'ಮಾರಾಟ ಮಾಡಲೆಂದೇ ಬಿಜೆಪಿಯಿಂದ ಏರ್ಪೋರ್ಟ್ ನಿರ್ಮಾಣ': ಅಖಿಲೇಶ್
ಲಕ್ನೋ, ನವೆಂಬರ್ 25: ನೋಯ್ಡಾದಲ್ಲಿ ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಕಾರ್ಯಕ್ಕೆ ಶಂಕು ಸ್ಥಾಪನೆ ಮಾಡಿದ್ದಾರೆ. ಈ ನಡುವೆ "ಬಿಜೆಪಿ ಪಕ್ಷವು ನೋಯ್ಡಾದಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಮಾರಾಟ ಮಾಡುವ ಉದ್ದೇಶದಿಂದಲೇ ನಿರ್ಮಾಣ ಮಾಡುತ್ತಿದೆ," ಎಂದು ಸಮಾಜವಾದಿ ಪಕ್ಷದ (ಎಸ್ಪಿ) ಅಧ್ಯಕ್ಷ ಅಖಿಲೇಶ್ ಯಾದವ್ ಆರೋಪ ಮಾಡಿದ್ದಾರೆ.
ಲಕ್ನೋದ ಚೌಧರಿ ಚರಣ್ ಸಿಂಗ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಮಾಜವಾದಿ ಪಕ್ಷದ ಮಿತ್ರ ಪಕ್ಷ ಜನವಾದಿ ಪಕ್ಷ (ಸಮಾಜವಾದಿ) ಆಯೋಜನೆ ಮಾಡಿದ್ದ ರ್ಯಾಲಿಯಲ್ಲಿ ಮಾತನಾಡಿದ ಅಖಿಲೇಶ್ ಯಾದವ್, "ಬಿಜೆಪಿಯು ಈಗ ಎಲ್ಲಾ ವಿಮಾನ ನಿಲ್ದಾಣಗಳನ್ನು ಮಾರಾಟ ಮಾಡುತ್ತಿದೆ. ಈ ನಡುವೆ ಮಾರಾಟ ಮಾಡುವ ಉದ್ದೇಶದಿಂದಲೇ ಹೊಸ ವಿಮಾನ ನಿಲ್ದಾಣವನ್ನು ನಿರ್ಮಾಣ ಮಾಡುತ್ತಿದೆ. ಒಂದು ಕಡೆಯಲ್ಲಿ ವಿಮಾನ ನಿಲ್ದಾಣವನ್ನು ನಿರ್ಮಾಣ ಮಾಡಿ, ಇನ್ನೊಂದು ಕಡೆಯಲ್ಲಿ ವಿಮಾನ ನಿಲ್ದಾಣವನ್ನು ಮಾರಾಟ ಮಾಡುವ ಬಿಜೆಪಿಯನ್ನು ನಂಬುವುದು ಹೇಗೆ," ಎಂದು ಪ್ರಶ್ನಿಸಿದ್ದಾರೆ.
ಉತ್ತರ ಪ್ರದೇಶ ಚುನಾವಣೆ: ಪಶ್ಚಿಮ ಯುಪಿ ಜನರು, ರೈತರ ಮೇಲೆ ಮೋದಿ ಚಿತ್ತ
ಲಕ್ನೋದ ಚೌಧರಿ ಚರಣ್ ಸಿಂಗ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಖಾಸಗೀ ಸಂಸ್ಥೆಗೆ ಗುತ್ತಿಗೆಗಾಗಿ ನೀಡಲಾಗಿದೆ. ಹಾಗೆಯೇ ದೇಶದ ಹಲವಾರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಖಾಸಗಿ ಸಂಸ್ಥೆಗಳಿಗೆ ಮಾರಾಟ ಮಾಡಿದೆ. ಈಗ ಚುನಾವಣೆ ನಡುವೆ ನೋಯ್ಡಾದಲ್ಲಿ ವಿಮಾನ ನಿಲ್ದಾಣದ ನಿರ್ಮಾಣಕ್ಕೆ ಶಿಲಾನ್ಯಾಸ ಮಾಡಲಾಗಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಶಿಲಾನ್ಯಾಸವನ್ನು ನೆರವೇರಿಸಿದ್ದಾರೆ. ಈ ನಿಟ್ಟಿನಲ್ಲಿ ವಿರೋಧ ಪಕ್ಷಗಳು ವಾಗ್ದಾಳಿ ನಡೆಸುತ್ತಿದೆ.
"ಬಿಜೆಪಿಯ ಒಂದು ಸರ್ಕಾರ ವಿಮಾನ ನಿಲ್ದಾಣವನ್ನು ಮಾರಾಟ ಮಾಡುತ್ತದೆ, ಇನ್ನೊಂದು ಸರ್ಕಾರ ವಿಮಾನ ನಿಲ್ದಾಣವನ್ನು ನಿರ್ಮಾಣ ಮಾಡುತ್ತದೆ. ಹೀಗಿರುವಾಗ ನನಗೆ ಉದ್ದೇಶ ಏನೆಂಬುವುದೇ ತಿಳಿಯುತ್ತಿಲ್ಲ. ಚಪ್ಪಲಿಯನ್ನು ಧರಿಸಿದ ಬಡವರು ಕೂಡಾ ಈ ವಿಮಾನದಲ್ಲಿ ಪ್ರಯಾಣ ಮಾಡಬಹುದು ಎಂದು ಬಿಜೆಪಿ ಹೇಳಿಕೊಂಡಿದೆ. ವಿಮಾನದಲ್ಲಿ ಎಷ್ಟು ಮಂದಿ ಬಡವರು ಪ್ರಯಾಣ ಮಾಡಿದ್ದಾರೆ ಎಂಬುವುದನ್ನು ಜನರೇ ಹೇಳಬೇಕು," ಎಂದಿದ್ದಾರೆ.
