ಅತ್ಯಾಚಾರ ಆರೋಪಿ ಶಾಸಕ ಕೊನೆಗೂ ಬಿಜೆಪಿಯಿಂದ ಉಚ್ಚಾಟನೆ
ಲಕ್ನೋ, ಆಗಸ್ಟ್ 1: ಉತ್ತರ ಪ್ರದೇಶದ ಉನ್ನಾವೋದಲ್ಲಿ ಯುವತಿಯೊಬ್ಬರ ಮೇಲೆ ಅತ್ಯಾಚಾರ ಎಸಗಿದ್ದಲ್ಲದೆ ಜೈಲಿನಲ್ಲಿದ್ದುಕೊಂಡೇ ಆಕೆಯ ಹತ್ಯೆಗೆ ಸಂಚು ರೂಪಿಸಿದ ಆರೋಪಕ್ಕೆ ಒಳಗಾಗಿರುವ ಶಾಸಕ ಕುಲದೀಪ್ ಸಿಂಗ್ ಸೆಂಗರ್ ಅವರನ್ನು ಬಿಜೆಪಿ ಪಕ್ಷದಿಂದ ಉಚ್ಚಾಟಿಸಿದೆ.
ಉನ್ನಾವೋ ಅತ್ಯಾಚಾರ ಪ್ರಕರಣ: ಬಿಜೆಪಿ ಶಾಸಕ ಕುಲದೀಪ್ ಅಮಾನತು
ಅತ್ಯಾಚಾರ ಆರೋಪದಲ್ಲಿ ಜೈಲು ಸೇರಿರುವ ಕುಲದೀಪ್ ಸೆಂಗರ್, ಅತ್ಯಾಚಾರ ಸಂತ್ರಸ್ತೆ ಮತ್ತು ಆಕೆಯ ಕುಟುಂಬದವರನ್ನು ಕೊಲ್ಲಲು ಸಂಚು ರೂಪಿಸಿದ್ದರು ಎನ್ನಲಾಗಿದೆ. ಕೆಲವು ದಿನಗಳ ಹಿಂದೆ ರಾಯ್ ಬರೇಲಿ ಸಮೀಪ ಟ್ರಕ್ ಒಂದು ಸಂತ್ರಸ್ತೆಯಿದ್ದ ಕಾರ್ಗೆ ಡಿಕ್ಕಿ ಹೊಡೆದಿತ್ತು. ಅದರಲ್ಲಿ ಆಕೆಯ ಕುಟುಂಬದ ಇಬ್ಬರು ಮೃತಪಟ್ಟಿದ್ದರೆ, ಸಂತ್ರಸ್ತೆ ಮತ್ತು ಆಕೆಯ ಪರ ವಕೀಲರು ತೀವ್ರ ಗಾಯಗೊಂಡಿದ್ದಾರೆ.
ಉನ್ನಾವೋ ರೇಪ್: 11 ನೇ ತರಗತಿ ವಿದ್ಯಾರ್ಥಿನಿ ಕೇಳಿದ ಪ್ರಶ್ನೆಗೆ ಪೊಲೀಸರು ಗಪ್ ಚುಪ್!
ಇದು ಬಿಜೆಪಿಯ ಪ್ರಭಾವಿ ಶಾಸಕ ಸೆಂಗರ್ ಅವರ ನಿರ್ದೇಶನದಂತೆ ನಡೆದಿರುವ ಕೊಲೆ ಪ್ರಯತ್ನ ಎಂದು ಆಕೆಯ ಕುಟುಂಬದವರು ಆರೋಪಿಸಿದ್ದರು. ಈ ಪ್ರಕರಣದಲ್ಲಿ ಭಾಗಿಯಾಗಿರುವ ಸೆಂಗರ್ ಅವರನ್ನು ಪಕ್ಷದಿಂದ ಹೊರಹಾಕದ ಮತ್ತು ಯಾವುದೇ ಪ್ರತಿಕ್ರಿಯೆ ನೀಡದ ಬಿಜೆಪಿ ವಿರುದ್ಧ ತೀವ್ರ ಟೀಕೆಗಳು ವ್ಯಕ್ತವಾಗಿದ್ದವು. ಕೊನೆಗೆ ಪಕ್ಷದಿಂದ ಅವರನ್ನು ಅಮಾನತುಗೊಳಿಸಲಾಗಿತ್ತು. ಈಗ ಪ್ರಕರಣ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ. ಅದರ ಬೆನ್ನಲ್ಲೇ ಕೊನೆಗೂ ಪಕ್ಷದಿಂದ ಅವರನ್ನು ಉಚ್ಚಾಟನೆ ಮಾಡುವ ಪ್ರಕಟಣೆ ಹೊರಡಿಸಲಾಗಿದೆ.
ಶಾಸಕನ ಜತೆ 'ಸೆಟ್ಲ್' ಮಾಡ್ಕೋ: ಅತ್ಯಾಚಾರ ಸಂತ್ರಸ್ತೆಗೆ ಪೊಲೀಸರ ಸಲಹೆ!
ಇದರ ಜತೆಗೆ ಅತ್ಯಾಚಾರ ಸಂತ್ರಸ್ತೆಯ ರಕ್ಷಣೆಗಾಗಿ ನಿಯೋಜಿಸಲಾಗಿದ್ದ ಭದ್ರತಾ ಸಿಬ್ಬಂದಿ ಪೈಕಿ ಇಬ್ಬರು ಮಹಿಳಾ ಪೊಲೀಸರು ಸೇರಿದಂತೆ ಮೂವರು ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಆಕೆಯ ರಕ್ಷಣೆಗೆ 9 ಮಂದಿಯನ್ನು ನಿಯೋಜಿಸಲಾಗಿತ್ತು. ಆದರೆ, ಅಪಘಾತ ನಡೆದ ದಿನ ಕಾರ್ನಲ್ಲಿ ಯಾವ ಸಿಬ್ಬಂದಿಯೂ ಇರಲಿಲ್ಲ. ಕಾರ್ನಲ್ಲಿ ಜಾಗವಿಲ್ಲದ ಕಾರಣ ಬರುವುದು ಬೇಡ ಎಂದು ಸ್ವತಃ ಸಂತ್ರಸ್ತೆಯ ಕುಟುಂಬದವರೇ ಸಿಬ್ಬಂದಿಗೆ ಹೇಳಿದ್ದರು ಎಂದು ಹೇಳಲಾಗಿದೆ. ಅಪಘಾತ ನಡೆಸುವ ಉದ್ದೇಶದಿಂದ ಅವರ ಜತೆ ಹೋಗದಂತೆ ಪೊಲೀಸರಿಗೆ ಇಲಾಖೆ ಕಡೆಯಿಂದಲೇ ಸೂಚನೆ ಬಂದಿತ್ತು ಎಂದು ಆರೋಪಿಸಲಾಗಿದೆ.