ಲಬೇಕಾಗಿತ್ತು. ಕಬ್ಬಿನ ರೈತರು ಇನ್ನೂ ತಮ್ಮ ಬಾಕಿ ಪಾವತಿಗಾಗಿ ಕಾಯುತ್ತಿದ್ದಾರೆ," ಎಂದು ಅಖಿಲೇಶ್ ಯಾದವ್ ಹೇಳಿದ್ದಾರೆ.
ಉದ್ಯೋಗವಿಲ್ಲದೇ ಆದಾಯ ಇಳಿಕೆ, ಹಣದುಬ್ಬರ ಹೆಚ್ಚಳ
ಉತ್ತರ ಪ್ರದೇಶದಲ್ಲಿ ಜನರ ಆದಾಯ ಕಡಿಮೆಯಾಗಿದೆ. ಯಾರಾದರೂ ಕೆಲಸವನ್ನು ಕೇಳಿದರೆ ಅಂಥವರನ್ನು ಲಾಠಿ ಮೂಲಕ ಸ್ವಾಗತಿಸಲಾಗುತ್ತಿದೆ. ಭಾರತೀಯ ಜನತಾ ಪಕ್ಷವು ದ್ವೇಷದ ರಾಜಕಾರಣದಲ್ಲಿ ತೊಡಗಿದೆ ಎಂದು ಅಖಿಲೇಶ್ ಯಾದವ್ ಆರೋಪಿಸಿದ್ದಾರೆ.
ಸ್ವಂತ ವಿಚಾರದ ಮೇಲೆ ಚುನಾವಣೆ ಎದುರಿಸಲು ಬಯಸಿದ ಬಿಜೆಪಿ
ಉತ್ತರ ಪ್ರದೇಶದ ಯುವಕರು ಉದ್ಯೋಗವನ್ನು ಹುಡುಕಿಕೊಂಡು ಬೇರೆ ರಾಜ್ಯಗಳಿಗೆ ವಲಸೆ ಹೋಗುತ್ತಿದ್ದಾರೆ ಎಂದು ರಾಷ್ಟ್ರೀಯ ಲೋಕದಳ ಮುಖಂಡ ಜಯಂತ್ ಚೌಧರಿ ಹೇಳಿದ್ದಾರೆ. ಕೃಷಿ ಕಾಯ್ದೆ ವಿರುದ್ಧ ರೈತರು ಸುದೀರ್ಘ ಅವಧಿಯಿಂದಲೂ ಪ್ರತಿಭಟನೆ ನಡೆಸಿಕೊಂಡು ಬರುತ್ತಿದ್ದಾರೆ. ಆದರೆ, ಈವರೆಗೂ ಒಬ್ಬರೇ ಒಬ್ಬ ಬಿಜೆಪಿ ನಾಯಕರು ರೈತರ ಪರ ಹೋರಾಟಕ್ಕೆ ಧ್ವನಿಗೂಡಿಸಿಲ್ಲ. ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರವನ್ನು ಮೊದಲ ಬಾರಿಗೆ ತಲೆ ಬಾಗುವಂತೆ ಮಾಡುವುದಕ್ಕೆ ಸಾಧ್ಯವಾದರೆ, ಅದು ರೈತರ ಕ್ರಾಂತಿಯಿಂದ ಮಾತ್ರ ಸಾಧ್ಯವಾಗಿದೆ. "ಸರ್ಕಾರವು ಮಾಡಬೇಕಾದ ಕೆಲಸವನ್ನು ಮಾಡಲು ಸಾಧ್ಯವಾಗುತ್ತಿಲ್ಲ, ನಾವು ನಮ್ಮ ಸ್ವಂತ ಸಮಸ್ಯೆಗಳ ಮೇಲೆ ಚುನಾವಣೆಯಲ್ಲಿ ಹೋರಾಡಲು ಬಯಸುತ್ತೇವೆ" ಎಂದು ಚೌಧರಿ ಹೇಳಿದ್ದಾರೆ.
Recommended Video