"ದೆಹಲಿ ವಿಮಾನ ನಿಲ್ದಾಣವು ನಷ್ಟದಲ್ಲಿ ಇದೆ, ಈ ನಡುವೆ ನೋಯ್ಡಾದ ವಿಮಾನ ನಿಲ್ದಾಣದಿಂದಾಗಿ ಜನರಿಗೆ ಲಾಭ ಆಗುತ್ತದೆ ಎಂದು ಬಿಜೆಪಿ ಹೇಳಿಕೊಳ್ಳುತ್ತಿದೆ. ಸರಕಾರಿ ಸಂಸ್ಥೆಗಳು ಮಾರಾಟವಾಗುವ ದೇಶದಲ್ಲಿ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರು ನೀಡಿದ ಹಕ್ಕುಗಳು ಹಾಗೂ ಗೌರವಗಳು ಏನು ಆಗುತ್ತದೆ, ಭವಿಷ್ಯದ ಪೀಳಿಗೆಗೆ ಏನಾಗುತ್ತದೆ? ಉದ್ಯೋಗ, ಜೀವನೋಪಾಯ ಮತ್ತು ಮೀಸಲಾತಿಯನ್ನು ಯಾರು ಕೊಡುತ್ತಾರೆ?," ಎಂದು ಕೂಡಾ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಪ್ರಶ್ನಿಸಿದ್ದಾರೆ.
ಮುಂಬರುವ ಚುನಾವಣೆಯಲ್ಲಿ ಬಿಜೆಪಿಗೆ ಐತಿಹಾಸಿಕ ಸೋಲು
"ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯು ಐತಿಹಾಸಿಕ ಸೋಲು ಕಾಣಲಿದೆ," ಎಂದು ಕೂಡಾ ಸಮಾಜವಾದಿ ಪಕ್ಷದ (ಎಸ್ಪಿ) ಅಧ್ಯಕ್ಷ ಅಖಿಲೇಶ್ ಯಾದವ್ ಹೇಳಿದ್ದಾರೆ. 2022 ರ ಒಳಗಾಗಿ ರೈತರ ಆದಾಯವನ್ನು ದುಪ್ಪಟ್ಟು ಮಾಡಲಾಗುವುದು ಎಂಬ ಸರ್ಕಾರದ ಭರವಸೆಯ ಬಗ್ಗೆ ಈ ಸಂದರ್ಭದಲ್ಲೇ ಪ್ರಶ್ನೆ ಮಾಡಿದ್ದಾರೆ. ರೈತರಿಗೆ ರಸಗೊಬ್ಬರಗಳನ್ನು ನೀಡಲು ಮತ್ತು ಅವರ ಭತ್ತವನ್ನು ಸಂಗ್ರಹಿಸಲು ಸಾಧ್ಯವಾಗುತ್ತದೆಯೇ ಎಂದು ಕೂಡಾ ಕೇಳಿದೆ.
ನೋಯ್ಡಾ ವಿಮಾನ ನಿಲ್ದಾಣಕ್ಕೆ ಶಂಕುಸ್ಥಾಪನೆ: ಪ್ರತಿಪಕ್ಷಗಳ ವಿರುದ್ಧ ಮೋದಿ ವಾಗ್ದಾಳಿ
ಗೌತಮ್ ಬುದ್ಧ ನಗರದಲ್ಲಿ ಜೇವಾರ್ ಬಳಿ ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಶಂಕುಸ್ಥಾಪನೆಯನ್ನು ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಾಡಿದ್ದಾರೆ. ಬಳಿಕ ಮಾತನಾಡಿದ ಪ್ರಧಾನಿ ಮೋದಿ, ಈ ವಿಮಾನ ನಿಲ್ದಾಣದಿಂದಾಗಿ ರೈತರಿಗೆ ಆಗುವ ಪ್ರಯೋಜನಗಳ ಬಗ್ಗೆ ಮಾತನಾಡಿದ್ದಾರೆ. ಹಾಗೆಯೇ ಆ ಪ್ರದೇಶಲ್ಲಿ ನಿರ್ಮಾಣ ಮಾಡಲಾಗುತ್ತಿರುವ ರಸ್ತೆಗಳು ಹಾಗೂ ಮೂಲ ಸೌಕರ್ಯ ಯೋಜನೆಗಳಿಂದ ರೈತರಿಗೆ ಆಗುವ ಪ್ರಯೋಜನಗಳ ಕುರಿತಾಗಿಯೂ ವಿವರಿಸಿದ್ದಾರೆ.